ರಂಭಾಪುರಿ ಪೀಠಕ್ಕೆ ರವಿಶಂಕರ್ ಗುರೂಜಿ ಭೇಟಿ
(CHIKKAMAGALURU): ಬಾಳೆಹೊನ್ನೂರು: ಆರ್ಟ್ ಆಫ್ ಲೀವಿಂಗ್ನ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಸೋಮವಾರ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಕ್ಷೇತ್ರ ದರ್ಶನ ಮಾಡಿ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಇದೇ ಪ್ರಥಮ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ರವಿಶಂಕರ್ ಗುರೂಜಿ ಅವರನ್ನು ರಂಭಾಪುರಿ ಪೀಠದ ಸಿಬ್ಬಂದಿಗಳು ಶ್ರೀಪೀಠದ ಸಂಪ್ರದಾಯದoತೆ ಪೂರ್ಣಕುಂಭ ಸ್ವಾಗತ ನೀಡಿ ಬರ ಮಾಡಿಕೊಂಡರು.
ಬಳಿಕ ರವಿಶಂಕರ್ ಗುರೂಜಿ ಅವರು ಶ್ರೀಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ, ಭದ್ರಕಾಳಿ ಅಮ್ಮನವರ ದೇವಾಲಯ, ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ರವಿಶಂಕರ್ ಗುರೂಜಿ ಅವರು ರಂಭಾಪುರಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿ ಆಶೀರ್ವಾದ ಪಡೆದರು. ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗುರೂಜಿ ಅವರಿಗೆ ಶಾಲು, ಏಲಕ್ಕಿ ಹಾರ ಹಾಗೂ ಶ್ರೀಪೀಠದ ಸಮಗ್ರ ಮಾಹಿತಿಯುಳ್ಳ ಅಕ್ಷಯ ಎಂಬ ಕೃತಿಯನ್ನು ನೀಡಿ ಆಶೀರ್ವದಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ರವಿಶಂಕರ್ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿರುವುದು ಸೌಹಾರ್ಧಯುತವಾಗಿದ್ದು, ಜಗದ್ಗುರುಗಳೊಂದಿಗೆ ಧರ್ಮ, ಧಾರ್ಮಿಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಧರ್ಮ, ಧರ್ಮಗಳ ನಡುವೆ, ಮನುಷ್ಯರು, ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷಗಳು ಕೊನೆಯಾಗಬೇಕಿದೆ. ಜಗತ್ತಿನೆಲ್ಲೆಡೆ ಶಾಂತಿ, ಸೌಹಾರ್ಧತೆ, ಪ್ರೀತಿ, ವಿಶ್ವಾಸಗಳು ನೆಲೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಮಠಾದೀಶರು, ಆಚಾರ್ಯರು, ಋಷಿ ಮುನಿಗಳು ಶ್ರಮಿಸಬೇಕಿದೆ. ಜನಪ್ರತಿನಿಧಿಗಳು, ಸರ್ಕಾರಗಳು ಸಹ ಶಾಂತಿ, ಸಾಮರಸ್ಯ ಸ್ಥಾಪನೆಗೆ ಒತ್ತು ನೀಡಬೇಕಿದೆ ಎಂದು ಉಭಯರು ಮಾತನಾಡಿದ್ದೇವೆ ಎಂದು ತಿಳಿಸಿದರು.