ಜೂ.30 ರಂದು ಸೊರಬದಲ್ಲಿ ರಾಜ್ಯ ಗ್ರಾಮೀಣ ಶಿಕ್ಷಕರ ಸಭೆ
(SHIVAMOGA): ಸೊರಬ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಜೂನ್ 30 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸೊರಬ ಪಟ್ಟಣದ ನಿರೀಕ್ಷಣಾ ಮಂದಿರ (ಐ.ಬಿ) ದಲ್ಲಿ ಕರೆಯಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಶರಣಪ್ಪಗೌಡ ಆರ್.ಕೆ ಇವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಏಳನೇ ವೇತನ ಆಯೋಗ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸುವುದು, ಪ್ರಮುಖವಾಗಿ ಗ್ರಾಮೀಣ ಭತ್ಯೆ ಹಕ್ಕೊತ್ತಾಯ, ಈ ವರ್ಷದ ವಲಯ ವರ್ಗಾವಣೆ ಮಾಡುವುದು, ಪದವೀಧರ ಪಿಎಸ್ಟಿಗಳನ್ನು ಜಿಪಿಟಿಗೆ ವಿಲೀನಗೊಳಿಸುವುದು.
ಗ್ರಾಮೀಣ ಸಂಘಕ್ಕೆ ಮಾನ್ಯತೆ ನೀಡುವುದು, ಎನ್. ಪಿ.ಎಸ್ ರದ್ದುಗೊಳಿಸುವುದು, ವೃಂದ ಮತ್ತು ನೇಮಕಾತಿ ಕಾಯ್ದೆಯ ತಿದ್ದುಪಡಿ ಹಾಗೂ ಹೋಬಳಿ ಮಟ್ಟದಲ್ಲಿ ಶಿಕ್ಷಕರ ವಸತಿ ಸಮುಚ್ಚಯಗಳನ್ನು ನಿರ್ಮಿಸುವುದು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ, ಚಿಂತನ-ಮoಥನ ನಡೆಸಲಾಗುವುದು. ಹಾಗೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಂಘದ ಬಲವರ್ಧನೆ ಬಗ್ಗೆ ಚರ್ಚಿಸಲಾಗುವುದು.
ಈ ಸಭೆಗೆ ರಾಜ್ಯದ ಗ್ರಾಮೀಣ ಶಿಕ್ಷಕರ ಎಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಸೊರಬ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ: ಸಂದೀಪ್ ಯು ಎಲ್, ಸೊರಬ