ಮಲೆನಾಡಿನ ಗಿರಿಜನಗಳಿಗೆ ಆತಂಕ ಸೃಷ್ಟಿ ಮಾಡಿದ ರಾಜ್ಯ ಸರ್ಕಾರ, ಅರಣ್ಯ ಇಲಾಖೆ.
(CHIKKAMAGALURU): ಮೀಸಲು ಅರಣ್ಯ ಹೆಚ್ಚಿಸುವ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಜನ..! ರಾಜ್ಯದಲ್ಲಿರುವ 22% ಇರುವ ಅರಣ್ಯವನ್ನ 33% ಮಾಡಬೇಕೆಂದು ಹೊರಟಿರುವ ಸರ್ಕಾರ.ಇದಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕಿನ ಹರಿಜನ-ಗಿರಿಜನ ಹಾಗೂ ಕಾಡಿನ ಮಕ್ಕಳು ಮಾಡಿದ ಒಂದು-ಎರಡು ಎಕರೆ ಒತ್ತುವರಿ ಭೂಮಿಯ ಮೇಲೆ ಸರ್ಕಾರದ ಕಣ್ಣು..! ಸಿಟ್ಟಿಗೆದ್ದ ಮಲೆನಾಡ ಜನ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಒತ್ತುವರಿ ಭೂಮಿಯನ್ನು ತೆರವು ಮಾಡಬೇಕಾದರೆ 90 ದಿನಗಳ ಮುಂಚೆ ನೋಟೀಸ್ ನೀಡುವುದು ಸರ್ಕಾರದ ನಿಯಮವಾಗಿದೆ.ಇದನ್ನು ಉಲ್ಲಂಘನೆ ಮಾಡಿದ ಕಾಫಿನಾಡ ಅರಣ್ಯ ಅಧಿಕಾರಿಗಳು ಹಕ್ಕುಪತ್ರ ಇರುವ ಭೂಮಿಗೆ ಯಾವುದೇ ನೋಟೀಸ್ ನೀಡದೆ, ಏಕಾಏಕಿಯಾಗಿ ನುಗ್ಗಿ ಹೇಳದೆ ಕೇಳದೆ ತೆರವು ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಈ ವಿಷಯವಾಗಿ ಸಿಟ್ಟಿಗೆದ್ದ ಬಡ ಜನರು ಈ ಸರ್ಕಾರಕ್ಕೆ ಮಾನ- ಮರ್ಯದೆ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕಾಡನ್ನು ಉಳಿಸಿ – ಬೆಳೆಸುವ ಜನರ ಮೇಲಿನ ದಬ್ಬಾಳಿಕೆ ಬಿಟ್ಟು ನಿಮಗೆ ತಾಕತ್ ಇದ್ದರೆ, ನೂರಾರು ಎಕರೆ ಒತ್ತುವರಿ ಮಾಡಿ, ಬಿಲ್ಡಿಂಗ್ ಕಟ್ಟಿರುವ ರಾಜಕಾರಣಿಗಳ ಭೂಮಿಯನ್ನು ತೆರವು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಕ್ಕುಪತ್ರ ಇದ್ದರೆ ಖುಲ್ಲಾ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದ್ದು, ಸರ್ಕಾರ ಅದನ್ನೂ ಉಲ್ಲಂಘನೆ ಮಾಡಿದ್ದೂ ಹರಿಜನ-ಗಿರಿಜನ-ಕಾಡಿನಮಕ್ಕಳನ್ನ ಕಾಡಿನಿಂದ ಹೊರಗಟ್ಟಿದರೆ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 15-20 ಸಾವಿರ ಜನ ಬೀದಿ ಪಾಲಾಗುತ್ತಾರೆ, ಪುನರ್ವಸತಿಯನ್ನೂ ಕಲ್ಪಿಸಿಲ್ಲ. ಇದರಿಂದ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬದುಕಿಗಾಗಿ ಒಂದು-ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿದ ಬಡವರ ಮೇಲೆ ದಬ್ಬಾಳಿಕೆ ಮಾಡೋದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಹೀಗೆ ಮುಂದುವರೆದರೆ ಬಿಲ್ಲು-ಬಾಣ ಹೊರಬರುತ್ತೆ ಎಂದು ಆದಿವಾಸಿಗಳು ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ.