ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುತ್ತದೆ.
(KOLARA): ಬಂಗಾರಪೇಟೆ :ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳು ಕೇವಲ ಪುಸ್ತಕದ ಬಗ್ಗೆ ತಿಳಿದುಕೊಂಡರೆ ಪ್ರಯೋಜನವಿಲ್ಲ. ಜ್ಞಾನಕ್ಕೂ ವಿಸ್ತರಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂಬುದಕ್ಕೆ ಈ ವಿಜ್ಞಾನ ವಸ್ತು ಪ್ರದರ್ಶನ ಸಾಕ್ಷಿಯಾಗಿದೆ ಎಂದು ದಿ ಜ್ಯೋತಿ ರಾಯಲ್ ಕಾನ್ ಕಾರ್ಡ್ ಶಾಲೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್ ಹೇಳಿದರು.
ತಾಲೂಕಿನ ಲಕ್ಷ್ಮಿಪುರದ ದಿ ಜ್ಯೋತಿ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಮಕ್ಕಳ ಜ್ಞಾನ ವೃದ್ಧಿಗೆ ವಿಜ್ಞಾನ ವಸ್ತು ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ’ ಎಂದರು.
ವಿದ್ಯಾರ್ಥಿಗಳಿಂದ ವಿವಿಧ ಮಾದರಿಗಳ ವಸ್ತು ಪ್ರದರ್ಶನ:
ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ , ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಗಮನ ಸೆಳೆದವು.
ತ್ಯಾಜ್ಯ ನಿರ್ವಹಣೆ : ತ್ಯಾಜ್ಯ ನಿರ್ವಹಣೆ ನೀರಿನ ಸಂರಕ್ಷಣೆ ಕುರಿತು ತಮ್ಮ ಕೈಚಳಕದಿಂದಲೇ ಮಾಡಿದ ವಸ್ತು ಪ್ರದರ್ಶನ ನೆರೆದವರ ಮನಸೂರೆಗೊಳಿಸಿತು. ಕಾರ್ಖಾನೆ, ಹೋಟೆಲ್ನಿಂದ ಹೊರಬೀಳುವ ತ್ಯಾಜ್ಯ, ಹಸಿರು ಬೇಸಾಯದಿಂದ ಜನ ಸಾಮಾನ್ಯರಿಗೆ ದೊರಕುವ ಲಾಭ ಸೇರಿದಂತೆ ಮಾಹಿತಿ ನೀಡುವ ಮಾದರಿ ತಯಾರಿಸುವ ಮೂಲಕ ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಟ್ಟರು.
ಮಳೆ ನೀರು ಕೊಯ್ಲು ವಿಧಾನ: ಆಧುನಿಕತೆ ಬೆಳೆದಂತೆ ಮಳೆ ಪ್ರಮಾಣ ಕಡಿಮೆಗೊಂಡು ನೀರ ಅಭಾವ ಉದ್ಭವಿಸುತ್ತಿರುವ ಇಂದಿನ ದಿನಗಳಲ್ಲಿ ಮಳೆ ನೀರು ಕೊಯ್ಲು ವಿಧಾನದಿಂದ ಮಳೆ ನೀರು ಸಂಗ್ರಹಣೆ ಮೂಲಕ ನೀರಿನ ಕೊರತೆ ನೀಗಿಸುವಿಕೆ ಕುರಿತು ವಿದ್ಯಾರ್ಥಿಗಳು ತಯಾರಿಸಿದ ಮಳೆ ನೀರು ಕೊಯ್ಲು ಮಾದರಿಯು ಪ್ರದರ್ಶನದಲ್ಲಿ ಗಮನ ಸಳೆಯಿತು.
ವಿದ್ಯಾರ್ಥಿಗಳು ತಯಾರಿಸಿದ ಸಮುದ್ರ ಕಳೆ, ಕೃಷಿ ಮಾದರಿ, ಮಾದರಿ ಸೇರಿದಂತೆ ಇಂಧನ ಬಳಕೆ, ಕಾರ್ಖಾನೆ, ಗಣಿಗಾರಿಕೆಯಿಂದ ಹಾಗೂ ಅರಣ್ಯ ನಾಶದಿಂದಾಗಿ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿರುವ ಭೂಮಿಯ ರಕ್ಷ ಣೆ ಮಾಡುವ ವಿಧಾನಗಳು, ಹಲವಾರು ವಿಧಾನ ಕುರಿತು ವಿದ್ಯಾರ್ಥಿಗಳು ತಯಾರಿಸಿರುವ ಅನೇಕ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದವರಿಗೆ ಮಕ್ಕಳು ತಾವು ತಯಾರಿಸಿದ ವಿಜ್ಞಾನ ಮಾದರಿಗಳನ್ನು ವಿವರಿಸಿದರು.ವಸ್ತು ಪ್ರದರ್ಶನ ಕಣ್ತುಂಬಿಕೊಂಡ ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರೇಣುಕಾ, ಉಮೇರ ತಾಜ್, ಶಿಕ್ಷಕರಾದ ಜಯಶ್ರೀ, ಸರೋಜಾ,ಸುರೇಖಾ, ಶಿವಣ್ಣ, ಅಮರಾವತಿ, ಶ್ವೇತಾ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ