ಸಮಾಜವಾದಿ ಹೋರಾಟಗಾರ ಎಂ.ಜಿ ಸ್ವಾದಿ ಅವರ ಪುತ್ರ ರಾಮ ಸ್ವಾದಿ ನಿಧನ
(SHIVAMOGA): ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ಸಮಾಜವಾದಿ ಹೋರಾಟಗಾರ ಎಂ.ಜಿ ಸ್ವಾದಿ ಅವರ ಪುತ್ರ ರಾಮ ಸ್ವಾದಿ (53) ಇವರು ಅನಾರೋಗ್ಯ ಸಮಸ್ಯೆಯಿಂದಾಗಿ ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಪ್ರಗತಿಪರ ಕೃಷಿಕ ಹಾಗೂ ಸರಳ ವ್ಯಕ್ತಿತ್ವವುಳ್ಳ ರಾಮ ಸ್ವಾದಿ ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ಹಾಗೂ ಬಡವರ ಪರ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಹಾಗೂ ಪೌರಾಣಿಕ, ಸಾಮಾಜಿಕ ನಾಟಕ, ಬಯಲಾಟ, ಸೇರಿದಂತೆ ಅನೇಕ ರಂಗ ಸಜ್ಜಿಕೆಯಲ್ಲಿ ಬಣ್ಣ ಹಚ್ಚಿ ಗ್ರಾಮದ ಯುವ ಕಲಾವಿದರಿಗೂ ಸಹ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದರ ಜೊತೆಗೆ ಮಾದರಿಯಾಗಿದ್ದರು. ಅಲ್ಲದೇ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿಯ ಉಪಾಧ್ಯಕ್ಷರಾಗಿ ಸಮಿತಿಯ ಏಳಿಗೆಗೆ ಉತ್ತಮ ಕಾರ್ಯನಿರ್ವಹಿಸುವಲ್ಲಿ ಸಕ್ರಿಯರಾಗಿದ್ದರು. ಚಂದ್ರಗುತ್ತಿ ಗ್ರಾಮಕ್ಕೆ ಇವರ ಕೊಡುಗೆ ಅಪಾರವಾಗಿದೆ.
ಅನಾರೋಗ್ಯದ ಸಮಸ್ಯೆಯಿಂದಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದಾರೆ. ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿ, ಇಬ್ಬರು ಸಹೋದರರು, ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರಾಮ ಸ್ವಾದಿಯವರ ನಿಧನಕ್ಕೆ ಸಂತಾಪ: ಚಂದ್ರಗುತ್ತಿ ಸಮಸ್ತ ಜನತೆ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಹಿರಿಯರು ರಾಮ ಸ್ವಾದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇವರ ಅಂತ್ಯಕ್ರಿಯೆ ಶುಕ್ರವಾರ ಗ್ರಾಮದ ಹರೀಶಿ ರಸ್ತೆಯಲ್ಲಿರುವ ಅವರ ಕೃಷಿ ಭೂಮಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಕಂಬನಿ ಮಿಡಿದರು.
ಅಂತಿಮ ಯಾತ್ರೆ ವೇಳೆ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸುವುದರ ಮೂಲಕ ಮೃತರಿಗೆ ಸಂತಾಪ ಸೂಚಿಸಿದರು.
ಅಂತಿಮ ಯಾತ್ರೆ ವೇಳೆ ಜನಸ್ತೋಮವೇ ಹರಿದು ಬಂದಿತ್ತು.
ವರದಿ: ಮಧು ರಾಮ್ ಸೊರಬ