ಕ್ರೀಡೆ ಜೀವನದ ಅವಿಭಾಜ್ಯ ಅಂಗ
(CHIKKAMAGALURU): ಬಾಳೆಹೊನ್ನೂರು : ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದರಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಪಿಎಸ್ಐ ವಿ.ಟಿ.ದಿಲೀಪ್ಕುಮಾರ್ ಹೇಳಿದರು. ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಜೇಸಿಐ ಸಂಸ್ಥೆ ಗುರುವಾರ ಆಯೋಜಿಸಿದ್ದ ಜೇಸಿ ಪ್ರೀಮಿಯರ್ ಲೀಗ್ (ಜೆಪಿಎಲ್-2023) ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ನಿರಂತರವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ದೇಹದ ಸದೃಢತೆಗೆ ಪೂರಕವಾಗುವುದಲ್ಲದೇ ಮಾನಸಿಕ ನೆಮ್ಮದಿ ಲಭಿಸುತ್ತದೆ. ಕ್ರೀಡೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನಿರಂತರವಾಗಿ ದಿನದ ಕೆಲವು ಸಮಯವಾದರೂ ತೊಡಗಿಸಿಕೊಳ್ಳಬೇಕು.
ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿಲ್ಲವೆoದರೂ ಸಹ ಜೀವನದ ಒಂದು ಭಾಗವನ್ನು ನಾವು ಕಳೆದುಕೊಂಡoತಾಗುತ್ತದೆ. ಕ್ರಿಕೆಟ್ ಪಂದ್ಯಗಳು ಒಂದು ಸ್ನೇಹಪೂರ್ವಕವಾದ ಆಟವಾಗಿದ್ದು, ಇದರಲ್ಲಿ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯಲಿದೆ.
ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಂಸ್ಥೆಯಾದ ಜೇಸಿಯವರು ಕೇವಲ ವ್ಯಕ್ತಿತ್ವ ವಿಕಸನ, ಸಮಾಜ ಸೇವೆಗೆ ಮಾತ್ರ ಸೀಮಿತವಾಗಿರದೆ ಸಂಸ್ಥೆಯ ಸದಸ್ಯರನ್ನು ಹುರಿದುಂಬಿಸಲು ಕ್ರೀಡೆಯನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದೇ ವಿಶಿಷ್ಟ ಸ್ಫೂರ್ತಿಯಾಗಿದ್ದು, ಸೋಲು ಗೆಲವು ಒಂದೇ ನಾಣ್ಯದ ಮುಖ ಎಂದರು.
ಜೇಸಿಐ ಅಧ್ಯಕ್ಷ ಬಿ.ಎಸ್.ಅಜಿತ್ ಮಾತನಾಡಿ, ಬಾಳೆಹೊನ್ನೂರಿನ ಜೇಸಿ ಸಂಸ್ಥೆಯ ವತಿಯಿಂದ ಮೂರನೇ ಬಾರಿಗೆ ಸಂಸ್ಥೆಯ ಸದಸ್ಯರಿಗಾಗಿ ಪ್ರೀಮಿಯರ್ ಲೀಗ್ ಅನ್ನು ವಿಶೇಷ ರೀತಿಯಲ್ಲಿ ಆಯೋಜನೆ ಮಾಡಿದ್ದು, ಐಪಿಎಲ್ ಮಾದರಿಯಲ್ಲಿ ತಂಡಗಳನ್ನು ಆಯ್ಕೆಗೊಳಿಸಲಾಗಿದೆ.
ಸಂಸ್ಥೆಯ ಐದು ತಂಡಗಳ ಆಟಗಾರರು ಪರಸ್ಪರ ಸ್ನೇಹ, ವಿಶ್ವಾಸದಿಂದ ಒಂದು ದಿನ ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗುವ ಮೂಲಕ ಸಂಸ್ಥೆಯ ಹಾಗೂ ಕ್ರೀಡೆಯ ಮೇಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.
ಪoದ್ಯಾವಳಿಯನ್ನು ಪಾರಿವಾಳ ಹಾರಿ ಬಿಟ್ಟು, ಟ್ರೋಫಿ ಅನಾವರಣಗೊಳೀಸಿ ಹಾಗೂ ಬ್ಯಾಟಿಂಗ್ ಮಾಡುವ ಮೂಲಕ ವಿನೂತನವಾಗಿ ಉದ್ಘಾಟಿಸಲಾಯಿತು.
ಜೇಸಿ ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಕಾರ್ಯದರ್ಶಿ ನಿಖಿಲ್ ಕಾನ್ಕೆರೆ, ಕಾರ್ಯಕ್ರಮ ನಿರ್ದೇಶಕ ವಿ.ರೋಹಿತ್, ತಂಡಗಳ ಮಾಲೀಕರಾದ ಡಾ.ನವೀನ್ ಲಾಯ್ದ್ ಮಿಸ್ಕಿತ್, ಬಿ.ಸಿ.ಸಂತೋಷ್ಕುಮಾರ್, ಸವಿನ್ ಹುಯಿಗೆರೆ, ಸುಧಾಕರ್, ಸತೀಶ್ ಅರಳೀಕೊಪ್ಪ, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಮನುಕುಮಾರ್, ಸೈಯ್ಯದ್ ಫಾಜಿಲ್, ಎ.ಆರ್.ಸುರೇಂದ್ರ, ಭಾಸ್ಕರ್ ವೆನಿಲ್ಲಾ, ಸುರೇಂದ್ರ ಮಾಸ್ತರ್, ರಿಚರ್ಡ್ ಮಥಾಯಿಸ್, ಎಚ್.ಗೋಪಾಲ್, ಎಸ್.ಎಲ್.ಚೇತನ್, ಸಿ.ಪಿ.ರಮೇಶ್ ಮತ್ತಿತರರು ಹಾಜರಿದ್ದರು.