Entertainmentಮನರಂಜನೆಶಿವಮೊಗ್ಗ

‘ಸರ್ ನಾಳೆಯಿಂದ ಶಾಲೆಗೆ ಬರಲ್ಲ, ನಮ್ಮ ತರಗತಿಯಲ್ಲಿಯೇ ಒಟ್ಟಿಗೆ ಊಟ ಮಾಡೋಣ’

‘ಸರ್ ನಾಳೆಯಿಂದ ಶಾಲೆಗೆ ಬರಲ್ಲ, ನಮ್ಮ ತರಗತಿಯಲ್ಲಿಯೇ ಒಟ್ಟಿಗೆ ಊಟ ಮಾಡೋಣ’

(ARTICAL): ಶಾಲಾ ಜೀವನ ಮುಗಿಯುವಾಗ ಅನೇಕ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು ಎಂಬುದು ಎಲ್ಲರಿಗೂ ಅನಿಸುತ್ತದೆ. ಹಾಗಾಗಿ ಶಾಲೆಯ ಅಂತಿಮ ದಿನಗಳಲ್ಲಿ ಎಲ್ಲ ಸಂಗತಿಗಳನ್ನು ತೆಗೆದುಕೊಳ್ಳುವ ರೀತಿಗಳಲ್ಲಿ ಬದಲಾಗಿರುತ್ತದೆ.  ಕೆಲವೊಮ್ಮೊ ‘ಹೋಗಲಿಬಿಡು’ ಎಂದು ಕ್ಷಮಿಸುವ ಗುಣವೂ ಮೂಡುತ್ತದೆ. ‘ಇನ್ನೆಷ್ಟು ದಿನ ಇಲ್ಲಿ ಇರ್ತಿವಿ?’ ಎನ್ನುವ ಮೂಲಕ ಸಿಟ್ಟು, ಕೋಪಕ್ಕೆ ಸಣ್ಣ ಕಡಿವಾಣವೂ ಬೀಳುತ್ತದೆ. ಶಿಕ್ಷಕರು, ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ನಡೆಯುತ್ತದೆ. ಶಾಲೆಯಲ್ಲಿ ಕಳೆದ ಹಲವು ವರ್ಷಗಳ ಕ್ಷಣಗಳನ್ನು ಮೆಲುಕು ಹಾಕುವುದು. ಶಾಲೆಗೆ ಬಂದಾಗ ಇದ್ದದ್ದು, ಈಗ ಇರುವ ರೀತಿ ಎಲ್ಲವನ್ನೂ ನೆನಪಿಸಿಕೊಂಡು ನಗುವುದು. ಇವೆಲ್ಲವೂ ಪ್ರತಿಯೊಬ್ಬರ ಜೀವನದಲ್ಲಿ ಇದ್ದೇ ಇರುತ್ತದೆ.

ಈ ಬಾರಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲಿ ಆ ರೀತಿಯ ಕ್ಷಣಗಳನ್ನು ಹಲವು ರೀತಿಯಲ್ಲಿ ನೆನಪಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದರು. ಅದರಲ್ಲಿನ ಒಂದೆರಡು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಎಸ್.ಎಸ್.ಎಲ್.ಸಿ ತರಗತಿಗೆ ಮಕ್ಕಳು ಬಂದರೆ ಪೋಷಕರು-ಶಿಕ್ಷಕರು ಓದಿನ ಬಗ್ಗೆ ಗಮನ ಹರಿಸಲು ತಿಳಿಸುವುದು ಇದ್ದೇ ಇರುತ್ತಿತ್ತು. ನಾನು ಕೂಡ ಅದರಿಂದ ಹೊರತಾಗಿರಲಿಲ್ಲ. ಹೆಚ್ಚಿಗೆ ಓದಲು ತಿಳಿಸಿದರೆ. ‘ಸಾರ್…’ ಎಂದು ರಾಗವಾಗಿ ಕೂಗುತ್ತಿದ್ದರು. ಕೆಲವರು ಆರಂಭದಲ್ಲಿಯೇ ಶಿಕ್ಷಕರು ಹೇಳಿದ ಮಾರ್ಗದರ್ಶನವನ್ನು ಕೇಳಿಸಿಕೊಂಡು ಅದರ ರೀತಿಯೇ ನಡೆಯುವ ಪ್ರಯತ್ನ ಮಾಡುತ್ತಿದ್ದರು. ಇನ್ನೂ ಕೆಲವರು ‘ಇವರ ಪಾಡಿಗೆ ಇವರು ಹೇಳ್ತಾರೆ, ನಾವು ಸುಮ್ಮನೆ ಕೂರಬೇಕಿದೆ’ ಎಂದು ಆಸಕ್ತಿ ಇಲ್ಲದೇ ಹೋದರೂ ಅನಿವಾರ್ಯವಾಗಿ ಕೂರುವ ಮಕ್ಕಳಿದ್ದರು. ಇದರ ನಡುವೆ ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇರುವ ಮಕ್ಕಳಿಗೂ ಕೊರತೆಯೇನೂ ಇರಲಿಲ್ಲ.


ಮೊದಲ ಪರೀಕ್ಷೆಯಲ್ಲಿ ಮಕ್ಕಳು ಪಡೆದುಕೊಳ್ಳುವ ಅಂಕಗಳ ಆಧಾರದ ಮೂಲಕ ಗುಂಪುಗಳನ್ನಾಗಿ ವಿಂಗಡಿಸಿ, ಪ್ರತೀ ಗುಂಪಿನ ಮಕ್ಕಳಿಗೆ ಹೇಗೆಲ್ಲಾ ಓದಿಸುವುದು, ಬರೆಯುವುದು ಎನ್ನುವುದರ ಬಗ್ಗೆ ಸಿಕ್ಕ ಸೂಚನೆಯಂತೆ ಶಿಕ್ಷಕರು ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಪ್ರತೀ ಗುಂಪಿನಲ್ಲೂ ಇರುವ ಮಕ್ಕಳ ಅಂಕಗಳನ್ನು ಉತ್ತಮಪಡಿಸಿಕೊಂಡರೆ ನಮಗಂತೂ ಅದೇ ಸಂತೋಷ. ಅದನ್ನು ಬಿಟ್ಟು ಬೇರೆ ಏನೂ ಕೂಡ ಮಕ್ಕಳಿಂದ ನಿರೀಕ್ಷೆ ಮಾಡುತ್ತಿರಲಿಲ್ಲ.  ಹೀಗೆ ಓದಿನಲ್ಲಿ ಹಿಂದುಳಿದ ಮಕ್ಕಳಿಗೆ, ಕಡಿಮೆ ಅಂಕಗಳನ್ನು ತೆಗೆದುಕೊಂಡ ಮಕ್ಕಳಿಗೆ ‘ಕೋಚಿಂಗ ಕ್ಲಾಸ್’ ಹೆಸರಿನ ವಿಶೇಷ ತರಗತಿಗಳನ್ನು ನಡೆಸಬೇಕಿತ್ತು. ಅಲ್ಲಿ ಕೆಲವೊಂದು ಪ್ರಶ್ನೋತ್ತರಗಳನ್ನು ತಪ್ಪದೇ ಕಲಿಸಿ, ಬರೆಸಿ ಅದರ ಬಗ್ಗೆ ಮಕ್ಕಳು ಏನೇ ಪ್ರಶ್ನೇ ಕೊಟ್ಟರು ಬರೆಯುವಂತೆ ಮಾಡುವುದಾಗಿತ್ತು. ಅನೇಕ ಮಕ್ಕಳು ನಿಜಕ್ಕೂ ಉತ್ತಮ ಪ್ರಯತ್ನ ಮಾಡಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡದ್ದು ಇದೆ.

                ಪ್ರತೀಬಾರಿ ಪೂರ್ವಸಿದ್ಧತಾ ಪರೀಕ್ಷೆಗಳೆಲ್ಲ ಮುಗಿದ ಮೇಲೆ ಉತ್ತರ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿ ಮುಂದಿನ ಪರೀಕ್ಷೆಗೆ ತಯಾರಾಗಲು, ಓದಿಕೊಳ್ಳಲು ಮಕ್ಕಳಿಗೆ ರಜೆಯನ್ನು ನೀಡಲಾಗುತ್ತಿತ್ತು. ಈ ಸಮಯದಲ್ಲಿ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿಗಳು ಶಾಲೆಗೆ ಬರಲೇಬೇಕಿತ್ತು. ಇದರ ಮಧ್ಯೆ ಕೆಲವು ಮಕ್ಕಳು ಮನೆಯಲ್ಲಿ ಓದಲು ಕಷ್ಟವಾಗುತ್ತದೆ ಎಂದು ತಿಳಿಸು ಶಾಲೆಯಲ್ಲಿಯೇ ಕುಳಿತು ಓದಲು ಬರುತ್ತಿದ್ದರು. ಆ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಲ್ಯಾಬ್ ನಲ್ಲಿ ಕುಳಿತು ಓದಲು ಅವಕಾಶ ಮಾಡಿಕೊಡಲಾಗಿತ್ತು. ರಜತ್ ಕೃಷ್ಣ ಹತ್ವಾರ್ ಕಂಪ್ಯೂಟರ್ ಲ್ಯಾಬ್ ನಲ್ಲಿ ಕುಳಿತು ಓದುತ್ತಿದ್ದ. ‘ಮನೆಯಲ್ಲಿ ಕುಳಿತು ಓದಬಹುದಲ್ಲವೇ?’ ಎಂದದ್ದಕ್ಕೆ, ‘ಮನೆಯಲ್ಲಿ ಯಾರು ಇರುವುದಿಲ್ಲ, ಟಿ.ವಿ, ಮೊಬೈಲ್ ಇರುವುದರಿಂದ ಓದಲು ಆಗುವುದಿಲ್ಲ ಹಾಗಾಗಿ ಶಾಲೆಯಲ್ಲಿಯೇ ಓದುತ್ತೇನೆ’ ಎಂದು ಇಲ್ಲಿಯೇ ಕುಳಿತು ಓದುತ್ತಿದ್ದನು. ದೂರದಲ್ಲಿ ಕುಳಿತು ಓದುವವರು ಒಂದೆಡೆಯಾದರೆ ಕೆಲವರು ಗುಂಪಾಗಿ ಕುಳಿತು ಓದುತ್ತಿದ್ದರು. ಮಧ್ಯಾಹ್ನ ಊಟಕ್ಕೆಂದು ಬೆಲ್ ಆದ ನಂತರ ನಾನು ಊಟಕ್ಕೆ ಕಂಪ್ಯೂಟರ್ ಹಾಲ್ ಗೆ ಹೋಗುತ್ತಿದ್ದೆ. ಹುಡುಗರು ತಮ್ಮ ಊಟದಡಬ್ಬಿಗಳನ್ನು ತೆಗೆದುಕೊಂಡು ಹೊರಗೆ ಹೋಗುತ್ತಿದ್ದರು. ಹುಡುಗಿಯರು ಅಲ್ಲಿಯೇ ಗುಂಪಾಗಿ ಕೂರುತ್ತಿದ್ದರು. ನಾನು ಊಟಕ್ಕೆ ಬಂದಾಗ ಮಕ್ಕಳು  ‘ಸರ್ ನಮ್ಮ ಜೊತೆಗೆ ಊಟಕ್ಕೆ ಬನ್ನಿ’ ಎಂದರು. ಪರವಾಗಿಲ್ಲ ಎಂದು ನಾನು ದಿನವೂ ಕೂರುವ ಜಾಗದಲ್ಲಿಯೇ ಕುಳಿತು ಊಟ ಮಾಡಿ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದೆ. ನಾನು ಇದ್ದ ಕಾರಣ ಮಕ್ಕಳು ಮೆಲ್ಲಗೆ ಏನೇನೋ ಮಾತಾಡಿಕೊಂಡು, ನಗುತ್ತಾ ಕುಳಿತಿರುತ್ತಿದ್ದರು.



                ಮರುದಿನ ಊಟಕ್ಕೆ ಹೋದಾಗ ನಾನು ಕೂರುವ ಜಾಗದ ಸುತ್ತ ಇವರೇ ಚೇರ್ ಹಾಕಿಟ್ಟು ‘ಎಲ್ಲರೂ ಒಟ್ಟಿಗೆ ಊಟ ಮಾಡೋಣವೇ ಸರ್’ ಎಂದರು. ಇನ್ನೇನೂ ಮಾಡುವಂತಿರಲಿಲ್ಲ ‘ಸರಿ’ ಎಂದೆ ಕೆಲವರು ‘ಸರ್ ಜೊತೆಗೆ ಊಟಕ್ಕೆ ಕೂರುತ್ತಿದ್ದೇನೆ’ ಎಂದು ಏನೇನೋ ವಿಶೇಷ ಅಡುಗೆಗಳನ್ನು ಪುಟ್ಟಪುಟ್ಟ ಡಬ್ಬಿಗಳಲ್ಲಿ ತಂದಿದ್ದರು. ಕೆಲವರು ರುಚಿ ನೋಡಿ ಎಂದು ಕೊಟ್ಟರು. ‘ಹೀಗೆ ಏನೇನೋ ತರುತ್ತೇವೆ ಎಂದಿದ್ದರೆ ನಾನು ತಿಂಡಿಯನ್ನೇ ತರುತ್ತಿರಲಿಲ್ಲ’ ಎಂದೆ. ‘ಸರಿ ಹಾಗಾದರೆ ನಾಳೆ ನೀವು ತಿಂಡಿ ತರಬೇಡಿ, ನಾನು ನಿಮಗಾಗಿ ತರ್ತಿನಿ’ ಎಂದಳು ಶ್ರುತಿಪ್ರಭು. ‘ಅದೇನೂ ಬೇಡ. ನನ್ನ ಡಬ್ಬಿ ನಾನೇ ತರುತ್ತೇನೆ’ ಎಂದು ಒಟ್ಟಿಗೆ ಊಟ ಮಾಡುತ್ತಿದ್ದೆವು. ‘ಈ ಕ್ಷಣವನ್ನು ನೆನಪಿಟ್ಟುಕೊಳ್ಳಬೇಕು ಹಾಗಾಗಿ ಒಂದು ಫೋಟೋ ತಕ್ಕೊಳೋಣ’ ಎಂದಳು ಖುಷಿ. ‘ನನ್ನ ಮೊಬೈಲ್ ಕ್ಯಾಮರಾ ಸರಿ ಇಲ್ಲ’ ಎಂದೆ. ‘ಅದು ಸ್ಕೂಲ್ ಲಿ ಎಲ್ಲಾ ಮಕ್ಕಳಿಗೂ ಗೊತ್ತಿದೆ. ಸೆಲ್ಪಿ ತಗೊಬಹುದು’ ಎಂದಳು ಪಾವ್ನಿ. ಹಾಗೆಯೇ ಒಂದು ಫೋಟೋ ತೆಗೆದುಕೊಂಡದ್ದಾಯಿತು.

ಪರೀಕ್ಷೆ ಬಂದಾಗಲೂ ಬಹುತೇಕ ಮಕ್ಕಳು ಪರೀಕ್ಷೆ ಮುಗಿಸಿ ಮನೆಗೆ ಹೊರಟರೆ ಕೆಲವು ವಿದ್ಯಾರ್ಥಿಗಳು ಅನಿವಾರ್ಯವಾಗಿ ಶಾಲೆಯಲ್ಲಿ ಇರಬೇಕಾಗಿತ್ತು. ಆ ಸಮಯದಲ್ಲೂ ಕೆಲವು ಸಮಯ ಊಟಕ್ಕೆ ಕೂರುವಾಗ ಪ್ರಶ್ನೆಪತ್ರಿಕೆಯ ಬಗ್ಗೆ ಮಾತನಾಡುತ್ತ ಊಟ ಮಾಡುತ್ತಿದ್ದರು. ಮರುದಿನ ಯಾವ ವಿಷಯದ ಪರೀಕ್ಷೆ ಇರುತ್ತಿತ್ತೋ ಆ ಶಿಕ್ಷಕರು ಆ ಮಕ್ಕಳಿಗೆ ತರಗತಿ ತೆಗೆದುಕೊಂಡು ಬರೆಯಿಸುವ, ಓದಿಸುವ ಕೆಲಸ ಮಾಡುತ್ತಿದ್ದರು. ಎಲ್ಲಾ ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದ ನಂತರ ಕೆಲವು ಮಕ್ಕಳು ಓದುವ ಸಲುವಾಗಿ ಶಾಲೆಗೆ ರಜೆ ಹಾಕುತ್ತಿದ್ದರು. ಬೀಳ್ಕೊಡುಗೆ ಸಮಾರಂಭದ ತನಕ ಒಂದಿಷ್ಟು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಅದಾದ ನಂತರ ಕಲಿಕೆಯಲ್ಲಿ ಹಿಂದುಳಿದಿದ್ದ ಒಂದಿಷ್ಟು ಮಕ್ಕಳನ್ನು ಶಾಲೆಯ ವತಿಯಿಂದಲೇ ಕರೆಸಿಕೊಂಡು ಅವರಿಗಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿತ್ತು. ಈ ಸಮಯದಲ್ಲೂ ಕೆಲವು ಮಕ್ಕಳು ಮನೆಯಲ್ಲಿದ್ದರೆ ಓದಲು ಕಷ್ಟ ಎಂದು ಶಾಲೆಗೆ ಬರುತ್ತಿದ್ದರು.

                ಅದೊಂದು ದಿನ ಕೆಲವೇ ಕೆಲವು ಹುಡುಗರು ಮತ್ತು ಇಂಚರ ಮತ್ತು ಪಾವ್ನಿ  ಇಬ್ಬರೇ ಹುಡುಗಿಯರು ಶಾಲೆಗೆ ಬಂದಿದ್ದರು. ಶಾಲೆಗೆ ಬಂದ ಮೇಲೆ ಇವರಿಗೆ ತಿಳಿದದ್ದು ಇಬ್ಬರೇ ಹುಡುಗಿಯರು ಎಂದು. ಪಾವ್ನಿ ಒಂದಿಷ್ಟು ಉತ್ತರಗಳನ್ನು ಹೇಳಿಸಿಕೊಳ್ಳುವ ಸಲುವಾಗಿ ಬಂದಿದ್ದು ಮಧ್ಯಾಹ್ನ ಅಮ್ಮ ಬಂದು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದಳು. ಅವರಿಗೆ ತರಗತಿ ನಡೆಯುತ್ತಿತ್ತು. ತರಗತಿ ಎಲ್ಲಾ ಮುಗಿದ ಮೇಲೆ ಮಧ್ಯಾಹ್ನ ಊಟದ ಸಮಯ ಕಂಪ್ಯೂಟರ್ ಲ್ಯಾಬ್ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಕಾರಣ ೧೦ನೇ  ತರಗತಿ ಸಿ ವಿಭಾಗದ ತರಗತಿ ಶಿಕ್ಷಕನಾಗಿದ್ದ ಕಾರಣ ಆ ಕೊಠಡಿಯಲ್ಲಿ ಕುಳಿತುಕೊಳ್ಳಲು ತೆರಳಿದೆ. ಆ ಸಮಯಕ್ಕೆ ಪಾವ್ನಿ ಅಲ್ಲಿಗೆ ಬಂದಳು. ‘ಸರ್ ಮನೆಗೆ ಹೋಗಬೇಕಿದೆ ಅಮ್ಮನಿಗೆ ಕಾಲ್ ಮಾಡಿಸಬೇಕು’ ಎಂದಳು. ‘ನನ್ನ ಫೋನ್ ಕೊಡುವುದಿಲ್ಲ. ಬೇಕಿದ್ದಲ್ಲಿ ಆಫೀಸ್ ನಲ್ಲಿ ವಿಚಾರಿಸು’ ಎಂದೆ. ‘ಅಮ್ಮನಿಗೆ ಬರಲು ಹೇಳಿದ್ದೇನೆ ಇಷ್ಟು ಹೊತ್ತಾದರೂ ಬಂದಿಲ್ಲವಲ್ಲ ಎಂದು ಕೇಳಿದೆ’ ಎಂದಳು. ಅಷ್ಟರಲ್ಲಿ ಇಂಚರ ಅವಳನ್ನು ಹುಡುಕುತ್ತ ಬಂದಳು. ‘ಒಟ್ಟಿಗೆ ಊಟ ಮಾಡೋಣ ಬಾ’ ಎಂದು ಅವಳನ್ನು  ಕರೆದಳು. ‘ಸರ್ ನಾಳೆಯಿಂದ ಶಾಲೆಗೆ ಬರಲ್ಲ, ನಮ್ಮ ತರಗತಿಯಲ್ಲಿಯೇ
ಒಟ್ಟಿಗೆ ಊಟ ಮಾಡೋಣ’ ಎಂದು ಓಡಿಹೋಗಿ  ಒಂದರಲ್ಲಿ ಹಣ್ಣು ಮತ್ತೊಂದರಲ್ಲಿ ಸಿಹಿ ತಿನಿಸುಗಳ ಊಟದ ಡಬ್ಬಿ ತಂದಳು. ಇಂಚರ ಚಿತ್ರಾನ್ನ ನಾನು ಪುಳಿಯೋಗರೆ ತಂದಿದ್ದೆವು. ಪಾವ್ನಿ ಆ ಡಬ್ಬಿಗಳನ್ನು ನಮಗೆ ಕೊಟ್ಟಳು. ಹೇಗಿದ್ದರೂ ಮನೆಗೆ ಹೊರಟಿದ್ದೇನೆ ಅಲ್ಲಿಯೇ ಊಟ ಮಾಡಿಕೊಳ್ಳುತ್ತೇನೆ ಎಂದಳು. ‘ಇಂಚರ ಸಿಕ್ಕಿರೋದೇ ಚಾನ್ಸ್ ಇಬ್ಬರು ಖಾಲಿ ಮಾಡೋಣವೇ?’ ಎಂದೆ ‘ನಾನು ಖಾಲಿ ಮಾಡೋಕೆ ರೆಡಿ ಇದೀನಿ ಸರ್’ ಎಂದಳು. ಇನ್ನೇನು ಇಬ್ಬರು ನಮ್ಮ ಊಟದ ಮಧ್ಯೆ ಆ ಡಬ್ಬಿಗಳಲ್ಲಿರುವ ಹಣ್ಣು, ಸಿಹಿತಿನಿಸನ್ನು ತಿನ್ನುತ್ತಿದ್ದೆವು. ಇನ್ನೇನು ಒಂದೇ ಒಂದು ಸಿಹಿ ಬಾಕಿ ಇದೆ ಅಂದಾಗ. ‘ಆಯಾ ಆಂಟಿ ಮೀನಮ್ಮ ಬಂದರು. ಏನು ಸರ್ ಇಷ್ಟು ಡಬ್ಬಿಗಳು ಇಟ್ಕೊಂಡಿದಿರಾ?’ ಎಂದರು. ‘ಇದರಲ್ಲಿ ಎರಡು ಡಬ್ಬಿ ಪಾವ್ನಿದು’ ಎಂದಾಗ, ‘ಇವತ್ತು ನನಗೆ ಏನೋ ಸ್ವೀಟ್ ತಂದುಕೊಡ್ತಿನಿ ಎಂದಿದ್ದೇ ಎಲ್ಲಿ? ಅಂದರು. ನಾನು ಇಂಚರ ಆ ಡಬ್ಬಿಯನ್ನು  ತೊಳೆದಷ್ಟೇ ಚಂದವಾಗಿ ಖಾಲಿ ಮಾಡಿದ್ದೆವು. ಈ ಡಬ್ಬಿಯಲ್ಲಿ ಒಂದಷ್ಟು ತಿನಿಸುಗಳು ಮೀನಮ್ಮಳ ಪಾಲಾಗಬೇಕಿತ್ತು ಎಂಬುದು ತದನಂತರ ತಿಳಿಯಿತು. ಆದರೆ ನಾವೇ ಖಾಲಿ ಮಾಡಿದ್ದರಿಂದ ಮೀನಮ್ಮ ಸುಮ್ಮನಾದಳು. ಅಷ್ಟರಲ್ಲಿ ಮತ್ತೊಂದು ಪುಟ್ಟ ಡಬ್ಬಿಯನ್ನು ತೆಗೆದು ಮೀನಮ್ಮಳಿಗೆ ಸಿಹಿತಿನಿಸನ್ನು ನೀಡಿದಳು. ‘ನಾನೊಬ್ಬಳೇ ಸಿಕ್ಕಿದ್ದೇನೆಂದು ಎಷ್ಟೆಲ್ಲಾ ಗೋಳು ಹೊಯ್ದುಕೊಳ್ಳುತ್ತೀಯಾ ಅಲ್ಲಾ?’ ಎಂದು ಬೈದುಕೊಳ್ಳುತ್ತಲೇ ಸಿಹಿತಿನಿಸನ್ನು ತೆಗೆದುಕೊಂಡಳು. ‘ಸರ್ ಇದೇ ಕೊನೆದಿನ. ಇನ್ನು ಶಾಲೆಗೆ ಬರಲ್ಲ, ಮನೆಯಲ್ಲಿ ಅಮ್ಮ ಓದಿಸುತ್ತಾರೆ ಹಾಗಾಗಿ ಒಂದು ಫೋಟೋ ತೆಗೆದುಕೊಳ್ಳೋಣ’  ಎಂದಳು. ಇಲ್ಲವೆನ್ನಲಾಗಲಿಲ್ಲ. ಸರಿ ಎಂದು ಸೆಲ್ಪಿ ತೆಗೆದುಕೊಂಡೆವು. ನಾನು ಮತ್ತು ಇಂಚರ ಸಂಪೂರ್ಣ ಎಲ್ಲಾ ಡಬ್ಬಿಗಳನ್ನು ಖಾಲಿ ಮಾಡಿದ್ದೆವು. ಆ ಸಮಯಕ್ಕೆ ಸರಿಯಾಗಿ ಆಕೆಯ ತಾಯಿ ಬಂದು ಎಲ್ಲಾ ಶಿಕ್ಷಕರನ್ನು ಮಾತನಾಡಿಸಿಕೊಂಡು, ಇವಳನ್ನು ಕರೆದುಕೊಂಡು ಹೋದರು ಇದಾದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಓದುತ್ತೇವೆ ಎಂದು ಹೇಳಿ ಶಾಲೆಗೆ ಬರುವುದು ಕಡಿಮೆಯಾಯಿತು.



ಅಂತೂಇಂತೂ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಹೇಗೋ ಬರೆದು ಮುಗಿಸಿದರು. ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಏನು ಬರುವುದೋ ಎನ್ನುವ ಆತಂಕ ಎಲ್ಲರಲ್ಲೂ ಸಹಜವಾಗಿ ಇದ್ದೇಇತ್ತು. ಈ ಬಾರಿ ರಾಜ್ಯದಲ್ಲಿಯೇ ಫಲಿತಾಂಶದ ಪ್ರಮಾಣದಲ್ಲಿದ್ದ ಗುಣಮಟ್ಟ ಕಡಿಮೆಯೇ ಆಗಿತ್ತು. ನಮ್ಮ ಮಕ್ಕಳು ಅದಕ್ಕೆ ಹೊರತಾಗಿರಲಿಲ್ಲ. ಆದರೂ ಕೆಲವರಿಗೆ ನಿರೀಕ್ಷಿತ ಅಂಕಗಳು ಬಂದರೆ, ಇನ್ನೂ ಕೆಲವರಿಗೆ ನಿರೀಕ್ಷಿತ ಅಂಕಗಳು ಬಾರದ ಕಾರಣ ಮರುಮೌಲ್ಯಮಾಪನಕ್ಕೆ ಮುಂದಾದರು. ಕೊನೆಯ ದಿನವೆಂದು ಶಾಲೆಯಲ್ಲಿ ಒಟ್ಟಿಗೆ ಊಟ ಮಾಡಿದ ಪಾವ್ನಿ ಅವರ ಕುಟುಂಬದಲ್ಲಿ ಇಲ್ಲಿಯವರೆಗೂ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳನ್ನು ತೆಗೆದವರಲ್ಲಿ ಇವಳೇ ಮುಂದೆ ಎಂದು ತಿಳಿಯಿತು. ಇಂಚರಳ ಫಲಿತಾಂಶ ಆಕೆಯ ಪೋಷಕರಿಗೂ ತೃಪ್ತಿ ನೀಡಿತ್ತು.

ಅಂತೂಇಂತೂ ಹೇಗೋ ಕಳೆದ ಎಸ್.ಎಸ್.ಎಲ್.ಸಿ ಬ್ಯಾಚ್ ನ ಒಂದಿಷ್ಟು ಮಕ್ಕಳ ಜೊತೆಗೆ ಕುಳಿತು ಊಟ ಮಾಡಿದ ಸಂಗತಿ ವಿಶೇಷವಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಆ ತರಗತಿಯ ಶಿಕ್ಷಕರು ಆ ತರಗತಿಯಲ್ಲಿ ಮಕ್ಕಳ ಜೊತೆಗೆ ಕುಳಿತು ಊಟ ಮಾಡುತ್ತಿದ್ದರು ಎಂದು ಕೇಳಿದ್ದೆ. ಈಗ ಆ ರೀತಿಯ ಒಂದಿಷ್ಟು ಕ್ಷಣಗಳನ್ನು ಎಸ್.ಎಸ್.ಎಲ್.ಸಿ ಬೇರೆ ವಿಭಾಗದ ವಿದ್ಯಾರ್ಥಿಗಳ ಜೊತೆಗೂ ಕಡೆಯದಾಗಿ ನನ್ನದೇ ತರಗತಿಯಲ್ಲಿಯೂ ಮಕ್ಕಳ ಜೊತೆಗೆ  ಊಟ ಮಾಡಿದ ಕ್ಷಣ ಮಾತ್ರ ಸಿಹಿತಿನಿಸಿನಷ್ಟೇ ಸಿಹಿಯಾಗಿತ್ತು, ರುಚಿಯಾಗಿಯೂ ಇತ್ತು …

Leave a Reply

Your email address will not be published. Required fields are marked *

Scan the code