ಸಮಾಜ ಸೇವೆಗೆ ಹಣ ವಿನಿಯೋಗಿಸುವ ಮನಸ್ಸು ಮುಖ್ಯ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಮನುಷ್ಯನಿಗೆ ಜೀವನದಲ್ಲಿ ಹಣವಿದ್ದರೆ ಮಾತ್ರ ಸಾಲದು. ಅದನ್ನು ಕೇವಲ ಸ್ವಂತಕ್ಕೆ ಬಳಸದೆ ಸಮಾಜ ಸೇವೆಗೆ ವಿನಿಯೋಗಿಸುವ ಮನಸ್ಸು ಇರುವುದು ಮುಖ್ಯವಾಗಿದೆ ಎಂದು ರಾಯಲ್ ಇಂಡಿಯನ್ಸ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ಓ.ಡಿ.ಸ್ಟೀಫನ್ ಹೇಳಿದರು.
ಕುವೈತ್ ಉದ್ಯಮಿ, ಸಮಾಜ ಸೇವಕ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರ ಐವತ್ತನೇ ಜನ್ಮ ದಿನಾಚರಣೆ ಅಂಗವಾಗಿ ಮೆಣಸುಕೊಡಿಗೆಯ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸ್ವಚ್ಛತಾ ಕಾರ್ಯವನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
ಸ್ಥಳೀಯರೇ ಆಗಿರುವ ಕುವೈತ್ನಲ್ಲಿ ಉದ್ಯೋಗದಲ್ಲಿರುವ ಕ್ಲಿಫರ್ಡ್ ಲಾರೆನ್ಸ್ ಅವರು ತಮ್ಮ ಸ್ವಗ್ರಾಮದ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದು ನಿರಂತರವಾಗಿ ಸಮಾಜಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಏನಾದರೊಂದು ಕೆಲಸವನ್ನು ಮಾಡುತ್ತಿದ್ದಾರೆ.
ಕರೋನಾ ಸಂದರ್ಭದಲ್ಲಿ ನೂರಾರು ಬಡ ಕುಟುಂಬಗಳಿಗೆ ದಿನಸಿ ಕಿಟ್, ಆರೋಗ್ಯ ಕಿಟ್ಗಳನ್ನು ವಿತರಿಸಿದ್ದಾರೆ. ಅನಾಥಾಶ್ರಮಗಳಿಗೆ ನೆರವನ್ನು ನೀಡಿದ್ದಾರೆ. ನೆರೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ನೆರವು ನೀಡಿದ್ದಾರೆ. ಇತ್ತೀಚೆಗೆ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾರ್ಡ್ನಲ್ಲಿ ಸ್ವಚ್ಛತಾ ಆಂದೋಲನ ನಡೆಸಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳ ಕುರಿತು ಅಪಾರ ಅಭಿಮಾನ ಹೊಂದಿರುವ ಅವರು ಕ್ರೀಡೆಗಳಿಗೆ ಸದಾ ಪ್ರೋತ್ಸಾಹಿಸುತ್ತಿದ್ದಾರೆ. ಕೆಲವರ ಬಳಿ ಕೋಟಿಗಟ್ಟಲೆ ಹಣವಿದ್ದರೂ ಸಹ ಅದನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮನಸ್ಸು ಮಾಡುವುದಿಲ್ಲ. ಆದರೆ ಕ್ಲಿಫರ್ಡ್ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕಾಗಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕ್ಲಿಫರ್ಡ್ ಅಭಿಮಾನಿ ಬಳಗದ ಮೇಲ್ವಿಚಾರಕ ಜಗದೀಶ್ ಅರಳೀಕೊಪ್ಪ ಮಾತನಾಡಿ, ಕ್ಲಿಫರ್ಡ್ ಅವರ ಐವತ್ತನೇ ಜನ್ಮ ದಿನದ ಅಂಗವಾಗಿ ಅವರ ಆಶಯದಂತೆ ಮೆಣಸುಕೊಡಿಗೆ ಭಗತ್ ಸಿಂಗ್ ಕ್ರೀಡಾಂಗಣ ಸ್ವಚ್ಛತೆ, ರೋಗಿಗಳಿಗೆ ನೆರವು, ಅಂಗನವಾಡಿ ಮಕ್ಕಳಿಗೆ ವಿವಿಧ ಪರಿಕರಗಳನ್ನು ನೀಡುವ ಕಾರ್ಯಕ್ರಮವನ್ನು ಅಭಿಮಾನಿ ಬಳಗದಿಂದ ನಡೆಸಲಾಗುತ್ತಿದೆ.
ಕ್ರೀಡಾಕ್ಷೇತ್ರದ ಕುರಿತು ಅಪಾರ ಅಭಿಮಾನ ಹೊಂದಿರುವ ಕ್ಲಿಫರ್ಡ್ ಅವರು ವಿದೇಶದಲ್ಲಿದ್ದರೂ ಸ್ವಗ್ರಾಮದ ಕುರಿತು ಹೊಂದಿರುವ ಅಪಾರ ಅಭಿಮಾನ ಅವರ ದೇಶಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಸಂದೇಶ್, ಮಲೆಯಾಳಿ ಕಾಲೋನಿಯ ಗ್ರಾಮಸ್ಥ ಸಿದ್ದಿಕ್, ಕೃಷ್ಣಪ್ಪ, ಹರೀಶ್ ಪೂಜಾರಿ, ಕುಮಾರ್ ಕುಸಾಲ್, ಶ್ರೀಧರ್ ಮತ್ತಿತರರು ಇದ್ದರು.