ಮನರಂಜನೆಶಿವಮೊಗ್ಗ

‘ಸರ್ ಬಹುಮಾನ ಬಂದಾಗ ಅದನ್ನು ಮುಟ್ಟೋಕೂ ಕೊಡ್ತಾ ಇರಲಿಲ್ಲ ಇವನು’

‘ಸರ್ ಬಹುಮಾನ ಬಂದಾಗ ಅದನ್ನು ಮುಟ್ಟೋಕೂ ಕೊಡ್ತಾ ಇರಲಿಲ್ಲ ಇವನು’

‘ಸರ್ ಬಹುಮಾನ ಬಂದಾಗ ಅದನ್ನು ಮುಟ್ಟೋಕೂ ಕೊಡ್ತಾ ಇರಲಿಲ್ಲ ಇವನು’
ಆಗಸ್ಟ್ ತಿಂಗಳು ಎಂದಾಗ ಬಹುತೇಕ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಪಥಸಂಚಲನ, ಬ್ಯಾಂಡ್ ತಂಡದ ಸಿದ್ಧತೆ, ದೇಶಭಕ್ತಿಗೀತೆಗಳ ಅಭ್ಯಾಸ, ದೇಶಭಕ್ತಿಗೀತೆಗಳಿಗೆ ನೃತ್ಯ ಅಭ್ಯಾಸ ಇವೆಲ್ಲವೂ ಸಾಮಾನ್ಯವಾಗಿದ್ದವು.
ಈ ಸ್ವಾತಂತ್ರ್ಯ ದಿನಾಚರಣೆಗಾಗಿ ನಮ್ಮ ಮಕ್ಕಳಿಗೆ ಪಥಸಂಚಲನಕ್ಕೆ ಸಿದ್ಧರಾಗುತ್ತಿದ್ದ ಸಮಯದಲ್ಲಿ ದೈಹಿಕ ಶಿಕ್ಷಕಿ ವೀಣಾ ಮೇಡಂ, ‘ವಲಯ ಮಟ್ಟದ ಕ್ರೀಡಾಕೂಟದಲ್ಲಿ ಈ ಬಾರಿ ಪಥಸಂಚಲನ ಕೂಡ ಇರತ್ತೆ. ಅದಕ್ಕೆ ಬಹುಮಾನವೂ ಇರತ್ತೆ ಹಾಗಾಗಿ ಕ್ರೀಡೆಯಲ್ಲಿ ಇರುವ ಮಕ್ಕಳಿಗೂ ಸ್ವಲ್ಪ ಸೇರಿಸಿಕೊಂಡು ಒಂದಿಷ್ಟು ತರಬೇತಿ ನೀಡಬಹುದಾ?’ ಎಂದರು. ‘ಕ್ರೀಡಾಕೂಟಗಳು ಬರೋದು ಬಹುತೇಕ ಸೆಪ್ಟಂಬರ್/ಅಕ್ಟೋಬರ್ ನಲ್ಲಿ ಅಲ್ವಾ?’ ಇನ್ನೂ ಸಮಯ ಇದೆ, ಮಾಡಿಸೋಣ ಬಿಡಿ’ ಎಂದೆ. ಎಲ್ಲರೂ ನಮ್ಮ ಶಾಲಾ ಮಕ್ಕಳೇ ಆಗಿದ್ದರಿಂದ ಒಪ್ಪಿದ್ದಾಯಿತು. ಜೊತೆಗೆ ಈ ಪಥಸಂಚಲನದಲ್ಲಿ ಇದ್ದ ಒಂದಿಷ್ಟು ಮಕ್ಕಳು ಕ್ರೀಡೆಯಲ್ಲಿಯೂ ಇದ್ದಿದ್ದರಿಂದ ಹೆಚ್ಚು ಅನುಕೂಲ ಆಗುತ್ತದೆ ಎಂಬುದನ್ನು ಅಂದಾಜಿಸಿದ್ದೆವು.
ಮಕ್ಕಳ ಬಳಿಯಲ್ಲಿ ‘ಈ ಬಾರಿ ಎರಡೆರಡು ಕಡೆಗಳಲ್ಲಿ ಪಥಸಂಚಲನ ಮಾಡಬೇಕು ಅದಕ್ಕೆ ಸಿದ್ಧರಾಗಿರಿ’ ಎಲ್ಲರೂ ಕುತೂಹಲದಿಂದ ಎಲ್ಲೆಲ್ಲಿ? ಎಂದು ಕೇಳತೊಡಗಿದರು. ಎಲ್ಲಿ ಎಂದು ನಂತರದಲ್ಲಿ ತಿಳಿಸುವೆ. ಈಗ ಅಭ್ಯಾಸಕ್ಕೆ ಸಿದ್ಧರಾಗಿ ಎಂದು, ಡಿ.ಎ.ಆರ್ ಮೈದಾನದಲ್ಲಿ ಬಾಲಕರ ತಂಡದ ಪಥಸಂಚಲನದ ನಾಯಕನಾಗಿ ಉಲ್ಲಾಸ್‌ಸ್ವಾಮಿ, ಬಾಲಕಿಯರ ತಂಡದ ನಾಯಕಿಯಾಗಿ ನಿತ್ಯಶ್ರಿ ಶಾಲಾ ತಂಡಕ್ಕೆ ಆಯ್ಕೆಯಾಗಿದ್ದರು. ಇವರಿಬ್ಬರೂ ಕ್ರೀಡೆಯಲ್ಲಿಯೇ ಇದ್ದದ್ದು ಹೆಚ್ಚು ಅನುಕೂಲಕರವಾಗಿತ್ತು. ಹೊಸದಾಗಿ ಬಂದಿದ್ದ ವಿದ್ಯಾರ್ಥಿಗಳಿಗೆ ಪಥಸಂಚಲನದ ಅಭ್ಯಾಸ ಮಾಡಿಸುವಲ್ಲಿ 9, 1೦ನೇ ತರಗತಿಯ, ಹಿಂದಿನ ಕೆಲವು ಪಥಸಂಚಲನದಲ್ಲಿ ಭಾಗವಹಿಸಿದ್ದ ಮಕ್ಕಳು ನನಗೆ ಸಹಾಯಕರಾಗಿದ್ದರು. ಬಾಲಕಿಯರ ವಿಭಾಗದಲ್ಲಿ ಶಾಲಾ ಹೆಸರಿನ ಬೋರ್ಡ್ಅನ್ನು ಪಾವನಿಸಿಂಗ್ ತಾನು ಹಿಡಿದುಕೊಳ್ಳುವೆ ಎಂದು ಮುಂದೆ ಬಂದಳು. ಬಾಲಕಿಯರ ವಿಭಾಗದಲ್ಲಿ ‘ಕೊಕ್ಕೋ’ದಲ್ಲಿದ್ದ ವಿದ್ಯಾರ್ಥಿನಿಯರೇ ಹೆಚ್ಚಿದ್ದರು. ಬಾಲಕರ ವಿಭಾಗದಲ್ಲಿ ಚರಣ್‌ನನ್ನು ಬೋರ್ಡ್ ಹಿಡಿದುಕೊಳ್ಳಲು ನಾವೇ ಆಯ್ಕೆ ಮಾಡಿಕೊಂಡೆವು. ಈತ ‘ಕಬ್ಬಡ್ಡಿ’ ತಂಡದಲ್ಲಿದ್ದ. ಬಾಲಕಿಯರ ವಿಭಾಗದಲ್ಲಿ ಹೆಚ್ಚಾಗಿ ಕೊಕ್ಕೋ, ಬಾಲ್‌ಬ್ಯಾಡ್ಮಿಂಟನ್, ಥ್ರೋಬಾಲ್ ತಂಡದ್ದಲ್ಲಿದ್ದ ವಿದ್ಯಾರ್ಥಿನಿಯರಿದ್ದರೆ, ಬಾಲಕರ ವಿಭಾಗದಲ್ಲಿ ಬಾಲ್‌ಬ್ಯಾಡ್ಮಿಂಟನ್, ಕಬ್ಬಡ್ಡಿ ತಂಡದಲ್ಲಿದ್ದರು.
ಕ್ರೀಡೆ ಮತ್ತು ಪಥಸಂಚಲನದಲ್ಲಿದ್ದ ಹಲವಾರು ವಿದ್ಯಾರ್ಥಿಗಳು ಒಂದುದಿನ ಪಥಸಂಚಲನ, ಮತ್ತೊಂದು ದಿನ ಕ್ರೀಡಾ ಅಭ್ಯಾಸವನ್ನು ನಡೆಸತೊಡಗಿದರು. ಇನ್ನೇನು ಆಗಸ್ಟ್ ತಿಂಗಳ ಪಥಸಂಚಲನಕ್ಕೆ ಇನ್ನೊಂದು ವಾರ ಇದೆ ಎನ್ನುವಾಗ ಸಂಪೂರ್ಣವಾಗಿ ಕ್ರೀಡಾ ಅಭ್ಯಾಸವನ್ನು ನಿಲ್ಲಿಸಿ ಪಥಸಂಚಲನದಲ್ಲಿ ತೊಡಗಿಸಿಕೊಂಡರು. ಬೆಳಗ್ಗೆ ಬೇಗ ಶಾಲೆಗೆ ಬಂದಾಗ, ಮಧ್ಯಾಹ್ನ ಬೇಗ ಊಟ ಮುಗಿಸಿ, ಸಂಜೆ ತರಗತಿ ಮುಗಿಸಿ ಅಭ್ಯಾಸ ಮಾಡತೊಡಗಿದರು.

ಡಿ.ಎ.ಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಉತ್ತಮ ಪ್ರದರ್ಶನ ನೀಡಿದರು. ಉಲ್ಲಾಸ್‌ಸ್ವಾಮಿ ಜೋರಾದ ಧ್ವನಿಯಲ್ಲಿ ತನ್ನ ತಂಡವನ್ನು ಮುನ್ನಡೆಸಿ ಎಲ್ಲರ ಗಮನ ಸೆಳೆದಿದ್ದನು. ಉತ್ತಮವಾದ ಪ್ರದರ್ಶನವನ್ನು ನಮ್ಮ ಶಾಲೆಯ ಎರಡೂ ತಂಡದ ಮಕ್ಕಳು ನೀಡಿದ್ದರು. ಅಲ್ಲಿಗೆ ಈ ಬಾರಿಯ ಪಥಸಂಚಲನ ಮುಕ್ತಾಯವಾಗಿತ್ತು. ಇನ್ನೇನಿದ್ದರೂ ಕ್ರೀಡಾ ಚಟುವಟಿಕೆಗಳ ಅಭ್ಯಾಸ ಪ್ರತಿನಿತ್ಯವೂ ಸಾಗತೊಡಗಿತು.
ಕ್ರೀಡೆಯಲ್ಲಿದ್ದ ಪಥಸಂಚಲನದ ವಿದ್ಯಾರ್ಥಿಗಳಿಗೆ ಸಣ್ಣದಾಗಿ ಅಭ್ಯಾಸ ಮಾಡಲು ಸೂಚಿಸಿದೆವು. ಕ್ರೀಡೆಯಲ್ಲಿಯೇ ಹೆಚ್ಚು ಸುಸ್ತಾಗಿದ್ದ ಕಾರಣ ಮಕ್ಕಳಿಗೆ ಎಂದಿನಂತೆ ಹೆಚ್ಚಿನ ಅಭ್ಯಾಸ ಮಾಡಿಸಲು ಆಗಲಿಲ್ಲ. ಆದರೆ, ಸಿಕ್ಕ ಸಮಯದಲ್ಲಿ ಅಚ್ಚುಕಟ್ಟಾಗಿ ಅಭ್ಯಾಸ ಮಾಡುತ್ತಿದ್ದರು.
ನಗರದ ನೆಹರೂ ಮೈದಾನದಲ್ಲಿ ಕ್ರೀಡಾಚಟುವಟಿಕೆಗಳ ಆರಂಭಕ್ಕೆ ಮೊದಲು ಎಲ್ಲಾ ಶಾಲಾ ವಿದ್ಯಾರ್ಥಿಗಳು ಪಥಸಂಚಲನಕ್ಕೆ ಸಿದ್ಧರಾಗಿರಬೇಕಿತ್ತು. ಬಹುತೇಕ ಶಾಲೆಗಳಲ್ಲಿ ಪಥಸಂಚಲನದ ಅಭ್ಯಾಸವಿದ್ದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು ಎಂದು ಅಂದಾಜಿಸಿದೆವು. ಆದರೂ ಎಲ್ಲೂ ಆಲಸ್ಯ ತೋರದೇ ಉತ್ತಮ ಪ್ರದರ್ಶನ ಮಾಡಬೇಕು ಎಂದು ಸೂಚಿಸಿದ್ದೆವು.
ಅಂದು ಬೆಳಗ್ಗೆ 9.15 ರ ಹಾಗೇ ನೆಹರೂ ಮೈದಾನಕ್ಕೆ ಹೋದಾಗ ಮಕ್ಕಳು ಒಂದೆಡೆ ಕುಳಿತು ಮಾತಾಡುತ್ತಿದ್ದರು. ನಾನು ಬಂದಾಗ ಕೆಲವು ಮಕ್ಕಳು ಬಂದು ಮಾತನಾಡಿಸತೊಡಗಿದರು. ಪಥಸಂಚಲನವೇ ಕ್ರೀಡಾಚಟುವಟಿಕೆಗಳಿಗೆ ಮೊದಲ ಮೆಟ್ಟಿಲು ಎಂದು ತಿಳಿದಿದ್ದೆವು. ದೈಹಿಕ ಶಿಕ್ಷಕ ಪ್ರಶಾಂತ್ ಅವರು ಮೊದಲ ಚಟುವಟಿಕೆಯಲ್ಲಿಯೇ ಬಹುಮಾನ ಬಂದರೆ ಉಳಿದವುಗಳಲ್ಲಿ ಉತ್ಸಾಹದಿಂದ ಧೈರ್ಯವಾಗಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದರು. ಪಥಸಂಚಲನದ ಮಕ್ಕಳಿಗೆ ಒಂದಿಷ್ಟು ಕಿವಿಮಾತುಗಳನ್ನು ಹೇಳಿದೆ. ಉಲ್ಲಾಸ್ ಗಟ್ಟಿಧ್ವನಿಯಲ್ಲಿ ಶಾಲಾ ತಂಡವನ್ನು ಮುನ್ನಡೆಸಲು, ಪಾವನಿಸಿಂಗ್ ಶಾಲಾ ಹೆಸರಿನ ಬೋರ್ಡ್ ಅನ್ನು ಹಿಡಿದು ಸಾಗುವುದು, ನವಚೇತನ್ ಶಾಲಾ ಧ್ವಜವನ್ನು ಹಿಡಿದು ಸಾಗುವುದು, ಇವರುಗಳ ನಡುವೆ ಇರಬೇಕಾದ ಅಂತರದ ಬಗ್ಗೆ ತಿಳಿಸಿ, ಉಳಿದ ಪಥಸಂಚಲನದ ಅಭ್ಯಾಸವಿದ್ದ ಮಕ್ಕಳು ಪ್ರತೀ ಸಾಲಲ್ಲೂ ಇದ್ದೂ ಉಳಿದ ಮಕ್ಕಳಿಗೆ ಸರಿಯಾಗಿ ಹೆಜ್ಜೆ ಹಾಕಿಸಿ ಮುನ್ನಡೆಯಿರಿ ಎಂದು ಸೂಚನೆಗಳನ್ನು ನೀಡುತ್ತಿದ್ದ ಸಮಯಕ್ಕೆ ಎಲ್ಲಾ ಶಾಲಾ ಮಕ್ಕಳನ್ನು ಕ್ರೀಡಾಂಗಣದಲ್ಲಿ ಬಂದು ನಿಲ್ಲಲು ಸೂಚನೆ ನೀಡಲಾಯಿತು. ನನಗೂ ಶಾಲೆಗೆ ಸಮಯವಾಗಿದ್ದ ಕಾರಣ ಎಲ್ಲಾ ಮಕ್ಕಳಿಗೂ ಶುಭಾಶಯಗಳನ್ನು ತಿಳಿಸಿ ಹೊರಟೆ.
ಬೆಳಗ್ಗೆ ಒಂದೆರಡು ತರಗತಿಗಳು ಮುಗಿದ ಸಮಯ. ಶಿಕ್ಷಕರ ಕೊಠಡಿಯಲ್ಲಿ ಕುಳಿತು ಮಕ್ಕಳ ನೋಟ್ಸ್, ಹೋಮ್‌ವ್‌ವರ್ಕ್ಗಳನ್ನು ನೋಡುತ್ತಿದ್ದಾಗ ಪ್ರಶಾಂತ್ ಸರ್ ಕಾಲ್ ಮಾಡಿ, ‘ಸರ್ ಮಾರ್ಚ್ಫಾಸ್ಟ್ ಲಿ ನಮ್ಮ ಶಾಲೆಗೆ ಮೊದಲನೇ ಬಹುಮಾನ ಬಂದಿದೆ’ ಎಂದು ಸಂತಸದಿಂದ ಹೇಳಿದರು. ಎಲ್ಲಾ ಮಕ್ಕಳಿಗೂ ಅಭಿನಂದನೆಗಳನ್ನು ತಿಳಿಸಲು ಹೇಳಿದೆ. ಶಾಲೆಯಲ್ಲಿ ಇತರ ಶಿಕ್ಷಕರಿಗೂ ಈ ಸುದ್ಧಿಯನ್ನು ತಿಳಿಸಲಾಯಿತು. ಸಂಜೆಯ ವೇಳೆಗೆ ಮತ್ತೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ಗೆಳೆಯ ಮೋಹನ್ ಕೆಲವು ಫೋಟೋ ಕಳಿಸಿದ್ದ ಅದು ನಮ್ಮ ಮಕ್ಕಳು ಬಹುಮನ ಸ್ವೀಕರಿಸಿದ್ದಾಗಿತ್ತು. ಅವನಿಗೂ ಧನ್ಯವಾದಗಳನ್ನು ತಿಳಿಸಿದೆ.
ಕ್ರೀಡಾಕೂಟದ ಸಂಜೆ ಮನೆಗೆ ಹೋಗುವಾಗ ಮತ್ತೆ ನೆಹರೂ ಮೈದಾನಕ್ಕೆ ಹೋದಾಗ ಪಥಸಂಚಲನದಲ್ಲಿದ್ದ ಮಕ್ಕಳು ಸಂತೋಷದಿಂದ ಹೇಳುತ್ತಿದ್ದರು. ‘ಸರ್ ಬಹುಮಾನ ಬಂದಾಗ ಅದನ್ನು ಮುಟ್ಟೋಕೂ ಕೊಡ್ತಾ ಇರಲಿಲ್ಲ ಇವನು, ಕೊಟ್ಟರೆ ಸ್ವಲ್ಪ ಹೊತ್ತಿಗೆ ವಾಪಸ್ ಇಸ್ಕೊತಿದ್ದ’ ಎಂದು ಪಾವನಿ. ‘ನಾವು ಅಕ್ಕಂದಿರುಗಳಿಗೆ ಹೆಜ್ಜೆಯನ್ನು ಜೋರಾಗಿ ಹಾಕೋದು, ವೇದಿಕೆಯ ಕಡೆಗೆ ಹೇಗೆ ತಿರುಗೋದು ಅಂತ ಹೇಳಿದ್ವಿ’ ಎಂದು ನವ್ಯಕಶ್ಯಪ್ ‘ಒಟ್ಟಿನಲ್ಲಿ ಎಲ್ಲಾ ಚೆನ್ನಾಗಿ ಮಾಡಿದ್ರು, ನಮ್ಮ ತಂಡಕ್ಕೆ ಬಹುಮಾನ ಬಂತು’ ಎಂದು ನಿತ್ಯಶ್ರಿ ‘ನಮಗೆ ಇವರೆಲ್ಲ ಚೆನ್ನಾಗಿ ಹೇಳಿಕೊಟ್ರು’ ಎಂದು ಗಾನಶ್ರಿ ಹೇಳಿದರು. ಉಲ್ಲಾಸ್ ಅಣ್ಣನ ಧ್ವನಿ ಹೇಗಿತ್ತು ಅಂದರೆ ಆತ ಕೊಟ್ಟ ಕಮ್ಯಾಂಡ್‌ಗಳು ಬರೀ ನಮ್ಮ ತಂಡಕ್ಕಲ್ಲ ಹಲವಾರು ತಂಡಗಳಿಗೂ ಅನ್ನೋ ತರದಲ್ಲಿ ಕೊಟ್ಟ. ‘ಒಟ್ಟು 5 ತಂಡಗಳಿಗೆ ಬಹುಮಾನ ಕೊಟ್ಟರು ನಮಗೆ ಮೊದಲನೇ ಸ್ಥಾನ’ ಅಂದಾಗ ನಾವು ಮೂವರು ಹೋಗಿ ಬಹುಮನ ಪಡೆದುಕೊಂಡ್ವಿ, ಡಿ.ಎ.ಆರ್ ಮೈದಾನದಲ್ಲಂತೂ ಬಹುಮಾನ ಬರಲಿಲ್ಲ, ಇಲ್ಲಿ ಬಂತು ಅನ್ನೋದು ಸಂತೋಷದ ಸಂಗತಿ’ ಎಂದ ಉಲ್ಲಾಸ್.
ಒಟ್ಟಿನಲ್ಲಿ ಪಥಸಂಚಲನದಲ್ಲಿದ್ದ ವಿದ್ಯಾರ್ಥಿಗಳಂತೂ ಬಹಳ ಸಂತೋಷದಲ್ಲಿ ಬಹುಮಾನವನ್ನು ಹಿಡಿದುಕೊಂಡು ಸಂಭ್ರಮಿಸಿದರು. ‘ಉಲ್ಲಾಸ್‌ಸ್ವಾಮಿಯ ಧ್ವನಿಗೆ ಬಹುಮಾನ್ ಕೊಡಲೇಬೇಕು, ಹಾಗೇ ಎರಡು ಪೆಟ್ಟು ಕೊಟ್ಟರೂ ಆಗೋದು…’ ಎಂದು ಅವನ ಗೆಳೆಯರು ರೇಗಿಸುತ್ತಿದ್ದರು. ಅಂತೂ ಶಾಲೆಯ ಪಥಸಂಚಲನಕ್ಕೆ ಸಿದ್ಧರಾದ ಮಕ್ಕಳು ಕ್ರೀಡಾಕೂಟದಲ್ಲೂ ಬಹುಮಾನ ಪಡೆದಿದ್ದರು. ಕೆಲವರು ಕ್ರೀಡೆಗಳಲ್ಲಿ ಆಟವಾಡಿ ಬಹುಮಾನ ಪಡೆದರು. ಕೆಲವರು ಉತ್ತಮ ಪ್ರದರ್ಶನ ನೀಡಿಯೂ ಸೋತರು. ಸೋಲು-ಗೆಲುವುಗಳಿಂದ ಮಿಶ್ರಿತವಾಗಿ ಕ್ರೀಡಾಕೂಟವನ್ನು ಮುಗಿಸಿದ್ದರು. ಹಲವು ಕ್ರೀಡೆಗಳಲ್ಲಿ ಬಹುಮಾನ ಪಡೆದು ಕೆಲವು ಮಕ್ಕಳು ಮುಂದಿನಹಂತಕ್ಕೆ ಆಯ್ಕೆಯಾಗಿದ್ದರು. ಅಷ್ಟರಲ್ಲಿ ಉಲ್ಲಾಸ್ ತಮಾಷೆಗಾಗಿ ಕೇಳಿದ, ‘ಮುಂದಿನ ಹಂತದಲ್ಲೂ ಪಥಸಂಚಲನ ಇರತ್ತಾ ಸಾರ್?’ ಇರತ್ತೆ ಆದರೆ ನೀವು ಆಟದಲ್ಲಿ ಸೋತಿದ್ದರಿಂದ ಮುಂದೆ ನಿನಗೆ ಭಾಗವಹಿಸೋಕೆ ಅವಕಾಶ ಇಲ್ಲವಲ್ಲ’ ಎಂದಾಗ ಸಪ್ಪೆಮೋರೆ ಹಾಕಿದ್ದನಂತೆ. ‘ಹೋಗಲಿಬಿಡು ನೀನು ಮುನ್ನಡೆಸಿದ ತಂಡ ಒಂದು ಸಾರಿ ಪ್ರಶಸ್ತಿ ಬಂತಲ್ಲ ಅಷ್ಟು ಸಾಕು’ ಎಂದಾಗ ಸಮಾಧಾನದ ನಿಟ್ಟುಸಿರು ಬಿಟ್ಟನು.
ಪಥಸಂಚಲನದ ಮಕ್ಕಳಿಗೆ ಆರಂಭದಲ್ಲಿ ಎರಡು ಕಡೆಗಳಲ್ಲಿ ಭಾಗವಹಿಸುವುದಿದೆ ಸಿದ್ಧರಾಗಿ ಎಂದಿದ್ದೆ. ಈಗ ಎರಡೂ ಕಡೆಗಳಲ್ಲಿ ಕೆಲವು ಮಕ್ಕಳು ಭಾಗವಹಿಸಿದ್ದರು. ಬಹುಮಾನ ಬಂದದ್ದು ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಪ್ರೇರಣೆಯಾವುಗುದರಲ್ಲಿ ಅನುಮಾನವೇ ಇಲ್ಲ.

ಚೇತನ್ ಸಿ ರಾಯನಹಳ್ಳಿ, ಶಿವಮೊಗ್ಗ

Leave a Reply

Your email address will not be published. Required fields are marked *

Scan the code