‘ಸರ್ ಇವನು ಮಾರ್ಕ್ಸ್ ತೆಗಿಲಿ ಬಿಡಲಿ ಮೊದಲು ಪೋಷಕರಿಗೆ ಗೌರವ ಕೊಡೋಕೆ ಹೇಳಿ…!?’
ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ತಿಳಿಯಬೇಕೆಂದರೆ ಅವರ ‘ಓದು’ ಪ್ರಮುಖ ಎಂಬುದರಲ್ಲಿ ಎರಡು ಮಾತೇ ಇಲ್ಲ. ಸಾಮಾನ್ಯವಾಗಿ ಶಾಲೆ ಆರಂಭವಾದಾಗ ಕೆಲವು ದಿನ ‘ಸೇತುಬಂಧ ಪರೀಕ್ಷೆ’ ಎಂಬುದನ್ನು ಮಾಡಿ ಅದರಲ್ಲಿ ಮಕ್ಕಳು ತೆಗೆದುಕೊಳ್ಳುವ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟವನ್ನು ತಿಳಿಯಬಹುದು.
ದಿನಕಳೆದಂತೆ ಪಾಠ-ಪದ್ಯಗಳ ಅಭ್ಯಾಸವನ್ನು ಮಾಡುವ ಮಕ್ಕಳು ಶಾಲೆಯ ಇತರ ಚಟುವಟಿಕೆಗಳು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವ ಸಮಯಕ್ಕೆ ಸರಿಯಾಗಿ ‘ಕಿರುಪರೀಕ್ಷೆ’ ಬಂದೇ ಬಿಡುತ್ತದೆ. ಇದ್ದಕ್ಕಿದ್ದಂತೆ ಪರೀಕ್ಷಾ ವೇಳಾಪಟ್ಟಿಯನ್ನು ಕಂಡ ಮಕ್ಕಳು ಬರೀ ಆಟವಾಡಿದ್ದೇ ಆಯಿತು ಪರೀಕ್ಷೆ ಏನು ಓದುವುದೋ? ನೋಟ್ಸ್ ಯಾರ ಹತ್ರವಾದರೂ ಇಸ್ಕೊಂಡು ಬರೆದುಕೊಳ್ಳಬೇಕು… ಹೀಗೆ ಅನೇಕ ಯೋಚನೆಗಳಲ್ಲಿ ಮುಳುಗುವುದು ಸಾಮಾನ್ಯ. ಅದೆಷ್ಟೋ ಮಕ್ಕಳು ಪರೀಕ್ಷೆಯ ಹಿಂದಿನದಿನವೂ ನೋಟ್ಸ್ ಬರೆಯದೇ, ಬೇರೆಯವರಿಂದ ಕಳಿಸಿಕೊಂಡು ಬರೆಯುವವರೂ ಇದ್ದಾರೆ. ಇನ್ನೂ ಕೆಲವರು ಪರೀಕ್ಷೆಯ ದಿನ ಶಾಲೆಯಲ್ಲಿ ಇತರ ಮಕ್ಕಳ ಬಳಿಯಲ್ಲಿರುವ ನೋಟ್ಸ್ ಅನ್ನು ತೆಗೆದುಕೊಂಡು ಓದುವುದನ್ನೂ ನೋಡಿದ್ದೇವೆ. ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎನ್ನುವುದರ ಬದಲಾಗಿ ‘ಯುದ್ಧದಲ್ಲೇ ಶಸ್ತ್ರಾಭ್ಯಾಸ’ ಎನ್ನುವಂತಾಗಿದೆ.
ಓದುವ ವಿದ್ಯಾರ್ಥಿಗಳು ಹೆಚ್ಚು ಯೋಚನೆ ಮಾಡದೇ ತಮ್ಮ ಓದು, ಬರವಣಿಗೆಯ ಬಗ್ಗೆ ಗಮನ ಹರಿಸುವುದು ಸಾಮಾನ್ಯ. ಇನ್ನೂ ಕೆಲವರು ಆಟದಲ್ಲೂ ಪಾಠದಲ್ಲೂ ಹಿಂದುಳಿಯದೇ ಎರಡೂ ಕಡೆಗಳಲ್ಲೂ ಸಮಾನ ಪ್ರಾಧ್ಯಾನ್ಯತೆ ನೀಡುವವರೂ ಇದ್ದಾರೆ. ‘ಅವರು ಆಟನೂ ಚೆನಾಗಿ ಆಡ್ತಾರೆ, ಪಾಠವನ್ನೂ ಚೆನ್ನಾಗಿ ಕೇಳ್ತಾರೆ, ಪರೀಕ್ಷೆಲಿ ಒಳ್ಳೆಯ ಅಂಕಗಳನ್ನೂ ಪಡೀತಾರೆ’ ಅಂತ ಉಳಿದ ಮಕ್ಕಳು, ಶಿಕ್ಷಕರು ಮಾತಾಡ್ತಾ ಇರ್ತಾರೆ.
ಮಕ್ಕಳು ಶಾಲೆ ಎಂದಾಗ ಖುಷಿಯಿಂದಾನೇ ಬರ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ‘ಪೇರೆಂಟ್ಸ್ ಮೀಟಿಂಗ್’ ಎಂದಾಗ ಸಣ್ಣ ಭಯದಿಂದ ಪೋಷಕರಿಗೆ ತಿಳಿಸದೇ ಇರುವ ವಿದ್ಯಾರ್ಥಿಗಳೂ ಇದ್ದಾರೆ. ಈ ಸಮಯದಲ್ಲಿ ಮಕ್ಕಳು ಬರೆದಿದ್ದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡಿ, ಎಲ್ಲೆಲ್ಲಿ ಅಂಕಗಳು ಬಂದಿಲ್ಲ, ಯಾವುದಕ್ಕೆ ಉತ್ತರ ಬರೆದಿಲ್ಲ, ಎಲ್ಲಿ ತಪ್ಪಾಗಿದೆ ಅನ್ನೋದನ್ನ ತಿಳಿಯೋಕೆ ಅನುಕೂಲ ಆಗ್ತಾ ಇತ್ತು.
ನಮ್ಮ ಶಾಲೆಯಲ್ಲಿ ಓದುತ್ತಿದ್ದ ರಿಭವ್ (ಹೆಸರು ಬದಲಿಸಲಾಗಿದೆ) ಓದಿನಲ್ಲಿ ಪರವಾಗಿಲ್ಲ. ಆದರೆ ಆಟದಲ್ಲಿ ಕೇಳುವುದೇ ಬೇಡ ಆ ಮಟ್ಟಿಗೆ ತೊಡಗಿಸಿಕೊಳ್ಳುತ್ತಿದ್ದನು. 8, 9ನೇ ತರಗತಿಯಲ್ಲಿದ್ದಾಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಬಹುಮಾನವನ್ನೂ ಪಡೆದುಕೊಂಡವನು. ಅವನ ಪೋಷಕರೂ ಸಹ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಪ್ರತಿದಿನ ಆತನ ತಾಯಿ ಮಗನನ್ನು ಶಾಲೆಗೆ ಬಿಡುವ, ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದರು
ಈತ 9ನೇ ತರಗತಿ ಓದುತ್ತಿರುವ ಸಂದರ್ಭದಲ್ಲಿ ಅವನ ತಾಯಿಗೆ ಒಂದಿಷ್ಟು ಆರೋಗ್ಯದ ಸಮಸ್ಯೆಯುಂಟಾಗಿತ್ತು. ವೈದ್ಯರ ಸಲಹೆಯ ಮೇರೆಗೆ 7 ತಿಂಗಳುಗಳ ಕಾಲ ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಆಗ ಶಾಲೆಗೆ ಒಬ್ಬನೇ ಬರ ತೊಡಗಿದ. ಪ್ರತಿನಿತ್ಯವೂ ಅವರ ತಾಯಿಯೊಂದಿಗೆ ನೋಡುತ್ತಿದ್ದೆ. ಇತ್ತೀಚೆಗೆ ಅವರು ಕಾಣುತ್ತಿಲ್ಲವಲ್ಲ? ಎಂದು ಅವನ ಬಳಿ ವಿಚಾರಿಸಿದಾಗ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ. ವಿಶ್ರಾಂತಿಯೇ ಹೆಚ್ಚಾಗಿ ಬೇಕಾಗಿರುವುದರಿಂದ ಅಜ್ಜಿಯ ಮನೆಯಲ್ಲಿದ್ದಾರೆ. ಇಲ್ಲಿ ನಾನು, ನನ್ನ ಅಕ್ಕ, ಮತ್ತು ಅಪ್ಪ ಇದ್ದೇವೆ. ಎಂದು ತಿಳಿಸಿದ್ದ.
10ನೇ ತರಗತಿಗೆ ಬಂದಾಗ ಆತನಿಗೆ ನಾನೇ ತರಗತಿಯ ಶಿಕ್ಷಕನಾಗಿದ್ದೆ. ಓದು ಪರವಾಗಿಲ್ಲ, ಕ್ರೀಡೆ ಬಿಡುವ ಹಾಗೆಯೇ ಇಲ್ಲ ಎಂಬಂತಾಗಿದ್ದ. ಒಂದಿಷ್ಟು ಪರೀಕ್ಷೆಯ ನಂತರ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಇವತ ತಾಯಿ ಬಂದಿದ್ದರು. ಮಾಹಿತಿ ಇದ್ದಿದ್ದರಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ನಂತರ ಅವರು ಹೇಳಿದ ಮಾತು ‘ನೊಂದ ಪೋಷಕರ ಪ್ರತಿಧ್ವನಿ’ಯಂತಿತ್ತು. ‘ಸರ್ ಇವನುಮಾರ್ಕ್ಸ್ ತೆಗಿಲಿ ಬಿಡಲಿ ಮೊದಲು ಪೋಷಕರಿಗೆ ಗೌರವ ಕೊಡೋಕೆ ಹೇಳಿ’ ಎಂದಾಗ ಆಶ್ಚರ್ಯವಾಯಿತು. ಇದೇಕೆ ಹೀಗೆ ಹೇಳುತ್ತಿದ್ದಾರೆ? ಎಂದು. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಇವನ ವರ್ತನೆಯ ಬಗ್ಗೆ ತಿಳಿಸಿದರು. ಅಪ್ಪ-ಅಮ್ಮನಿಗೆ ಗೌರವ ಕೊಡುತ್ತಿಲ್ಲ, ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾನೆ. ಇವನನ್ನು ಶಾಲೆಗೆ ಕರೆದುಕೊಂಡು ಬರುವುದು, ಮನೆಗೆ ಕರೆದುಕೊಂಡು ಹೋಗುವುದು ಇದರ ಮಧ್ಯೆ ಬೆಳಗ್ಗೆ ಸಂಜೆ ಆಟದ ಅಭ್ಯಾಸಕ್ಕಾಗಿ ಅಲ್ಲಿಗೂ ಕರೆದುಕೊಂಡು ಹೋಗೋದು ಬರೋದು ಮಾಡ್ತಾ ಇದೀನಿ, ಆರೋಗ್ಯ ಸಮಸ್ಯೆ ಇತ್ತು ಈಗ ಸುಧಾರಿಸಿಕೊಂಡಿದಿನಿ. ಆದರೂ, ಇವನು ಆಡೋ ಮಾತುಗಳು ಬಹಳ ಬೇಸರ ತರಿಸತ್ತೆ. ಇವರು ನಮ್ಮ ಮಕ್ಕಳೇನಾ? ಅನ್ನುವಷ್ಟು ವಿಚಿತ್ರ ವರ್ತನೆಗಳು. ಇವನ ಕೆಲವು ಗೆಳೆಯರು ಫೋನ್ ಮಾಡ್ತಾರೆ. ಶಿಕ್ಷಕರುಗಳಿಗೂ ಗೌರವ ಕೊಡದೇ ಮಾತಾಡೋದು ನೋಡಿ ಬೇಜಾರಾಗಿದೆ. ನಾನೇ ಕೆಲವು ಸಮಯ ಆ ಮಕ್ಕಳಿಗೆ ಜೋರು ಮಾಡಿದಿನಿ. ಕೆಲವು ಫ್ರೆಂಡ್ಸ್ ಸರಿ ಇಲ್ಲ ಅವರ ಸಹವಾಸ ಮಾಡಬೇಡ ಅಂತ ಹೇಳಿದರೆ, ಅವನ ಫ್ರೆಂಡ್ಸ್ಗೆ ನಾನೇನಾದರೂ ಜೋರು ಮಾಡಿದರೆ ಇವನು ನನ್ನ ಮೇಲೆ ಕೂಗಾಡುವಷ್ಟು ಜೋರಾಗಿದ್ದಾನೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಗ ಭಾಗವಹಿಸಲಿ, ಬಹುಮಾನ ಪಡೆದುಕೊಳ್ಳುವಂತಾಗಲಿ ಅನ್ನೋ ಕನಸು ಕಾಣುತ್ತಿದ್ವಿ. ಈಗ ನೋಡಿದರೆ ಆ ಬಹುಮಾನ ತಗೊಂಡು ಏನು ಮಾಡೋದು ಸಂಸ್ಕಾರ ಇಲ್ಲದೇ ಹೋದಲ್ಲಿ? ನಾವು ಎಲ್ಲರ ಹಾಗೇ ಸುಮ್ಮನೆ ಓದೋದು, ಬರಿಯೋದು ಮಾಡಿಕೊಂಡು ಇರು ಅಂತ ಹೇಳಬೇಕಿತ್ತು. ತುಂಬಾ ಸ್ವಾತಂತ್ರ್ಯ ಕೊಟ್ಟು ತಪ್ಪು ಮಾಡಿದಿವಿ… ಹೀಗೆ ಹಲವಾರು ಮಾತುಗಳನ್ನು ಹೇಳಿದರು. ಆದರೆ ಮಗನಾದ ಇವನು ಒಂದೂ ಮಾತನಾಡಲಿಲ್ಲ. ಬುದ್ಧಿಮಾತುಗಳನ್ನು ಹೇಳಿ ಎಂದು ನನಗೆ ಹೇಳಿದರು. ಇವನು ಅಪ್ಪ-ಅಮ್ಮನ ಮಾತನ್ನೇ ಕೇಳದವನು ನನ್ನ ಮಾತನ್ನು ಕೇಳುತ್ತಾನಾ? ಎನಿಸಿತು. ಏನು ಹೇಳಬೇಕೋ ತೋಚಲಿಲ್ಲ. ಆದರೂ ನನಗೆ ಗೊತ್ತಿದ್ದಂತೆ ಅವನ ತಾಯಿ ಕಳೆದ ಎರಡು ವರ್ಷಗಳಿಂದ ಮಗನಿಗಾಗಿ ಮಾಡುತ್ತಿದ್ದ ತ್ಯಾಗವನ್ನು ಕಣ್ಣಾರೆ ಕಂಡಿದ್ದರಿಂದ ‘ನೀನು ಕೇಳಿಸ್ಕೊಳ್ತಿಯೋ ಬಿಡ್ತಿಯೋ ಗೊತ್ತಿಲ್ಲ, ಆದರೆ ಅಪ್ಪ-ಅಮ್ಮನಿಗೆ ಕಣ್ಣೀರು ಹಾಕಿಸಿ ಏನು ಸಾಧಿಸಿದ ಹಾಗೆ ಆಗತ್ತೆ? ನೀನು ಏನೇ ಸಾಧನೆ ಮಾಡಿ ಜಗತ್ತನ್ನೇ ಮೆಚ್ಚಿಸಬಹುದು. ತಂದೆ ತಾಯಿಯನ್ನೇ ಮೆಚ್ಚಿಸದೇ ಹೋದರೆ ಏನು ಸಾಧಿಸಿ ಏನು ಲಾಭ?’ ಒಂದಿಷ್ಟು ಮಾತುಗಳನ್ನು ಹೇಳಿದೆ.
ನಂತರದಲ್ಲಿ ತಿಳಿದದ್ದು ಈತ ಮನೆಯಲ್ಲಿ ಒಮ್ಮೆ ಅಮ್ಮ, ‘ನಿನ್ನ ಸಲುವಾಗಿ ಎಷ್ಟೆಲ್ಲ ಕಷ್ಟ ಪಟ್ಟಿದ್ದೀವಿ, ಎಷ್ಟು ಖರ್ಚು ಮಾಡಿದಿವಿ ಗೊತ್ತಾ?’ ಅಂದದ್ದಕ್ಕೆ, ‘ರಾಷ್ಟ್ರಮಟ್ಟದಲ್ಲಿ ಆಡಿದ್ದಾಗ ನನಗೆ ಬಹುಮಾನ ಬಂದ ಹಣ ಇದೆಯಲ್ಲ ಅದರಲ್ಲಿ ನಿನಗೆ ಎಷ್ಟು ಬೇಕೋ ಅಷ್ಟು ತಗೋ’ ಎಂದಿದ್ದನಂತೆ. ಈ ಮಾತುಗಳನ್ನು ಕೇಳಿ ನನಗೇ ಬೇಸರ ಆಗಿರಬೇಕಾದರೆ ಇನ್ನೂ ಅವರಿಗೆ ಹೇಗೆ ಆಗಿರಬೇಡ? ಎನಿಸಿತು. ಒಮ್ಮೆ ಯೋಚನೆ ಮಾಡಿ ನೋಡಿದರೆ ಈ ಮಗುವನ್ನ ಸಣ್ಣದಿದ್ದಾಗಿಂದ ಹಿಡಿದು ಇಲ್ಲೀಯವರೆಗೆ ನೋಡಿಕೊಂಡಿದ್ದಾರೆ, ಎಲ್ಲಾ ಕಡೆಗೂ ಸ್ಪರ್ಧೆಗಳಿದ್ದಾಗ ಜಾಗ್ರತೆಯಿಂದ ಕರೆದುಕೊಂಡು ಹೋಗಿದ್ದಾರೆ, ಎಲ್ಲೂ ಮಗುವಿನ ಮುಂದೆ ತಮ್ಮ ನೋವುಗಳನ್ನು ತೋರಿಸಿಕೊಳ್ಳದೇ ಮಗುವಿನ ಪ್ರತಿಭೆಗೆ ಪೂರಕವಾಗಿ ನಿಂತಿದ್ದಾರೆ. ತಮಗೆ ಆರೋಗ್ಯ ಸಮಸ್ಯೆ ಇದ್ದರೂ ಮಗುವಿನ ಅಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿಕೊಂಡ ಪೋಷಕರೊಂದಿಗೆ ಮಕ್ಕಳು ಮಾಡುತ್ತಿರುವುದು ಸರಿಯೇ? ಎನಿಸುತ್ತದೆ.
‘ಮನೆಯಲ್ಲಿ ಮಕ್ಕಳು ಮಾತು ಕೇಳಲ್ಲ’ ಅಂತ ಹೇಳುವ ಪೋಷಕರನ್ನು ಕಂಡಾಗ ಒಮ್ಮೆ ಅನಿಸುವುದು ಈಗಿನ ಮಕ್ಕಳಿಗೆ ಅತಿಯಾದ ಸ್ವಾತಂತ್ರ ನೀಡಿರುವುದೇ ಸಮಸ್ಯೆಯೇ? ಸಾಮಾಜಿಕ ಜಾಲತಾಣಗಳಿಂದ ಇವರ ವರ್ತನೆಗಳು ಬದಲಾಗಿದ್ದಾವಾ? ಜೊತೆಗೆ ಇರುವ ಗೆಳೆಯರ ಪ್ರಭಾವವೇ? ಅಥವಾ ಪ್ರತಿಭೆ ಇದೆ ಎಂಬ ಜಂಭವೇ? ಪೋಷಕರು ಅವರ ಅನುಭವಗಳನ್ನು ಹೇಳಲು ಹೋದರೆ, ನಿಮ್ಮ ಕಾಲವೇ ಬೇರೆ, ನಮ್ಮ ಕಾಲವೇ ಬೇರೆ ಎನ್ನುವ ಉದಾಸೀನ ಉತ್ತರ.
ಜಗತ್ತಿನಲ್ಲಿ ಒಳಿತೂ ಇದೆ ಕೆಡಕೂ ಇದೆ. ನಾವು ಯಾವುದರ ಕಡೆಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತೇವೋ ಅದೇ ಕಾಣುತ್ತದೆ. ಅಂತ ಸಮಯದಲ್ಲಿ ನಮ್ಮ ಪೋಷಕರು, ಹಿರಿಯರು, ಶಿಕ್ಷಕರು ಏನಾದರೂ ಒಳಿತಿನ ಮಾತನ್ನು ಹೇಳಿದಾಗ ಅದಕ್ಕೆ ಕೊಂಕು ಆಡುವ ಬದಲು ಅವರ ಮಾತಿಗೆ ಗೌರವ ಕೊಟ್ಟು ಹೇಳಿದಂತೆ ಸಾಗಿದರೆ ಒಳಿತಿನ ಕಡೆಗೆ ಚಲಿಸುತ್ತೇವೆ. ಅವರುಗಳ ವಿರುದ್ಧ ಹೋದರೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ. ಹಾಗಾಗಿ ಅವರ ಮಾತಿಗೆ ಗೌರವ ಕೊಟ್ಟು ಹೇಳಿದ ಮಾರ್ಗದಲ್ಲಿ ಚಲಿಸಿ ಯಶಸ್ಸು ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ…
ಚಿತ್ರ ರಚನೆ: ಚೈತ್ರ.ಕೆ.ಎಸ್, 9ನೇ ತರಗತಿ, ಸಾಂದೀಪನಿ ಆಂಗ್ಲ ಶಾಲೆ, ಶಿವಮೊಗ್ಗ
ಚೇತನ್ ಸಿ ರಾಯನಹಳ್ಳಿ,
ಶಿವಮೊಗ್ಗ