ವಿಶೇಷ ಚೇತನ ಮಕ್ಕಳಿಗೆ ಅವಕಾಶ ಮತ್ತು ಸೌಲಭ್ಯ ಕೊಟ್ಟರೆ ಹೆಚ್ಚು ಸಾಧನೆ ಮಾಡುತ್ತಾರೆ.
(KOLARA): ವಿಶೇಷ ಚೇತನ ಮಕ್ಕಳಿಗೆ ಅವಕಾಶ ಮತ್ತು ಸೌಲಭ್ಯಗಳನ್ನು ಕೊಟ್ಟಾಗ ಇತರರಿಗಿಂತ ಹೆಚ್ಚು ಸಾಧನೆ ಮಾಡುತ್ತಾರೆ. ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಎನ್ ಸುಕನ್ಯ ಇಂದು ಬಂಗಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ವಿಶ್ವವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನ ಮಕ್ಕಳು ಬೇರೆ ಮಕ್ಕಳಿಗಿಂತ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರಾಗಿಲ್ಲದಿರಬಹುದು .ಆದರೆ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿ ,ಅಗತ್ಯ ಸಲಕರಣೆಗಳನ್ನು ನೀಡಿದಾಗ ಉತ್ತಮ ಸಾಧನೆಯನ್ನು ತೋರಿರುವ ನಿದರ್ಶನಗಳು ಸಾಕಷ್ಟಿವೆ. ಇಂದು ರಾಜ್ಯ , ಕೇಂದ್ರ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಮಕ್ಕಳ ಬೆನ್ನೆಲುಬಾಗಿ ನಿಂತಿವೆ. ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು. ಪೋಷಕರು ಅಗತ್ಯ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡಬೇಕಾಗಿದೆ. ಇಲಾಖೆ ವತಿಯಿಂದ ಈ ಮಕ್ಕಳಿಗೆ ಬಿ.ಆರ್.ಸಿ. ಬಂಗಾರಪೇಟೆಯಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರಿಗೆ, ಬೆಂಗಾವಲು ,ಹೆಣ್ಣು ಮಕ್ಕಳ ವಿಶೇಷ ಭತ್ಯೆ ಮತ್ತು ದೃಷ್ಟಿ ನ್ಯೂನತೆ ಇರುವ ಮಕ್ಕಳಿಗೆ ರೀಡರ್ ಭತ್ಯೆ ಯನ್ನು ನೀಡಲಾಗುತ್ತಿದೆ. ಮಕ್ಕಳು ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು .ವಿಶೇಷ ಚೇತನ ಮಕ್ಕಳಿಗೆ ಮತ್ತು ಪೋಷಕರಿಗೆ ಸರಳ ಕ್ರೀಡಾಕೂಟಗಳನ್ನು ನಡೆಸಿ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ವೇದಿಕೆಯಲ್ಲಿ ಎಸ್ಸಿ- ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಎಸ್ಎ ನಾಗರಾಜಪ್ಪ, ಬಿ.ಐ.ಇ.ಆರ್.ಟಿ. ಗಳಾದ ಬಿ. ನಾಗರಾಜ, ಡಿ ಸಿ ವೆಂಕಟೇಶಗೌಡ ಮತ್ತು ಕರಬಸಪ್ಪ ಹಾಜರಿದ್ದರು.
ವರದಿ ವಿಷ್ಣು ಕೋಲಾರ