ವಿದ್ಯಾರ್ಥಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು:
ಅನ್ನದಾನೇಶ್ವರ ಕಾಲೇಜಿನಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾ..
(ಗಜೇಂದ್ರಗಡ): ನಾವು ವಾಸಿಸುವ ಪರಿಸರದ ಸುತ್ತಮುತ್ತಲಿನ ವಾತಾವರಣದ ಸ್ವಚ್ಚತೆ ಹಾಗೂ ಶುಚಿತ್ವದ ಕೊರತೆಯಿಂದ ಸಾಂಕ್ರಾಮಿಕ ರೋಗಗಳನ್ನು ನಮಗರಿವಿಲ್ಲದೇ ನಾವೇ ಆಹ್ವಾನಿಸುತ್ತಿದ್ದೇವೆ ಆದ್ದರಿಂದ ವಿದ್ಯಾರ್ಥಿಗಳು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಪಿಯು ಪ್ರಾಚಾರ್ಯ ವಸಂತರಾವ್ ಆರ್. ಗಾರಗಿ ಹೇಳಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನ ವತಿಯಿಂದ ಭಾನುವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ಮಾತನಾಡಿದರು. ಇಂದಿನ ಕಲುಷಿತ ವಾತಾವರಣದಲ್ಲಿ ರೋಗ ಬೇಗ ಹರಡುತ್ತದೆ. ರೋಗಕ್ಕೆ ತುತ್ತಾಗುವ ಮೊದಲೇ ಅದನ್ನು ತಡೆಯುವುದಕ್ಕೆ ಪ್ರಯತ್ನಿಸಬೇಕು. ವೆಯಕ್ತಿಕ, ಮಾನಸಿಕ, ಶಾರೀರಕ ಹಾಗೂ ಪರಿಸರ ಸ್ವಚ್ಛತೆಯನ್ನು ತಪ್ಪದೇ ಮಾಡಿದಾಗ ಯಾವ ರೋಗಗಳು ನಿಮ್ಮತ್ತ ಸುಳಿಯುವುದಿಲ್ಲ ಎಂದರು. ವಿದ್ಯಾರ್ಥಿಗಳು ಮೊದಲು ಸ್ಚಚ್ಛತೆಯನ್ನು ನಿರ್ವಹಣೆ ಮಾಡುವುದರ ಬಗ್ಗೆ ಸಕಾರಾತ್ಮಕ ಚಿಂತನೆ ಪಡೆದುಕೊಳ್ಳಬೇಕು. ವಾತಾವರಣ ಹಾಗೂ ಜೀವನ ಸಾಗಿಸುವ ಮನೆ, ಕಾಲೇಜು ಸ್ವಚ್ಚವಾಗಿದ್ದರೆ ಮಾತ್ರ ಓದಲು ಆಸಕ್ತಿ ಹುಟ್ಟುತ್ತದೆ ಎಂದರು.
ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಮಹಾತ್ಮ ಗಾಂಧೀಜಿ ಕನಸಿನ ಸ್ವತ್ಛ ಭಾರತದ ಕನಸು ನನಸಾಗುತ್ತದೆ. ನಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳು, ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಾದ ಶಾಲೆ, ಆಸ್ಪತ್ರೆ, ಅಂಗನವಾಡಿ, ಸಮುದಾಯ ಭವನ ಸ್ವತ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡುವ ಕುರಿತು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳಾಗಿ ರಚನೆ ಮಾಡಿ ಕಾಲೇಜಿನ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸಲಾಯಿತು.
ಈ ವೇಳೆ ಗೋಪಾಲ ಟಿ. ರಾಯಬಾಗಿ, ಸಂಗಮೇಶ ಪಿ. ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ಐ. ನಾಲತವಾಡ, ವಿಜಯಲಕ್ಷ್ಮೀ ಅರಳಿಕಟ್ಟಿ, ರವಿ ಹಲಗಿ, ಪ್ರೀತಿ ಹೊಂಬಳ, ಎ. ಡಿ. ಜಾತಗೇರ, ಎಂ. ಎನ್. ಕೊಳ್ಳಿ, ಬಸವರಾಜ ಎಸ್. ಸಂಕದಾಳ, ಪ್ರಶಾಂತ ಗಾಳಪೂಜಿಮಠ, ಪ್ರಮೋದ ಅಬ್ಬಿಗೇರಿ, ಮನೋಜ ವೈ. ಕಲಾಲ, ಶಿವಾನಂದ ಹಳ್ಳದ, ದೇವರಾಜ ಶೆಟ್ಟರ ಇದ್ದರು.