ಸಾಗರ ತಾಲೂಕಿನ ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯಾನಂದ ರಾವ್ ಗೆ 2023-24 ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ
ಸಾಗರ ಎಂದರೆ ಅದಕ್ಕೊಂದು ಭಿನ್ನತೆ ಇದೆ. ಸಾಹಿತ್ಯ, ಸಾಂಸ್ಕೃತಿಕ, ಇತಿಹಾಸ, ಸಂಗೀತ, ಹೋರಾಟ, ಪ್ರಾಕೃತಿಕ ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದಂತಹ ರೀತಿಯಲ್ಲಿ ಛಾಪು ಮೂಡಿಸುತ್ತ ಬಂದಿದೆ. ಅಲ್ಲದೆ ಅನೇಕ ಸಾಧಕರು ತಮ್ಮಷ್ಟಕ್ಕೆ ತಾವು ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಶೈಕ್ಷಣಿಕವಾಗಿ ಸಾಕಷ್ಟು ಶಿಕ್ಷಕರು ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಅಂತಹ ಸಾಧಕ ಶಿಕ್ಷಕರು ಒಂದಲ್ಲ ಒಂದು ಸಂದರ್ಭದಲ್ಲಿ ಬೆಳಕಿಗೆ ಬರುತ್ತಾರೆ. ಅದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅಂತಹ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆದವರೇ ತಾಲ್ಲೂಕಿನ ತ್ಯಾಗರ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಾನಂದ ರಾವ್.
ನೋಡಲು ತುಂಬಾ ಸರಳ ಯಾವ ಹಮ್ಮು ಬಿಮ್ಮು ಇಲ್ಲ ತಾವಾಯಿತು ತಮ್ಮ ಕೆಲಸವಾಯಿತು. ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಅಪರೂಪದ ಶಿಕ್ಷಕರಾಗಿದ್ದಾರೆ.
ಕಛೇರಿಗಳತ್ತ ಸುತ್ತಿದವರಲ್ಲ, ಪ್ರಚಾರಕ್ಕಾಗಿ ಹಂಬಲಿಸಿದವರಲ್ಲ, ನಿಜವಾಗಿ ಇವರನ್ನು ಯಾರೂ ಸಹ ಸರಿಯಾಗಿ ನೋಡಿಲ್ಲ….!!!
1971ರಲ್ಲಿ ಜನಿಸಿದ ಇವರು 1999ರಲ್ಲಿ ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು ಅಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನದ ಅನೇಕ ಪ್ರಯೋಗಗಳನ್ನು ಪರಿಣಾಮವಾಗಿ ಅನುಷ್ಠಾನಗೊಳಿಸುತ್ತಾರೆ, ಮಕ್ಕಳೊಂದಿಗೆ ಮಕ್ಕಳಾಗಿ ಅವರೊಂದಿಗೆ ಬೆರೆತು ತಮ್ಮ ಬೋಧನೆಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ ನಿಜವಾದ ಮಕ್ಕಳ ಶಿಕ್ಷಕರಾಗುತ್ತಾರೆ. ನಂತರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಶಾಲೆಗೆ ಒಳ್ಳೆಯ ಹೆಸರನ್ನು ತಂದರು, ಅಲ್ಲಿಂದ ಸಾಗರ ತ್ಯಾಗರ್ತಿ ಪ್ರೌಢಶಾಲೆಗೆ ಬರುತ್ತಾರೆ, ತಾಲ್ಲೂಕಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಎನ್ನುವ ಭಾವನೆ ಇಲ್ಲದೆ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಬಂದರು, ಇವರು ತಮಗೆ ಯಾವುದೇ ಪ್ರಶಸ್ತಿ ಬರಬೇಕು, ಯಾರೋ ಗುರುತಿಸಿ ಗೌರವಿಸುತ್ತಾರೆ ಎನ್ನುವ ಆಕಾಂಕ್ಷೆಯಿಂದ ಕಾರ್ಯ ನಿರ್ವಹಿಸುತ್ತಿರುವ ಮನೋಭಾವದವರಲ್ಲ, ಕಾಯಕವೇ ಕೈಲಾಸ ಎಂಬಂತೆ ತಮ್ಮನ್ನು ತಾವು ಶಿಕ್ಷಣ ಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಮಕ್ಕಳಿಗೆ ಕಲಿಸುವ ಕಾರ್ಯದಲ್ಲಿ ಮುಳುಗಿದವರು, ಸೃಜನಶೀಲ ಚಟುವಟಿಕೆಗಳನ್ನು ಪ್ರಯೋಗಾತ್ಮಕವಾಗಿ ಪರಿಣಾಮಕಾರಿಯಾಗಿ ಸುತ್ತ ಬಂದವರು, ಹೆಚ್ಚಿನ ಸಮಯವನ್ನು ಶಾಲೆ ಹಾಗೂ ಮಕ್ಕಳೊಂದಿಗೆ ಕಳೆದವರು, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮೂಲಕ ಬೋಧಿಸಿದರು, ಇವರು ಮಕ್ಕಳಿಗೆ ಮಾತ್ರ ಶಿಕ್ಷಕರಾಗದೆ, ಶಿಕ್ಷಕರಿಗೂ ಶಿಕ್ಷಕರಾದರು, ಸುಮಾರು 500ಕ್ಕೂ ಹೆಚ್ಚಿನ ಶಿಕ್ಷಕರ ವಿಜ್ಞಾನ ತರಬೇತಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ, ಕೋವಿಡ್ ಸಮಯದಲ್ಲಿ ಸ್ಥಬ್ದ ವಾಗಿದ್ದ ಮಕ್ಕಳ ಕಲಿಕೆಗೆ ವಿಜು ಎನ್ನುವ ತಮ್ಮದೆ ಯ್ಯಾಪ್ ಮೂಲಕ ಆನ್ ಲೈನ್ ಶಿಕ್ಷಣ ನೀಡುವ ಕೆಲಸವನ್ನು ನಿರ್ವಹಿಸಿದರು ಇದು ಸುಲಭದ ಮಾತಲ್ಲ, ಸುಮ್ಮನಿರುವ ಸಂದರ್ಭವು ಆಗಿರಲಿಲ್ಲ.
ನಾನು ಏನಾದರೊಂದು ಸಾಧಿಸಬೇಕೆಂಬ ಹಂಬಲ ಇವರಲ್ಲಿತ್ತು, ಕಲಿಸುವ ತುಡಿತ ಸದಾ ಕಾಡುತ್ತಿತ್ತು, ಹಾಗಾಗಿ ತಮ್ಮ ಶೈಕ್ಷಣಿಕ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಬಂದ ಫಲವೇ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಯಿತು, ಅದರೊಂದಿಗೆ ಸಾಗರ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಶಿಕ್ಷಕರ ಕಾರ್ಯವನ್ನು ಪ್ರತಿಯೊಬ್ಬರು ಅಭಿನಂದಿಸಲೇಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಇಂತಹ ಸಾಧನೆಗೆ ಪಾತ್ರರಾದ ಶಿಕ್ಷಕರ ಹಿಂದೆ ಸಾಕಷ್ಟು ಪರಿಶ್ರಮ ಇದೆ, ತಾವು ಪರಿಣಾಮಕಾರಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅಂದವರು ಇದ್ದಾರೆ ಆಡಿದವರು ಇದ್ದಾರೆ, ಹಂಗಿಸಿದವರು ಇದ್ದಾರೆ ಇದೆಲ್ಲಾ ಸಹಜವಾದುದು, ಎಲ್ಲಾವನ್ನು ನುಂಗಿ ಮೌನವಾಗಿ ಮಾಡಿದ ಸೇವಾ ಭಾವನೆ ಅದಕ್ಕೆಲ್ಲಾ ಉತ್ತರ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಯ ಗರಿ. ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಅನೇಕ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂತಹ ಸಾರ್ಥಕ ಬದುಕು. ಸಹಜವಾಗಿ ನನಗೆ ರಾಜ್ಯ ಮಟ್ಟದ ಪ್ರಶಸ್ತಿ ಬರುತ್ತದೆ ಎಂದುಕೊಂಡವರಲ್ಲ. ಅದರ ನಿರೀಕ್ಷೆಯಲ್ಲೂ ಇದ್ದವರಲ್ಲ. ಸಾಗರದ ಹಾಗೂ ಶಿಕ್ಷಕರ ಶೈಕ್ಷಣಿಕ ಕೀರ್ತಿ ರಾಜ್ಯ ಮಟ್ಟದಲ್ಲಿ ರಾರಾಜುಸುವಂತಾಗಿದೆ.
ಅವರ ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮ ಇದೆ ಎನ್ನುವುದು ಅಷ್ಟೇ ಸತ್ಯ. ಶುಭವಾಗಲಿ ಶಿಕ್ಷಕರ ಸಾಧನೆ ರಾಷ್ಟ್ರ ಮಟ್ಟದಲ್ಲೂ ವಿಸ್ತರಿಸಲಿ. ಅವರನ್ನು ಅಭಿನಂದಿಸಬೇಕಾದರೆ…
ಮೊ :9535246715