ಕೋಲಾರನ್ಯೂಸ್

ಸಮಾಜದಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲು ಹೋರಾಟಗಳು ಮುಖ್ಯ – ಟಿ.ಎ.ನಾರಾಯಣಗೌಡ.

ಸಮಾಜದಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲು ಹೋರಾಟಗಳು ಮುಖ್ಯ – ಟಿ.ಎ.ನಾರಾಯಣಗೌಡ.

(KOLARA): ಕೋಲಾರ: ವಿಧಾನ ಸೌಧದಲ್ಲಿ ಕುಳಿತಿರುವ ಕಳ್ಳರು ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ, ಅವರಿಗೆ ಊರು ಉದ್ಧಾರ ಮಾಡುವ ಕಾಳಜಿಯಿಲ್ಲ. ಸಮಾಜದಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲು ಹೋರಾಟಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕನ್ನಡ ನಾಡು, ನುಡಿ, ಜಲ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲಿ ರಾಜೀಯಾಗುವ ಪ್ರಶ್ನೆಯಿಲ್ಲ, ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದು ರಕ್ಷಣಾ ವೇದಿಕೆ ಎಂದರು.


ನನಗೇನು ಜೈಲು, ಕೇಸು ಹೊಸದಲ್ಲ, ಡಿ.27ರಂದು ಬೆಂಗಳೂರಿನಲ್ಲಿ ನಡೆಸಿದ ಬಹುದೊಡ್ಡ ಇತಿಹಾಸ ಹೋರಾಟ ನಡೆಸಿದ್ದೇವೆ, ಸರ್ಕಾರವು ಹುನ್ನಾರ ನಡೆಸಿ ನನ್ನನ್ನು ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿತು. ಇದರಿಂದ ನಮಗೇನು ನಷ್ಟವಾಗಿಲ್ಲ. ಪೊಲೀಸರು ಭಯದಿಂದ ಶೂನ್ಯ ಟ್ರಾಫಿಕ್‌ನಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ, ಕರೆದುಕೊಂಡು ಬರುತ್ತಿದ್ದರು ಎಂದು ಹೇಳಿದರು.
ಹೋರಾಟದ ಸಲುವಾಗಿ ರಾಜಧಾನಿಯಲ್ಲಿ ಕನ್ನಡ ರಾರಾಜಿಸಲು 25 ವರ್ಷ ಬೇಕಾಯಿತು, ಬಿಬಿಎಂಪಿ ಆಯುಕ್ತರು ಕರೆ ಮಾಡಿ 90 ಭಾಗ ಕನ್ನಡಿಕರಣ ಆಗಿದೆ. ವಾರದಲ್ಲಿ ಶೇ.100 ಸಾಧನೆಯಾಗಲಿದೆ ಎಂದು ತಿಳಿಸಿದರು. ನಮ್ಮ ಹೋರಾಟದ ಪ್ರತಿಫಲ ಹೇಗಿರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ ಎಂದು ತಿಳಿಸಿದರು.
ಅಜ್ಞೆ ಮಾಡುವವರೆಲ್ಲ ಬೇಕಾದರೆ ವಿಧಾನ ಸೌಧದಲ್ಲಿ ಕುಳಿತುಕೊಳ್ಳಲಿ, ಕನ್ನಡ ಅಭಿಮಾನದ ತಂಟೆಗೆ ಬಂದರೆ ಸುಮ್ಮನಿರಲ್ಲ. ಕನ್ನಡ ನಾಮಫಲಕ ಹೋರಾಟ ಕೇವಲ ಬೆಂಗಳೂರಿಗೆ ಸಿಮೀತವಾಗಿರಲ್ಲ, ಮೂವತ್ತು ಜಿಲ್ಲೆಯಲ್ಲೂ ನಡೆಯುತ್ತದೆ. ಕರವೇ ಕಾರ್ಯಕರ್ತರು ನಿಜವಾದ ಹೋರಾಟಗಾರರು, ಸಿನಿಮಾಗಳಲ್ಲಿ ನಟಿಸಿಕೊಂಡು, ಹೊಟ್ಟೆ ಪಾಡಿಗಾಗಿ ಹೋರಾಟ ನಡೆಸುವವರಲ್ಲ ಎಂದರು.


ಪೊಲೀಸರು ಬಂಧಿಸಿದ ಎರಡು ದಿನ ಕಳೆದರು ಊಟ ಕೊಡಲಿಲ್ಲ, ಬೆಲ್ ಮಂಜೂರಾದರು ಸಂಚು ರೂಪಿಸಿ ಪುನ: ಬಂಧಿಸಿದರು. ಚಿಕ್ಕಜಾಲ ಠಾಣೆಯಲ್ಲಿ ಒಂದೇ ದಿನ 9 ಪ್ರಕರಣ ದಾಖಲು ಮಾಡಿದರು. ಬಂಧಿಸಲು ಮುಂದಾದಾಗ ವಕೀಲರು ನಮ್ಮ ಪರವಾಗಿ ನಿಂತರು. ಹೋರಾಟದ ಸಮಯದಲ್ಲಿ ಬಂಧಿಸಿ ಕರವೇ ಹೋರಾಟವನ್ನು ಇಡೀ ದೇಶ, ವಿದೇಶಕ್ಕೆ ಪರಿಚಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂಧಿಸುತ್ತೆನೆ, ಕರವೇಯ ತಾಕತ್ತನ್ನು ತೋರಿಸಿಕೊಟ್ಟಿದ್ದಾರೆ. ಸರ್ಕಾರಕ್ಕೆ ಹೆದರಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಬಲಿಷ್ಟವಾಗಬೇಕು. ಕೇವಲ ಪದಾಧಿಕಾರಿಯಾಗಿ ನೇಮಕ ಪಡೆದು ಕೂರಬೇಡಿ. ಪ್ರತಿಯೊಬ್ಬರಲ್ಲೂ ಹೋರಾಟದ ಕಿಚ್ಚು ಹೊತ್ತಬೇಕು ಎಂದರು.
ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಕೋಲಾರ ಜಿಲ್ಲೆಯು ಆಂಧ್ರ, ತಮಿಳು ನಾಡು ಗಡಿಯಲ್ಲಿದೆ, ಆದರೂ ಸಹ ಕನ್ನಡಕ್ಕೆ ಧಕ್ಕೆ ಉಂಟು ಆಗದಂತೆ ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅನ್ಯ ಭಾಷೆಗಳ ನಾಮಫಲಕ ತೆರವುಗೊಳಿಸಿ, ಕನ್ನಡದಲ್ಲಿ ನಾಮಲಕ ಅಳವಡಿಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತವು ಆದೇಶ ಹೊರಡಿಸಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸೂಚಿಸಿದ್ದಾರೆ. ಇದು ಪರಿಣಾಮಕಾರಿಯನ್ನಾಗಿಸಲಾಗುವುದು ಎಂದರು.

ಕೆಜಿಎಫ್‌ನ ಪ್ರತಿಷ್ಠಿತ ಬೆಮೆಲ್ ಸಂಸ್ಥೆಯಲ್ಲಿ ಕನ್ನಡಿಗರನ್ನು ವಂಚಿಸಿ ಬೇರೆ ರಾಜ್ಯದವರಿಗೆ ಕೆಲಸ ನೀಡಲಾಗುತ್ತಿದೆ. ಹೊರತ್ತಿಗೆ ಆಧಾರದ ಮೇಲೂ ಕನ್ನಡಿಗೆ ಆದ್ಯತೆ ನೀಡುತ್ತಿಲ್ಲ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ಪ್ರಧಾನಕಾರ್ಯದರ್ಶಿ ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್, ಜಿಲ್ಲಾ ಗೌರವಾದ್ಯಕ್ಷ ಮುನಿರಾಜು, ಕೋದಂಡಪ್ಪ, ಮದಿರಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ರಾಮಪ್ರಸಾದ್, ಮಾಲೂರು ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಹುಸೇನ್ ಹಾಜರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾಗಿ ಜನ್ನಘಟ್ಟ ನವೀನ್, ಕೋಲಾರ ತಾಲೂಕು ಗೌರವಾಧ್ಯಕ್ಷರಾಗಿ ಪಿ.ಸುರೇಶ್, ಎಂ.ಮುನಿರಾಜು, ಡಿ.ಆರ್.ಚೌಡೇಗೌಡ, ಮಾಲೂರು ತಾಲೂಕು ಅಧ್ಯಕ್ಷರಾಗಿ ಎನ್.ವಿ.ಶಶಿಕುಮಾರ್, ಉಪಾಧ್ಯಕ್ಷ ಎನ್.ವಿ.ಶಂಕರ್, ಸಂಚಾಲಕರಾಗಿ  ಜಬೀವುಲ್ಲಾ ಬೇಗ್, ವಿ.ಶಿವಕುಮಾರ್, ಜಿಲ್ಲಾ ರೈತ ಘಟಕದ ಅಧ್ಯಕ್ಷರಾಗಿ ವಿ.ಕೆ.ಶಂಕರ್‌ರೆಡ್ಡಿ, ಉಪಾಧ್ಯಕ್ಷರಾಗಿ ಬಿ.ಎಚ್.ಸಂಪತ್ ಕುಮಾರ್,  ಕೋಲಾರ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಡಿ.ವಿ.ಮಂಜುನಾಥ್, ಮಾಲೂರು ನಗರಾಧ್ಯಕ್ಷರಾಗಿ ಸಿ.ಎನ್.ನವೀನ್, ಉಪಾದ್ಯಕ್ಷರಾಗಿ ಮಾದೇಗೌಡ, ಕಾರ್ಯದರ್ಶಿಯಾಗಿ ರಫಿಕ್ ಖಾನ್, ಸಿ.ಪಿ.ಹರೀಶ್, ಕೋಲಾರ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಜಿ.ಕೆ.ವೇಣು, ಕಾರ್ಯದರ್ಶಿಯಾಗಿ ಜೆ.ಎನ್.ಶಿವಾನಂದ್, ಕೋಲಾರ ನಗರ ಘಟಕದ ಅಧ್ಯಕ್ಷರಾಗಿ ಗಣೇಶ್, ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ಡಿ.ಎನ್.ಆಂಜಿ, ಸಂಚಾಲಕರಾಗಿ ಡಿ.ಎಂ.ಶಶಿಕುಮಾರ್, ಸುಗಟೂರು ಹೋಬಳಿ ಅಧ್ಯಕ್ಷರಾಗಿ ಎಸ್.ವಿ.ನಾಗರಾಜ್, ವೇಮಗಲ್ ಹೋಬಳಿ ಅಧ್ಯಕ್ಷ ಬಿ.ವಿ.ಚಲಪತಿ, ರೈತ ಘಟಕದ ಕೋಲಾರ ತಾಲೂಕು ಅಧ್ಯಕ್ಷರಾಗಿ ವಿ.ಸುರೇಶ್, ಮುಳಬಾಗಿಲು ತಾಲೂಕು ಅಧ್ಯಕ್ಷರಾಗಿ ಆರ್.ರಾಮ್‌ಕುಮಾರ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷರಾಗಿ ಎಸ್.ಎನ್.ಅಯ್ಯಪ್ಪ, ಬಂಗಾರಪೇಟೆ ಅಧ್ಯಕ್ಷರಾಗಿ ಎಸ್.ವಿಜಯ್‌ಕುಮಾರ್, ಹುತ್ತೂರು ಹೋಬಳಿ ರೈತ ಘಟಕದ ಅಧ್ಯಕ್ಷರಾಗಿ ಹೆಚ್.ಎಂ.ರಮೇಶ್, ಹೋಳೂರು ಹೋಬಳಿ ಎನ್.ಶಿವಾನಂದ್ ಅವರನ್ನು ಆಯ್ಕೆ ಮಾಡಲಾಯಿತು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code