ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ: ಡಿ.ಎಸ್. ಶಂಕರ್ ಶೇಟ್.
(SHIVAMOGA): ಸೊರಬ ಪಟ್ಟಣದ ಮಾರ್ಕೇಟ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಮಾತನಾಡಿ,ಮಹಿಳೆಯರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ದೊರೆಯುವ ಆಧ್ಯಾತ್ಮ, ನೆಮ್ಮದಿ ಬೇರಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ವರ್ತಮಾನದಲ್ಲಿ ಜಾತಿ, ಬೇಧಗಳಿಂದ ಮುಕ್ತರಾಗಿ, ಉನ್ನತ ಜೀವನವನ್ನು ನಡೆಸುವ ಆಧ್ಯಾತ್ಮಿಕತೆಯ ಮಾರ್ಗವನ್ನು ಕಲಿಸುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರಲ್ಲಿರುವ ಮೌಲ್ಯಗಳು ಮರೆಯಾದಂತೆ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಆದ್ದರಿಂದ, ಮೌಲ್ಯಗಳ ಉಳಿವಿಗಾಗಿ ಶಾಂತಿಯನ್ನು ಸ್ಥಾಪಿಸಲು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಸಮಾಜದ ಒಳಿತಿಗಾಗಿ ಸರ್ವರ ಹಿತವನ್ನೇ ಬಯಸುವ ಕೆಲಸ ಮಾಡುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ನೆರವಾಗುತ್ತಿದ್ದಾರೆ. ಜಾತಿ, ಧರ್ಮ ಬೇಧವಿಲ್ಲದೇ ಸರ್ವರನ್ನು ಸಮಾನವಾಗಿ ಕಂಡು ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬ್ಯಾಡಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಿ ಸುರೇಖಾ ಅಕ್ಕ ಮಾತನಾಡಿ, ಇತಿಹಾಸದ ಪುಟಗಳಲ್ಲಿ ತಮ್ಮ ಜೀವನ ಸಾಧನೆಯನ್ನು ಸುವರ್ಣಾಕ್ಷರಗಳಲ್ಲಿ ಬರೆದ ಹಲವಾರು ಪುಣ್ಯಾತ್ಮರಿದ್ದಾರೆ. ಅವರೆಲ್ಲರಿಗೂ ನಾವು ಅತ್ಯಂತ ಕೃತಜ್ಞರಾಗಿರಬೇಕು. ಏಕೆಂದರೆ ನಾವು ಇಲ್ಲಿ ಕುಳಿತು ಸೇವೆ ಮಾಡುವುದಕ್ಕೆ ಅವರ ಕೊಡುಗೆ ಇದೆ. ವರ್ತಮಾನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸಲು ರಾಜಯೋಗವನ್ನು ಅಭ್ಯಸಿಸಿದಾಗ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಇಲ್ಲಿ ನೀಡುವ ರಾಜಯೋಗ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆದು ತಮ್ಮ ಬದುಕಿನಲ್ಲಿ ಆಧ್ಯಾತ್ಮಿಕತೆಯ ಅನುಭೂತಿಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದ ಅವರು ಕಳೆದ 32 ವರ್ಷಗಳ ಹಿಂದೆ ಸೊರಬದಲ್ಲಿ ಆರಂಭಗೊ0ಡ ವಿಶ್ವವಿದ್ಯಾಲಯ ಈ ಕಟ್ಟಡಲ್ಲಿ 25 ವರ್ಷ ಪೂರೈಸುತ್ತಿರುವುದು ಸಂತಸವನ್ನು0ಟು ಮಾಡಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಜೈನ್, ಲಕ್ಷ್ಮಣ ಸಾಗರ್ ನಡಹಳ್ಳಿ, ವಿದುಷಿ ಲಕ್ಷ್ಮಿ ಮುರುಳೀಧರ್ ಮಾತನಾಡಿದರು.
ಯಕ್ಷಗಾನ ಕಲಾವಿದರಾದ ಲಕ್ಷ್ಮಿ ಮುರುಳೀಧರ್, ವೀಣಾ ಶ್ರೀಧರ್, ಶೋಭಾ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಿಂದು, ಶ್ರೀರಕ್ಷಾ ಅವರನ್ನು ಸನ್ಮಾನಿಸಲಾಯಿತು. ಸೌಭಾಗ್ಯಕ್ಕ ಹಿರೇಕೆರೂರು, ವಂದನಕ್ಕ ನ್ಯಾಮತಿ, ವೀಣಕ್ಕ ಸೊರಬ, ಉಮೇಶ್ ಭದ್ರಾಪುರ, ಪತ್ರಕರ್ತರಾದ ಸಂದೀಪ ಯು.ಎಲ್., ರಾಘವೇಂದ್ರ ಬಾಪಟ್ ಮತ್ತಿತತರರು ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ