ವಿದ್ಯಾರ್ಥಿಗಳ ಸಾಧನೆ ಮನೆ ಮಾತಾಗಬೇಕು: ಮಹೇಂದ್ರ
(CHIKKAMAGALURU ): ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡುವ ಸಾಧನೆ ಇತರರಿಗೆ ಮಾದರಿಯಾಗಿ ಎಲ್ಲರ ಮನೆ ಮಾತಾಗಬೇಕು ಎಂದು ವಿಘ್ನೇಶ್ವರ ಕಲಾ ಬಳಗದ ಅಧ್ಯಕ್ಷ ಆರ್.ಡಿ.ಮಹೇಂದ್ರ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ರೇಣುಕನಗರದ ವಿಘ್ನೇಶ್ವರ ಕಲಾ ಬಳಗದ ವತಿಯಿಂದ ಪ್ರೌಢಶಾಲಾ ವಿಭಾಗದ ವಿವಿಧ ಹಂತದ ಕಬಡ್ಡಿ ಪಂದ್ಯಾಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಭೂಷಣ್ ಆಚಾರ್ಯ ಅವರನ್ನು ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಲ್ಲದಿದ್ದರೂ ಸಹ ಕಬಡ್ಡಿ ಕ್ರೀಡೆಯಲ್ಲಿ ನುರಿತ ಆಟಗಾರರನ್ನು ಸೋಲಿಸಿ ವಲಯ, ತಾಲೂಕು, ಜಿಲ್ಲೆ ಹಾಗೂ ವಿಭಾಗ ಮಟ್ಟದಲ್ಲಿ ಸಾಧನೆ ಮಾಡಿರುವುದು ಪ್ರಶಂಸನೀಯವಾಗಿದೆ.
ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಭೂಷಣ್ ವಿಘ್ನೇಶ್ವರ ಕಲಾ ಬಳಗದ ಸದಸ್ಯ ರವೀಂದ್ರ ಆಚಾರ್ಯರ ಮಗ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ವಿದ್ಯಾರ್ಥಿ ಮುಂದಿನ ದಿನಗಳಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ನಿರ್ದೇಶಕ ಬಿ.ಜಗದೀಶ್ಚಂದ್ರ ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಉನ್ನತ ಸ್ಥಾನಕ್ಕೆ ತಲುಪಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ. ವಿದ್ಯಾರ್ಥಿಯ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದರೆ ಅದು ಐತಿಹಾಸಿಕವಾಗಿ ಉಳಿಯಲಿದೆ ಎಂದರು.
ಹಿರಿಯ ಕಲಾವಿದ ಮಹೇಶ್ಚಂದ್ರ ಮಾತನಾಡಿ, ರೇಣುಕನಗರದ ಸ್ಥಳೀಯ ಪ್ರತಿಭೆಯಾಗಿರುವ ಭೂಷಣ್ ಅವರು ಕಬಡ್ಡಿಯಲ್ಲಿ ಅತೀವ ಆಸಕ್ತಿ ಹೊಂದಿದ್ದು, ಚಿಕ್ಕದಿನಿಂದಲೂ ಶ್ರದ್ಧೆಯಿಂದ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ. ಸತತವಾದ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಭೂಷಣ್ ಸಾಕ್ಷಿಯಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿರುವುದು ಹಿರಿಯರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ ಎಂದರು. ಕಲಾವಿದರಾದ ಅರುಣ್ಕುಮಾರ್, ಮಲ್ಲಿಕಾರ್ಜುನ್, ಉಮೇಶ್, ಕಿರಣ್ಕುಮಾರ್, ಸಚಿನ್ ಕುಮಾರ್, ಮಂಜುನಾಥ್ ಆಚಾರ್ಯ, ಭೂಮಿಕಾ, ಚಂದನಾ, ದೀಕ್ಷಿತಾ, ಇಂದುಜಾ, ಇಶಾನ್, ಸಾಮ್ರಾಟ್, ಕಾರ್ತಿಕ್, ಪ್ರತೀಕ್, ಸ್ಫೂರ್ತಿ, ಪ್ರಮುಖರಾದ ಉಮಾ ಮಹೇಂದ್ರ, ಕಲಾವತಿ, ಮಂಜು ಹಲಸೂರು, ಯೋಗೀಶ್ ಆಚಾರ್ಯ, ಕೌಶಲ್ಯ ಕಿರಣ್ ಮತ್ತಿತರರು ಹಾಜರಿದ್ದರು.