ಶ್ರಮ ಜೀವಿಗಳಾದ ಪೌರಕಾರ್ಮಿಕರು ದುಡಿದ ಹಣವನ್ನು ಕುಟುಂಬಕ್ಕೆ ಸದ್ವಿನಿಯೋಗ ಮಾಡಿಕೊಳ್ಳಬೇಕು.
(SHIVAMOGA): ಸಾಗರ ಶ್ರಮ ಜೀವಿಗಳಾದ ಪೌರಕಾರ್ಮಿಕರು ದುಡಿದ ಹಣವನ್ನು ಕುಟುಂಬಕ್ಕೆ ಸದ್ವಿನಿಯೋಗ ಮಾಡಿಕೊಳ್ಳಬೇಕು. ಜತೆಯಲ್ಲಿ ದುಶ್ಚಟಗಳಿಂದ ದೂರವಿದ್ದು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿ ಮಾತು ಹೇಳಿದರು.
ಪಟ್ಟಣದ ಗಾಂಧಿ ಮೈದಾನದಲ್ಲಿರುವ ನಗರಸಭೆ ರಂಗಮಂದಿರದಲ್ಲಿ ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರತಿ ಊರು ಸುಂದರವಾಗಿರಲು ಅಲ್ಲಿನ ಪೌರ ಕಾರ್ಮಿಕರ ಶ್ರಮವೇ ಕಾರಣ. ಪೌರ ಕಾರ್ಮಿಕರು ಊರಿನ ಶಿಸ್ತಿನ ಶ್ರಮಜೀವಿಗಳಾಗಿದ್ದಾರೆ. ಅದೇ ಶಿಸ್ತನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗುವುದು, ಮಕ್ಕಳಿಗೆ ಶಿಕ್ಷಣ ಕಲಿಸುವುದು, ಆದ್ಯತೆಯಾಗಬೇಕು. ಪೌರಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಲು ಪೋಷಕರ ಸಹಕಾರ, ಮಾರ್ಗದರ್ಶನ ಅಗತ್ಯ. ಆದ್ದರಿಂದ ನಿಮ್ಮ ಕರ್ತವ್ಯದ ಜತೆ ಮಕ್ಕಳ ಭವಿಷ್ಯದ ಬಗ್ಗೆ ಸಹ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಪೌರಕಾರ್ಮಿಕರಲ್ಲಿ ಇನ್ನಷ್ಟು ಬದ್ಧತೆ ಬೇಕು. ವೈದ್ಯರು, ದಾದಿಯರು ಮಾಡುವ ಸೇವೆ ನಿಮಗೆ ಪ್ರೇರಣೆಯಾಗಬೇಕು. ಜತೆಗೆ ಸಮಾಜವೂ ಇವರನ್ನು ಗೌರವದಿಂದ ನೋಡಿಕೊಳ್ಳಬೇಕು. ಸೆ. 23ಕ್ಕೆ ಪೌರಕಾರ್ಮಿಕ ದಿನವನ್ನಾಗಿ ಆಚರಿಸಲು ಸೂಚಿಸಿರುವ ಮುಖ್ಯಮಂತ್ರಿಗಳಿಗೆ ಪೌರ ಕಾರ್ಮಿಕ ಸಮೂಹ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಆರ್. ಯತೀಶ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪರಿಸರ ಅಭಿಯಂತರ ಮದನ್, ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ ಹಾಜರಿದ್ದರು. ಎಂ.ಜಿ.ಎನ್.ಪೈ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶೈಲೇಶ್ ಸ್ವಾಗತಿಸಿದರು. ಬಾಲಚಂದ್ರ ವಂದಿಸಿದರು. ರಾಜಕುಮಾರ್ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ