ಮುಳುಗಡೆ ಸಂತ್ರಸ್ತರು, ಬಗರ್ಹುಕಂ ರೈತರು, ಅರಣ್ಯ ವಾಸಿಗಳ ಭೂ ಹಕ್ಕಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಹೋರಾಟ.
(SHIVAMOGA): ಸಾಗರ ಜಿಲ್ಲೆಯ ಮುಳುಗಡೆ ಸಂತ್ರಸ್ತರು, ಬಗರ್ಹುಕಂ ರೈತರು, ಅರಣ್ಯ ವಾಸಿಗಳ ಭೂ ಹಕ್ಕಿನ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವವರೆಗೂ ಈ ಚಳುವಳಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಭೂ ಹಕ್ಕು ಹೋರಾಟಗಾರರು ಆಕ್ರೋಶ ಹೊರಹಾಕಿದರು.
ಡಾ. ಗಣಪತಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹದ 4 ನೇ ದಿನ ಗುರುವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಿಂದ ಲಿಂಗನಮಕ್ಕಿ ಚಲೋ ಪಾದಯಾತ್ರೆ ಆರಂಭಿಸಿ, ತಮ್ಮ ಮುಂದಿನ ನಡೆಯ ಕುರಿತು ಅವರು ಮಾತನಾಡಿದರು. 3 ದಿನಗಳ ಕಾಲ ನಡೆಯುವ ಪಾದಯಾತ್ರೆ ಯಲ್ಲಿ ಮೊದಲ ದಿನ ತಾಳಗುಪ್ಪ ತನಕ ಆಮೇಲೆ ಕಾರ್ಗಲ್ ಮತ್ತು ಲಿಂಗನಮಕ್ಕಿಯ ತನಕ ಪಾದಯಾತ್ರೆ ಹೋಗುವುದು ಎಂದರು.
ರಾಜ್ಯ ಸರಕಾರದ ಅರಣ್ಯ ಮಂತ್ರಿ ನಮ್ಮನ್ನು ದರೋಡೆಕೋರರು ಎನ್ನುವ ರೀತಿ ನೋಡುತ್ತಾ ಇರುವ ಹಾಗಿದೆ. ಈ ಭಾವನೆ ಬದಲಾಗಬೇಕು ಮತ್ತು 64 ವರ್ಷಗಳ ಹಿಂದೆ ರಾಜ್ಯದ ಬೆಳಕಿಗಾಗಿ ತ್ಯಾಗ ಮಾಡಿದ ಇಲ್ಲಿನ ಜನರ ನಿಜವಾದ ಸಂಕಷ್ಟ ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ರಾಜ್ಯ ಸರಕಾರವೂ ಮುಳುಗಡೆ ಸಂತ್ರಸ್ತರ ಪರಿಹಾರ ಕೊಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಬೇಕು.ಇಷ್ಟು ವರ್ಷವಾದರೂ ಸಂತ್ರಸ್ತರಿಗೆ ಭೂಮಿಯ ಹಕ್ಕು ಪತ್ರ ಸಿಗದಿರುವುದು ನಾಚಿಕೆಗೇಡಿನ ವಿಷಯ . ಹಾಗಾಗಿ ನಾವು ಕಳೆದುಕೊಂಡ ಭೂಮಿಯನ್ನು ನಮಗೆ ಕೊಡಿ ಅಂತ ನಮ್ಮ ಹಾಗೂ ಎಲ್ಲರ ಆಗ್ರಹವಾಗಿದೆ ಎಂದು ಹೇಳಿದರು.
ಲಿoಗನಮಕ್ಕಿ ಚಲೋ ಪಾದಯಾತ್ರೆಯಲ್ಲಿ ಗಣಪತಪ್ಪ ಸ್ಥಾಪಿತ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಧರಣಿ ಸತ್ಯಾಗ್ರಹದ ಪ್ರಮುಖರಾದ ದಿನೇಶ್ ಶಿರವಾಳ, ಮುಖಂಡರಾದ ತೀ.ನಾ. ಶ್ರೀನಿವಾಸ, ರೈತ ಸಂಘದ ಸಾಗರ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ, ಮಲ್ಲಿಕಾರ್ಜುನ್ ಹಕ್ರೆ, ಬಿ.ಆರ್. ಜಯಂತ್, ದುಗೂರು ಪರಮೇಶ್ವರ್, ಸೇರಿದಂತೆ ರೈತ ಪ್ರಮುಖರು ಇದ್ದರು.
ವರದಿ: ರಾಘವೇಂದ್ರ ತಾಳಗುಪ್ಪ