ಚಿಕ್ಕಮಗಳೂರುನ್ಯೂಸ್

ರೈತರು, ಜನಸಾಮಾನ್ಯರಿಗೆ ಬರೆ ಎಳೆದ ರಾಜ್ಯ ಸರ್ಕಾರ

ರೈತರು, ಜನಸಾಮಾನ್ಯರಿಗೆ ಬರೆ ಎಳೆದ ರಾಜ್ಯ ಸರ್ಕಾರ

(CHIKKAMAGALURU): ಬಾಳೆಹೊನ್ನೂರು: ರಾಜ್ಯ ಸರ್ಕಾರವು ಏಕಾಏಕಿಯಾಗಿ ತೈಲ ದರವನ್ನು ಏರಿಕೆ ಮಾಡುವ ಮೂಲಕ ರೈತರು ಹಾಗೂ ಜನಸಾಮಾನ್ಯರಿಗೆ ಬರೆಯನ್ನು ಎಳೆದಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಈಗಾಗಲೇ ಹಲವು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇದೀಗ ದಿಢೀರ್ ಆಗಿ ತೈಲ ದರವನ್ನು ಏರಿಸುವ ಮೂಲಕ ಸಂಕಷ್ಟದ ಹೊರೆಯನ್ನು ಹೊರಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಇದ್ದ ತೈಲ ದರವೇ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತಿಯಾಗಿತ್ತು. ಆದರೂ ಕೂಡ ಪುನಃ ದರ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ನಿತ್ಯದ ಜೀವನ ನಿರ್ವಹಣೆ ಮಾಡದಂತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮಳೆ ಇಲ್ಲದೇ ರೈತರ ಬೆಳೆಗಳು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಪ್ರಮಾಣದಲ್ಲಿ ದೊರೆಯದೆ ನಷ್ಟ ಅನುಭವಿಸಿದ್ದರು.

ಇಂತಹ ಸಂದರ್ಭದಲ್ಲಿ ತೈಲ ದರ ಏರಿಕೆ ಮಾಡಿರುವುದು ಅಸಮಂಜಸವಾಗಿದೆ.
ತೈಲ ದರ ಏರಿಕೆಯಿಂದ ರಸಗೊಬ್ಬರ ಸೇರಿದಂತೆ ರೈತರ ಕೃಷಿ ಬಳಕೆಯ ವಿವಿಧ ವಸ್ತುಗಳ ಬೆಲೆಯೂ ಏರಿಕೆಯಾಗಿ ರೈತರು ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ. ಜನಸಾಮಾನ್ಯರಿಗೂ ಸಹ ತೀವ್ರ ಹೊರಯನ್ನು ಇದು ತಂದಿದ್ದು, ಕಟ್ಟಡ ಸಾಮಾಗ್ರಿ, ದಿನಸಿ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಲಿದೆ.
ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕ ರಾಜ್ಯ ಸರ್ಕಾರವು ಚುನಾವಣಾ ಫಲಿತಾಂಶದ ಹತಾಶೆಗೊಂಡು ಜನರ ಮೇಲೆ ದ್ವೇಷ ಭಾವನೆಯನ್ನು ಹೊಂದಿ ತೈಲ ದರ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ರಾಜ್ಯ ಸರ್ಕಾರವು ಇದೀಗ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ದರವನ್ನು ಏರಿಕೆ ಮಾಡಿರುವುದು ಜನರ ಕಣ್ಣಿಗೆ ಕಾಣಿಸುತ್ತಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದಿದ್ದರೆ ಯೋಜನೆಗಳನ್ನು ಸ್ಥಗಿತಗೊಳಿಸುವುದು ಬಿಟ್ಟು ಜನರ ಜೇಬಿಗೆ ಕತ್ತರಿ ಹಾಕಿ ಪುನಃ ಅದನ್ನು ಯೋಜನೆ ಮೂಲಕ ಕೊಡುವ ಅವಶ್ಯಕತೆಯಿದೆಯೇ ಎಂಬುದನ್ನು ಯೋಚಿಸಬೇಕಿದೆ. ಜನರು ದಂಗೆ ಏಳುವ ಮೊದಲು ತೈಲ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Scan the code