ನಿಷ್ಠುರವಾಗಿ ತ್ರಿಪದಿಯ ವಚನಗಳ ಮೂಲಕ ಸಮಾಜವನ್ನು ಸಮಾನತೆ ಸಾರಿದ ಮಹಾನ್ ಸಂತ ಕವಿ ಸರ್ವಜ್ಞ : ಎಸ್ ಎನ್ ನಾರಾಯಣಸ್ವಾಮಿ
(KOLARA): ಬಂಗಾರಪೇಟೆ :ಬದುಕಿನ ಸಮಸ್ಯೆಗಳನ್ನು ನೇರ, ನಿಷ್ಠುರವಾಗಿ ತ್ರಿಪದಿಯ ವಚನಗಳ ಮೂಲಕ ಸಮಾಜವನ್ನು ಸಮಾನತೆ ಸಾರಿದ ಮಹಾನ್ ಸಂತ ಕವಿ ಸರ್ವಜ್ಞ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಪುರಸಭೆ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕುಂಬಾರರ ಸಂಘದ ವತಿಯಿಂದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ,ಸರ್ವಜ್ಞ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಸೇರಿದಂತೆ ಹಲವು ಅಂಕುಡೊಂಕುಗಳನ್ನು ತ್ರಿಪದಿ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣ, 16ನೇ ಶತಮಾನದಲ್ಲಿ ಸರ್ವಜ್ಞನ ವಚನಗಳು ಸಾಲು ಸಾಲಾಗಿ ಬರುತ್ತವೆ. ಎಲ್ಲರೂ ತಮ್ಮದೇ ಆದ ಧಾಟಿಯಲ್ಲಿ ವಚನಗಳನ್ನು ರಚಿಸಿದ್ದು, ಆದರೆ, ಸರ್ವಜ್ಞನ ವಚನಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಅವುಗಳ ಸಂಶೋಧನೆ ನಡೆಸಿ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕುಂಬಾರ ಸಮುದಾಯವು ಚಿಕ್ಕ ಸಮುದಾಯವಾಗಿದ್ದು, ಅವರ ಮೂಲ ವೃತ್ತಿಯಾದ ಕುಂಬಾರಿಕೆ, ಗುಡಿ ಕೈಗಾರಿಕೆಯನ್ನೇ ನಡೆಸುತ್ತಿದ್ದಾರೆ. ಈ ಚಿಕ್ಕ ಸಮುದಾಯಕ್ಕೆ ಸರ್ಕಾರದ ವಿವಿಧ ಯೋಜನೆಗಳಿಂದ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಗೋವಿಂದರಾಜು,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್,ಪುರಸಭೆಯ ಮುಖ್ಯ ಅಧಿಕಾರಿ ಮೀನಾಕ್ಷಿ, ಕುಂಬಾರರ ಸಂಘದ ಗೌರವ ಅಧ್ಯಕ್ಷ ಆದಿನಾರಾಯಣಪ್ಪ, ಖಜಾಂಚಿ, ಕೆಎಸ್ಆರ್ಟಿಸಿ ಜಯರಾಮ್, ಸಮುದಾಯದ ಮುಖಂಡರದ ಕೃಷ್ಣಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಮುಖಂಡರಾದ ಮೇಸ್ತ್ರಿ ಶ್ರೀನಿವಾಸ್, ರಾಜಪ್ಪ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ