ನ.11 ಬಹು ನಿರೀಕ್ಷಿತ ಯರಗೋಳು ಯೋಜನೆ ಮುಖ್ಯಮಂತ್ರಿಗಳಿoದ ಲೋಕಾರ್ಪಣೆ, ಕಾಂಗ್ರೆಸ್ ಮುಖಂಡರಿoದ ಪರಿಶೀಲನೆ-20ಸಾವಿರ ಮಂದಿ ಭಾಗಿ-ಊರುಬಾಗಿಲು ಶ್ರೀನಿವಾಸ್
(KOLARA): ಬಂಗಾರಪೇಟೆ:- ಜಿಲ್ಲೆಯ ಮೂರು ತಾಲೂಕುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಹು ನಿರೀಕ್ಷಿತ ಯರಗೋಳು ಯೋಜನೆಗೆ ನ.11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಅಂದಿನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಗೌರವಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ತಿಳಿಸಿದರು.
ಇಂದು ಕಾಂಗ್ರೆಸ್ ಪಕ್ಷದ ಮುಖಂಡರ ನಿಯೋಗದೊಂದಿಗೆ ಯರಗೋಳು ಅಣೆಕಟ್ಟು ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ನಡೆಸುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಬರಪೀಡಿತ ಜಿಲ್ಲೆಯ ಜನತೆಗೆ ಶುದ್ದ ಕುಡಿಯುವ ನೀರು ಒದಗಿಸುವ ಯರಗೋಳು ಅಣೆಕಟ್ಟು ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲೆಯ ಶಾಸಕರಾದ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಶ್ರಮಿಸುತ್ತಿದ್ದು ಇವರೊಂದಿಗೆ ಇಡೀ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಜಿಲ್ಲಾ ಸಮಿತಿ ಕೈಜೋಡಿಸಿದೆ ಎಂದು ತಿಳಿಸಿದರು. ಯರಗೋಳು ಯೋಜನೆಯಿಂದ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗೊಳ್ಳಲಿದೆ, ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆ ಹರಿದು ಬಂದು ಈ ಡ್ಯಾಂ ಸೇರುತ್ತದೆ, ಈ ನೀರು ಆರೋಗ್ಯ ರಕ್ಷಣೆಗೆ ಅತ್ಯಂತ ಉತ್ತಮವಾಗಿದೆ ಎಂದ ಅವರು, ಕೋಲಾರದ ನಾಗರೀಕರಿಗೆ ಬಹುಕಾಲದ ನಂತರ ಶುದ್ದ ಕುಡಿಯುವ ಸಿಹಿ ನೀರು ಸಿಗಲಿದೆ ಎಂದು ತಿಳಿಸಿದರು.
ದಶಕದ ಹಿಂದೆ ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕೋಲಾರದ ಪತ್ರಕರ್ತರು ಮತ್ತು ಪರಿಸರವಾದಿ ಗೆಳೆಯರು ಯರಗೋಳ್ ಡ್ಯಾಂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಣೆಕಟ್ಟು ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನೂ ಕಾಂಗ್ರೆಸ್ ಪಕ್ಷವು ಸ್ಮರಿಸಿಸಿಕೊಳ್ಳುತ್ತಿದೆ ಎಂದರು.
ಯರಗೋಲ್ ಅಣೆಕಟ್ಟೆ ಪೂರ್ಣ ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ರಾಜ್ಯ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವರಾದ ರಮೇಶ್ಕುಮಾರ್, ಕೆ.ಶ್ರೀನಿವಾಸಗೌಡ ಇವರುಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಯರಗೊಳ್ ಅಣೆಕಟ್ಟೆ ನಿರ್ಮಾಣಗೊಂಡು ನ.11 ರಂದು ಲೋಕಾರ್ಪಣೆಗೊಳ್ಳುವುದರಿಂದಾಗಿ ಕೋಲಾರ ಮಾಲೂರು ಹಾಗೂ ಬಂಗಾರಪೇಟೆ ತಾಲೂಕು ಮಾರ್ಗ ಮಧ್ಯದ ಗ್ರಾಮಾಂತರ ಪ್ರದೇಶಕ್ಕೂ ಶುದ್ಧ ಕುಡಿಯುವ ನೀರು, ಲಭ್ಯವಾಗಲಿದೆ ಮತ್ತು ಮೂರು ನಗರಗಳಿಗೂ ನೀರು ಸಿಗಲಿದೆ ಎಂದು ತಿಳಿಸಿದರು.
ಯರಗೋಳ್ ಅಣೆಕಟ್ಟೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ 20000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಈ ಕಾರ್ಯಕ್ರಮ ನಮ್ಮ ಜಿಲ್ಲೆಯ ಬಹುನಿರೀಕ್ಷಿತ ಮಹತ್ವದ್ದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸೇರಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳೊoದಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಸಚಿವರು ಸೇರಿದಂತೆ ರಾಜ್ಯ ಸಂಪುಟದ ಅನೇಕ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಹಾಜರಿರಲಿದ್ದು, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಮಂತ್ರಿಗಳು ಯರಗೋಳು ಯೋಜನೆ ಲೋಕಾರ್ಪಣೆಯ ಜತೆಗೆ ಇನ್ನು ಹಲವಾರು ಕಾಮಗಾರಿಗಳ ಶಂಕುಸ್ಥಾಪನೆ,ಉದ್ಘಾಟನೆ ನೆರವೇರಿಸಲಿದ್ದು, ಅತಿ ಶೀಘ್ರ ಕೋಲಾರದ ಜನತೆ ಯರಗೋಳು ನೀರು ಬಳಕೆಗೆ ಸಿಗುವಂತಾಗಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಹಿರಿಯ ಮುಖಂಡರಾದ ಶ್ರೀಕೃಷ್ಣ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ, ಮುಖಂಡರುಗಳಾದ ನಾಗರಾಜ್, ಶ್ರೀನಿವಾಸ್, ನಾರಾಯಣಸ್ವಾಮಿ. ಎಸ್ಟಿ ಬ್ಲಾಕ್ ಅಧ್ಯಕ್ಷ ರಮೇಶ ನಾಯಕ್, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ತಿರುಮಲೇಶ್ ಬಂಗಾರಪೇಟೆ ಹಿರಿಯ ಕಾಂಗ್ರೆಸ್ ಮುಖಂಡ ಮುನಿರಾಜು, ಓಬಿಸಿ ಬ್ಲಾಕ್ ಅಧ್ಯಕ್ಷ ಪ್ರಸಾದ್, ಮಿಲ್ಟಿç ರಾಮು, ನಾಗೇಶ್, ಹಾರೋಹಳ್ಳಿ ನಾರಾಯಣಸ್ವಾಮಿ, ಓಬಲೇಶ್, ಮತ್ತಿತರರು ಉಪಸ್ಥರಿದ್ದು, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಡೆಯುತ್ತಿರುವ ಸಿದ್ಧತೆಗಳನ್ನು ಮುಖಂಡರುಗಳು ಪರಿಶೀಲಿಸಿದರು.
ವರದಿ:ವಿಷ್ಣು ಕೋಲಾರ