ನ್ಯೂಸ್ಶಿವಮೊಗ್ಗ

ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

(SHIVAMOGA): ಆನಂದಪುರ- ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರು ಹಾಗೂ ಧಣಿವರಿಯದ ನಾಯಕ ಎಂದೆ ಪ್ರಸಿದ್ದರಾಗಿರುವ ಹಿರಿಯ ರಾಜಕೀಯ ಮತ್ಸದ್ಧಿ ಕಾಗೋಡು ತಿಮ್ಮಪ್ಪನವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಜು 13 ರಂದು ಶನಿವಾರ ಕಾಯಕನಾಡು ಬೀದರ್‌ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ತಿಳಿಸಿದ್ದಾರೆ.


ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ಆರಂಭಿಸಿ ಯಶಸ್ವಿ 4 ವರ್ಷಗಳಾಗಿದ್ದು, ಸಂಸ್ಥೆಯು ರಾಜ್ಯಾಧ್ಯಾಂತ ಸಂಘಟಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದ್ದು ಅತಿ ಕಡಿಮೆ ಸಮಯದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ ಹೆಗ್ಗಳಿಕೆ ಸಂಸ್ಥೆಗಿದೆ. ಸಂಸ್ಥೆಯಲ್ಲಿ ಅನೇಕ ಗಣ್ಯ ಚಿಂತಕರು, ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಅರಿವುಳ್ಳ ಬರಹಗಾರರ ಮಾರ್ಗದರ್ಶನದಲ್ಲಿ ನಡೆಯುತ್ತ ಬಂದಿದೆ. ಪ್ರತಿ ವರ್ಷ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳನ್ನು, ನಾಯಕತ್ವ ಶಿಬಿರಗಳನ್ನು, ವಿಚಾರ ಸಂಕಿರಣ, ಸಾಧಕರಿಗೆ ಹೆಚ್.ಎನ್.ಪ್ರಶಸ್ತಿ ಹಾಗೂ ಶ್ರಮಿಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರಧಾನ, ಸಾಹಿತಿ, ಚಿಂತಕರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶ ನಮ್ಮ ಸಂಸ್ಥೆಗಿದ್ದು, ಆನ್‌ಲೈನ್ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ, ಪ್ರತಿ ತಿಂಗಳು ಅಮವಾಸೆಯಂದು ಅಮೃತಾ ಅಮವಾಸೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ, ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಐತಿಹಾಸಿಕ ನಗರಿ ಕಾಯಕನಾಡು ಬೀದರ್‌ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿದ್ದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದೇವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಜ್ಞಾನ ಯೋಗಾಶ್ರಮದ ಸಿದ್ರಾಮ ಶರಣರು ಬೆಳ್ದಾಳ ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಅರಣ್ಯ,ಜೈವಿಕ ಮತ್ತು ಪರಿಸರ ಇಲಾಖೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್ ಖಾನ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್ ಕುಮಾರ್ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವಿಚಾರ ಸಂಕಿರಣವನ್ನು ಆಯೋಜಿಸಿದೆ ಅಂತರಾಷ್ಟಿಯ ಕೌಶಲ್ಯ ತರಬೇತುದಾರರಾದ ಚೇತನರಾಮ್ ಅವರು ವಿಶೇಷವಾದ ಉಪನ್ಯಾಸವನ್ನು ನೀಡಲಿದ್ದಾರೆ.


ಇದೆ ಸಂದರ್ಭದಲ್ಲಿ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು ಸಾಗರದ ಸಮೀಪದಲ್ಲಿರುವ ಕಾಗೋಡಿನಲ್ಲಿ ಸವಾಜಿ ಬೀರನಾಯ್ಕ್ ಹಾಗೂ ಬೈರಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ನಂತರ ಉನ್ನತ ಶಿಕ್ಷಣವನ್ನು ಸಾಗರ ಹಾಗೂ ಬೆಂಗಳೂರಿನಲ್ಲಿ ಪೂರೈಸಿ ನ್ಯಾಯವಾದಿಗಳಾಗಿ ವೃತ್ತಿಯನ್ನು ಆರಂಭಿಸಿದರು. ವಿದ್ಯಾರ್ಥಿಯ ಜೀವನದಲ್ಲಿಯೇ ಜನಪರ ಕಾಳಜಿಯನ್ನು ಹೊಂದಿದವರಾಗಿದ್ದು ಜನರ ನೋವಿಗೆ ಸ್ಪಂದಿಸುವಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡರು ನಂತರ ಸಮಾಜವಾದಿ ಲೋಹಿಯ ಹಾಗೂ ಗೋಪಾಲಗೌಡರ ಚಿಂತನೆಗಳಿಗೆ ಪ್ರಭಾವಿತರಾಗಿ ರಾಜಕೀಯ ಪ್ರವೇಶವಾಗಿ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೆ ತಮ್ಮದೆಯಾದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ಹಲವು ಭಾರಿ ಶಾಸಕರಾಗಿ, ವಿವಿಧ ಇಲಾಖೆಗಳ ಪ್ರಭಾವಿ ಸಚಿವರಾಗಿ ಹಾಗೂ ವಿಧಾನ ಸಭಾಧ್ಯಕ್ಷರಾಗಿ ರಾಜ್ಯದ ಜನರ ಗಮನವನ್ನು ಸೆಳೆದಿದ್ದಾರೆ.
ಭೂ ಸುಧಾರಣೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಇವರು ಪ್ರತಿಯೊಬ್ಬರು ಭೂಮಿಯ ಹಕ್ಕನ್ನು ಹೊಂದಬೇಕು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿಯಲ್ಲಿ ಭೂಮಿಯನ್ನು ನೀಡುವಲ್ಲಿ ತಮ್ಮ ಜೀವನದುದ್ದಕ್ಕೂ ಹೋರಾಟವನ್ನು ಮಾಡಿದವರಾಗಿದ್ದಾರೆ.
ಕಾಗೋಡು ಚಳುವಳಿಯು ಅತಿ ಮುಖ್ಯವಾಗಿದೆ.
ಈಗಲೂ ತಮ್ಮ 94ವರ್ಷದ ಇಳಿ ವಯಸ್ಸಿನಲ್ಲೂ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವುದು ರಾಜಕೀಯ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ.


ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರುವಾಗಿರುವ ಕಾಗೋಡು ತಿಮ್ಮಪ್ಪನವರ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಕಾಯಕ ರತ್ನ ಪ್ರಶಸ್ತಿಯನ್ನು ನೀಡುತ್ತಿರುವುದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದೆ ಎಂದವರು ತಿಳಿದ್ದಾರೆ.
ಈ ಸಂದರ್ಭದಲ್ಲಿ ವೆಂಕಟೇಶ್ ಜೋಯಿಸ್, ವೆಂಕಟೇಶ್ ಚಂದಳ್ಳಿ, ರಾಜೇಂದ್ರ ಆವಿನಹಳ್ಳಿ, ಜಗನ್ನಾಥ್, ಉಮೇಶ್,ಗಣಪತಿ, ಪ್ರಕಾಶ್ ಕೆ.ಆರ್.ಅವಿನಾಶ್ ಮೊದಲಾದವರು ಹಾಜರಿದ್ದರು

Leave a Reply

Your email address will not be published. Required fields are marked *

Scan the code