ಹುಲಿ ಉಗುರು ಪ್ರಕರಣದಲ್ಲಿ ಅರ್ಚಕರ ಬಂಧನ ಖಂಡನೀಯ, ಈಗಿರುವ ಸರ್ಕಾರ ಜನರ ದಿಕ್ಕು ತಪ್ಪಿಸುವ ಸರ್ಕಾರವಾಗಿದೆ.
(CHIKKAMAGALURU): ಬಾಳೆಹೊನ್ನೂರು: ಕಳೆದ ಐದೂವರೆ ತಿಂಗಳಿನಿಂದ ರಾಜ್ಯ ಸರ್ಕಾರವು ನಡೆಸುತ್ತಿರುವ ಹಗರಣಗಳು ವಿಪರೀತವಾಗಿದ್ದು, ಇದನ್ನು ಮುಚ್ಚಿಹಾಕುವ ಸಲುವಾಗಿ ಹುಲಿ ಉಗುರು ಪ್ರಕರಣವನ್ನು ಮುಂಚೂಣಿಗೆ ತಂದಿದೆ ಎಂದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ೪೦% ಸರ್ಕಾರ ಇದೀಗ ಆಡಳಿತ ನಡೆಸುತ್ತಿದೆ. ಇದೇ ನಿಜವಾದ ಹಗರಣಗಳ ಸರ್ಕಾರವಾಗಿದೆ. ಬಿಬಿಎಂಪಿಗೆ ಬಿಡುಗಡೆಯಾದ ರೂ.೬೦೦ ಕೋಟಿ ಹಗರಣದಲ್ಲಿ ರೂ.೧೦೦ ಕೋಟಿ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕರೂ ತುಟಿ ಬಿಚ್ಚದ ಸಚಿವರು, ಇದು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದು ಎಂದು ಸಮರ್ಥಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವೇ ನಮ್ಮ ಮೂಲ ಮಂತ್ರ ಎನ್ನುತ್ತಿದ್ದಾರೆ. ಶೃಂಗೇರಿ ಕ್ಷೇತ್ರದ ಶಾಸಕರು ಸಹ ಇತ್ತೀಚೆಗೆ ಸಭೆಯೊಂದರಲ್ಲಿ ಅಧಿಕಾರಿಗಳು, ಸಾರ್ವಜನಿಕರ ಮುಂದೆ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಟಿಪ್ಸ್ ಕೊಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರದ ಸುಳಿವನ್ನು ನೀಡಿದ್ದಾರೆ.
ಖಾಂಡ್ಯ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದ ಅರ್ಚಕರ ಬಳಿ ಹುಲಿ ಉಗುರಿನ ಲಾಕೆಟ್ ಇದೆ ಎನ್ನುವ ನೆಪದಲ್ಲಿ ನೋಟಿಸ್ ನೀಡದೆ ಏಕಾಏಕಿಯಾಗಿ ಬಂಧಿಸಿದ್ದಾರೆ. ಅವರೇನು ಅಪರಾಧ ಮಾಡಿಲ್ಲ. ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕಿತ್ತು. ಇದು ಸ್ಪಷ್ಟವಾಗಿ ಬಹುಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಪ್ರಹಾರವಾಗಿದೆ.
ಗಣ್ಯರುಗಳಿಗೆ ನೋಟಿಸ್ ನೀಡಿದಂತೆ ಇವರಿಗೂ ನೀಡಬಹುದಿತ್ತು. ಉಗುರುಗಳನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸಬಹುದಿತ್ತು. ಆದರೆ ಇದ್ಯಾವುದನ್ನು ಮಾಡದೆ ಬಹುಸಂಖ್ಯಾತ ಹಿಂದೂಗಳ ಭಾವನೆ ಮೇಲೆ ಪ್ರಹಾರ ಮಾಡಿ, ಅರ್ಚಕರ ಮಾನಸಿಕ ಸ್ಥಿತಿ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಜನರ ದಾರಿ ತಪ್ಪಿಸುವ, ಹಗರಣ ಮುಚ್ಚವ ಕೆಲಸ ಮಾಡಲಾಗುತ್ತಿದೆ ಎಂದರು.
ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಮುಖಂಡರಾದ ಟಿ.ಎಂ.ನಾಗೇಶ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಬಿ.ಜಗದೀಶ್ಚಂದ್ರ, ಮಂಜು ಹೊಳೆಬಾಗಿಲು, ಎಚ್.ಎಚ್.ಕೃಷ್ಣಮೂರ್ತಿ, ಪ್ರದೀಪ್ ಕಿಚ್ಚಬ್ಬಿ, ಈಶ್ವರ್ ಇಟ್ಟಿಗೆ, ಸುಧಾಕರ್ ಮತ್ತಿತರರು ಇದ್ದರು.