ನ್ಯೂಸ್ಶಿವಮೊಗ್ಗ

ವನ್ಯ ಜೀವಿಗಳು ಮನುಷ್ಯನ ಮೇಲೆ ಮುಗಿಬೀಳುವ ಕಾಲ ದೂರವಿಲ್ಲ.

ವನ್ಯ ಜೀವಿಗಳು ಮನುಷ್ಯನ ಮೇಲೆ ಮುಗಿಬೀಳುವ ಕಾಲ ದೂರವಿಲ್ಲ.

(SHIVAMOGA): ಸೊರಬ: ಮನುಷ್ಯನ ದುರಾಸೆ ಮಿತಿ ಮೀರಿದ್ದು  ವನ್ಯ ಜೀವಿಗಳು ಮನುಷ್ಯನ ಮೇಲೆ ಮುಗಿಬೀಳುವ ಕಾಲ ದೂರವಿಲ್ಲ. ಬದುಕುವ ಹಕ್ಕು ಕಸಿಯುವ ಮನುಷ್ಯನ ಸ್ವಾರ್ಥಕ್ಕೆ ಪ್ರಕೃತಿಯೆ ಬುದ್ಧಿ ಕಲಿಸುತ್ತದೆ ಎಂದು ಪರಿಸರ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಹತಾಶೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿಗ್ಗಾ ಗ್ರಾಮದಲ್ಲಿ ಪಾಲಿಟೆಕ್ನಿಕ್ ಕಾಲೇಜು ಹಮ್ಮಿಕೊಂಡಿರುವ ರಾಸೇಯೋಜನೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಜೀವವೈವಿಧ್ಯದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಅವ್ಯಾಹತ ಪರಿಸರದ ಮೇಲಿನ ಮಾನವನ ಪ್ರಹಾರದಿಂದ ಅನೇಕ ಸಸ್ಯ, ಪ್ರಾಣಿ ಪ್ರಭೇದಗಳು ನಶಿಸಿವೆ. ಇಂತಹ ನಾಶ ಮನುಷ್ಯನ ಆರೋಗ್ಯ, ಕೃಷಿ, ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ನಾವು ನಮ್ಮ ನೆಲೆಯ ಜೊತೆಗೆ ನಮ್ಮ ಪರಂಪರೆ, ದೇಶಾಭಿಮಾನದ ಮೇಲಿನ ಅಭಿಮಾನವನ್ನು ಕಳೆದುಕೊಂಡಿದ್ದೇವೆ. ಆಡಳಿತಗಳ ಅವೈಜ್ಞಾನಿಕ ಯೋಜನೆ, ಭವಿಷ್ಯದ ಕಾಳಜಿ ಮರೆತಿರುವ ಯುವ ಜನತೆ, ನೈತಿಕತೆಯ ಕ್ಷೀಣತೆ ಮಕ್ಕಳಲ್ಲಿ ಎದ್ದು ತೋರುತ್ತಿದ್ದು ನಿಯಂತ್ರಿಸುವ ಹೊಣೆ ಕೇವಲ ಶಿಕ್ಷಕರದ್ದಷ್ಟೆ ಅಲ್ಲ, ಪೋಷಕರದ್ದು, ಸಮಾಜದ್ದು ಎಂಬುದನ್ನು ಅರಿಯಬೇಕಿದೆ ಎಂದರು.

ಪರಿಸರದ ಸೂಕ್ಷ್ಮ ಸಂವೇದನೆಗಳ ಕುರಿತು ಶಿಬಿರಾರ್ಥಿಗಳೊಂದಿಗೆ ಅಂತರಕ್ರಿಯಾ ಚಟುವಟಿಕೆ ನಡೆಯಿತು, ಶಿಗ್ಗಾ ಗ್ರಾಮದ ಐತಿಹಾಸಿಕ, ಪಾರಂಪರಿಕ ಹಿನ್ನೆಲೆಯ ಕುರಿತು ಮಾಹಿತಿ ನೀಡಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ, ಅರಣ್ಯ, ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದಿಲ್ಲ. ನಮ್ಮ ಭೂಮಿ ಸಂರಕ್ಷಣೆ ನಮ್ಮ ಹೊಣೆ ಎಂದು ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂಕಲ್ಪದಲ್ಲಿ ಪಾಲ್ಗೊಂಡರು.

ಶಿಬಿರಾಧಿಕಾರಿ ಡಾ.ದೀಪಕ್ ಡೋಂಗ್ರೆ, ಅಪ್ಪು, ಶರತ್ ಚಕ್ರವರ್ತಿ, ಡಿ. ಕೆ. ಉಮೇಶ್, ಅನು ಅಳಗೋಡಿ ಶಿಬಿರಾರ್ಥಿಗಳು, ಗ್ರಾಮಸ್ಥರು ಇದ್ದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code