‘ಸ್ವಲ್ಪ ಸಮಾಧಾನ ಮಾಡಿಕೊಳ್ಳಿ, ಹಾಜರಿ ಹಾಕಿದ ನಂತರ ತಿನ್ನುವ ಕಾರ್ಯಕ್ರಮ ಶುರು ಮಾಡಿಕೊಳ್ಳೋಣ’
ಅದು 9ನೇ ತರಗತಿ ತೃತೀಯ ಭಾಷೆ ಕನ್ನಡದ ತರಗತಿ ಅದರಲ್ಲಿ ಎನ್.ಎಸ್.ತಾರಾನಾಥ್ ಅವರು ಬರೆದಿರುವ ‘ನಾಲಗೆ’ ಅನ್ನುವ ಗದ್ಯಭಾಗ. ಪಾಠ ಆರಂಭಿಸುವ ಮುನ್ನವೇ ನಾಲಗೆಯಿಂದ ಏನೇನು ಕೆಲಸಗಳು ಆಗುತ್ತವೆ? ಎಂಬುದನ್ನು ಕುರಿತು ಒಂದು ಪುಟದಷ್ಟು ಮಾಹಿತಿಯನ್ನು ತಪ್ಪದೇ ಬರೆದುಕೊಂಡು ಬನ್ನಿ ಎಂದಿದ್ದೆ.
ಮರುದಿನಕ್ಕೆ ಬಹುತೇಕ ವಿದ್ಯಾರ್ಥಿಗಳು ಬರೆದುಕೊಂಡು ಬಂದಿದ್ದರು. ಒಂದಿಬ್ಬರಾದರೂ ಕೊಟ್ಟ ಕೆಲಸವನ್ನು ಮಾಡಿದಿದ್ದರೆ ಅವರಿಗೆ ಸಮಾಧಾನ ಇಲ್ಲ ಎನ್ನುವಂತೆ ಒಂದಿಬ್ಬರು ಬರೆದಿರಲಿಲ್ಲ. ಅವರಿಗೆ ಹೆಚ್ಚುವರಿಯಾಗಿ ಇನ್ನೊಂದಿಷ್ಟು ವಿಷಯವನ್ನು ಸೇರಿಸಿ ಬರೆದುಕೊಂಡು ಬರಲು ತಿಳಿಸಿದೆ. ಎಲ್ಲಾ ರೀತಿಯ ಪಂಚೇಂದ್ರಿಗಳ ಬಗ್ಗೆ ಪರಿಚಯವನ್ನು ಮಾಡಿಕೊಟ್ಟು, ಮಕ್ಕಳು ಬರೆದು ತಂದಿದ್ದ ‘ಹೋಮ್ವರ್ಕ್’ ಗಮನಿಸುವಾಗ ಬಹುತೇಕ ಮಕ್ಕಳು ಮಾತನಾಡಲು ನಾಲಗೆ ಹೇಗೆಲ್ಲಾ ಸಹಾಯಕ್ಕೆ ಬರುತ್ತದೆ ಎಂದು ಬರೆದಿದ್ದರು. ಇನ್ನುಳಿದವರು ತಿನ್ನಲು ಸಹಾಯ ಮಾಡುವ ಬಗ್ಗೆ ಬರೆದಿದ್ದರು.
ಪಾಠ ಆರಂಭಿಸಿ ನಾಲಗೆ ಸಿಹಿ-ಕಹಿ, ಉಪ್ಪು-ಹುಳಿ, ಖಾರ-ಸಪ್ಪೆ ಹೀಗೆ ಹಲವು ರುಚಿಗಳನ್ನು ಹೇಳ ತೊಡಗಿದೆ. ಇದರ ಮಧ್ಯೆ ‘ಸಪ್ಪೆ’ ಎಂದರೆ ಅದು ಯಾವ ತರದ ರುಚಿ ಎಂಬ ಪ್ರಶ್ನೆ ವಿದ್ಯಾರ್ಥಿಗಳ ಮಧ್ಯದಿಂದ ತೂರಿಬಂತು. ‘ಸಪ್ಪೆ ಅಂದರೆ ಸಪ್ಪೆನೇ ಇರತ್ತೆ ಅದನ್ನು ಹೇಗ ಹೇಳೋದು?’ ಎಂದೆನಿಸಿತು. ಒಂದು ಕೆಲಸ ಮಾಡಬಹುದಾ? ಎಂದಾಗ ‘ಹೇಳಿ ಸರ್ ಮಾಡಿಬಿಡೋಣ’ ಎನ್ನುವಂತೆ ಮಕ್ಕಳು ತಲೆಯಾಡಿಸಿದರು. ಸರಿ ಹಾಗಾದರೆ ಎಲ್ಲಾ ತರದ ರುಚಿಗಳನ್ನು ಶಾಲೆಯಲ್ಲಿಯೇ ಸವಿಯೋಣವೇ? ಎಂದಾಗ ಶ್ರೀಕಾಂತ, ‘ಏನು ಸರ್ ಎಲ್ಲಾರಿಗೂ ಊಟ ಹಾಕಿಸ್ತಿರಾ?’ ಎಂದನು. ‘ನಿಮ್ಮಗಳಿಗೆ ಊಟ ಹಾಕಿಸೋದು? ಅದೊಂದು ಬಾಕಿ ಇತ್ತು ನೋಡಪ್ಪ’ ಎಂದು ವಿಷಯ ಏನು ಅಂದರೆ ಪುಸ್ತಕದಲ್ಲಿರುವ ಹಲವಾರು ರೀತಿಯ ಆಹಾರ ಪದಾರ್ಥಗಳನ್ನು ಪ್ರತೀ ಬೆಂಚ್ನವರು ತಗೊಂಡು ಬರೋದು, ಎಲ್ಲಾರಿಗೂ ಸ್ವಲ್ಪಸ್ವಲ್ಪ ಕೊಡೋದು, ರುಚಿನೂ ಗೊತ್ತಾಗತ್ತೆ, ಹೊಟ್ಟೆನೂ ಸ್ವಲ್ಪ ತುಂಬತ್ತೆ ಎಂದದ್ದೇ ತಡ ಎಲ್ಲಾ ಮಕ್ಕಳು ಒಕ್ಕೋರಲಿನಿಂದ ಒಪ್ಪಿದರು. ಯಾವ ಬೆಂಚ್ನವರು ಯಾವ ರೀತಿಯ ಪದಾರ್ಥವನ್ನು ತರಬೇಕು ಎಂಬ ಸೂಚನೆಗಳನ್ನು ನೀಡಿ, ದಿನಾಂಕವನ್ನು ನಿಗಧಿಪಡಿಸಿದೆವು
ಅಂದು ಮಧ್ಯಾಹ್ನ ಊಟವಾದ ನಂತರದ ಮೊದಲ ತರಗತಿ. ಇನ್ನೂ ತರಗತಿಗೆ ಕಾಲಿಡುತ್ತಿದ್ದಂತೆ ‘ಸರ್ ತಿನ್ನೋಕೆ ತಂದಿದೀವಿ’ ಎಂದು ಕೂಗಿದರು. ತರಗತಿಯ ಬಾಗಿಲು ಹಾಕಿ, ‘ಸ್ವಲ್ಪ ಸಮಾಧಾನ ಮಾಡಿಕೊಳ್ಳಿ, ಹಾಜರಿ ಹಾಕಿದ ನಂತರ ತಿನ್ನುವ ಕಾರ್ಯಕ್ರಮ ಶುರು ಮಾಡಿಕೊಳ್ಳೋಣ’ ಎಂದು ಹಾಜರಿ ಮುಗಿಸುವುದನ್ನೇ ಕಾಯುತ್ತಿದ್ದರು. ನಂತರ ತಂದಿರುವ ಊಟದ ಡಬ್ಬಿಯನ್ನು ತೆಗೆದಿಕೊಳ್ಳಿರಿ ಎಂದಾಗ ಯಾವುದೋ ಸ್ಪರ್ಧೆಗೆ ಸಿದ್ಧರಾದಂತೆ ತೆಗೆದುಕೊಂಡು ಬಂದಿದ್ದರು. ‘ಬೆಂಚ್’ ನಿಂದ ಒಂದು ಪದಾರ್ಥ ತೆಗೆದುಕೊಂಡು ಬನ್ನಿ ಎಂದಿದ್ದರೆ ಇಲ್ಲಿ ಪ್ರತಿಯೊಬ್ಬರೂ ಒಂದೊಂದು ರೀತಿಯ ಅಹಾರ ಪದಾರ್ಥವನ್ನು ತಂದಿದ್ದರು. ಕೆಲವರು ಮನೆಯಲ್ಲಿ ಅಮ್ಮನಿಗೆ ದುಂಬಾಲು ಬಿದ್ದು ಮಾಡಿಸಿಕೊಂಡು ಬಂದಿದ್ದರು, ಕೆಲವರು ತಾವೇ ತಯಾರಿಸಿಕೊಂಡು ತಂದಿದ್ದರು, ಕೆಲವರು ಬೇಕರಿ, ಅಂಗಡಿಯಿಂದ ತಂದಿದ್ದರು. ಯಾರಾದರೂ ಏನನ್ನೂ ತರದೇ ಇರುವವರು ಇದ್ದೀರಾ? ಎಂದಾಗ ಗುರುಪ್ರಸಾದ್ ಎದ್ದು ನಿಂತನು. ‘ನಿನಗೆ ಮಾತ್ರ ಏನನ್ನೂ ಕೊಡುವುದಿಲ್ಲ. ಸುಮ್ಮನೆ ಎಲ್ಲರೂ ತಿನ್ನುವುದನ್ನು ನೋಡುತ್ತಾ ಇರು’ ಎಂದಾಗ ‘ಸಾರ್…’ ಎಂದು ರಾಗದಲ್ಲಿ ತನಗೂ ತಿನ್ನಲು ಅವಕಾಶ ಕೊಡಿ ಎಂದು ಕೇಳತೊಡಗಿದನು. ಅದಾಗಲೇ ಯುದ್ಧಕ್ಕೆ ಸಿದ್ದರಾಗಿರುವವರು ಆಯುಧವನ್ನು ಹಿಡಿದುಕೊಂಡಂತೆ‘ಚಮಚ’ವನ್ನು ಹಿಡಿದುಕೊಂಡು ತಿನ್ನಲು ಸಿದ್ದರಾಗಿದ್ದರು.
‘ಸಿಹಿ’ಯ ಪದಾರ್ಥವನ್ನು ಕೊನೆಯಲ್ಲಿ ತಿನ್ನೋಣ ಎಂದು ಅದನ್ನು ಹಾಗೇ ಇಟ್ಟುಕೊಂಡಿದ್ದೆವು. ಮೊದಲನೆಯದಾಗಿ ಒಂದಿಷ್ಟು ಪದಾರ್ಥಗಳನ್ನು ಕೊಡತೊಡಗಿದರು. ತೆಗೆದುಕೊಂಡವರು ರುಚಿಯನ್ನು ಹೇಳುತ್ತ ತಿನ್ನತೊಡಗಿದರು. ಚಿನ್ಮಯ್ ಉಪ್ಪನ್ನೇ ಹಾಕದ ‘ಕೋಸಂಬರಿ’ ತಂದಿದ್ದ ಅದೊಂತರ ಹೊಸ ರುಚಿ ಎಲ್ಲರಿಗೂ ನೀಡಿದ ಮೇಲೆ ಪುಟ್ಟಡಬ್ಬಿಯಲ್ಲಿ ತಂದಿದ್ದ ಉಪ್ಪನ್ನು ಹಾಕಿಕೊಂಡು ಕೊನೆಯಲ್ಲಿ ತಿನ್ನಲು ಶುರುಮಾಡಿದ. ಭುವನ್ ‘ಖಾರ’ ಹೆಚ್ಚಿದ್ದ ಪಾಸ್ತವನ್ನು ತಂದು ಎಲ್ಲರಿಗೂ ನೀರು ಕುಡಿಸಿದನು. ಗುರುಪ್ರಸಾದ್ ‘ಸಾರ್ ನನಗೆ ಸ್ವಲ್ಪ ಕೊಡಿಸಿ ಸಾರ್…’ ಎಂದು ಗೋಗರೆಯುತ್ತಿದ್ದನು. ಸರಿ ಅವನಿಗೂ ಕೊಡಿ ಎಂದದ್ದೇ ತಡ ಚಮಚವನ್ನು ಸೌಟಿನ ರೀತಿ ಬಳಸಿಕೊಳ್ಳತೊಡಗಿದನು. ಇದರ ಮಧ್ಯೆ ‘ಹುಳಿ’ ಪದಾರ್ಥಕ್ಕೆ ಭುವನ್ಪಟೇಲ್ ಖರ್ಚಿಲ್ಲದೇ ಬರೀ ‘ಹುಣಸೇಹಣ್ಣ’ನ್ನು ಮಾತ್ರ ತಂದಿದ್ದನು. ಅದು ಕೂಡ ಅರ್ಧ ಮಕ್ಕಳಿಗೂ ಸಿಗಲಿಲ್ಲ. ರಜತ್ಆಚಾರ್ಯ ತಂದಿದ್ದ ‘ಕುಟ್ಟುಂಡಿ’ ತುಂಬಾ ರುಚಿಯಾಗಿತ್ತಂತೆ ಅದು ಕೂಡ ಕೆಲವು ಮಕ್ಕಳಿಗೆ ಸಿಗಲಿಲ್ಲ, ಬಹಳ ಬೇಗ ಖಾಲಿಯಾಯಿತು. ಇದರ ಮಧ್ಯೆ ಮೋಹಿತ್ ತಂದಿದ್ದ ‘ಹಾಗಲಕಾಯಿ ಜ್ಯೂಸ್’ ಕಹಿ ಇದ್ದ ಕಾರಣ ನನಗೆಬೇಡ ನನಗೆಬೇಡ ಎನ್ನತೊಡಗಿದರು. ‘ಎಲ್ಲಾ ರೀತಿಯ ಆಹಾರ ಪದಾರ್ಥ ಬೇಕು ಎಂದರೆ ಮೊದಲು ಹಾಗಲಕಾಯಿ ಜ್ಯೂಸ್ ಕುಡಿಲೇಬೇಕು’ ಎಂದ ನಂತರ ಅನಿವಾರ್ಯವಾಗಿ ಎಲ್ಲರೂ ಅರ್ಧ ಚಮಚದಷ್ಟು ತೆಗೆದುಕೊಂಡರು. ಉಳಿದದ್ದನ್ನು ನನಗೆ ನೀಡಿದರು. ಅಭ್ಯಾಸ ಇದ್ದಿದ್ದರಿಂದ ಹಾಗಲಕಾಯಿಜ್ಯೂಸ್ ಆರಾಮಾಗಿ ಕುಡಿದೆ.
ಸಾನ್ವಿರಾಮ್ ಎಲ್ಲರಿಗೂ ಕಡ್ಲೆಬೇಳೆ ವಡೆಯನ್ನು ತಾನೇ ಮಾಡಿಕೊಂಡು ತಂದಿದ್ದಳು. ತರಗತಿಯ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚು ತಂದಿದ್ದಳು. ಬಸವೇಶ್ ಮಾತ್ರ ಹುಳಿಯಿದ್ದದ್ದಕ್ಕೆ ಸ್ವಲ್ಪ ಜೇನನ್ನು ಬೆರೆಸಿ ತಂದಿದ್ದ ಅದು ಏನು ಅಂತ ಗೊತ್ತಾಗಲಿಲ್ಲ ಆದರೆ ವಿಶೇಷವಾಗಿತ್ತು. ‘ಚೆನ್ನಾಗಿದೆ’ ಅಂದವರಿಗೆಲ್ಲ ಮತೊಂದು ಚಮಚ ಹೆಚ್ಚಿಗೆ ನೀಡಿದ್ದ. ಉಪ್ಪು, ಹುಳಿ, ಖಾರ, ಸಪ್ಪೆ, ಕಹಿ, ಸಪ್ಪೆ ಎಲ್ಲಾ ರೀತಿಯ ಪದಾರ್ಥಗಳ ರುಚಿ ನೋಡಿಯಾದ ನಂತರ ಎಲ್ಲರೂ ‘ಸಿಹಿ’ಯ ಪದಾರ್ಥಕ್ಕೆ ಕಾಯತೊಡಗಿದರು. ಮಾನ್ಯತಾ ಎಲ್ಲರಿಗೂ ಬೇಕರಿಯಿಂದ ‘ಜಿಲೇಬಿ’ ತೆಗೆದುಕೊಂಡು ಬಂದಿದ್ದಳು. ‘ಇಷ್ಟೊಂದು ಖರ್ಚು ಮಾಡಿ ತಗೊಂಡು ಬರೋ ಅವಶ್ಯಕತೆ ಇತ್ತಾ?’ ಎಂದದ್ದಕ್ಕೆ ‘ಹಾಗಲ್ಲ ಸರ್ ಜನುಮದಿನ ಹತ್ತಿರದಲ್ಲೇ ಇತ್ತು ಹಾಗಾಗಿ’ ಎಂದು ಸಮಜಾಯಿಷಿ ನೀಡಿದಳು. ನಮನ ‘ರವೆಉಂಡೆ’ಗಳನ್ನು ತಂದಿದ್ದಳು. ಅಂತೂಇಂತೂ ಎಲ್ಲಾ ರೀತಿಯ ರುಚಿಗಳನ್ನು ಎಲ್ಲರೂ ನೋಡಿದ್ದಾಯಿತು. ‘ಚಮಚ’ ತೊಳೆದುಕೊಂಡು ಬರಬೇಕಿತ್ತು ಎಂದು ಎಲ್ಲಾ ಮಕ್ಕಳು ಹೇಳಿದರು. ಎಲ್ಲರೂ ಒಟ್ಟಿಗೆ ಹೊರಗೆ ಹೋದರೆ ಕಷ್ಟ. ಹಾಗಾಗಿ ಮೊದಲು ಹುಡುಗಿಯರು ಹೋಗಿ ಬರಲಿ ನಂತರ ಹುಡುಗರು ಎಂದೆವು. ಎಲ್ಲರೂ ಚಮಚ ಹಿಡ್ಕೊಂಡು ಹೊರಗೆ ಹೋದರೆ ಯುದ್ಧ ಗೆದ್ದಿದಿವಿ ಅನ್ನೋ ರೇಂಜ್ ಅಲ್ಲಿ ಹೋಗಿ ಬರ್ತಾ ಇದ್ದರು. ಗುರುಪ್ರಸಾದ್ ಮಾತ್ರ ತಾನೂ ಏನನ್ನೂ ತರದೇ ಇದ್ದರೂ ಎಲ್ಲವನ್ನು ಎಲ್ಲರಿಗಿಂತಲೂ ಹೆಚ್ಚೇ ಸೇವಿಸಿದ್ದನು. ಇನ್ನೊಂದಿಷ್ಟು ರವೆಉಂಡೆಗಳಿದ್ದವು. ಹಾಗಲಕಾಯಿ ಜ್ಯೂಸ್ ಕುಡಿದವರಿಗೆ ಮಾತ್ರ ಎಂದಾಗ ಗುರುಪ್ರಸಾದ್ ಜ್ಯೂಸ್ ಕುಡಿದು ಉಂಡೆಗಳನ್ನು ಹೆಚ್ಚೇ ಪಡೆದುಕೊಂಡನು. ಅಂತೂ ತರಗತಿ ಮುಗಿಯುವ ಸಮಯಕ್ಕೆ ಎಲ್ಲರೂ ಪಾಠದಲ್ಲಿ ಹೇಳಿದ್ದ ರುಚಿಗಳನ್ನು ಸ್ವತಃ ತಿಂದು ಅರ್ಥೈಸಿಕೊಂಡಿದ್ದರು. ಕೋಸಂಬರಿ, ಪಲಾವ್, ಬಿಸಿಬೇಳೆಬಾಲ್, ರಸಾಯನ, ಪಾಯಸ, ವಡೆ, ಉಂಡೆ, ಹಾಗಲಕಾಯಿ ಜ್ಯೂಸ್, ಕುಟ್ಟುಂಡಿ… ಹೀಗೆ ಹಲವಾರು ರೀತಿಯ ಆಹಾರ ಪದಾರ್ಥಗಳನ್ನು ಒಂದೇ ತರಗತಿಯಲ್ಲಿ ಎಲ್ಲರೂ ಸೇವಿಸಿದ್ದಾಯಿತು. ವಿಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಪ್ರಯೋಗಾಲಯದಲ್ಲಿ ಪ್ರಯೋಗ ಮಾಡಿದಂತೆ ನಾವುಗಳು ನಮ್ಮ ಮೇಲೆಯೇ ಪ್ರಯೋಗಮಾಡಿ ‘ನಾಲಗೆ’ ಪಾಠವನ್ನು ಚೆನ್ನಾಗಿ ತಿಳಿದುಕೊಂಡೆವು ಎಂದರು. ತರಗತಿ ಮುಗಿಯುವುದರೊಳಗೆ ತಮ್ಮ ಜಾಗದಲ್ಲಿ ಏನಾದರೂ ಚೆಲ್ಲಿದೆಯೇ ಎಂದು ನೋಡಿಕೊಂಡು ಎಲ್ಲವನ್ನೂ ಶುದ್ಧ ಮಾಡಿಕೊಂಡರು. ಅಷ್ಟರಲ್ಲಿ ‘ಬೆಲ್’ ಆಯಿತು. ಮುಂದಿನ ತರಗತಿಗೆ ತೆರಳಿದ್ದಾಯಿತು.
ಮರುದಿನ ಗುರುಪ್ರಸಾದ್ ಶಾಲೆಗೆ ಬಂದಿರಲಿಲ್ಲ. ಯಾಕೆ ಬಂದಿಲ್ಲ ಅವನು? ಎಂದಾಗ ಕಲಶ್, ‘ಸರ್ ನೆನ್ನೆ ಸಿಕ್ಕಿದ್ದೇ ಛಾನ್ಸ್ ಅಂತ ಎಲ್ಲಾ ತಿಂದಿದಾನೆ, ಎಲ್ಲರಿಗಿಂತ ಜಾಸ್ತಿನೇ ತಿಂದಿದಾನೆ. ಹಾಗಾಗಿ ಹೊಟ್ಟೆ ಗುಡುಗುಡು ಅಂದಿರಬೇಕು ಅದಕ್ಕೆ ಇವತ್ತು ಅವನು ಬಂದಿಲ್ಲ’ ಎಂದ ಎಲ್ಲರೂ ನಕ್ಕರು. ಪಾಠವನ್ನು ಮುಂದುವರೆಸಿ ಬಹುಬೇಗ ಅರ್ಥಮಾಡಿಕೊಂಡದ್ದಾಯಿತು. ಇದರ ಮಧ್ಯೆ ಕೃತಿ ‘ಇದೇ ತರ ಪಾಠಗಳು ಇದ್ದಿದ್ದರೆ ಎಷ್ಟು ಚೆನ್ನಾಗಿ ಇರತ್ತೆ ಅಲ್ವಾ?’ ಎಂದಳು. ನಾನು ‘ಹೀಗೆ ಎಲ್ಲಾ ಪದಾರ್ಥ ತಗೊಂಡು ಬನ್ನಿ ಅಂದರೆ ನಿಮ್ಮ ಪೋಷಕರು ನನ್ನನ್ನ ಸುಮ್ಮನೆ ಬಿಡಲ್ಲ, ಇಷ್ಟೇ ಸಾಕಾಗಿದೆ, ನನ್ನ ಪುಣ್ಯ ಹೊರದೇಶದ ಬಗ್ಗೆ ಪಾಠ ಇಲ್ಲ. ಇದ್ದಿದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ ಎಂದಿದ್ದರೆ ಕಷ್ಟ ಆಗಿರೋದು’ ಎನ್ನುತ್ತಿದ್ದಂತೆ ಎಲ್ಲರೂ ಜೋರಾಗಿ ನಕ್ಕರು.
ಪಾಠದ ವಿಷಯವನ್ನು ಹೊಸ ರೀತಿಯಲ್ಲಿ ಸುಲಭವಾಗಿ, ರುಚಿಯನ್ನು ಸವಿಯುವುದರ ಮೂಲಕ ಅರ್ಥಮಾಡಿಕೊಳ್ಳಲು ಅನುಕೂಲವಾಯಿತು. ಮಕ್ಕಳಂತೂ ಲವಲವಿಕೆಯಿಂದ ತರಗತಿಯಲ್ಲಿದ್ದರು. ಹೊಸ ರುಚಿಯನ್ನು ತಿಳಿದುಕೊಳ್ಳಲು, ಹೊಸ ಪಾಠ, ಹೊಸ ತರದಲ್ಲಿ ನೆರವಾಯಿತು. ಎಂದಾದರೂ ಯಾವುದಾದರೂ ಪಾಠವನ್ನು ಈ ಮಕ್ಕಳು ಮರೆಯಬಹುದೇನೋ ಆದರೆ ಈ ಪಾಠವನ್ನು, ಇದನ್ನು ಅರ್ಥೈಸಿಕೊಳ್ಳಲು ತರಗತಿಯಲ್ಲಿ ತಿಂದ ಸಂಗತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನಿಸುತ್ತದೆ…
ಚೇತನ್ ಸಿ ರಾಯನಹಳ್ಳಿ, ಶಿವಮೊಗ್ಗ
ಚಿತ್ರ ರಚನೆ : ಚೈತ್ರ.ಕೆ.ಎಸ್ 9ನೇ ತರಗತಿ, ಸಾಂದೀಪನಿ ಆಂಗ್ಲ ಶಾಲೆ, ಶಿವಮೊಗ್ಗ