ಅಂಗಡಿ ಮಳಿಗೆಗಳು ಮತ್ತು ಬಾರ್, ವೈನ್ ಸ್ಟೋರ್ಗಳ ಮೇಲೆ ಗುರುವಾರ ಸಂಜೆ 6:00 ಯಿಂದ ರಾತ್ರಿ 10:00 ಗಂಟೆಯವರೆಗೂ ದಾಳಿ ನಡೆಸಿದ ಪುರಸಭೆ
(KOLARA): ಬಂಗಾರಪೇಟೆ :ಸರ್ಕಾರ ರಾಜ್ಯಾದ್ಯಂತ ಆಹಾರ ಪದಾರ್ಥಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಹಾಗೂ ಆಹಾರ ಇಲಾಖೆಯ ನಿರೀಕ್ಷಕರು ಪಟ್ಟಣದ ವ್ಯಾಪ್ತಿಯ ನಾನಾ ಅಂಗಡಿ, ಹೋಟೆಲ್ ಮತ್ತು ಬಾರ್, ವೈನ್ ಸ್ಟೋರ್ಗಳ ಮೇಲೆ ದಿಢೀರ್ ದಾಳಿ ನಡೆಸಿದರು.
ಬಸ್ ನಿಲ್ದಾಣದ ಸಮೀಪ ಇರುವ ಹೋಟೆಲ್, ಅಂಗಡಿ ಮಳಿಗೆಗಳು ಮತ್ತು ಬಾರ್, ವೈನ್ ಸ್ಟೋರ್ಗಳ ಮೇಲೆ ಗುರುವಾರ ಸಂಜೆ 6:00 ಯಿಂದ ರಾತ್ರಿ 10:00 ಗಂಟೆಯವರೆಗೂ ದಾಳಿ ನಡೆಸಿದ ಪುರಸಭೆಯ ಮುಖ್ಯ ಅಧಿಕಾರಿ ಸತ್ಯನಾರಾಯಣ ಹಾಗೂ ಆಹಾರ ಇಲಾಖೆಯ ಅಧಿಕಾರಿ ಪ್ರತೀಶ್ ಕುಮಾರ್ ಮತ್ತು ಪುರಸಭೆ ಆರೋಗ್ಯ ಅಧಿಕಾರಿ ಗೋವಿಂದರಾಜು ಸಿಬ್ಬಂದಿ ಸುಮಾರು 30 ಕೆಜಿಗಳಷ್ಟು ಪ್ಲಾಸ್ಟಿಕ್ ಲೋಟ, ಚಮಚ, ಕವರ್ ಸೇರಿದಂತೆ ನಾನಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.
ಈ ವೇಳೆ ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ ಮಾತನಾಡಿ, ನಗರದ ನೈರ್ಮಲ್ಯ ಕಾಪಾಡುವ ಮತ್ತು ಆರೋಗ್ಯ ದೃಷ್ಟಿಯಿಂದ ಸರಕಾರ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧ ಮಾಡಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಹಾಗೂ ಪುರಸಭೆ ಸಿಬ್ಬಂದಿ ನಗರದೆಲ್ಲೆಡೆ ಇಂದಿನಿಂದ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ಆರಂಭಿಸಿದ್ದೇವೆ. ಪ್ಲಾಸ್ಟಿಕ್ ವಿರುದ್ಧ ಅಂಗಡಿ ಮಳಿಗೆ, ಹೋಟೆಲ್ ಮತ್ತು ಬಾರ್, ವೈನ್ಸ್ಗಳ ಮೇಲೆ ಅನಿರೀಕ್ಷಿತ ದಾಳಿಗಳು ಇನ್ನು ಮುಂದೆ ನಿರಂತರವಾಗಿ ನಡೆಯಲಿವೆ. ಆದ್ದರಿಂದ ಎಲ್ಲರೂ ಬಂಗಾರಪೇಟೆಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಹಕರಿಸಬೇಕು. ಇಂದಿನಿಂದಲೇ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದರು.
ನಿಯಮಗಳನ್ನು ಉಲ್ಲಂಘಿಸುವ ವ್ಯಾಪಾರಿ ಮಳಿಗೆ ವಿರುದ್ಧ ಕ್ರಮ ಜರುಗಿಸಲಿದೆ.ಅಂಗಡಿಗೆ ನೀಡಿರುವ ಲೈಸನ್ಸ್ ರದ್ದು ಮಾಡಲು ಪುರಸಭೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಎಸ್ ವೆಂಕಟೇಶ,ರಾಕೇಶ್ ಗೌಡ, ಪುರಸಭೆಯ ಆರೋಗ್ಯ ಅಧಿಕಾರಿ ಗೋವಿಂದರಾಜು, ಮಹೇಶ್ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಇದ್ದರು.
ವರದಿ:ವಿಷ್ಣು ಕೋಲಾರ