ನ್ಯೂಸ್ಶಿವಮೊಗ್ಗ

ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ಎಸೆದು ಹೋಗಿರುವ ಅರಣ್ಯ ಇಲಾಖೆ

ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ಎಸೆದು ಹೋಗಿರುವ ಅರಣ್ಯ ಇಲಾಖೆ

(SHIVAMOGA): ಸಾಗರ ಹಸಿರೀಕರಣ ಮಾಡಿದ್ದೇವೆ ಎಂದು ಲೆಕ್ಕ ತೋರಿಸಲು ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ತಾಲೂಕಿನ ಬೆಳಂದೂರು ಗ್ರಾಮದಲ್ಲಿ ಎಸೆದು ಹೋಗಿರುವ ಅರಣ್ಯ ಇಲಾಖೆ ಸರಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡಿದ್ದಲ್ಲದೆ ಉತ್ತಮ ಯೋಜನೆಯೊಂದನ್ನು ಸಾಯಿಸಲು ಮುಂದಾಗಿದೆ ಎಂದು ಜಿಲ್ಲಾ ರೈತ ಸಂಘ (ಡಾ. ಎಚ್.ಗಣಪತಿಯಪ್ಪ ಸ್ಥಾಪಿತ) ಅಧ್ಯಕ್ಷ ದಿನೇಶ್ ಶಿರವಾಳ ಆರೋಪಿಸಿದರು.
ತಾಲೂಕಿನ ಆನಂದಪುರ ವ್ಯಾಪ್ತಿಯ ಬೆಳಂದೂರು ಗ್ರಾಮದ ಸ.ನಂ. 35ರಲ್ಲಿ ಅರಣ್ಯ ಇಲಾಖೆ ಹಸರೀಕರಣ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ಹಾಳು ಮಾಡಿರುವುದನ್ನು ಖಂಡಿಸಿ ಗುರುವಾರ ಜಿಲ್ಲಾ ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಸ್ಥಾಪಿತ) ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಸಸಿಗಳನ್ನು ರಾಶಿ ಹಾಕಿ ಪ್ರತಿಭಟಿಸಿ ಅವರು ಮಾತನಾಡಿದರು.


ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ,
ಅರಣ್ಯ ಇಲಾಖೆ ಹಸರೀಕರಣ ಹೆಸರಿನಲ್ಲಿ ಸರಕಾರದ ಕೋಟ್ಯಾಂತರ ರೂಪಾಯಿಯನ್ನು ಹಾಳುಮಾಡುತ್ತಿದೆ. ಬೆಳಂದೂರಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಡದೆ ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಇದು ಖಂಡನೀಯ ಕ್ರಮ. ಇದರಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಬೆಳಂದೂರು ಗ್ರಾಮದ ಸರ್ವೇ ನಂ. 35ರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಸಿರುವಂತಿದೆ. ಇದರಲ್ಲಿ ತಳ ಹಂತದಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿವರೆಗೂ ಶಾಮೀಲಾಗಿರುವ ಶಂಕೆಯಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಮಾಡಿ ಪರಿಶೀಲಿಸಿ, ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ರೈತ ಸಂಘ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹೊಯ್ಸಳ ಗಣಪತಿಯಪ್ಪ, ಜಗದೀಶ್ ಬೆಳಂದೂರು, ದೇವರಾಜ್, ಸುರೇಶ್, ಶಿವಕುಮಾರ್, ಸಂತೋಷ್, ರಾಮಪ್ಪ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Scan the code