‘ಸರ್ ನಾನೂ ಕೂಡ ಚಪಾತಿ ಮಾಡ್ತಿನಿ ನನಗೂ ಅವಕಾಶ ಕೊಡಿ’
‘ಯಾರಾದರೂ ಪಾತ್ರೆಗಳಿಲ್ಲದೆ ಮಾಡಿದ ಈ ಅಡುಗೆಗಳ ರುಚಿ ನೋಡುತ್ತಿರಾ…!?’
ಈ ಬಾರಿ ಶಾಲಾ ವಾರ್ಷಿಕೋತ್ಸವಕ್ಕೆ ಸಂಬoಧಿಸಿದoತೆ ಈ ಬಾರಿಯೂ ಅಡುಗೆಸ್ಪರ್ಧೆಯನ್ನು ಆಯೋಜಿಸುವ ಸಲುವಾಗಿ ಮುಖ್ಯೋಪಾಧ್ಯಾಯರಿಗೆ ತಿಳಿಸಿದಾಗ ಅವರೊಂದು ಸಲಹೆ ನೀಡಿದರು ಪ್ರತೀಬಾರಿಯೂ ಈ ಸ್ಪರ್ಧೆ ಉತ್ತಮವಾಗಿಯೇ ಬರುತ್ತಿದೆ. ಈ ಬಾರಿ ಅದರಲ್ಲಿ ಏನಾದರೂ ವಿಶೇಷವಾಗಿ ಮಾಡೋಣ ಎಂದರು. ಯಾವ ರೀತಿಯಲ್ಲಿ ಎಂದು ಯೋಚಿಸುತ್ತಿರುವಾಗ ಅವರೇ ಒಂದು ಸಲಹೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಅಡುಗೆ ಸ್ಪರ್ಧೆಯನ್ನು ಆಯೋಜಿಸುವಾಗ ಅದರಲ್ಲಿ ಪಾತ್ರೆ ರಹಿತವಾಗಿ ಅಡುಗೆ ಮಾಡುವ ಒಂದು ಚಟುವಟಿಕೆ ಇರುತ್ತದೆ. ಮಕ್ಕಳು ಕ್ಯಾಂಪ್ಗಳಿಗೆ ಹೋದಾಗ ಪಾತ್ರೆಗಳನ್ನು ತೆಗೆದುಕೊಂಡು, ತಮ್ಮ ಇತರ ಲಗೇಜ್ಗಳ ಜೊತೆಗೆ ಕೊಂಡೊಯ್ಯುವುದು ಕಷ್ಟ ಎನ್ನುವ ಕಾರಣಕ್ಕಾಗಿ ಅವುಗಳನ್ನು ಬಳಸದೇ ಹೇಗೆ ಅಡುಗೆ ತಯಾರಿಸಬಹುದು ಎಂಬುದರ ಬಗ್ಗೆ ಅನುಭವ ಇರುವ, ಇದರ ಬಗ್ಗೆ ಹಲವು ಕಡೆಗಳಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಿರುವ, ಅನೇಕ ತರಗತಿಗಳನ್ನು ಮಾಡಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜೇಶ್ ಅವಲಕ್ಕಿ ಅವರನ್ನು ಶಾಲೆಗೆ ಕರೆಯಿಸಿ ಪಾತ್ರೆ ರಹಿತವಾಗಿ ಆಡುಗೆ ಮಾಡುವ ಬಗ್ಗೆ ಒಮ್ಮೆ ಮಕ್ಕಳಿಗೆ ಅವರಿಂದ ಪರಿಚಯಿಸುವ ಬಗ್ಗೆ ತಿಳಿಸಿದರು.
ಮೊದಲನೆಯದಾಗಿ ೯ನೇ ತರಗತಿಯ ಮಕ್ಕಳಿಗೆ ಮಾತ್ರ ಪಾತ್ರೆರಹಿತ ಅಡುಗೆ ಎಂದು ನಿರ್ಧರಿಸಲಾಗಿತ್ತು. ಎಲ್ಲಾ ಅಡುಗೆಗಳನ್ನು ಮಾಡುವುದು ಕಷ್ಟ ಎನಿಸಿತು. ಹಾಗಾಗಿ ೯ನೇ ತರಗತಿಗೆ ಮಾತ್ರ ಸೀಮಿತವಾಗುವುದು ಬೇಡ ಎಲ್ಲಾ ತರಗತಿಯ ಮಕ್ಕಳು ಒಂದೊoದು ಅಡುಗೆಯನ್ನು ಮಾತ್ರ ಪಾತ್ರೆರಹಿತವಾಗಿ ಮಾಡಲು ಸೂಚಿಸಲಾಯಿತು. ಮಕ್ಕಳಿಗೆ ಪ್ರಾತ್ಯಕ್ಷಿತೆಯನ್ನು ಹೇಳಲು ಬರುವ ದಿನವನ್ನು ನಿರ್ಧರಿಸಲಾಯಿತು.
ನಿಗಧಿತ ದಿನದಂದು ಸಂಜೆ ರಾಜೇಶ್ ಅವಲಕ್ಕಿ ಸರ್ ಶಾಲೆಗೆ ಬಂದರು. ಮೊದಲು ಬರೀ ೮ನೇ ತರಗತಿಯ ಮಕ್ಕಳನ್ನು ಮಾತ್ರ ಕರೆದುಕೊಂಡು ಬರಲಾಯಿತು. ಎಲ್ಲರೂ ಸುತ್ತ ಕುಳಿತರು. ಮಧ್ಯೆ ಕ್ಯಾಂಪ್ಗಳಲ್ಲಿ ಬೆಂಕಿಯನ್ನು ಸುರಕ್ಷಿತವಾಗಿ ಹೇಗೆ ಬಳಸುವುದು, ಅದನ್ನು ಹೆಚ್ಚುಕಾಲ ಬರುವಂತೆ ಹೇಗೆ ಸೌದೆಗಳನ್ನು ನಿಲ್ಲಿಸುವುದು? ಸುತ್ತಲೂ ಬೆಂಕಿ ಹರಡದಂತೆ ಕಲ್ಲು/ಇಟ್ಟಿಗೆಗಳನ್ನು ಹೇಗೆ ಇಡುವುದು? ಎಲ್ಲವನ್ನು ತಿಳಿಸಿದರು. ಅಲ್ಲಿಯೇ ಇದ್ದ ಮಕ್ಕಳಲ್ಲಿ ಸಹಾಯಕ್ಕಾಗಿ ಕೆಲವು ಮಕ್ಕಳು ಬರಬಹುದೇ? ಎಂದಾಗ ನಿಖಿಲ್, ಅರ್ಜುನ್, ಆರುಷ್ ಮೊದಲಾದವರು ಓಡಿಬಂದರು. ಅವರಿಗೆ ಸೌದೆಯನ್ನು ನಿಲ್ಲಿಸಲು ಸೂಚಿಸಿದರು. ಕೇವಲ ೨ ಬೆಂಕಿಕಡ್ಡಿಗಳನ್ನು ನೀಡಿದರು. ಆದರೆ ಅವುಗಳಲ್ಲಿ ಬೆಂಕಿಹಚ್ಚಲು ಸಾಧ್ಯವಾಗಲಿಲ್ಲ. ಮತ್ತೊಂದು ಕಡ್ಡಿಯನ್ನು ಬಳಸಿ ಬೆಂಕಿಯನ್ನು ಹಚ್ಚಿ ಅಂತೂಇoತೂ ಅಡುಗೆಗೆ ಮೊದಲ ಹೆಜ್ಜೆ ಇಟ್ಟರು.
ಒಂದೇ ಸಮಯದಲ್ಲಿ ಇರುವ ಹೆಚ್ಚು ಜನರು ಬೇರೆಬೇರೆ ಕೆಲಸಗಳನ್ನು ಹೇಗೆ ಹಂಚಿಕೊoಡು ಮಾಡುವುದು ಎನ್ನುವುದನ್ನು ತಿಳಿಸುವ ಸಲುವಾಗಿ, ಇಬ್ಬರು ಹುಡುಗಿಯರನ್ನು ಕರೆದಾಗ ಮಾನ್ಯ, ಪ್ರತಿಭ ಬಂದರು ಅವರಿಗೆ ಬಾಳೆಎಲೆಯ ಮೇಲೆ ಚಪಾತಿಹಿಟ್ಟನ್ನು ಕಲಿಸಿ, ಚಪಾತಿ ಮಾಡಲು ಸೂಚಿಸಿದರು. ಪಾತ್ರೆಕೊಡಿ ಹಿಟ್ಟನ್ನು ಕಲಿಸಿಕೊಳ್ಳಬೇಕು ಎಂದಾಗ ಎಲ್ಲರೂ ನಕ್ಕರು. ಏಕೆಂದರೆ ಪಾತ್ರೆಗಳನ್ನು ಬಳಸದೇ ಅಡುಗೆ ಮಾಡಬೇಕಿತ್ತು. ಹಾಗೆಯೇ ಬಾಳೆ ಎಲೆಯ ಮೇಲೆ ಹಿಟ್ಟನ್ನು ಕಲಿಸಿಕೊಳ್ಳತೊಡಗಿದರು. ಮತ್ತೊಂದೆಡೆಯಲ್ಲಿ ಮಣ್ಣನ್ನು ನೀರಲ್ಲಿ ಕಲಸಲು ತಿಳಿಸಿದರು. ಗಗನ್ ಮತ್ತು ಅರ್ಜುನ್ ಈ ಕೆಲಸವನ್ನು ಮಾಡತೊಡಗಿದರು. ಸ್ವಲ್ಪ ಮೆತ್ತಗೆ ಕಲಿಸಿದ ನಂತರ ಆಲೂಗಡ್ಡೆ ತೆಗೆದುಕೊಂಡು ಅದಕ್ಕೆ ಮೆತ್ತಲು ಹೇಳಿದರು. ಎಲ್ಲರೂ ಆಶ್ಚರ್ಯದಿಂದ ಹೋ… ಎನ್ನತೊಡಗಿದರು. ‘ನೋಡಿನೋಡಿ’ ಎಂದು ಕೆಲಸವನ್ನು ಮುಂದುವರೆಸಲು ತಿಳಿಸಿದರು. ಸಂಪೂರ್ಣ ಆಲೂಗಡ್ಡೆಗೆ ಮಣ್ಣನ್ನು ಮೆತ್ತಿ ಅದನ್ನು ಉರಿಯುತ್ತಿರುವ ಬೆಂಕಿಯಲ್ಲಿ ಇಟ್ಟರು. ಎಲ್ಲರೂ ಇದೇನು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ತದೇಕಚಿತ್ತದಿಂದ ನೋಡುತ್ತಿದ್ದರು.
ಮತ್ತೊಂದೆಡೆ ಅಲ್ಯುಮೀನಿಯಂ ಫಾಯಿಲ್ಪೇಪರ್ ತೆಗೆದುಕೊಂಡು ಬಟ್ಟಲ ರೂಪದಲ್ಲಿ ಹಿಡಿದುಕೊಂಡು ತೊಳೆದ ಅಕ್ಕಿಯನ್ನು, ಒಂದಿಷ್ಟು ನೀರನ್ನು, ಸ್ವಲ್ಪ ಉಪ್ಪನ್ನು ಮಕ್ಕಳೆದುರು ಬೆರೆಸಿ ಅದನ್ನು ನಿಧಾನವಾಗಿ ಸುತ್ತಿ ಮಕ್ಕಳೆದುರಲ್ಲಿ ಬೆಂಕಿಯಲ್ಲಿ ಇಟ್ಟರು. ಕೆಲವರು ನೀರು ಚೆಲ್ಲಿದರೆ? ಸುಟ್ಟು ಹೋದರೆ? ಹೀಗೇ ಏನೇನೋ ಯೋಚನೆಯನ್ನು ಮಾಡತೊಡಗಿದರು. ಇಷ್ಟರ ನಡುವೆ ಬಜ್ಜಿ ಮಾಡಲು ತೊಳೆದುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಒಂದಿಷ್ಟು ಟಮೋಟ, ಈರುಳ್ಳಿ, ಮೆಣಸಿನಕಾಯಿಯನ್ನು ಜಜ್ಜಿ ಎಲೆಯ ಮೇಲೆ ಉಪ್ಪನ್ನು ಬೆರೆಸಿಕೊಳ್ಳಲು ತಿಳಿಸಿದರು. ಇವರೋ ಮೆಣಸಿನಕಾಯಿಯನ್ನು ಕಲ್ಲಿನಲ್ಲಿ ಜಜ್ಜಿದ್ದಕ್ಕಿಂತ ಕೈಯಲ್ಲಿ ಕಲಸಿದ ಕಾರಣ ಸ್ವಲ್ಪ ಕೈ ಉರಿಬಂದಿತ್ತು.
‘ಇವೆಲ್ಲವುಗಳ ನಡುವೆ ಅನ್ನಕ್ಕೆ ಸಾರು ಮಾಡಬೇಡವೆ?’ ಎಂದು ರಾಜೇಶ್ ಸರ್ ಕೇಳಿದಾಗ ‘ಹೌದು ಬೇಕು’ ಎಂದು ಮಕ್ಕಳು ಹೇಳಿದಾಗ ಮತ್ತೊಂದು ಅಲ್ಯುಮೀನಿಯಂ ಫಾಯಿಲ್ಪೇಪರ್ ಅನ್ನು ತೆಗೆದುಕೊಂಡು ಅದಕ್ಕೆ ಬೇಳೆ, ಎಣ್ಣೆ, ಟಮೋಟೋ, ಮೆಣಸಿನಕಾಯಿ, ಉಪ್ಪು, ನೀರನ್ನು ಸೇರಿಸಿ ಅದನ್ನು ಹಾಗೆಯೇ ಮೇಲೆ ಮಡಚಿ ಮಕ್ಕಳಿಗೆ ತೋರಿಸುತ್ತ ಬೆಂಕಿಯಲ್ಲಿ ಇಡತೊಡಗಿದರು. ಇವೆಲ್ಲವನ್ನು ನೋಡಿದ ಮಕ್ಕಳು ನಿಜಕ್ಕೂ ಅಡುಗೆ ಆಗುತ್ತದೆಯೇ? ಎಂದುಕೊಳ್ಳತೊಡಗಿದರು.
ಸ್ವಲ್ಪ ಸಮಯದ ನಂತರದಲ್ಲಿ ಈಗ ಆಲೂಗಡ್ಡೆಯನ್ನು ತೆಗೆಯೋಣವೇ? ಎಂದು ಕೇಳಿದಾಗ ಆಗಲಿ ಎಂದರು. ಎಲ್ಲರೂ ಕುತೂಹಲದಲ್ಲಿ ನೋಡತೊಡಗಿದರು. ಎರಡು ಕೋಲುಗಳನ್ನು ಬಳಸಿಕೊಂಡು ಅದನ್ನು ಹೊರತೆಗೆದು ನಿಧಾನವಾಗಿ ಮಣ್ಣನ್ನು ತೆಗೆದರು. ಆಲೂಗಡ್ಡೆ ಬೆಂದಿತ್ತು. ನಿಧಾನವಾಗಿ ಸಿಪ್ಪೆ ತೆಗೆಯುವಾಗ ಎಲ್ಲರಿಗೂ ಆಶ್ಚರ್ಯ ಅದನ್ನು ಸಣ್ಣದಾಗಿ ಕತ್ತರಿಸಿ ಅದಾಗಲೇ ಸಿದ್ಧಮಾಡಿಟ್ಟುಕೊಂಡಿದ್ದ ಬಜ್ಜಿಗೆ ಇದನ್ನು ಬೆರೆಸಿ ಕಲಸಿದರು.
ಅನ್ನ ಆಗಿದೆಯೇ ಎಂದು ನೋಡಲು ಮುಂದಾದರು ಮತ್ತೆ ಕೋಲುಗಳನ್ನು ಬಳಸಿಕೊಂಡು ಅನ್ನಮಾಡಲು ಇಟ್ಟಿದ್ದನ್ನು ನಿಧಾನವಾಗಿ ಬೆಂಕಿಯಿoದ ಹೊರತೆಗೆದು ಅದನ್ನು ನಿಧಾನವಾಗಿ ಬಿಡಿಸಿದರು. ಅನ್ನ ತಯಾರಾಗಿತ್ತು. ನೀರು ಕಡಿಮೆಯಿದ್ದ ಕಾರಣ ಸ್ವಲ್ಪ ಕಪ್ಪಾಗಿತ್ತು. ನಂತರದಲ್ಲಿ ಸಾಂಬಾರ್ ಕೂಡ ಸಿದ್ಧವಾಗಿತ್ತು. ತಟ್ಟಿದ್ದ ಚಪಾತಿಯನ್ನು ಹೇಗೆ ಏನು ಮಾಡುವುದು? ಎಂದಾಗ ಕೆಂಡದ ಮೇಲೆ ಅದನ್ನು ಹೇಗೆ ಸುಡಬೇಕು ಎಂಬುದನ್ನು ಮಾಡಿ ತೋರಿಸಿದರು. ಪ್ರತಿಭಾ ‘ಸರ್ ನಾನೂ ಕೂಡ ಚಪಾತಿ ಮಾಡ್ತಿನಿ ನನಗೂ ಅವಕಾಶ ಕೊಡಿ’ ಎಂದು ಕೇಳಿ ಬೆಂಕಿಯಲ್ಲಿ ಅದನ್ನು ಬೇಯಿಸತೊಡಗಿದಳು. ಅಂತೂಇoತೂ ಒಂದು ಹಂತಕ್ಕೆ ಎಲ್ಲವೂ ಸಿದ್ಧವಾಗಿತ್ತು. ಪಾತ್ರೆಗಳನ್ನು ಬಳಸದೇ ಅಡುಗೆ ಮಾಡುವ ಸಂಭ್ರಮ ಮುಗಿದಿತ್ತು. ಮಾಡಿದ ಅಡುಗೆಗಳನ್ನು ಎಲೆಯ ಮೇಲೆ ಚೆಂದವಾಗಿ ಜೋಡಿಸಿ ಇಡಲಾಯಿತು.
ಕೆಲವರು ರುಚಿ ಇದೆಯಾ? ಇಲ್ಲವೋ? ಎಂದುಕೊಳ್ಳತೊಡಗಿದರು. ‘ಯಾರಾದರೂ ಪಾತ್ರೆಗಳಿಲ್ಲದೆ ಮಾಡಿದ ಈ ಅಡುಗೆಗಳ ರುಚಿ ನೋಡುತ್ತಿರಾ?’ ಎಂದಾಗ ಕೆಲವರು ‘ನಾನು ನಾನು’ ಎಂದು ಕೂಗ ತೊಡಗಿದರು. ಕೆಲವರಂತೂ ‘ನಿಜವಾಗಿಯೂ ರುಚಿ ಇದೆಯಾ?’ ಎಂದು ಪ್ರಶ್ನೆ ಮಾಡತೊಡಗಿದರು. ಮೊದಲು ‘ನಿಮ್ಮ ಮುಖ್ಯೋಪಾಧ್ಯಾಯರನ್ನು ಕರೆಯಿರಿ. ಅವರಿಗೆ ಮಾಡಿರುವ ಅಡುಗೆಯನ್ನು ತೋರಿಸಿ, ರುಚಿಯನ್ನು ನೋಡಲು ತಿಳಿಸಿ’ ಎಂದರು. ಒಂದಿಷ್ಟು ಮಕ್ಕಳು ಕರೆದುಕೊಂಡು ಬಂದರು. ಎಲ್ಲಾ ಮಕ್ಕಳಿಗೂ ರುಚಿ ನೋಡುವ ಮೊದಲು ‘ಈ ಸಮಯ ಎಲ್ಲರಿಗೂ ನೆನಪಲ್ಲಿ ಇರುತ್ತದೆ ಎಂದುಕೊಳ್ಳುತ್ತೇನೆ. ಈ ವಿಶೇಷ ಸಮಯ ಖುಷಿ ನೀಡಿದೆ ಎಂಬುದಾಗಿ ಭಾವಿಸುತ್ತೇನೆ. ಒಂದು ಹೊಸತನವನ್ನು ಕಲಿತಿದ್ದೀರಾ?’ ಎಂದಾಗ ಎಲ್ಲಾ ಮಕ್ಕಳು ‘ಹೌದು ಸರ್’ ಎಂದರು. ರುಚಿ ನೋಡಲು ಮುಂದಾದರು. ಮೊದಲು ಇದರ ತಯಾರಿಗೆ ಸಹಾಯ ಮಾಡಿದ್ದ ಮಕ್ಕಳಿಗೆ ಅವಕಾಶ ನೀಡಿದರು. ಒಂದಿಷ್ಟು ಶಿಕ್ಷಕರು ರುಚಿ ನೋಡಿದರು. ಕೆಲವು ಮಕ್ಕಳಂತೂ ‘ಸರ್ ನಮಗೂ ಈ ಹೊಸ ರುಚಿ ನೋಡಲು ಅವಕಾಶ ಕೊಡಿ’ ಎಂದು ಕೇಳತೊಡಗಿದರು. ಇದ್ದದ್ದೇ ಕಡಿಮೆ ಅದರಲ್ಲೂ ಒಂದಿಷ್ಟನ್ನು ಮಕ್ಕಳಿಗೆ ಕೊಡುತ್ತಾ ಹೋದೆವು. ಕೆಲವೇ ಕ್ಷಣಗಳಲ್ಲಿ ಅಷ್ಟೂ ಪದಾರ್ಥಗಳು ಸಂಪೂರ್ಣ ಖಾಲಿಯಾಗಿತ್ತು.
ಒಂದು ವಿಶೇಷ ತರಗತಿ ಶಾಲಾ ಮೈದಾನದಲ್ಲಿ ಮಕ್ಕಳಿಗೆ ಸಿಕ್ಕಿತ್ತು. ಎಲ್ಲಾ ಸವಲತ್ತುಗಳಿದ್ದಾಗ ಅಡುಗೆ ಮಾಡುವುದು ಸುಲಭವೇ ಸರಿ. ಆದರೆ ಪಾತ್ರೆಗಳನ್ನು ಬಳಸದೇ, ಬೆಂಕಿಯಲ್ಲಿ ಜಾಗ್ರತೆಯಿಂದ ಅಡುಗೆ ಮಾಡುವ ವಿಧಾನವನ್ನು ಪಠ್ಯದ ಹೊರತಾಗಿ ಕಲಿತರು. ಕೆಲವೊಂದಿಷ್ಟು ವಿಚಾರಗಳನ್ನು ತರಗತಿಯ ಆಚೆಗೂ ಕಲಿಯಬಹುದಾದ ಸಮಯಕ್ಕೆ ಮಕ್ಕಳು ಸಾಕ್ಷಿಯಾಗಿದ್ದರು. ಈ ಅನುಭವ ಹೊಸ ರೀತಿಯ ಅಡುಗೆ ಪ್ರಯೋಗಕ್ಕೆ ವೇದಿಕೆಯಾಗಿತ್ತು. ಮುಂದಿನ ಅಡುಗೆ ಸ್ಪರ್ಧೆಯಲ್ಲಿ ಇದರಿಂದ ಪಡೆದ ಅನುಭವವು ಹೇಗೆ ವ್ಯಕ್ತವಾಗುವುದೋ ಎಂದು ಕಾಯುತ್ತಿದ್ದೇವೆ…
ಚೇತನ್ ಸಿ ರಾಯನಹಳ್ಳಿ
ಶಿವಮೊಗ್ಗ
ಮೊಬೈಲ್ – ೯೫೩೮೦೨೦೩೬೭