ಕಟ್ಟಡ ಕಾರ್ಮಿಕರಿಗೆ ನೆರವಾಗಲು ರಾಜ್ಯ ಸರಕಾರ ಟೂಲ್ ವಿತರಣೆ.
(KOLARA): ಬಂಗಾರಪೇಟೆ :ಕಟ್ಟಡ ಕಾರ್ಮಿಕರಿಗೆ ನೆರವಾಗಲು ರಾಜ್ಯ ಸರಕಾರ ಟೂಲ್ ಕಿಟ್ ನೀಡುತ್ತಿದೆ. ಇದನ್ನು ಎಲ್ಲಾ ಕಟ್ಟಡ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ರಾಜ್ಯ ಸರ್ಕಾರ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಕಟ್ಟಡ ಕಾರ್ಮಿಕರಿಗೆ ಹಾಗೂ ವಿದ್ಯುತ್ ಕಾರ್ಮಿಕರಿಗೆ,ವೆಲ್ಡಿಂಗ್ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ.ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದ ನಿರ್ಮಾಣ ಕಾರ್ಯದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಮಹತ್ತರವಾದದ್ದು. ಕಾರ್ಮಿಕರ ಹಿತದೃಷ್ಟಿಯಿಂದ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ.ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ,ಅನಾರೋಗ್ಯ ಪೀಡಿತರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ನೆರವು, ದೈಹಿಕ ಅಂಕವಿಕಲತೆ ಉಂಟಾದರೆ ಸಹಾಯ ಧನ, ಪಿಂಚಣಿ ಸೌಲಭ್ಯ ಹೀಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ವಿಮಾ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು.
ಈಗ ಹೊಸದಾಗಿ ಕಟ್ಟಡ ಮತ್ತು ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ,ಕಾರ್ಮಿಕ ಗೃಹ ನಿರ್ಮಾಣ ಎಂಬ ಇಲಾಖೆ ಮಾಡಲಾಗಿದೆ. ಗೃಹ ನಿರ್ಮಾಣದ ಅಡಿಯಲ್ಲಿ ಮನೆಗಳು ಇಲ್ಲದಂತಹ ಕಾರ್ಮಿಕರಿಗೆ ಗೃಹ ನಿರ್ಮಾಣವನ್ನು ಮಾಡಿಕೊಡಲಾಗುವುದು ಎಂದರು. ಹಾಗೂ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನನ್ನ ತಾಲೂಕಿನಲ್ಲಿ ವಿಶೇಷವಾಗಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಮಿಕ ಭವನವನ್ನು ಪ್ರಾರಂಭ ಮಾಡುತ್ತಿದ್ದೇನೆ, ಏಕೆಂದರೆ ಕಾರ್ಮಿಕರ ಕಷ್ಟ ಏನೆಂದು ನನಗೆ ಗೊತ್ತು, ಕಾರ್ಮಿಕರ ಮಕ್ಕಳಿಗೆ ಮದುವೆ ಮಾಡಬೇಕೆಂದರೆ,ನಾಮಕರಣ ಮಾಡಬೇಕೆಂದರೆ ಬಹಳ ಕಷ್ಟವಾಗುತ್ತದೆ ಆದ್ದರಿಂದ ಇದನ್ನೆಲ್ಲಾ ತಪ್ಪಿಸಬೇಕು ಎಂದು ನನ್ನ ತಾಲೂಕಿನಲ್ಲಿ ಈ ವರ್ಷದಲ್ಲೇ ಕಾರ್ಮಿಕರ ಭವನವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಇಓ ರವಿಕುಮಾರ್, ಸರಕಾರಿ ನೌಕರ ಸಂಘದ ಅಧ್ಯಕ್ಷ ರವಿ,
ಕಾರ್ಮಿಕ ಇಲಾಖೆಯ ಅಧಿಕಾರಿ ರಾಜೇಶ್ವರಿ, ಇನ್ಸ್ಪೆಕ್ಟರ್ ದಯಾನಂದ್ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ