ಕಾಂಗ್ರೆಸ್ ಮುಖಂಡರ ದಬ್ಬಾಳಿಕೆ ಖಂಡಿಸಿ ಸಿಡಿದೆದ್ದ ಸೊರಬ ದಲಿತ ಸಂಘರ್ಷ ಸಮಿತಿ
(SHIVAMOGA): ಸೊರಬ ತಾಲೂಕಿನಲ್ಲಿ ಕೆಲ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆ ಹೆಚ್ಚಾಗಿದ್ದು, ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕು ಆಡಳಿತ ಸಂಪೂರ್ಣ ವಿಫಲ ವಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವುದರಿಂದ ಅಕ್ರಮ ಕೆಲಸಗಳು ಅವ್ಯಾಹತವಾಗಿ ನಡೆದಿದ್ದು ಕೆಲ ಮುಖಂಡರು ಸಂಬಂಧಿಗಳಿಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ.
ಈ ಹಿಂದೆ ಹೇಗೆ ಭೂ ಮಂಜೂರಾತಿಯಲ್ಲಿ ಅಕ್ರಮ ನಡೆದಿತ್ತೋ ಅದೇ ಅಕ್ರಮ ಪುನಃ ನಡೆಯುತ್ತಿದೆ.
ಹಿರೇಶಕುನ ಸನಂ 113,108 ರ ಸರ್ಕಾರಿ ಜಾಗೆ ಉಳ್ಳವರ, ಕಾಂಗ್ರೆಸ್ ಕೆಲ ಮುಖಂಡರ ಸಂಬಂಧಿಗಳ ಪಾಲಾಗುತ್ತಿದೆ.
ತಹಶಿಲ್ದಾರರ ನಿಷ್ಕ್ರಿಯ ಕಾರ್ಯವೈಖರಿಯಿಂದ ಕಂದಾಯ ಇಲಾಖೆ ಕಾರ್ಯಗಳೆಲ್ಲವೂ ನಿಷ್ಕ್ರಿಯಗೊಂಡಿದ್ದು ಸಾಮಾನ್ಯ ಜನರಿಗೆ ತೀವ್ರ ತೊಂದರೆ ಆಗಿದೆ. ಕೂಡಲೇ ತಹಶಿಲ್ದಾರರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಉಳಿಸುವ ಬಗ್ಗೆ ಮಾತಾಡುತ್ತಿರುವುದು ಕೇವಲ ಹಿಂದುಳಿದ ವರ್ಗದವರ ಮತಪಡೆಯುವ ಓಲೈಕೆ ಮಾತುಗಳಾಗಿವೆ. ಹಿಂದುಳಿದ ಜನಾಂಗಕ್ಕೆ ಯಾವುದೇ ಸರ್ಕಾರಿ ಸೌಲಭ್ಯ ನೀಡುವುದರಲ್ಲಿ ಜನಪ್ರತಿನಿದಿಗಳು ಮುಂದಾಗಿಲ್ಲ. ಈ ನೀತಿ ಮುಂದಿನ ಚುನಾವಣೆಗೆ ವ್ಯತಿರಿಕ್ತವಾಗಿ ಪರಿಣಮಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಸಚಿವರಿಗೆ ಎಚ್ಚರಿಸಿದರು.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಮುಂಬರುವ ಚುನಾವಣೆಗೆ ನಾವು ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಬಹಿಷ್ಕಾರ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಶಕುನವಳ್ಳಿ ಸಂಚಾಲಕರು ಡಿ ಎಸ್ ಎಸ್ ಸೊರಬ,ಗುರುರಾಜ್ ರಾಜ್ಯ ವಿಭಾಗೀಯ ಸಂಚಾಲಕರು, ಜಿಲ್ಲಾ ಸಂಘಟನಾ ಸಂಚಾಲಕ ಬಿ. ಬಂಗಾರಪ್ಪ ನಿಟ್ಟಕ್ಕಿ,ಹರೀಶ್ ಚಿಟ್ಟೂರು ತಾಲೂಕು ಸಂಘಟನಾ ಸಂಚಾಲಕರು,ನಾಗರಾಜ ಹುರುಳಿಕೊಪ್ಪ ತಾಲೂಕು ಸಂಘಟನಾ ಸಂಚಾಲಕರು ಡಿ ಎಸ್ ಎಸ್ ಸೊರಬ,ಎಲ್ಲಾ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ವರದಿ: ಮಧು ರಾಮ್ ಸೊರಬ