ಮನರಂಜನೆ

ಮಗು ಮನಸ್ಸಿನ ಕುಮಾರಣ್ಣ ಇನ್ನಿಲ್ಲ.

ಮಗು ಮನಸ್ಸಿನ ಕುಮಾರಣ್ಣ ಇನ್ನಿಲ್ಲ.

ಮಗು ಮನಸ್ಸಿನ ಕುಮಾರಣ್ಣ ಇನ್ನಿಲ್ಲ.

ನಿನ್ನೆ ಇದ್ದವರು ಇಂದಿಲ್ಲ. ಭಗವಂತನ ಲೀಲೆಯಲ್ಲಿ ಸೃಷ್ಟಿಯಷ್ಟೇ ಅಂತ್ಯವೂ ವಿಸ್ಮಯಕಾರಿ. ಇಟ್ಟಿಗೆ ಗೂಡಿನಲ್ಲಿ ಬಹು ಕಾಲ ಕಳೆದು, ಕೆಲ ವರ್ಷಗಳ ಹಿಂದಷ್ಟೇ ಗಾಯತ್ರಿ ಪುರಂ ನಲ್ಲಿ ಸೋದರ ಶಿವಕುಮಾರ್ ಮತ್ತು ತಾಯಿಯೊಂದಿಗೆ ವಾಸಿಸುತ್ತ ಇದ್ದರು. ಮತ್ತೊಬ್ಬ ಕಿರಿಯ ಸೋದರ ಶಂಕರ್ ನಡೆಸುತ್ತಿದ್ದ ನ್ಯೂ ಸಯ್ಯಾಜಿರಾವ್ ರಸ್ತೆಯ ವಿದ್ಯಾವರ್ಧಕ ಸಮೀಪದಲ್ಲಿದ್ದ ರತ್ನಮ್ ಸ್ಟುಡಿಯೋದಲ್ಲಿ ಇರುತ್ತಿದ್ದ ಹೇಮ್ ಕುಮಾರ್, ನಮಗೆಲ್ಲರಿಗೂ ಎ ಕುಮಾರಣ್ಣ ಅಂತಾನೇ ಪರಿಚಯ.

ಗೆಳೆಯರಾದ ಶಿವು ಶಂಕರ್ ರೊಂದಿಗೆ ಕುಮಾರಣ್ಣನವರನ್ನು ಹೀಗ್ಗೆ 33ವರ್ಷಗಳ ಹಿಂದೆ ನೋಡಿದಾಗ ನಮಗೆಲ್ಲ ಭಯವಾಗುತ್ತಿತ್ತು. ರಾಂಬೊ ಸ್ಟಾಲಿನ್ ಹೇರ್ ಸ್ಟೈಲ್, ಮುಖದಲ್ಲಿದ್ದ ಗಾಂಭೀರ್ಯ ಎಳೆಯರಾದ ನಮ್ಮಲ್ಲಿ ಭಯ ಹುಟ್ಟಿಸುತ್ತಿತ್ತು. ಅಶೋಕ ರಸ್ತೆಯ ಲಷ್ಕರ್ ಪೊಲೀಸ್ ಠಾಣೆ ಸಮೀಪದಲ್ಲಿದ್ದ ರತ್ನಮ್ ಸ್ಟುಡಿಯೋಗೆ ಕುಮಾರಣ್ಣ ಬರುತ್ತಿದ್ದಂತೆ ನಮ್ಮ ಗ್ಯಾಂಗ್ ಗಪ್ ಚುಪ್ ಆಗುತ್ತಿತ್ತು. ಇಂತಹ ಕುಮಾರಣ್ಣ ನಾವೂ ತಿಳಿದಂತೆ ಕಠೋರವಿಲ್ಲ ಅನ್ನೋದು, ಅಶೋಕ ರಸ್ತೆಯಿಂದ ಮಂಡಿ ಮಾರುಕಟ್ಟೆ ಸಮೀಪ ರತ್ನಮ್ ಸ್ಟುಡಿಯೋ ಸ್ಥಳಂತರವಾದಾಗ ಗೊತ್ತಾಯಿತು. ಅವರೊಂದಿಗೆ ಹೆಚ್ಚು ಬೆರೆಯುತ್ತಿದ್ದಂತೆ ಅವರೊಳಗೆ ಲಗು ಬಗೆಯ ಸ್ನೇಹ ಜೀವಿ ಇದ್ದಾರೆoಬುದು ಖಾತ್ರಿಯಾಯಿತು. ನನ್ನಂಥ ಕಿರಿಯನೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ದರು. ಅವರಲ್ಲಿ ನನಗೆ ಇಷ್ಟವಾದ ಗುಣ ಓದು. ಅವರು ಯಾವುದೇ ಪತ್ರಿಕೆ ಪುಸ್ತಕ ಕೈಗೆ ಸಿಕ್ಕರೆ ಗುಕ್ಕನೆ ಎಲ್ಲ ಓದುವುದು ಅವರ ಹವ್ಯಾಸ. ಹೀಗಾಗಿ ಅವರೊಳಗೆ ಅಗಾಧವಾದ ಜ್ಞಾನ ಭಂಡಾರ ತುಂಬಿತ್ತು. ಅವರ ಕಾಲದ ಘಟನೆಗಳನ್ನು ಕೇಳುವುದು ನನಗೆ ಅತ್ಯಾಸಕ್ತಿ.
ಅಶೋಕ ರಸ್ತೆಯಲ್ಲಿದ್ದ ರತ್ನಮ್ ಸ್ಟುಡಿಯೋ ಸ್ಥಾಪಿಸಿದ್ದು ಇವರ ತಂದೇ ನೀಲಮೇಘಮ್ ಪಿಳ್ಳೆ. ಇವರ ತಮ್ಮ ಚಾಮುಂಡೇಶ್ವರಿ ಟಾಕೀಸ್ ಸಮೀಪ ರತ್ನಮ್ ಆರ್ಟ್ಸ್ ಅಂಗಡಿ ನಡೆಸುತ್ತಿದ್ದರು. ನೀಲ ಮೇಘಮ್ ಅವರು ಹುಣಸೂರಿನಲ್ಲಿ ಒಂದು ಸ್ಟುಡಿಯೋ ಸ್ಥಾಪಿಸಿದ್ದರು. 50ವರ್ಷಗಳ ಹಿಂದೆ ಅಲ್ಲಿ ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿ ಮೃತ ಪಟ್ಟಿದ್ದರು. ಇದರಿಂದ ಸಣ್ಣ ವಯಸ್ಸಿನಲ್ಲೇ ತಾಯಿ ತಮ್ಮ ತಂಗಿಯರ ಸಲಹುವ ಜವಾಬ್ದಾರಿ ಹೊತ್ತಿದ್ದರು.

ನೀಲಮೇಘಮ್ ಪಿಳ್ಳೆ ಮತ್ತು ಕನ್ನಡ ಚಲನಚಿತ್ರಕ್ಕೂ ಬಹಳ ನಂಟಿತ್ತು. ಅವರ ಅಶೋಕ ರಸ್ತೆಯಲ್ಲಿ ನಡೆಸುತ್ತಿದ್ದ ರತ್ನಮ್ ಸ್ಟುಡಿಯೋಗೆ ತೂಗುದೀಪ ಶ್ರೀನಿವಾಸ್, ಎಂ ಪಿ. ಶಂಕರ್, ರಾಜಾನಂದ್, ನಿರ್ದೇಶಕ ಕೆ. ಎಸ್ ಎಲ್. ಸ್ವಾಮಿ (ರವಿ)ಮತ್ತು ಡಾ.ರಾಜ್ ಕುಮಾರ್ ರಂಗಭೂಮಿ ಒಡನಾಡಿ ಶ್ರೀರಂಗಮೂರ್ತಿ ಬರುತ್ತಿದ್ದರು. ಡಾ. ರಾಜ್ ಕುಮಾರ್ ಅವರ ನೂರನೇ ಚಿತ್ರ “ಭಾಗ್ಯದ ಬಾಗಿಲು” ಚಿತ್ರ ಕತೆ ಚರ್ಚೆ ಆಗಿದ್ದು, ಇದೇ ಅಶೋಕ ರಸ್ತೆಯಲ್ಲಿದ್ದ ರತ್ನಮ್ ಸ್ಟುಡಿಯೋದಲ್ಲಿ. ನೀಲ ಮೇಘಮ್ ಪಿಳ್ಳೆ ಅವರ ಅಕಾಲಿಕ ಸಾವು ರತ್ನಮ್ ಸ್ಟುಡಿಯೋಗಿದ್ದ ಸಿನಿಮಾ ನಂಟು, ಮತ್ತು ಅವರ ಕುಟುಂಬದ ಬೆಳವಣಿಗೆಗೆ ತೊಡಕಾಯಿತು. ತಂದೆಗಿದ್ದಷ್ಟು ಸಿನಿಮಾ ನಂಟು ಕುಮಾರಣ್ಣನವರಿಗೇ ಇಲ್ಲದಿದ್ದರೂ, ಸಿನಿಮಾ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದರು. ಇಂತಹ ಹಾಡು ಇಂತಹ ಸಿನಿಮಾದ್ದು ಅಂತ ಥಟ್ ಅಂತ ಹೇಳಿ ಬಿಡುತ್ತಿದ್ದರು. ಅದೂ ಕನ್ನಡ ಸಿನಿಮಾ ಆಗಿರಬಹುದು, ಅಥವಾ ತಮಿಳು. ತೆಲುಗು, ಹಿಂಡಿ ಯೇ ಆಗಿರಬಹುದು, ನಿರರ್ಗಳವಾಗಿ ಚಿತ್ರದ ವಿವರ ಹೇಳುತ್ತಿದ್ದರು.

ಅವರು ಕಳೆದ ಅಕ್ಟೋಬರ್.26ರ ರಾತ್ರಿ ಬಿಪಿ ಹೆಚ್ಚಾಗಿ ಬ್ರೈನ್ ಸ್ಟ್ರೋಕ್ ಆಗುವುದಕ್ಕಿಂತ ಮುನ್ನಿನ ದಿನಗಳಲ್ಲಿ ನಿತ್ಯ ತಪ್ಪದೇ ವಾಟ್ಸಾಪ್ ಸಂದೇಶ ಕಳುಹಿಸುತ್ತಿದ್ದರು. ಅವೂ ಕೇವಲ ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳಾರಲಿಲ್ಲ. ಚಿಂತನೆಗೆ ಒರೆಗಚ್ಚುವ ಸಾಮಾಜಿಕ ವಿಚಾರ ಧಾರೆಗಳಾಗಿರುತ್ತಿದ್ದವು. ಇಂತಹ ಬುದ್ದಿವಂತರು ಮಗು ಮನಸ್ಸಿನವರೂ ಆದ ಕುಮಾರಣ್ಣ ಮೈಸೂರಿನ ಮಿಷನ್ ಆಸ್ಪತ್ರೆ ಸೇರಿದವರು, ಮತ್ತೇ ಜೀವಂತವಾಗಿ ಎದ್ದು ಬರಲಿಲ್ಲ. 12ದಿನಗಳ ಜೀವನ್ಮರಣ ಹೋರಾಟದಲ್ಲಿ ಸಾವೇ ಗೆದ್ದಿತು. ಕಳೆದ ರಾತ್ರಿ 2ಗಂಟೆ ಸುಮಾರಿಗೆ ಸೋತು ಉಸಿರು ಚೆಲ್ಲಿದ ಕುಮಾರಣ್ಣ ಇನ್ನೆಂದು ಹಿಂದಿರುಗಿ ಬಾರದ ಲೋಕಕ್ಕೆ ತೆರಳಿದರು. ಅವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ. ಅವರ ಅಪಾರ ಸ್ನೇಹ ಬಳಗಕ್ಕೂ ಅಗಲಿಕೆಯ ನೋವೂ ತಡೆಯುವ ಶಕ್ತಿ ಚಾಮುಂಡೇಶ್ವರಿ ತಾಯಿ ನೀಡಲಿ. ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನೂ ಗಾಯತ್ರಿ ಪುರಂನ ರತ್ನಮ್ ಸ್ಟುಡಿಯೋ ಮುಂಭಾಗ ಇಡಲಾಗಿದೆ. ಇಂದು ಮಧ್ಯಾಹ್ನ ಚಾಮುಂಡಿ ತಪ್ಪಲಿನ ಹರಿಶ್ಚಂದ್ರ ಘಾಟ್ ನ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಅಗಲಿದ ದಿವ್ಯ ಚೇತನ ಕುಮಾರಣ್ಣನವರಿಗೆ ಈ ಮೂಲಕ ನನ್ನ ಅಕ್ಷರ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಹೋಗಿ ಬನ್ನಿ ಕುಮಾರಣ್ಣ, ನಿಮ್ಮ ನೆನಪುಗಳು ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿರುತ್ತದೆ.

ಎಸ್. ಪ್ರಕಾಶ್ ಬಾಬು
ಪತ್ರಕರ್ತ-ಲೇಖಕ

Leave a Reply

Your email address will not be published. Required fields are marked *

Scan the code