ಚಿಕ್ಕಮಗಳೂರುನ್ಯೂಸ್

ಶ್ರೇಷ್ಠ ಹೋರಾಟಗಾರ ಲಾಲಾ ಲಜಪತ್ ರಾಯ್

ಶ್ರೇಷ್ಠ ಹೋರಾಟಗಾರ ಲಾಲಾ ಲಜಪತ್ ರಾಯ್

(CHIKKAMAGALURU): ಭಾರತಕ್ಕಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಶ್ರೇಷ್ಠ ಹೋರಾಟಗಾರರಲ್ಲಿ ಲಾಲಾ ಲಜಪತ್ ರಾಯ್ ಸಹ ಒಬ್ಬರಾಗಿದ್ದರು ಎಂದು ಜಯಪುರ ಬಿಜಿಎಸ್ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಪಿ.ಕಾರ್ತಿಕ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಲಾಲಾ ಲಜಪತ್ ರಾಯ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನು ಸ್ಮೃತಿಗಳಿಂದ ತೀವ್ರ ಪ್ರಭಾವಿತರಾಗಿದ್ದ ಲಜಪತ್ ರಾಯ್ ಅವರು ರಾಜಕೀಯ ಹೋರಾಟ ಹಾಗೂ ಬರವಣಿಗೆಗಳ ಕಡೆಗೆ ಅಪಾರ ಒಲವನ್ನು ಬೆಳೆಸಿಕೊಂಡಿದ್ದು, ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದರ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಲಜಪತ್ ರಾಯ್ ಅವರ ಸೇವೆಯು ಸ್ಮರಣೀಯವಾಗಿದ್ದು, ಇಂದಿನ ಯುವಜನರು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.


ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಜನ್ಮ ದಿನ, ಅವರ ಸೇವೆಗಳನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸಿಕೊಳ್ಳುವುದು ಭಾರತೀಯರೆಲ್ಲರ ಕರ್ತವ್ಯವಾಗಿದೆ. ಲಾಲಾ ಲಜಪತ್ ರಾಯ್ ಅವರು ದೇಶದ ಅಪ್ರತಿಮ ಹೋರಾಟಗಾರರಾಗಿದ್ದರು. ಅವರ ಆದರ್ಶಗಳು ಭಾರತೀಯರೆಲ್ಲರಿಗೂ ಹೆಮ್ಮೆ ತರುವಂತದ್ದಾಗಿದೆ.
ಇಂದಿನ ಯುವಜನರು ಸ್ವಾತಂತ್ರ್ಯ ಹೋರಾಟಗಾರರ ಹೋರಾಟ, ಅವರ ಸೇವೆಗಳನ್ನು ತಿಳಿದುಕೊಂಡು ಅವರಿಗೆ ಗೌರವಿಸುವುದು ಅವಶ್ಯಕವಾಗಿದೆ ಎಂದರು.
ಜೇಸಿ ಅಲ್ಯುಮಿನಿ ಕ್ಲಬ್ ವಲಯ ಉಪಾಧ್ಯಕ್ಷ ಎ.ಆರ್.ಸುರೇಂದ್ರ, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ, ಖಜಾಂಚಿ ಶಾಹಿದ್, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಮಂಜುನಾಥ್ ತುಪ್ಪೂರು, ರಚನ್ ಹುಯಿಗೆರೆ, ಸದಸ್ಯರಾದ ಪ್ರಕಾಶ್ ಮುದುಗುಣಿ, ಸವಿನ್ ಹುಯಿಗೆರೆ, ಎಚ್.ಟಿ.ಶೃಜಿತ್, ರಾಮ್‌ಪ್ರಸಾದ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code