ಬಿಜೆಪಿಯಿಂದ ರೀಚಾರ್ಜ್ ವ್ಯವಹಾರ ಕುದುರಿದಕ್ಕೆ ಪ್ರತ್ಯಕ್ಷವಾದ ಕುಮಾರ್ ಬಂಗಾರಪ್ಪ ಎಂದು ಲೇವಡಿ ಮಾಡಿದ ಮುಖಂಡರು.
(SHIVAMOGA): ಸೊರಬ: ಬಿಜೆಪಿಯಿಂದ ರೀಚಾರ್ಜ್ ವ್ಯವಹಾರ ಕುದುರಿದಕ್ಕೆ ಪ್ರತ್ಯಕ್ಷವಾದ ಕುಮಾರ್ ಬಂಗಾರಪ್ಪ, ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ವಿರುದ್ಧ ಅಕ್ಷರ ಜ್ಞಾನವಿಲ್ಲದ, ದುರಹಂಕಾರಿ, ಚುನಾವಣೆಗಾಗಿ ಬಾಡಿಗೆ ಮನೆಯಲ್ಲಿದ್ದಾರೆ, ರಿಸಲ್ಟ್ ಬಂದ್ಮೇಲೆ ಮನೆ ಖಾಲಿ ಮಾಡ್ತಾರೆ ಎಂಬ ಮಾಜಿ ಶಾಸಕ ಕುಮಾರ್ ಬಂಗಾರಪ್ಪನವರ ಹೇಳಿಕೆಗೆ ಸೊರಬ ಬ್ಲಾಕ್ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ
ಭಾನುವಾರ ಪಟ್ಟಣದ ಬಂಗಾರಧಾಮದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಖಂಡನಾ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಮಾಜಿ ಮುಖ್ಯಮಂತ್ರಿಯ ಮಗನಾಗಿರುವ ಕುಮಾರ ಬಂಗಾರಪ್ಪ ಘನತೆಗೆ ತಕ್ಕಂತೆ ಮಾತನಾಡಬೇಕೆ ಹೊರತು ಬೇಕಾಬಿಟ್ಟಿಯಾಗಿ ಮಾತನಾಡುವುದರ ಅವರಿಗೆ ಶೋಭೆ ತರುವಂತದ್ದಲ್ಲ. ರಾಜಕಾರಣ, ಜನಪರ ಆಡಳಿತ ಮಾಡಲು ಅಕ್ಷರ ಜ್ಞಾನಕ್ಕೆ ಮಿಗಿಲಾಗಿ ಅನುಭವ ಮುಖ್ಯ. ಅದು ಮಧು ಬಂಗಾರಪ್ಪ ಅವರಲ್ಲಿ ಇದ್ದುದರಿಂದಲೇ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಿ ಜಿಲ್ಲೆಯ ಜವಬ್ದಾರಿಯನ್ನು ವಹಿಸಿದೆ. ಇದನ್ನು ಸಹಿಸದ ಕುಮಾರ್ ಬಂಗಾರಪ್ಪ ಹತಾಶ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ ಕುಟುಕಿದರು.
ಕುಮಾರ್ ಬಂಗಾರಪ್ಪ ಅವರಿಗೆ ಪಾಠ ಮಾಡುವಷ್ಟು ಎತ್ತರಕ್ಕೆ ಮಧು ಬಂಗಾರಪ್ಪ ಅವರು ಬೆಳೆದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಸುಧಾರಣೆ ತರುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಸೊರಬದತ್ತ ಮುಖ ಮಾಡದಿದ್ದ ಬಿಜೆಪಿಯ ಕುಮಾರಬಂಗಾರಪ್ಪ ಈಗ ಇದ್ದಕ್ಕಿದ್ದಂತೆ ಲೋಕಸಭಾ ಚುನಾವಣೆ ಹತ್ತಿರ ಬಂದಾಗ ಕಾಣಿಸಿಕೊಳ್ಳುತ್ತಿದ್ದಾರೆ.ಇಷ್ಟು ದಿನ ಹಾಗಾದರೆ ಇವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಜೀವಂತವಾಗಿದ್ದೇನೆ ಎಂಬುದಕ್ಕೆ ಹಾಗೂ ಬಿಜೆಪಿಯಿಂದ ರೀಚಾರ್ಜ್ ವ್ಯವಹಾರ ಕುದುರಿದಕ್ಕೆ ಪ್ರತ್ಯಕ್ಷವಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಚುನಾವಣೆ ಮುಗಿದ ಬಳಿಕ ಮನೆ ಖಾಲಿ ಮಾಡುತ್ತಾರೆಂದು ಸ್ವಂತ ಸಹೋದರಿ ಗೀತಾ ಶಿವರಾಜ್ಕುಮಾರ್ ವಿರುದ್ಧವೇ ಇಂತಹ ಬೇಕಾಬಿಟ್ಟಿ ಹೇಳಿಕೆ ನೀಡಿರುವ ಕುಮಾರ್ ಬಂಗಾರಪ್ಪ ಈ ಹಿಂದೆ ಶಾಸಕರಾಗಿದ್ದಾಗ ತಾವು ನೆಲೆಸಿದ ಮನೆ ಬಾಡಿಗೆಯನ್ನು ಮಾಲೀಕರಿಗೆ ಪಾವತಿಸದೇ ಅದೇ ಮನೆಯನ್ನು ವಶಪಡಿಸಿಕೊಳ್ಳಲು ಸಂಚು ಮಾಡಿದ್ದ ಅವರು ಇಂದು ಗೀತಾ ಶಿವರಾಜಕುಮಾರ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಹೇಳಲು ಯಾವ ನೈತಿಕತೆ ಇದೆ ಎಂದು ಕುಟುಕಿದರು.
ಪಕ್ಷಕ್ಕೆ ನಿಷ್ಠರಾಗಿ ದುಡಿದ ಕಾರ್ಯಕರ್ತರನ್ನು ಕಡೆಗಾಣಿಸಿ, ತಾಲೂಕನ್ನು ಲೂಟಿ ಮಾಡಿ, ಅಧಿಕಾರಿಗಳ ವರ್ಗಾವಣೆಯಲ್ಲಿ ಹಣದ ವ್ಯವಹಾರ ನಡೆಸಿ ಜನಮಾನಸದಿಂದ ಹೊರಗುಳಿದ ವಿಕೃತ ಮನಸ್ಸಿನ ಕುಮಾರ್ ಬಂಗಾರಪ್ಪನ ಇಂತಹ ಗುಣದಿಂದಲೇ ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡಲಿಲ್ಲ. ಇಂದು ಮಧು ಬಂಗಾರಪ್ಪನವರು ಸಚಿವರಾಗಿ, ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಎಸ್.ಬಂಗಾರಪ್ಪನವರ ಹಾದಿಯಲ್ಲಿ ಸಾಗುತ್ತಿರುವುದನ್ನು ಸಹಿಸದೇ ಮತ್ಸರದಿಂದ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವ ಇಂತಹವರಿಗೆ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಸರಿಯಾದ ಉತ್ತರ ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಗಣಪತಿ ಮಾತನಾಡಿ, ಮಾಜಿ ಸಚಿವರು, ಮಾಜಿ ಶಾಸಕರು ಆಗಿರುವ ಕುಮಾರ್ ಬಂಗಾರಪ್ಪ ತಾವೇನು ಮಾತನಾಡುತ್ತಿದ್ದೇನೆ ಎಂಬುದನ್ನು ಅವರೇ ಪ್ರಶ್ನಿಸಿಕೊಳ್ಳಬೇಕು. ಬಂಗಾರಪ್ಪನ ಹಿರಿಯ ಮಗನಾದ ನನ್ನಿಂದ ಆಗದ ಕೆಲಸ ಕಿರಿಯ ಮಗ ಮಧು ಬಂಗಾರಪ್ಪನಿಂದ ಆಗುತ್ತಿದೆ ಎಂಬುದನ್ನು ಸಹಿಸಿಕೊಳ್ಳದೇ ವಿನಾಕಾರಣ ಆರೋಪ ಮಾಡುತ್ತಿರುವುದನ್ನು ನಾವೆಂದಿಗೂ ಸಹಿಸುವುದಿಲ್ಲ. ಈಗಾಗಲೇ ತಾಲೂಕಿನ ಜನತೆ 45000 ಮತಗಳ ಅಂತರದಿಂದ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್, ರಾಜಕುಮಾರ್ ಕುಟುಂಬದ ಸಮಾಜಮುಖಿ ಕೆಲಸಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲ ಸಹಿಸದೆ ಮಾತನಾಡುವುದು ಸರಿಯಲ್ಲ ಎಂದರು.
ಕೆಸಿಸಿಸಿ ಸದಸ್ಯ ಕೆ.ಪಿ.ರುದ್ರಗೌಡ ಮಾತನಾಡಿ, ಸಾಮಾನ್ಯ ಜ್ಞಾನವಿಲ್ಲದೇ ಮಾತನಾಡುವ ಕುಮಾರ್ ಬಂಗಾರಪ್ಪನ ವ್ಯಕ್ತಿತ್ವ, ಸಾಮರ್ಥ್ಯ ಏನೆಂಬುದನ್ನು ನೋಡಿಯೇ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸಂಬಂಧಗಳಿಗೆ ಬೆಲೆ ಕೊಡದ ಈ ವ್ಯಕ್ತಿ ಕ್ಷೇತ್ರದ ಜನರ ಸಂಬಂಧ ಭಾವನೆಗಳಿಗೆ ಬೆಲೆ ಕೊಡುತ್ತಾರೆಯೇ? ಸುಮ್ಮನೆ ಮಾತನಾಡಬೇಕು, ರಾಜಕಾರಣಕ್ಕಾಗಿ ಎಂದು ಮಾತನಾಡಬಾರದು ಎಂದರು.
ಮುಖಂಡರಾದ ನಾಗರಾಜ್ ಚಿಕ್ಕಸವಿ, ಎಂ.ಡಿ ಶೇಖರ್, ಹೆಚ್. ಗಣಫತಿ, ಕೆ.ಪಿ.ರುದ್ರಗೌಡ, ಪ್ರಶಾಂತ ಮೇಸ್ತ್ರಿ , ರಶೀದ್ ಅಹ್ಮದ್, ಜೆ.ಪ್ರಕಾಶ್, ಸುರೇಶ್ ಬಿಳವಾಣಿ, ಸುಜಾತಾ ಜೋತಾಡಿ, ಜ್ಯೋತಿ ನಾರಾಯಣಪ್ಪ, ಬಸವಂತಪ್ಪ, ಸತ್ಯನಾರಾಯಣ್, ಶ್ರೀಕಾಂತ ಚಿಕ್ಕಶಕುನ, ಮುಖಶ್, ಲೋಕೇಶ್, ಚಿನ್ನಪ್ಪ ಮತ್ತಿತತರರಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ