ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿನ ಪವಿತ್ರ ಗ್ರಂಥ.
(SHIVAMOGA) ಸೊರಬ: ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿನ ಪವಿತ್ರ ಗ್ರಂಥವಾಗಿದ್ದು, ಸಂವಿಧಾನ ರಚನೆಗೊಂಡು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ-ಸಡಗರದಿಂದ ಗಣರಾಜ್ಯೋತ್ಸವೆಂದು ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಮಂಜುಳಾ ಹೆಗಡಾಳ್ ಹೇಳಿದರು.
ಭಾನುವಾರ ಪಟ್ಟಣದ ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಸಂವಿಧಾನವು ಜಾರಿಗೆ ತಂದ ದಿನವನ್ನು ದೇಶವೇ ಸಂಭ್ರಮಿಸುತ್ತದೆ. ಗಣರಾಜ್ಯೋತ್ಸವವು ಪ್ರತಿಯೊಬ್ಬ ಭಾರತೀಯರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ. ದೇಶದ ಸಂವಿಧಾನವನ್ನು ಗೌರವಿಸುವ ಜೊತೆಗೆ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಬಡವ, ಶ್ರೀಮಂತ ಎಂಬ ಬೇಧಭಾವವಿಲ್ಲದೇ ಎಲ್ಲರೂ ಕಾನೂನಿನ ಮುಂದೆ ಸರಿ ಸಮಾನರಾಗಿದ್ದಾರೆ. ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಪ್ರತಿಯೊಬ್ಬರು ಕರ್ತವ್ಯಗಳನ್ನು ಪಾಲಿಸಬೇಕು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೇ ಅಧಿಕಾರ ನಡೆಸುವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಆಳವಾದ ಅಧ್ಯಯನದ ಮೂಲಕ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಪ್ರತಿಯೊಬ್ಬರು ಬಲಿಷ್ಟ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಬೇಕು ಎಂದರು.
ವಿವಿಧ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ನೌಕರರಿಗೆ 76 ನೇ ಗಣರಾಜ್ಯೋತ್ಸವದ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಸಾಂಸ್ಕೃತಿಕ ನೃತ್ಯ ರೂಪಕ ಕಾರ್ಯಕ್ರಮ ಪ್ರೇಕ್ಷಕರ ಮನಸೋರೆ ಗೊಳಿಸಿತು.
ತಾಪಂ ಇಒ ಡಾ. ಪ್ರದೀಪ್ ಕುಮಾರ್, ಬಿಇಒ ಪುಷ್ಪ ಆರ್, ವೃತ್ತ ನಿರೀಕ್ಷಕ ರಾಜಶೇಖರ್ ಎಲ್, ಪುರಸಭೆ ಪ್ರಭಾರ ಮುಖ್ಯಧಿಕಾರಿ ಚಂದನ್ ಹೆಚ್. ವಿ , ನೌಕರರ ಸಂಘದ ಅಧ್ಯಕ್ಷ ಮಂಜುನಾಥ್,ದೈಹಿಕ ಶಿಕ್ಷಣ ಸಂಯೋಜಕ ಲಿಂಗರಾಜ ಒಡೆಯರ್, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಮಧು ರಾಯ್ ಜಿ. ಶೇಟ್, ಎಂ.ಡಿ. ಉಮೇಶ್, ನಟರಾಜ ಉಪ್ಪಿನ್ ಶ್ರೀರಂಜಿನಿ ಪ್ರವೀಣ್ ಕುಮಾರ್, ಅನ್ಸರ್ ಅಹ್ಮದ್, ಪ್ರೇಮಾ ಟೋಕಪ್ಪ, ಆಫ್ರೀನಾ ಮೆಹಬೂಬ್ ಬಾಷಾ, ಸುಲ್ತಾನಾ ಸೈಯದ್ ಸಿರಾಜುದ್ದೀನ್, ಕಂದಾಯ ಇಲಾಖೆಯ ಬಿ.ಜೆ. ವಿನೋದ್, ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯವರು ಉಪಸ್ಥಿತರರಿದ್ದರು.
ವರದಿ: ಮಧು ರಾಮ್ ಸೊರಬ