ಗಿಣಿವಾರದ ಕೊಡಚಾದ್ರಿ ಕ್ರೀಡಾಂಗಣದಲ್ಲಿ ಆವಿನಹಳ್ಳಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ
(ಸಾಗರ – ಸೆಪ್ಟೆಂಬರ್-1): ಕ್ರೀಡೆಗಳು ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಆಪ್ಸ್ ಕೋಸ್ ಕೋಸ್ ಮಾಜಿ ಅಧ್ಯಕ್ಷರಾದ ಇಂದೂಧರ ಗೌಡ ಇವರು ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ ಹಾಗೂ ಕೊಡಚಾದ್ರಿ ವಸತಿ ಶಾಲೆ ಇವರ ಸಹಯೋಗದಲ್ಲಿ ಇಲ್ಲಿಗೆ ಸಮೀಪದ ಗಿಣಿವಾರದ ಕೊಡಚಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆವಿನಹಳ್ಳಿ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳನ್ನು ಕ್ರಿಯಾಶೀಲವಾಗಿಸುವ ಕ್ರೀಡೆಗಳು ಹೆಚ್ಚಿನ ಪರಿಣಾಮಕಾರಿಯಾಗಿವೆ ನಿರಂತರ ಪರಿಶ್ರಮದಿಂದ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಕೆಲಸ ಶಿಕ್ಷಕರು ಹಾಗೂ ಪೋಷಕರಿಂದ ಆಗಬೇಕಾಗಿದೆ, ಗ್ರಾಮೀಣ ಪ್ರದೇಶದ ಮಕ್ಕಳ ಕ್ರೀಡೆಗಳಿಗೆ ವಿಶೇಷ ಪ್ರೋತ್ಸಾಹ ಅಗತ್ಯವಾಗಿದೆ ಎಂದವರು ಹೇಳಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕೋಳೂರು ಗ್ರಾ.ಪಂ ಅಧ್ಯಕ್ಷರಾದ ನವೀನ್ ಜಿ.ವಿ ಯವರು ಮಾತನಾಡಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ, ಮೌಲ್ಯಯುತ ಶಿಕ್ಷಣದ ಜೊತೆಗೆ ಕ್ರೀಡೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸಬೇಕಾಗಿದೆ, ಸಾಧನೆಗೆ ಪರಿಶ್ರಮ ಇರಬೇಕು ಎಂದವರು ಹೇಳಿದರು.
ಕೊಡಚಾದ್ರಿ ವಸತಿ ಶಾಲೆಯ ಅಧ್ಯಕ್ಷರಾದ ಕೆ.ಆರ್.ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಕೋಳೂರು ಗ್ರಾ.ಪಂ.ಉಪಾಧ್ಯಕ್ಷೆ ಸುಮಿತ್ರಾ ಗಣೇಶ್, ಅಕ್ಷಯ ಸಹಕಾರ ಸಂಘದ ಅಧ್ಯಕ್ಷರಾದ ದಿನೇಶ್ ಬರದವಳ್ಳಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ನಾಯ್ಕ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಟಿ.ಪಿ, ಹುಲಿದೇವರಬನ ಪ್ರೌಢಶಾಲೆಯ ಮುಖ್ಯ ನಾಗರಾಜ್ ಹೆಗಡೆ, ಪ್ರಮುಖರಾದ ರಾಜೇಂದ್ರ ಆವಿನಹಳ್ಳಿ, ನಾಗೇಶ್,ಗುಮ್ಮಾನಿ, ವಿ.ಟಿ.ಸ್ವಾಮಿ, ಬಸವರಾಜ್, ನಂದಕುಮಾರಿ, ದೀಪು ಮೊದಲಾದವರು ಉಪಸ್ಥಿತರಿದ್ದರು.
ವರದಿ – ರಾಘವೇಂದ್ರ ತಾಳಗುಪ್ಪ