Entertainmentಮನರಂಜನೆ

‘ಒಂದು ಒಳ್ಳೆಯ ಕಥೆ ಹೇಳಿ ಸಣ್ಣಮಟ್ಟಿಗೆ ಇಲ್ಲಿ ಫೇಮಸ್ ಆಗಿದೀನಿ ಸರ್’

‘ಒಂದು ಒಳ್ಳೆಯ ಕಥೆ ಹೇಳಿ ಸಣ್ಣಮಟ್ಟಿಗೆ ಇಲ್ಲಿ ಫೇಮಸ್ ಆಗಿದೀನಿ ಸರ್’

(ARTICAL):ತರಲೆ, ಹುಡುಗಾಟದ ವಿದ್ಯಾರ್ಥಿಗಳು ಇಲ್ಲದ ತರಗತಿಗಳು, ಶಾಲೆಗಳು ಇಲ್ಲವೇ ಇಲ್ಲ ಎಂದೆನಿಸುತ್ತದೆ. ಒಮ್ಮೊಮ್ಮೆ ಅಂತಹ ವಿದ್ಯಾರ್ಥಿಗಳನ್ನು ಸಹಿಸಲಸಾಧ್ಯ ಎನಿಸುವುದು ಉಂಟು. ಪದೇಪದೇ ಶಿಕ್ಷಿಸಿರುವುದು ಉಂಟು. ಒಂದೊಮ್ಮೆ ಅಂತಹ ಮಕ್ಕಳು ಸುಮ್ಮನಿದ್ಧರು ಆ ತರಗತಿಯಲ್ಲಿ ಯಾರಾದರೂ ಏನಾದರೂ ಕಿತಾಪತಿ ಮಾಡಿದಲ್ಲಿ ಇಂತಹ ವಿದ್ಯಾರ್ಥಿಗಳು ಅದರ ಭಾಗವೇ ಆಗಿರುತ್ತಾರೆ ಎನಿಸಿ ಒಂದೆರಡು ಬಾರಿ ಪೆಟ್ಟು ಕೂಡ ತಿಂದಿರುತ್ತಾರೆ. ಅಂತವರಿಗೆ ಪದೇಪದೇ ಹೇಳುವ ಬುದ್ಧಿಮಾತುಗಳು ಆ ಕ್ಷಣಕ್ಕೆ ತಲೆಗೆ ಹೋಗದೇ ಹೋದರೂ ಒಂದಲ್ಲಾ ಒಂದು ದಿನ ‘ನೀವು ಅವತ್ತು ಹೇಳಿದ್ದ ಮಾತು ಇವತ್ತು ಅರ್ಥ ಆಯ್ತು. ಉಪಯೋಗಕ್ಕೆ ಬಂತು’ ಎನ್ನುವ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಆ ರೀತಿಯ ಒಂದು ಪ್ರಸಂಗವನ್ನು ನಿಮ್ಮ ಮುಂದಿಡುತ್ತಿದ್ದೇನೆ.
 
                 ಮೇಲೆ ಹೇಳಿದಂತ ಒಂದಿಷ್ಟು ತರಲೆಯ ಗುಣ ಹೊಂದಿದ್ದ ಧವನ್ ಎನ್ನುವ ವಿದ್ಯಾರ್ಥಿ ಯಾವಾಗಲೂ ಮಾತುಮಾತುಮಾತು… ಎಂದೇ ಇರುತ್ತಿದ್ದನು. ಇವನ ಜೊತೆಗಿದ್ದ ಕಿರಣ ಬೇರೆ ಇದರ ಭಾಗವೂ ಆಗಿದ್ದ. ಕಿರಣ ಕಿತಾಪತಿಗಳನ್ನು ಮಾಡಿದರು. ಅಕ್ಕಪಕ್ಕದವರಿಗೂ ಗೊತ್ತಾಗುತ್ತಲೇ ಇರಲಿಲ್ಲ. ಒಂದು ರೀತಿಯಲ್ಲಿ ‘ಸೈಲೆಂಟ್ ಕಿಲ್ಲರ್’ ಇದ್ದ ಹಾಗಿದ್ದ. ಧವನ್ ಸ್ವಲ್ಪ ಜೋರು ಧ್ವನಿ ಹಾಗಾಗಿ ಬಹಳಷ್ಟು ಬಾರಿ ಆತನೇ ಸಿಕ್ಕಿಹಾಕಿಕೊಳ್ಳುತ್ತಿದ್ದ. ಆಗ ಕಿರಣನ ಕಡೆಗೊಮ್ಮೆ ಈತ ನೋಡುತ್ತಿದ್ದ ಅವನೂ ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಅಮಾಯಕನಂತೆ ಕೂತಿರುತ್ತಿದ್ದ. ಅದು ತಾನು ಮಾಡಿದ್ದಲ್ಲ ಎಂದು ಅದೆಷ್ಟೇ ಸಮಜಾಯಿಷಿಗಳನ್ನು ನೀಡಿದರು. ತಪ್ಪೆಲ್ಲ ಇವನದೇ ಎನ್ನುವಂತೆ ಇರುತ್ತಿತ್ತು. ಅದೆಷ್ಟೋ ಬಾರಿ ಪೆಟ್ಟು ತಿಂದಿದ್ದಾನೆ, ತರಗತಿಯಿಂದ ಆಚೆ ನಿಂತಿದ್ದಾನೆ, ಎದುರುತ್ತರ ಕೊಟ್ಟು ಹೆಚ್ಚೆಚ್ಚು ಕಾಪಿರೈಟಿಂಗ್, ಹೋಂವರ್ಕ್ ಪಡೆದಿದ್ದಾನೆ, ಲೆಕ್ಕವಿಲ್ಲದಷ್ಟು ಬಸ್ಕಿ ಹೊಡೆದಿದ್ದಾನೆ. ಆದರೂ ಆಗಾಗ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾನೆ. ಧವನ್ ನ ಅಕ್ಕ ಶ್ರೀಲಕ್ಷ್ಮಿ ಕೂಡ ನಮ್ಮ ಶಾಲೆಯಲ್ಲಿಯೇ ಓದಿದ್ದರಿಂದ ಒಮ್ಮೆ ಶಾಲೆಗೆ ಬಂದಾಗ ‘ನೀವು ಎಷ್ಟು ಬೇಕಾದರೂ ಪೆಟ್ಟುಕೊಡಿ ಸರ್. ನಾವು ಯಾರೂ ಏನೂ ಹೇಳಲ್ಲ’ ಎಂದು ಅವನ ಎದುರಿಗೇ ಹೇಳಿದ್ದಳು. ಅದನ್ನು ಹೇಳುವಾಗ ‘ನಮ್ಮಅಕ್ಕ ಇರೋದನ್ನು, ಇಲ್ಲದೇ ಇರೋದನ್ನೆಲ್ಲ ಹೇಳಿ ಸಿಕ್ಕಿಹಾಕಿಸುತ್ತಿದ್ದಾಳೆ’ ಎಂದು ಇವನು ಅವಳನ್ನು ಗುರಾಯಿಸಲು ಶುರು ಮಾಡಿದ್ದ. ಜೊತೆಗೆ ‘ಮನೆಯಲ್ಲಿ ಇವನು ಏನಾದರೂ ಕಿರಿಕಿರಿ ಮಾಡಿದರೆ ನಿಮಗೆ ಫೋನ್ ಮಾಡ್ತಿನಿ ಸರ್’ ಎಂದಾಗಂತೂ ಎಲ್ಲ ಕಡೆಗಳಿಂದಲೂ ಬಂಧಿಯಾದಂತೆ ಇವನಿಗೆ ಅನ್ನಿಸಿದ್ದಂತೂ ಸುಳ್ಳಲ್ಲ. ಮನೆಯಲ್ಲಿ ಅಮ್ಮ, ಅಕ್ಕ ಇಬ್ಬರನ್ನು ಹೆದರಿಸಿಕೊಂಡಿದ್ದ, ಅಪ್ಪನಿಗೆ ಮಾತ್ರ ಬಹಳ ಹೆದರುತ್ತಿದ್ದ. ಹಾಗಾಗಿ ‘ಇವನ ಬಗ್ಗೆ ಏನೇ ಕಂಪ್ಲೇಂಟ್ ಇದ್ದರೂ ಅಪ್ಪನಿಗೆ ಒಂದು ತಿಳಿಸಿ ಸಾಕು ಸರ್’ ಎಂದಿದ್ದಳು. ಪಾಪ ಇವೆಲ್ಲವನ್ನೂ ಕೈಕಟ್ಟಿ ಕೇಳಿಸಿಕೊಂಡಿದ್ದ ಧವನ್ ಏನೂ ಮಾಡಲಾಗದೇ, ಏನೊಂದೂ ತೋಚದೇ ಮೌನಕ್ಕೆ ಶರಣಾಗಿದ್ದ.
 
 
 ಇವರ  ಗುಂಪಿನ ಬಹುತೇಕ ವಿದ್ಯಾರ್ಥಿಗಳು ಎಲ್.ಬಿ.ಎಸ್ ನಗರದಿಂದ, ಕೃಷಿನಗರದಿಂದ ಸೈಕಲ್ ನಲ್ಲಿಯೇ  ಬರುತ್ತಿದ್ದರು. ದಾರಿ ಮಧ್ಯೆ ನಿಂತು ಅದುಇದು ಎಂದು ಮಾತನಾಡುತ್ತಲೇ ಇರುತ್ತಿದ್ದರು. ಯಾರಾದರೂ ಶಿಕ್ಷಕರು ಆ ಮಾರ್ಗದಲ್ಲಿ ಬರುವುದನ್ನು ಕಂಡರೆ ಸೈಕಲ್ ಗಳು ಬೈಕ್ ಗಿಂತಲೂ ವೇಗವಾಗಿ ಓಡುತ್ತಿದ್ದವು. ಎಲ್.ಬಿ.ಎಸ್ ನಗರದ ಆರ್ಚ್ ಬಳಿ ಇರುವ ಅಂಗಡಿ ಬಂದಾಗ ಸೈಕಲ್ ಗಳು ನಿಂತು ಚಾಕೊಲೇಟ್, ಜ್ಯೂಸ್, ಚಿಪ್ಸ್ ಎಂದು ನಿಲ್ಲುತ್ತಿದ್ದರು. ಅದೇನು ರಾಜಕಾರ್ಯವೆಂಬಂತೆ ಹರಟುತ್ತಿದ್ದ ನಿಲ್ಲುತ್ತಿದ್ದರು. ಎಷ್ಟೋ ಬಾರಿ ಇವರ ಪೋಷಕರುಗಳು ‘ಶಾಲೆ ಇನ್ನೂ ಬಿಟ್ಟಿಲ್ಲವಾ? ಮಕ್ಕಳು ಇನ್ನೂ ಬಂದಿಲ್ಲ ಹಾಗಾಗಿ ವಿಚಾರಿಸಿದೆ’ ಎನ್ನುತ್ತಿದ್ದರು. ‘ಶಾಲೆ ಬಿಟ್ಟು ಬಹಳ ಹೊತ್ತಾಗಿದೆ. ಎಲ್ಲಾ ಫ್ರೆಂಡ್ಸ್ ಒಟ್ಟಿಗೆ ಸೇರಿಕೊಂಡಿದಾರೇನೋ ಹಾಗಾಗಿ ತಡ ಆಗಿರಬೇಕು’ ಎಂದಿದ್ದು ಇದೆ.
 
     ಈ ತರಲೆ ವಿದ್ಯಾರ್ಥಿಗಳ ಗುಂಪು ವಾಲಿಬಾಲ್, ಥ್ರೋಬಾಲ್ ಆಟದಲ್ಲಿ, ಶಾಲೆಯ ಬ್ಯಾಂಡ್ ತಂಡದಲ್ಲೂ ಸೇರಿದ್ದರು. ಅದೆಷ್ಟೋ ಬಾರಿ ಇದರ ಅಭ್ಯಾಸಕ್ಕೆಂದು ರಾಷ್ಟ್ರೀಯ ಹಬ್ಬಗಳು ಹತ್ತಿರ ಬಂದಾಗ  ಕೊನೆಯ ತರಗತಿಗಳನ್ನು ಬಿಟ್ಟುಬಂದು ಅಭ್ಯಾಸ ಮಾಡುವಾಗ ತಪ್ಪದೇ ತರಗತಿಯಿಂದ ಬಂದು ಅಭ್ಯಾಸ ಮಾಡಿದ್ದಾರೆ. ಅಲ್ಲೂ ಸಣ್ಣಪುಟ್ಟ ತಲೆಹರಟೆಗಳನ್ನು ಮಾಡಿ ಬೈಸಿಕೊಂಡಿದ್ದಾರೆ ಕೂಡ. ಇನ್ನೂ ಚುಂಚಾದ್ರಿ ಕಪ್, ವಲಯ ಮಟ್ಟದ ಕ್ರೀಡಾಕೂಟಗಳು, ತಾಲೂಕು ಮಟ್ಟದ ಕ್ರೀಡಾಕೂಟಗಳು ಎನ್ನುವಾಗಲೂ ಶಾಲೆ ಬಿಟ್ಟ ನಂತರವೂ ಶಾಲಾ ಮೈದಾನದಲ್ಲಿ ಹೆಚ್ಚಿನ ಸಮಯ ಅಭ್ಯಾಸ ಮಾಡಿದ್ದಾರೆ.


 
                ಯಾವುದೇ ತರಗತಿಗೆ ಹೋದಾಗಲೂ ಪಾಠ ಮಾಡುವಾಗ ಸಂದರ್ಭಕ್ಕೆ ತಕ್ಕ ಹಾಗೇ ಎಲ್ಲೋ ಓದಿದ್ದ, ಅಥವಾ ಕೇಳಿದ್ದ ಒಂದಷ್ಟು ನೀತಿಕಥೆಗಳನ್ನು, ನಿಜದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದೆ. ಎಷ್ಟೋ ಬಾರಿ ಪಾಠದ ಮಧ್ಯೆ ಕಥೆಯನ್ನು ಹೇಳ ಹೊರಟಾಗ, ‘ಈ ಕಥೆ ಹೇಳಿದ್ರಿ, ಬೇರೆ ಕಥೆ ಹೇಳಿ ಸರ್’ ಎನ್ನುತ್ತಿದ್ದರು. ಮಾಡಿದ ಪಾಠಗಳು ನೆನಪಿಲ್ಲದೇ ಹೋದರೂ ಹೇಳಿದ ಕಥೆಗಳನ್ನಂತೂ ಚನ್ನಾಗಿ ನೆನಪಿಟ್ಟುಕೊಂಡಿರುತ್ತಿದ್ದರು. ಎಂಬುದು ತಿಳಿಯುತ್ತಿತ್ತು.
 
                ಇವರೆಲ್ಲರೂ ೧೦ನೇ ತರಗತಿಗೆ ಬಂದಾಗ ಒಂದಿಷ್ಟು ಆತ್ಮೀಯರೇ ಆಗಿದ್ದರು. ಮನೆಯಲ್ಲಿ ಅಕ್ಕನೊಂದಿಗೆ ಆಡಿದ ಜಗಳವನ್ನು ತಿಳಿಸಿ ‘ನನ್ನದೇನೂ ತಪ್ಪಿಲ್ಲ ಅಲ್ಲವೇ ಸರ್? ಇದಕ್ಕೆ ಉತ್ತರ ಹೇಳಿ ಸರ್’ ಎನ್ನುತ್ತಿದ್ದರು. ಹೋಗಲಿ ಬಿಡಿ, ಆಟೋಟಗಳ ನಡುವೆಯೂ ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ ಎಂದು ಆಗಾಗ ಹೇಳುತ್ತಲೇ ಇದ್ದೆವು. ಆದರೂ ಸಣ್ಣ ಪ್ರಮಾಣದಲ್ಲಾದರೂ ಇವರುಗಳ ತಲೆಹರಟೆ ಇದ್ದೇ ಇರುತ್ತಿತ್ತು. ಶಾಲೆಯ ಕೊನೆಯ ದಿನಗಳು ಹತ್ತಿರ ಆಗುತ್ತಿದ್ದಂತೆ ಇವರಿಗೆ ಓದಿನ ಕಡೆಗೆ ಗಮನ ಬರಲು ಶುರುವಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತದರ್ಜೆಯಲ್ಲದೇ ಹೋದರೂ ಉತ್ತಮ ಅಂಕಗಳನ್ನಂತೂ ಪಡೆದುಕೊಂಡಿದ್ದರು. ಹಲವರು ಅದಾಗಲೇ ಬೇರೆಬೇರೆ ಕಾಲೇಜ್ ಗೆ ಸೇರಿದ್ದರು. ಧವನ್ ಮತ್ತು ವಾಲಿಬಾಲ್ ತಂಡದ ನಾಯಕನಾಗಿದ್ದ ನಕುಲ್ ಇಬ್ಬರೂ ಕಾರ್ಕಳದ ಜ್ಞಾನಸುಧಾ ಕಾಲೇಜ್ ಗೆ ಸೇರಿದ್ದರು. ಇಬ್ಬರೂ ಹಾಸ್ಟೆಲ್ ನ ಒಂದೇ ರೂಂ ನಲ್ಲಿಯೇ ಇದ್ದರು.
 
                ಮೊದಮೊದಲು ಆ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದ್ದಾರೆ. ಅಲ್ಲಿಯ ಊಟ, ಪರಿಸರ ಎಲ್ಲವೂ ವಿಭಿನ್ನವೇ ಆಗಿತ್ತು. ಇಬ್ಬರೂ ಒಟ್ಟಿಗೆ ಆಡಿ ಬೆಳೆದವರಾಗಿದ್ದರಿಂದ ಆ ಕೊರತೆಗಳು ಹೆಚ್ಚಾಗಿ ಇವರಿಗೆ ಕಾಡಲಿಲ್ಲ. ಕೆಲವು ವಿದ್ಯಾರ್ಥಿಗಳು ವಾತಾವರಣಕ್ಕೆ ಹೊಂದಿಕೊಳ್ಳದೇ ಕಾಲೇಜ್ ಬಿಟ್ಟು ಬಂದಿದ್ದಾರೆ. ಇವರಿಬ್ಬರೂ ಏನಾದರೂ ಸರಿ ಎಂದು ಅದೇ ಕಾಲೇಜ್ ನಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ. ಹಾಸ್ಟೆಲ್ ನಲ್ಲಿ ಬೆಳಗ್ಗೆ ಬೇಗ ಎದ್ದು ಫ್ರೆಶ್ ಆದ ನಂತರ ಎಲ್ಲರನ್ನೂ ಹಾಲ್ ನಲ್ಲಿ ಸೇರಿಸುತ್ತಿದ್ದಂತೆ ಅಲ್ಲಿ ಪ್ರತೀ ರೂಮ್ ನಿಂದ ಒಬ್ಬ ವಿದ್ಯಾರ್ಥಿ ‘ಚಿಂತನ’ ಹೆಸರಿನಲ್ಲಿ ಒಂದೊಂದು ದಿನ ನೀತಿಕಥೆಗಳು, ಮೌಲ್ಯಯುತ ಕಥೆಗಳು. ಸಾಧಕರ ಪರಿಚಯ… ಹೀಗೆ ಏನಾದರೊಂದು ಮಾಡಬೇಕಿತ್ತಂತೆ. ಇವರ ರೂಮ್ ನ ಸರದಿ ಬಂದಾಗ  ನಕುಲ್ ನಾನು ತರಗತಿಯಲ್ಲಿ ಹೇಳಿದ್ದ, ‘ಒಂದು ಕೈ ಇಲ್ಲದೇ ಕರಾಟೆಯಲ್ಲಿ ಚಾಂಪಿಯನ್’ ಆದ ಜಪಾನ್ ನ ಕಥೆಯನ್ನು ಹೇಳಿದ್ದನಂತೆ. ಎಲ್ಲರೂ ಮೆಚ್ಚಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದ್ದರಂತೆ.
 
                ಹಲವು ದಿನಗಳ ನಂತರ ಈ ಸರದಿ ಮುಂದುವರೆದು ಧವನ್ ಗೆ ಬರುವುದೆಂದು ತಿಳಿದಾಗ ಒಮ್ಮೆ ಕಾಲೇಜ್ ನಿಂದ ಫೋನ್ ಮಾಡಿದ್ದ, ‘ಏನಪ್ಪಾ ಹಾಸ್ಟೆಲ್ ಲಿ ಇರೋನಿಗೆ ನಾನು ನೆನಪಾಗಿದೀನಿ. ಅಂದರೆ ಏನೋ ಸಮಾಚಾರ ಇರಬೇಕು? ಏನದು?’ ಎಂದಾಗ ‘ನೀವು ನೆನಪು ಆಗ್ತಾನೇ ಇರ್ತಿರಾ ಸರ್ ಆದರೆ ಈಗ ನಿಮ್ಮನ್ನು ಬಿಟ್ಟರೆ ಬೇರೆ ಯಾರೂ ನೆನಪಾಗಲಿಲ್ಲ ಸರ್ ಅದಕ್ಕೆ ನಿಮಗೆ ಕಾಲ್ ಮಾಡಿದೆ. ಸರ್ ನೀವು ಯಾವುದಾದರೂ ಒಂದು ಒಳ್ಳೆಯ ಕಥೆಯನ್ನು ಹೇಳ್ತಿರಾ!?’ ಎಂದನು. ಈಗ ಯಾಕೋ ನಿನಗೆ ಎಂದಾಗ ‘ಇಲ್ಲಿ ಪ್ರತೀದಿನ ಸರದಿಯಂತೆ ಒಬ್ಬೊಬ್ಬರು ಏನಾದರೂ ಸ್ಫೂರ್ತಿಯಾಗುವಂತೆ ಕಥೆಗಳನ್ನೋ, ಸಾಧಕರ ಸಾಧನೆಗಳನ್ನೋ ಹೇಳಬೇಕಿದೆ. ನೀವು ತರಗತಿಯಲ್ಲಿದ್ದಾಗ ಹೇಳಿದ್ದರಲ್ಲಿ ಯಾವುದಾದರೂ ಉತ್ತಮವಾಗಿರುವುದನ್ನು ಹೇಳಿ’ ಎಂದ. ‘ಫೋನ್ ನಲ್ಲಿ ಎಷ್ಟು ಅಂತ ಹೇಳಲಿ ನಿನಗೆ?’ ಎಂದಾಗ ‘ಸರ್ ಅಕ್ಕನಿಗೆ ನಿಮಗೆ ಕಾಲ್ ಮಾಡೋಕೆ ಹೇಳ್ತಿನಿ, ಆ ನಂಬರ್ ಗೆ ನೀವು ಒಂದಿಷ್ಟು ಕಥೆಗಳನ್ನು ಕಳಿಸಿ, ಅಕ್ಕ ಇಲ್ಲಿಗೆ ಬರ್ತಾಳೆ. ಅದರಲ್ಲಿ ಉತ್ತಮ ಎನಿಸಿದ್ದನ್ನು ಆಯ್ಕೆ ಮಾಡಿಕೊಂಡು ಹೇಳ್ತಿನಿ… ಪ್ಲೀಸ್ ಸರ್ ಇಲ್ಲ ಎನ್ನಬೇಡಿ ಎಂದು ಗೋಗರೆದನು. ಆಗಲಿ ಕಳಿಸ್ತಿನಿ ಎಂದೆ. ನನ್ನ ಬಳಿಯಿದ್ದ ಆಗಾಗ ತರಗತಿಯಲ್ಲಿ ಹೇಳಲು ಎಂದು ಇಟ್ಟುಕೊಂಡಿದ್ದ ಒಂದಷ್ಟು ಕಥೆಗಳನ್ನು ಕಳಿಸಿದೆ. ಒಂದಿಷ್ಟು ದಿನಗಳ ನಂತರ ಮತ್ತೊಮ್ಮೆ ಕಾಲ್ ಮಾಡಿ, ‘ಸರ್ ಇನ್ನೂ ಹೆಚ್ಚಿನ ಕಥೆಗಳಿದ್ದರೆ ಕಳಿಸಿ ಸರ್’ ಎಂದನು ‘ಇಷ್ಟು ಕಳಿಸಿರೋದು ಸಾಕಾಗಲ್ವೇನೋ?’ ಎಂದರೆ, ‘ಹಾಗಲ್ಲ ಸರ್ ನೀವು ತರಗತಿಯಲ್ಲಿ ಹೇಳಿದ್ದ ಕಥೆಗಳನ್ನೂ ಸೇರಿಸಿ ಕಳಿಸಿ, ಅವುಗಳಲ್ಲಿ ಕೆಲವು ನೆನಪಿದಾವೆ. ಆದರೆ ಸಂಪೂರ್ಣವಾಗಿ ಓದಿಕೊಂಡು ನಂತರ ಅದರಲ್ಲಿ ಆಯ್ಕೆ ಮಾಡಿಕೊಳ್ಳೋಣ ಅಂತ ಇದೀನಿ ಹಾಗಾಗಿ…’ ಎಂದನು. ‘ಇಲ್ಲಿ ನಮ್ಮ ಹೆಸರಿನ ಜೊತೆಗೆ ನಾವು ಯಾವ ಶಾಲೆಯಿಂದ ಬಂದಿದ್ದೀವಿ ಅಂತಾನೂ ಹೇಳ್ತಾರೆ ಹಾಗಾಗಿ ಇಲ್ಲೂ ಸಾಂದೀಪನಿ ಶಾಲೆ ವಿದ್ಯಾರ್ಥಿ ಒಳ್ಳೆಯದನ್ನು ಹೇಳಿದ ಅನ್ನೋ ಹಾಗೇ ಆಗಬೇಕು ಅದಕ್ಕೆ…’ ಎಂದು ರಾಗವಾಗಿ ಹೇಳಿದನು. ‘ಈಗ ನೀನು ಒಳ್ಳೆಯವನು ಅನ್ನಿಸಿಕೊಳ್ಳೋಕೆ ನಾನು ನಿನಗೆ ಕಥೆ ಹೇಳಬೇಕಿದೆ? ಎಷ್ಟು ಇದಿಯಲೇ ನೀನು’ ಎಂದರೆ ‘ಸರ್ ನಿಮ್ಮ ವಿದ್ಯಾರ್ಥಿ ನಾನು, ನೀವೇ ಹೀಗಂದರೆ ನನಗೆ ಯಾರು ಸರ್ ಹೇಳ್ತಾರೆ ಸರ್. ಪ್ಲೀಸ್ ಪ್ಲೀಸ್ ಸರ್…’ ಎಂದನು. ಸರಿ ಆಗಲಿ ಕಳಿಸ್ತಿನಿ ಎಂದು ಹುಡುಕಾಡಿ, ಚೆಂದದ ಒಂದಿಷ್ಟು ಕಥೆಗಳನ್ನು ಆಯ್ಕೆ ಮಾಡಿ ಕಳಿಸಿದೆ.


 
                ಒಂದು ವಾರದ ನಂತರ ಒಂದು ಫೋಟೋ ಬಂದು ಧವನ್ ಮಾತನಾಡುತ್ತಿರುವುದು. ಅದರ ಕೆಳಗೆ, ಇಂದಿನ ಚಿಂತನ: ಧವನ್ ಕೆ.ಎಸ್, ಪ್ರೌಢಶಿಕ್ಷಣ ಸಾಂದೀಪನಿ ಶಾಲೆ, ಶಿವಮೊಗ್ಗ ಚಿಂತನೆಯ ವಿಷಯ: ಒಂದು ನಿಮಿಷದ ಬೆಲೆ ಎಂದಿತ್ತು. ಇದನ್ನು ನನಗೆ ಕಳಿಸಲು ಹೇಳಿದ್ದನಂತೆ. ನಂತರ ಕಾಲ್ ಮಾಡಿ ತುಂಬಾ ಚೆನಾಗಿತ್ತು ಅಂತ ಹೇಳಿದ್ರು, ಜೋರು ಚಪ್ಪಾಳೆ ಹೊಡೆದರು. ಒಟ್ಟಿನಲ್ಲಿ ಒಂದು ಒಳ್ಳೆಯ ಕಥೆ ಹೇಳಿ ಸಣ್ಣಮಟ್ಟಿಗೆ ಇಲ್ಲಿ ಫೇಮಸ್ ಆಗಿದೀನಿ ಸರ್. ಧನ್ಯವಾದಗಳು ಎಂದನು. ಅವನು ಆಯ್ಕೆ ಮಾಡಿಕೊಂಡಿದ್ದ ವಿಷಯವನ್ನು ತರಗತಿಯಲ್ಲಿ ಬಹಳ ಹಿಂದೆಯೇ ಹೇಳಿದ್ದೆ. ಅದನ್ನೇ ಚೆಂದಗಾಣಿಸಿ ಕಲಿತು ಹೇಳಿರುವುದು ಖುಷಿ ಕೊಟ್ಟಿತು.
 
                ಪಠ್ಯದ ಜೊತೆಜೊತೆಗೆ ನಾವು ಹೇಳುವ ಸಣ್ಣಪುಟ್ಟ ಕಥೆಗಳು, ನೀತಿಮಾತುಗಳು ಆ ತರಗತಿಯಲ್ಲಿನ ಎಲ್ಲಾ ಮಕ್ಕಳನ್ನು ಬದಲಾಯಿಸುತ್ತದೆ, ಪರಿವರ್ತನೆಗೆ ಒಳಪಡಿಸುತ್ತದೆ ಎಂದೇನೂ ಇರುವುದಿಲ್ಲ. ಆದರೆ ಅದು ಯಾರಾದರೂ ಒಬ್ಬರಿಗೆ ಅರ್ಥವಾಗಿ ಅದನ್ನು ಅಳವಡಿಸಿಕೊಂಡು ಬದಲಾದರೂ, ಒಳ್ಳೆಯ ಮಾರ್ಗದರ್ಲ್ಲಿ ಸಾಗಿದರೂ ಶಿಕ್ಷಕರಾಗಿ ಅದು ನಮಗೆ ಸಾಧನೆಯಂತೆಯೇ ಸರಿ. ಎಂದೋ ಹೇಳಿದ್ದ ಕಥೆ ಇಂದಾದರೂ ಉಪಯೋಗಕ್ಕೆ ಬಂದಿತಲ್ಲ ಎನ್ನುವ ಸಾರ್ಥಕ ಭಾವ ನಮ್ಮಲ್ಲಿ. ತಲೆಹರಟೆ ವಿದ್ಯಾರ್ಥಿ ಎನಿಸಿಕೊಂಡಿದ್ದವನು ಎಲ್ಲರ ತಲೆಯಲ್ಲಿ ಕೂರುವಂತೆ ಕಥೆ ಹೇಳಿದ್ದಾನೆ. ಅದು ಒಂದಿಬ್ಬರಿಗೂ ಸ್ಫೂರ್ತಿಯಾದರೂ ಸಂತೋಷ. ಎಲ್ಲೋ ಓದಿದ್ದ ಕಥೆ ನನ್ನನ್ನು ಒಂದಿಷ್ಟು ಬದಲಾಯಿಸಿತ್ತು. ಅದೇ ಕಥೆ ಇವನನ್ನೂ ಬದಲಾಯಿಸಿದೆ, ಇದರಿಂದ ಮತ್ತೊಂದಿಷ್ಟು ಜನ ಬದಲಾದರೆ ಅದೇ ಸಾರ್ಥಕವಲ್ಲವೇ? ಜ್ಞಾನ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಚಲಿಸುತ್ತಲೇ ಇರುತ್ತದೆ. ಅದನ್ನು ನಮ್ಮ ಬೆಳವಣಿಗೆಯ ಚಲನೆಗೂ ಬಳಸಿಕೊಂಡಲ್ಲಿ ಧನ್ಯತೆ ಕಾಣುತ್ತದೆ. ಪ್ರತಿಯೊಬ್ಬರ ಬದುಕಲ್ಲೂ ಬದಲಾವಣೆಯ ಹಂತ ಬಂದೇಬರುತ್ತದೆ. ಅದಕ್ಕೆ ನಾವು ಸಿದ್ದರಾಗಿರಬೇಕಷ್ಟೆ. ಪಾಠದ ಮಧ್ಯೆ ಎಂದೋ ಹೇಳಿದ್ದ ಕಥೆ ನೆನಪಿಟ್ಟುಕೊಂಡು ಅದನ್ನು ಹೇಳಿದ್ದಾನೆ ಎಂದರೆ ತರಲೆ ಇದ್ದರೂ ಬುದ್ಧಿವಂತನೇ ಸರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಬಹುಶಃ ಇವನೂ ಒಂದು ಕಥೆಯಾಗಬಹುದೇನೋ!? ಎಲ್ಲವನ್ನೂ ಕಾಲವೇ ಹೇಳಲಿದೆ… ಒಂದು ಕಥೆ ಇಂದಿನ ಬರಹಕ್ಕೆ ಕಾರಣವಾಗಿದೆ. ಇದೂ ಒಂದು ಕಥೆಯಾಗುವ ಹಾಗೇ…


 

Leave a Reply

Your email address will not be published. Required fields are marked *

Scan the code