370ನೇ ವಿಧಿ ರದ್ಧತಿ: ಸುಪ್ರೀಂ ತೀರ್ಪು ಐತಿಹಾಸಿಕ.
(CHIKKAMAGALURU): ಬಾಳೆಹೊನ್ನೂರು: ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದು ಐತಿಹಾಸಿಕ ತೀರ್ಪಾಗಿದೆ ಎಂದು ಕೇಂದ್ರೀಯ ಕಾಫಿ ಮಂಡಳಿ ಸದಸ್ಯ, ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ ಹೇಳಿದ್ದಾರೆ.
2019ರಲ್ಲಿ ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕವಾಗಿ ಎತ್ತಿಹಿಡಿದಿರುವುದು ದೇಶದ ಕಾನೂನಿನ ಮೇಲೆ ಜನತೆಗೆ ಇನ್ನಷ್ಟು ವಿಶ್ವಾಸ ಮೂಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಇದ್ದಾಗ ಅಲ್ಲಿನ ಜನರು ಅನುಭವಿಸಿದ ಸಂಕಷ್ಟಗಳು ಸಾವಿರಾರು ಇದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣೆಗೆ ಮುನ್ನ ಇದನ್ನು ರದ್ದು ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ 2019ರಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿತ್ತು.
370ನೇ ವಿಧಿ ರದ್ದುಪಡಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ನೀಡಿದ ಪಂಚಪೀಠಗಳನ್ನು ಒಳಗೊಂಡ ನ್ಯಾಯಮೂರ್ತಿಗಳ ನಿರ್ಧಾರ ಐತಿಹಾಸಿಕ ಮತ್ತು ಶ್ಲಾಘನೀಯವಾದದ್ದು. ತೀರ್ಪಿನ ಜೊತೆಗೆ ಮುಂಬರುವ ಸೆಪ್ಟೆಂಬರ್ ೩೦ರೊಳಗೆ ಜಮ್ಮು, ಕಾಶ್ಮೀರದಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸುವಂತೆ ಸೂಚನೆ ನೀಡಿರುವುದು ಉತ್ತಮ ನಿರ್ಧಾರವಾಗಿದೆ.
ಸುಪ್ರೀಂ ತೀರ್ಪಿನ ಬಳಿಕ ಜಮ್ಮು, ಕಾಶ್ಮೀರದ ಜನತೆ ನಿರಾಳರಾಗಿದ್ದು, ಭಾರತದ ಇತರೆ ರಾಜ್ಯಗಳ ಪ್ರಜೆಗಳಂತೆ ದೇಶದಲ್ಲಿನ ಎಲ್ಲಾ ಜನರು ಒಂದೇ ಎಂಬುದು ಸಾಬೀತಾಗಿದೆ. ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೂ ಕೂಡ ಎಲ್ಲ ರಾಜ್ಯಗಳಂತೆ ಕೇಂದ್ರದಿ0ದ ದೊರೆಯುವ ಸವಲತ್ತು, ಸೌಲಭ್ಯಗಳನ್ನು ನೀಡಲಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲಾ ಜಾತಿ, ಜನಾಂಗ, ವರ್ಗ, ರಾಜ್ಯಗಳು ಒಂದೇ ಎಂಬುದಕ್ಕೆ ಈ ನಿರ್ಧಾರವೇ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರವು ನುಡಿದಂತೆ ನಡೆಯುತ್ತಿದ್ದು, ಕೇವಲ ದೇಶ, ದೇಶದ ಜನರ ಹಿತಾಸಕ್ತಿಯೇ ಮುಖ್ಯವಾಗಿದೆ. ಈ ಹಿಂದೆ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಭರವಸೆ ನೀಡಿರುವಂತೆ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತರುವ ಕಾಲವು ಸನ್ನಿಹಿತವಾಗಿದ್ದು, ಅದು ಕೂಡ ಶೀಘ್ರದಲ್ಲಿ ನಡೆಯಬಹುದು ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನತೆ ಇನ್ನಷ್ಟು ವಿಶ್ವಾಸವನ್ನು ಇರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.