ದಲಿತರಿಗೆ ರಕ್ಷಣೆ ನೀಡುವಲ್ಲಿ ಗೃಹ ಇಲಾಖೆ ನಿರ್ಲಕ್ಷ..!
(KOLARA): ಬಂಗಾರಪೇಟೆ :ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ರಕ್ಷಣೆ ಮಾಡಬೇಕಾದ ಸ್ಥಳೀಯ ಆಡಳಿತ ಕಣ್ಣಿಂದ್ದು ಕುರುಡರಂತೆ ವರ್ತಿಸುತ್ತಿದ್ದು, ಪರೋಕ್ಷವಾಗಿ ಸಮಾಜಘಾತುಕ ಹಿತಾಸಕ್ತಿಗೆ ಬೆಂಬಲ ಸೂಚಿಸುವಂತಾಗಿದೆ. ಇದರಿಂದ ಸರ್ಕಾರಕ್ಕೆ ಮುಜುಗರ ತರುವಂತಹ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿ, ಎಎಸ್ಐ ಶಿವಶಂಕರರೆಡ್ಡಿಯವರ ಮುಖಾಂತರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪೊಲೀಸ್ ಠಾಣೆ ಎಎಸ್ಐಗೆ ಮನವಿ ಸಲ್ಲಿಸಿ ಮಾತನಾಡಿದ ಅವರು. ಇತ್ತೀಚಿಗೆ ಕೊಪ್ಪಳದ ಕುಷ್ಠಗಿ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ದಲಿತರನ್ನು ಬಹಿಷ್ಕರಿಸಿರುವುದು ಇಡೀ ನಾಗರೀಕ ಸಮುದಾಯ ತಲೆತಗ್ಗಿಸುವಂತಾಗಿದೆ. ಸದರಿ ಪ್ರದೇಶದಲ್ಲಿ 2500 ಜನಸಂಖ್ಯೆ ಇದ್ದು, ಕೇವಲ150 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ವಾಸವಾಗಿದ್ದಾರೆ. ಇದನ್ನೆ ಬಂಡವಾಳವನ್ನಾಗಿಸಿಕೊoಡ ಬಹು ಸಂಖ್ಯಾತ ಸವರ್ಣಿಯರು ಪದೇ ಪದೇ ದಲಿತರ ಮೇಲೆ ಬಹಿಷ್ಕಾರದ ಕ್ರೂರತೆಯನ್ನು ಮರೆಯುತ್ತಿದ್ದಾರೆ.
ಘಟನೆಗೆ ಕಾರಣ:
ಮೇಲ್ವರ್ಗದವರ ನೀರಿನ ಬಿಂದಿಗೆಗೆ ದಲಿತರ ಮನೆಯ ನೀರಿನ ಬಿಂದಿಗೆ ಹಾಕಿದ ಕಾರಣ ಸವರ್ಣಿಯರು ಗಲಾಟೆ ಮಾಡಿರುತ್ತಾರೆ. ಬಳಿಕ ದಲಿತ ಕೇರಿಯಲ್ಲಿರುವ ಊರಿನ ನ್ಯಾಯಬೆಲೆ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಹೊರಟಾಗ ದಲಿತರಿಂದ ವಿರೋಧವಾಗಿದೆ. ಈ ಎರಡು ಕಾರಣಗಳನ್ನು ಮುಂದಿಟ್ಟುಕೊoಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಊರಿನಿಂದ ಬಹಿಷ್ಕರಿಸಿ ಡಂಗೂರ ಸಾರಿದ್ದಾರೆ. ಇದರಿಂದ ಬೇಸತ್ತ ದಲಿತ ಸಮುದಾಯ ತಹಸೀಲ್ದಾರ್ ರವರಿಗೆ ದೂರು ನೀಡಿದ್ದರಿಂದ ಕುಪಿತಗೊಂಡ ಸವರ್ಣಿಯರು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರವಾದ ಮತ ದಾನವನ್ನು ದಲಿತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಗತ್ಯವಿಲ್ಲವೆಂದು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ದಲಿತರ ಕೇರಿ ಪಕ್ಕದಲ್ಲಿಯೇ ಇರುವ ಗ್ರಾಮಸ್ಥರು ದಲಿತರು ತಮ್ಮ ಬಡಾವಣೆ ಪ್ರವೇಶ ಮಾಡದಂತೆ ತಂತಿಬೇಲಿ ಹಾಕಲು ಸಿದ್ದತೆ ಮಾಡಿಕೊಂಡಿರುವುದು ನಾಚಿಗೇಡಿನ ಸಂಗತಿ.
ಸ್ವಾತಂತ್ರ್ಯ ಬಂದು 75ವರ್ಷ ಕಳೆದರೂ ಇಂದಿಗೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಶೋಷಣೆಗೆ ಒಳಪಡುವುದರ ಮೂಲಕ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶೈಕ್ಷಣಿಕವಾಗಿ ದೌರ್ಜನ್ಯಗೆ ಒಳಪಡುತ್ತಿರುವುದು ದುರದುಷ್ಟಕರ.
ಆದಕಾರಣ ಸರ್ಕಾರ ಈ ಕೂಡಲೇ ಇಂತಹ ಹೇಯ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ದೌರ್ಜನ್ಯ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಿ ತುಳಿತಕ್ಕೆ ಒಳಗಾದ ಸಮುದಾಯವನ್ನು ರಕ್ಷಿಸಬೇಕು, ಮತ್ತು ಶೋಷಿತ ಸಮುದಾಯದ ಬೆಂಬಲಕ್ಕೆ ನಿಂತು ಜಾತಿ ವ್ಯವಸ್ಥೆಯ ವಿರುದ್ದ ಅರಿವು ಮೂಡಿಸಬೇಕಾದ ಆಯಾ ತಾಲ್ಲೂಕು ದಂಡಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಸಮರ್ಪಕ ನಿರ್ವಹಣೆಯಿಂದಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಆದಕಾರಣ ಅಧಿಕಾರಿಗಳನ್ನು ಅವರನ್ನೇ ಹೊಣೆಗಾರಿಕೆಯನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹುಳದೇನಹಳ್ಳಿ ವೆಂಕಟೇಶ್, ಹಿರೇಕರಪನಹಳ್ಳಿ ಮುನಿರಾಜು, ಹುಣಸನಹಳ್ಳಿ ಸತೀಶ್, ಸೇಠ್ಕಾಂಪೌoಡ್ ಗೌತಮ್, ಕೀಲುಕೊಪ್ಪ ಮುನಿರಾಜು, ಅರವಿಂದ್ಮಾರಾ, ಮಧು, ಮುಂತಾದವರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ