ತನ್ನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಸಮಾಜಸೇವಕ, ಹೈಕೋರ್ಟ್ ವಕೀಲ.
(SHIVAMOGA): ಸೊರಬ: ಸಮಾಜ ಸೇವಕ ಹಾಗೂ ಹೈಕೋರ್ಟ್ ವಕೀಲ ಎಚ್.ವಿ. ಕುಮಾರಸ್ವಾಮಿ ಅವರು ತಮ್ಮ ಜನ್ಮ ದಿನವನ್ನು ವಿಶೇಷವಾಗಿ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಭಾನುವಾರ ಆಚರಿಸಿದರು.
ಈ ವೇಳೆ ಮಾತನಾಡಿದ ಎಚ್.ವಿ. ಕುಮಾರ ಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಅಧಿಕಾರದಲ್ಲಿ ಇರಲೀ, ಇಲ್ಲದೇ ಇರಲೀ ಸದಾ ಬಡವರ ಪರ ಕಾಳಜಿ ಹೊಂದಿದ್ದರು. ಎಸ್. ಮಧು ಬಂಗಾರಪ್ಪ ಅವರು ಸಹ ತಂದೆಯವರ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ. ಇವುಗಳೇ ತಮಗೆ ಪ್ರೇರಣೆ ಎಂದ ಅವರು, ದುಡಿಮೆಯ ಕೊಂಚ ಆದಾಯವನ್ನು ಸಮಾಜಕ್ಕಾಗಿ ವಿನಿಯೋಗ ಮಾಡಿದರೆ ದೈವ ಮೆಚ್ಚುತ್ತಾನೆ ಎಂದರು.
ಜನ್ಮದಿನದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಸಮಾಜದಲ್ಲಿ ಹಿಂದುಳಿದವರು, ನಿರ್ಗತಿಕರು ಹಾಗೂ ವಿಶೇಷಚೇತನ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಿಕೊಂಡರೆ ಆತ್ಮ ತೃಪ್ತಿ ದೊರೆಯುತ್ತದೆ. ಇಷ್ಟು ವರ್ಷದಲ್ಲಿ ಇದೇ ಮೊದಲು ಈ ರೀತಿಯ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಸಾರ್ಥಕ ಮನೋಭಾವ ತೋರುತ್ತಿದೆ. ಈಗಾಗಲೇ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ಅಭಿಲಾಷೆಯೂ ಇದೆ. ಈ ಮಕ್ಕಳನ್ನು ನೋಡುತ್ತಿದರೆ ದೈವ ಸ್ವರೂಪಿ ಎನಿಸುತ್ತಿದ್ದು, ಅವರೊಂದಿಗೆ ಜನ್ಮ ಆಚರಿಸಿಕೊಳ್ಳಲು ಪುಣ್ಯ ಮಾಡಿರಬೇಕು ಎಂದರು.
ಸಂಸ್ಥೆಯ ಮುಖ್ಯ ಶಿಕ್ಷಕ ರವೀಂದ್ರ ಮಾತನಾಡಿ, ಎಚ್.ವಿ. ಕುಮಾರಸ್ವಾಮಿ ಅವರು ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡತನದ ಹಾದಿಯಲ್ಲಿ ಬೆಳೆದರು. ಆದರೂ ನೆಡೆದು ಬಂದ ಹಾದಿಯನ್ನು ಮರೆಯದೇ ಮುನ್ನೆಡೆಯುತ್ತಿದ್ದಾರೆ. ತಮ್ಮ ಸ್ನೇಹಿತರು ಮತ್ತು ಆಪ್ತ ವಲಯದೊಂದಿಗೆ ನಂಟನ್ನು ಹೊಂದಿದ್ದಾರೆ. ಅವರು ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕುಶಾಲ್ ಆರೇಕೊಪ್ಪ, ಬಿ. ಪ್ರಕಾಶ, ಬಿ. ನಾಗೇಶ್, ಡಿ. ಪ್ರಶಾಂತ್, ಎಚ್.ಪಿ. ರಾಜೇಶ್, ಎಂ.ಸಿ. ಜೀವೇಶ, ಅರುಣ, ರಾಜು, ಆನಂದ, ನವೀನ ಶಿಗ್ಗಾ, ಗಾಗಣ್ಣ, ಸೇರಿದಂತೆ ಸಂಸ್ಥೆಯ ಅಧ್ಯಾಪಕ ವೃಂದದವರು ಹಾಗೂ ಎಚ್.ವಿ. ಕುಮಾರಸ್ವಾಮಿ ಅಭಿಮಾನಿ ಬಳಗದವರು ಉಪಸ್ಥಿತರರಿದ್ದರು.
ವರದಿ: ಮಧು ರಾಮ್ ಸೊರಬ