ಶೌಚ ಗುಂಡಿಗೆ ಮಕ್ಕಳನ್ನು ಇಳಿಸಿದ ಪ್ರಕರಣ : ಎಲ್ಲ ಐದೂ ಆರೋಪಿಗಳನ್ನು ಬಂಧಿಸಿದ ಪೊಲೀಸರು.
(KOLARA): ಕೋಲಾರ :ಶೌಚ ಗುಂಡಿಗೆ ವಸತಿ ಶಾಲೆಯ ಮಕ್ಕಳನ್ನು ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ ಅವರು ತಿಳಿಸಿದ್ದಾರೆ.
1ನೇ ಡಿಸೆಂಬರ್ ರಂದು ಮಾಲೂರು ತಾಲ್ಲೂಕಿನ ಯಲುವಳ್ಳಿ ಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಛ ಮಾಡಿಸಲಾಗಿತ್ತು. ನಡೆದ 15 ದಿನಗಳಲ್ಲಿ ನಂತರ ಮಾಧ್ಯಮ ವರದಿಯೊಂದರಿಂದ ಪ್ರಕರಣ ಬೆಳಕಿಗೆ ಬಂತು.
ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ಇಬ್ಬರು ಆರೋಪಿಗಳನ್ನು ತಕ್ಷಣವೇ ಬಂಧಿಸಿ ಎಫ್ ಐ ಆರ್ ದಾಖಲಿಸಲಾಯಿತು. ತಲೆಮರೆಸಿಕೊಂಡಿದ್ದ ಮುವರು ಆರೋಪಿಗಳ ಶೋಧದಲ್ಲಿ ಪೊಲೀಸ್ ಇಲಾಖೆ ತೊಡಗಿತ್ತು.
ಡಿಸೆಂಬರ್ 27ರ ಮಾನ್ಯ ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಸಹ ಈ ವಿಷಯ ಪ್ರಮುಖ ಚರ್ಚೆಯಗಿತ್ತು. ಉಳಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಮುಖ್ಯಮಂತ್ರಿಗಳು ತಾಕಿತು ಮಾಡಿದ್ದರು. ಕ್ಷಿಪ್ರ ಕಾರ್ಯ ಪ್ರವೃತ್ತರಾದ ಪೊಲೀಸರು ಉಳಿದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಇಂದು ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಬಂಧಿಸಿರುವ ಆರೋಪಿಗಳಲ್ಲಿ ಒಬ್ಬರಿಗೆ ನ್ಯಾಯಾಲಯ ಕಟ್ಟಳೆಯ ಜಾಮೀನಿನ ಮೇರೆಗೆ ಹೊರಗುಳಿಯಲು ಅನುಮತಿ ನೀಡಲಾಗಿದೆ. ಉಳಿದ 4 ಜನ ಆರೋಪಿಗಳು ಪೋಲೀಸರ ಸುಪರ್ದಿನಲ್ಲಿದ್ದು, ವಿಚಾರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ವಿಷ್ಣು ಕೋಲಾರ