ಸೊರಬ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶಿವಾಲಯಗಳಲ್ಲಿ ವಿಶೇಷ ಪೂಜೆ.
(SHIVAMOGA): ಸೊರಬ: ಮಹಾಶಿವರಾತ್ರಿ ಅಂಗವಾಗಿ ಸೊರಬ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಿವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಪಾರಿಜಾತ, ಎಕ್ಕ, ಮುತ್ತುಗ, ಕಣಗಲ ಹೂವುಗಳನ್ನು ಅರ್ಪಿಸಿದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ 32 ನೇ ವರ್ಷದ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಚಂದ್ರ ಮೌಳೇಶ್ವರ ಸ್ವಾಮಿಗೆ ಅರ್ಚಕ ವೃಂದದಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಕಲ್ಲೇಶ್ವರ ದೇವಸ್ಥಾನ, ಇತಿಹಾಸ ಪ್ರಸಿದ್ದ ಕೋಟಿಪುರದ ಕೈಠಬೇಶ್ವರ ದೇವಸ್ಥಾನ, ಬಂಕಸಾಣದ ಹೊಳೆಲಿಂಗೇಶ್ವರ, ಜಡೆ ಸಂಸ್ಥಾನ ಮಠ, ಜಡೆ ಹಿರೇಮಠ, ಶಾಂತಾಪುರ ಮಠ, ಗೊಗ್ಗೆಹಳ್ಳಿ ಮಠ, ಹಿರೇಮಾಗಡಿ ಮಠ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕೆರೆಹಳ್ಳಿಯ ರಾಮೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಪಟ್ಟಣದ ಚಾಮರಾಜಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ರಂಗನಾಥ ದೇವಸ್ಥಾನದಲ್ಲಿ ಅನಂತ ಶಿವಲಿಂಗ ಪ್ರದರ್ಶನ ನಡೆಯಿತು. ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ಹಬ್ಬದ ವಿಶೇಷವಾಗಿ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪ್ರಾರ್ಥಿಸಿ, ದೇವರ ದರ್ಶನ ಪಡೆದರು.
ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ