ನ್ಯೂಸ್ಶಿವಮೊಗ್ಗ

ಒತ್ತುವರಿ ತೆರವು, ಸರ್ವೇ ಕಾರ್ಯದ ಕುರಿತು ಹಲವು ಭಿನ್ನ ಸಲಹೆಗಳಿವೆ.

ಒತ್ತುವರಿ ತೆರವು, ಸರ್ವೇ ಕಾರ್ಯದ ಕುರಿತು ಹಲವು ಭಿನ್ನ ಸಲಹೆಗಳಿವೆ.

(SHIVAMOGA): ಸಾಗರ ವಾಯುವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಣಪತಿ ಕೆರೆ ಎರಡೂ ಬದಿ ಇಂಟರ್ ಲಾಕ್ ಹಾಕುವುದು, ಗಿಡ ನೆಡುವ ಉದ್ದೇಶ ಹೊಂದಿದ್ದೇವೆ. ಒತ್ತುವರಿ ತೆರವು, ಸರ್ವೇ ಕಾರ್ಯದ ಕುರಿತು ಹಲವು ಭಿನ್ನ ಸಲಹೆಗಳಿವೆ. ಸದ್ಯ ಅಭಿವೃದ್ಧಿಗೆ ಮಾತ್ರ ಆದ್ಯತೆ ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ನಗರಸಭೆ ವತಿಯಿಂದ ಎಸ್‍ಎಫ್‍ಸಿ ವಿಶೇಷ ಅನುದಾನದಲ್ಲಿ ಗಣಪತಿ ಕೆರೆ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕೆರೆ ಒತ್ತುವರಿ ತೆರವಿನ ಬಗ್ಗೆ ಹಲವು ಚರ್ಚೆಯಿದೆ. ಮೊದಲಿನ ಅಭಿವೃದ್ಧಿ ಕಾಮಗಾರಿಗಳಿಗೂ ಆಕ್ಷೇಪಗಳಿರುವುದರಿಂದ ನಗರಸಭೆಯಲ್ಲಿರುವ 70 ಲಕ್ಷ ರೂ. ಹಣವನ್ನು ತಡೆ ಹಿಡಿಯಲಾಗಿದೆ. ಪ್ರಸ್ತುತ ಅವಧಿಯಲ್ಲಿ ಗಣಪತಿ ಕೆರೆಯ ಅಭಿವೃದ್ಧಿಗೆ ಸರಕಾರದ ಯಾವುದೇ ಅನುದಾನವನ್ನೂ ಉಪಯೋಗಿಸುವುದಿಲ್ಲ. ಬದಲಿಗೆ ನಬಾರ್ಡ್ ಹಣ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತದೆ. ಸದ್ಯ ಕೆರೆ ಸುತ್ತಲಿನ ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ರಸ್ತೆ, ವಿದ್ಯುತ್ ದೀಪ ಅಳವಡಿಕೆ, ಸುಣ್ಣ ಬಣ್ಣ ಹೊಡೆಸಿ ಸುಂದರವಾಗಿಸಲಾಗುತ್ತದೆ ಎಂದರು.


ಹಬ್ಬದ ವೇಳೆಯಲ್ಲಿ ಗಣಪತಿ ವಿಸರ್ಜನೆ ಯಾವುದೇ ತೊಂದರೆಯಾಗದಂತೆ ವಿದ್ಯುದ್ದೀಪ, ಕೆರೆ ಆವರಣದಲ್ಲಿ ನೆಲ ಹಾಸು ಅಳವಡಿಸಲಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ರಕ್ಷಣಾ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲರೂ ಶ್ರದ್ಧಾಭಕ್ತಿಯಿಂದ ವಿಘ್ನನಿವಾರಕನನ್ನು ಪೂಜಿಸೋಣ ಎಂದರು.
ಅಡಕೆ ಬೆಳೆಗಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲಾಗಿದ್ದು, ಮುಖ್ಯಮಂತ್ರಿಗಳು ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಕೊಳೆರೋಗದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೆಳೆಗಾರರಿಗೆ ಅಗತ್ಯ ಬೆಂಬಲ ನೀಡಲಾಗುವುದು. ಬೆಳೆಗಾರರ ನಿಯೋಗವನ್ನೂ ಮುಖ್ಯಮಂತ್ರಿಗಳ ಬಳಿ ಒಯ್ಯಲಾಗುತ್ತದೆ ಎಂದು ಭರವಸೆ ನೀಡಿದರು.


ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ನಗರಸಭೆ ಸದಸ್ಯರಾದ ಕುಸುಮ ಸುಬ್ಬಣ್ಣ, ಸಬೀನಾ ತನ್ವೀರ್, ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಶಬಾನ, ಎಲ್. ಚಂದ್ರಪ್ಪ, ಪರಿಮಳ, ಉಷಾ ಮೊದಲಾದವರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code