Newsಚಿಕ್ಕಮಗಳೂರುಮಲೆನಾಡು

ಒತ್ತುವರಿ ತೆರವಿಗೂ ಕಸ್ತೂರಿ ರಂಗನ್ ವರದಿಗೂ ಸಂಬoಧವಿಲ್ಲ
ರೈತರ ಬದುಕಿಗಾಗಿ ಬಿಜೆಪಿ, ಜೆಡಿಎಸ್ ಯಾವುದೇ ಹೋರಾಟಕ್ಕೆ ಸಿದ್ಧ

ಒತ್ತುವರಿ ತೆರವಿಗೂ ಕಸ್ತೂರಿ ರಂಗನ್ ವರದಿಗೂ ಸಂಬoಧವಿಲ್ಲರೈತರ ಬದುಕಿಗಾಗಿ ಬಿಜೆಪಿ, ಜೆಡಿಎಸ್ ಯಾವುದೇ ಹೋರಾಟಕ್ಕೆ ಸಿದ್ಧ

(CHIKKAMAGALURU): ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಒತ್ತುವರಿ ತೆರವು ಖಂಡಿಸಿ ಬಾಳೆಹೊನ್ನೂರು ಪ್ರಸ್ತುತ ಮಲೆನಾಡಿನಲ್ಲಿ ವ್ಯಾಪಿಸಿರುವ ಆತಂಕದ ಒತ್ತುವರಿ ಸಮಸ್ಯೆಗೂ, ಕಸ್ತೂರಿ ರಂಗನ್ ವರದಿಗೂ ಯಾವುದೇ ಸಂಬoಧವಿಲ್ಲ. ವಾಸ್ತವದಲ್ಲಿ ಪ್ರಸ್ತುತ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಪಟ್ಟಣದ ಜೇಸಿ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ಸಮಿತಿಯನ್ನು ಜಾರಿಗೆ ತಂದಿದ್ದು ಈ ಹಿಂದಿನ ಯುಪಿಎ ಸರ್ಕಾರದ ಪರಿಸರ ಸಚಿವರುಗಳಾದ ಜೈರಾಮ್ ರಮೇಶ್ ಹಾಗೂ ಜಯಂತಿ ನಟರಾಜ್ ಅವರು. ಆದರೆ ಅವರ ಸಮಿತಿಯ ವರದಿ ಸಲ್ಲಿಕೆಯಾಗಿದ್ದು ಮಾತ್ರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ.


ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಇದು ಉಪಗ್ರಹ ಆಧಾರಿತ ಸರ್ವೆಯ ವರದಿಯಾಗಿದೆ. ಮಲೆನಾಡಿನಲ್ಲಿರು ತೋಟ, ಗದ್ದೆಗಳನ್ನು ವರದಿಯಲ್ಲಿ ಸೇರಿಸಲಾಗಿದೆ. ಗ್ರಾಮಸಭೆಗಳ ಮೂಲಕ ಸರ್ವೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ.
ಕಸ್ತೂರಿ ರಂಗನ್ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು 9೦ ದಿನಗಳ ಕಾಲಾವಕಾಶ ನೀಡಿದ್ದು, ಅದರಲ್ಲಿ ಈಗಾಗಲೇ 65 ದಿನಗಳು ಕಳೆದಿವೆ. ಇನ್ನು ಕೇವಲ 25 ಅವಕಾಶವಿದ್ದು, ರಾಜ್ಯ ಸರ್ಕಾರ ಕೂಡಲೇ ಆಕ್ಷೇಪಣೆ ಸಲ್ಲಿಸಬೇಕಿದೆ. ಆದರೆ ರಾಜ್ಯ ಸರ್ಕಾರವು ಮೂಡಾ ಹಗರಣ, ವಾಲ್ಮೀಕಿ ಹಗರಣಕ್ಕೆ ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ನೀಡುತ್ತ, ನಟ ದರ್ಶನ್‌ಗೆ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸಲು ಅಗತ್ಯ ಸೌಲಭ್ಯಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸುತ್ತ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅರಣ್ಯ ಸಚಿವರು ಇಲಾಖೆಯಲ್ಲಿ ದಂಧೆಗಳನ್ನು ನಡೆಸಲು ಕಾರ್ಯನಿರ್ವಹಣೆ ಮಾಡುತ್ತಿದ್ದು, ಬಡವರ ಪರ ಕಾಳಜಿಯನ್ನು ಹೊಂದಿಲ್ಲ. ರೈತರ ಒತ್ತುವರಿ ತೆರವಿನ ಬಗ್ಗೆ ಆದೇಶ ಹೊರಡಿಸಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಧೈರ್ಯವಿದ್ದರೆ ರೈತರ ಜಮೀನು ಖುಲ್ಲಾಗೊಳಿಸುವುದಿಲ್ಲ ಎಂಬ ಆದೇಶವನ್ನು ಹೊರಡಿಸಿಕೊಂಡು ಬರಬೇಕಿದೆ. ಶೃಂಗೇರಿ ಕ್ಷೇತ್ರದಲ್ಲಿ ಶಾಸಕತ್ವಕ್ಕೆ ಜೀವ ಇಲ್ಲವಾಗಿದ್ದು, ಇಲ್ಲಿನ ಶಾಸಕರು ರಾಜೀನಾಮೆ ನೀಡುವುದೇ ಒಳಿತು.


ನಾನು 15 ವರ್ಷಗಳ ಕಾಲ ಶಾಸಕನಾಗಿದ್ದಾಗ ರೈತರ ಒಂದಿoಚು ಭೂಮಿಯನ್ನು ತೆರವು ಮಾಡಲು ಬಿಟ್ಟಿರಲಿಲ್ಲ. ಮಲೆನಾಡಿನಲ್ಲಿ ಮಾಡಿರುವ ಒತ್ತುವರಿಯಿಂದ ಯಾವುದೇ ಭೂಕುಸಿತ ಸಂಭವಿಸಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ರಾಜ್ಯದಲ್ಲಿ ಶೇ.33 ಅರಣ್ಯ ಇರಬೇಕು ಎಂಬ ಕಾನೂನು ಇದೆ. ಈಗಾಗಲೇ ಹೆಚ್ಚಿನ ಅರಣ್ಯ ಮಲೆನಾಡು ಭಾಗದಲ್ಲಿದ್ದು, ಇನ್ನೂ ಹೆಚ್ಚಿನ ಅರಣ್ಯ ಬೇಕಾದರೆ ಸರ್ಕಾರ ಬಯಲು ನಾಡಿನಲ್ಲಿ ಗಿಡಗಳನ್ನು ನೆಟ್ಟು ಅರಣ್ಯ ಮಾಡಿಕೊಳ್ಳಲಿ. ಮಲೆನಾಡಿನಲ್ಲಿ ಗಿಡ ನೆಡಲು ಬರುವುದು ಬೇಡ. ಇಲ್ಲಿ ಈಗಾಗಲೇ ನೈಸರ್ಗಿಕವಾಗಿ ಅರಣ್ಯ ಬೆಳೆಯುತ್ತಿದೆ.
ಕಾನೂನು ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಇರಬೇಕೆ ಹೊರತು ಕಾನೂನಿಗಾಗಿ ಮನುಷ್ಯ ಬದುಕುವ ಪರಿಸ್ಥಿತಿ ಬೇಡವಾಗಿದೆ. ಈಗ ಆಗಿರುವ ಒತ್ತುವರಿಯನ್ನು ಸಂಪೂರ್ಣ ಜನರಿಗೆ ಬಿಡಿ. ಉಳಿದ ಜಾಗವನ್ನು ಸರ್ಕಾರ ಉಳಿಸಿಕೊಂಡು ಹೋಗಬೇಕಿದೆ. ಜನರ ಒತ್ತುವರಿ ತೆರವುಗೊಳಿಸದಂತೆ ಇರುವುದು ಶಾಸಕರ ಜವಾಬ್ದಾರಿ ಆಗಿದ್ದು, ಶಾಸಕರ ಒತ್ತುವರಿ ತೆರವಿಗೆ ಮುಂದಾಗಿ ರೈತರಿಗೆ ಶಾಪವಾಗಿ ಉಳಿಯಬಾರದು. ರೈತರ ವಿರೋಧದ ನಡುವೆಯೂ ಒತ್ತುವರಿ ತೆರವಿಗೆ ಮುಂದಾದರೆ ಬಿಜೆಪಿ, ಜೆಡಿಎಸ್ ಪಕ್ಷಗಳು ಒಗ್ಗೂಡಿ ರೈತರ ಬದುಕಿಗಾಗಿ ಕ್ಷೇತ್ರಾದ್ಯಂತ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಕೂರಲು ಹಿಂಜರಿಯುವುದಿಲ್ಲ ಎಂದರು.


ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಮಲೆನಾಡಿನ ಅರಿವಿಲ್ಲ ಅರಣ್ಯ ಸಚಿವರು, ವಿದೇಶದಲ್ಲಿ ವ್ಯಾಸಂಗ ಮಾಡಿದ ಕಂದಾಯ ಸಚಿವರು ಮಲೆನಾಡನ್ನು ಛಿದ್ರಗೊಳಿಸಲು ಹೊರಟಿದ್ದು, ರಾಜ್ಯ ಸರ್ಕಾರ ಜನರನ್ನು ಒಡೆದಾಳಿ ಸರ್ಕಾರ ಮುನ್ನಡೆಸುವ ಪ್ರಯತ್ನದಲ್ಲಿದೆ.
ಅರಣ್ಯ ಸಂರಕ್ಷಣಾ ಕಾನೂನಿನಲ್ಲಿ ಮರ ಕಡಿಯಲು ಯಾವುದೇ ಅವಕಾಶಗಳಿಲ್ಲ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವಿನ ಹೆಸರಿನಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳ ಮೂಲಕ ಸಾವಿರಾರು ಮರಗಳನ್ನು ನಾಶ ಮಾಡಲು ಹೊರಟಿದೆ.
ಕ್ಷೇತ್ರದ ಶಾಸಕರಿಗೆ ಜನರ ಮತ ಬೇಕು. ಆದರೆ ಜನರ ಹಿತ ಬೇಕಾಗಿಲ್ಲ. ಕೇವಲ ಅವರಿಗೆ ಅಧಿಕಾರ ಮಾತ್ರ ಬೇಕಾಗಿದೆ. ಸರ್ಕಾರ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ತೆರವು ಮಾಡಲಿ. ಆದರೆ ಅನಧಿಕೃತವಾಗಿ ರೈತರ ಜಮೀನು ತೆರವುಗೊಳಿಸಿದರೆ ನಾವೂ ಕೂಡ ಅನಧಿಕೃತವಾಗಿ ಅರಣ್ಯ ಇಲಾಖೆಯ ಕಚೇರಿಗೆ ನುಗ್ಗಬೇಕಾದ ಪರಿಸ್ಥಿತಿ ಎದುರಾಗಬಹುದು.
ರೈತರ ಜೀವನಾಡಿಯಾದ ಜಮೀನನ್ನು ಸರ್ಕಾರ ಒತ್ತುವರಿ ತೆರವಿನ ಹೆಸರಿನಲ್ಲಿ ಕಿತ್ತುಕೊಳ್ಳಲು ಹೊರಟಿದೆ. ಅಧಿಕಾರ ನಡೆಸಲು ಬಾರದವರ ಕೈಗೆ ಇಂದು ಅಧಿಕಾರ ನೀಡಿದ್ದು, ಇದೀಗ ಪರಿತಪಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ರೈತರ ಪರವಾಗಿ ಹೋರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ತೀವ್ರಗೊಳಿಸಲಾಗುವುದು. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದರೆ ಕ್ಷೇತ್ರಕ್ಕೆ ಸಚಿವರು ಕಾಲಿಡದಂತೆ ಚಳುವಳಿ ಮಾಡಲಾಗುವುದು. ಸಚಿವರು ಬಾರದಂತೆ ಬ್ಯಾನರ್‌ಗಳನ್ನು ಕಟ್ಟಲಾಗುವುದು ಎಂದರು.
ಸಭೆಗೂ ಮುನ್ನ ಪಟ್ಟಣದ ರೋಟರಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಒತ್ತುವರಿ ತೆರವುಗೊಳಿಸದಂತೆ ನಾಡಕಚೇರಿ ಉಪ ತಹಸೀಲ್ದಾರ್ ಹೇಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮುಖಂಡರಾದ ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್ ಕಲ್ಮಕ್ಕಿ, ಜಗದೀಶ್ಚಂದ್ರ, ಕಾಂತರಾಜ್, ಮಂಜು ಕೆಸವಿ, ಪ್ರಭಾಕರ್ ಪ್ರಣಸ್ವಿ, ಪ್ರದೀಪ್ ಕಿಚ್ಚಬ್ಬಿ, ಕೆ.ಕೆ.ವೆಂಕಟೇಶ್, ಮಂಜು ಹೊಳೆಬಾಗಿಲು, ಸಂತೋಷ್ ಅರೆನೂರು, ಪ್ರೇಮೇಶ್, ಸುಚಿತಾ ಹೆಗ್ಡೆ, ಜೆಡಿಎಸ್ ಮುಖಂಡರಾದ ದೀಪಕ್ ಮರಿಗೌಡ, ಕೆ.ಟಿ.ಗೋವಿಂದೇಗೌಡ, ಕುಂಚೂರು ವಾಸು, ಶಿವಶಂಕರ್, ಕೆ.ಸಿ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಮಲೆನಾಡಿನ ಒತ್ತುವರಿ ತೆರವಿಗೂ, ವಯನಾಡಿನ ಗುಡ್ಡ ಕುಸಿತಕ್ಕೂ ಸಂಬoಧವಿಲ್ಲ. ಸರ್ಕಾರ ಅವೈಜ್ಞಾನಿಕ ಕಾನೂನು, ಕಾಯ್ದೆಗಳನ್ನು ಮಲೆನಾಡಿ ರೈತರು, ಜನಸಾಮಾನ್ಯರ ಮೇಲೆ ಹೇರಲು ಯತ್ನಿಸುತ್ತಿದೆ. ಕ್ಷೇತ್ರದ ಶಾಸಕರಿಗೆ ರೈತರ ಪರ ಕಾಳಜಿ ಇಲ್ಲವಾಗಿದ್ದು, ಇಲ್ಲಿನ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜನವಿರೋಧಿ ಕಾಯ್ದೆಗಳನ್ನು ಹೇರುತ್ತಾ ಬಂದರೆ ಜನರು ದಂಗೆ ಏಳುವುದು ಖಚಿತವಾಗಲಿದೆ.
ಅರುಣ್‌ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ.

ಅರಣ್ಯ ಸಚಿವರಿಗೆ ಅನುಭವ ಇಲ್ಲದೇ ಅಸಂಬದ್ಧ ಆದೇಶ ಹೊರಡಿಸುತ್ತಿದ್ದು, ಸರ್ಕಾರ ಒತ್ತುವರಿ ವಿಚಾರದಲ್ಲಿ ರೈತರ ದಾರಿ ತಪ್ಪಿಸುವ ಯತ್ನದಲ್ಲಿದೆ. ನೂರಾರು ವರ್ಷಗಳಿಂದ ತಲೆಮಾರುಗಳು ಸಾಗುವಳಿ ಮಾಡಿಕೊಂಡು ಬಂದ ಜಮೀನನ್ನು ಸೆಕ್ಷನ್ ೪ಗೆ ಸೇರಿಸಲು ಹೊರಟಿರುವುದು ಖಂಡನೀಯ. ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಅರಣ್ಯ ಎಂದರೆ ಏನು ಎಂದೇ ತಿಳಿದಿಲ್ಲ. ಕ್ಷೇತ್ರದ ಶಾಸಕರು 94ಸಿ, ಫಾರಂ ನಂ.57ರ ಬಗ್ಗೆ ಇದೂವರೆಗೆ ಸದನದಲ್ಲಿ ಮಾತನಾಡಿಲ್ಲ. ಹಕ್ಕುಪತ್ರ ಕೊಡಿಸಲೂ ಪ್ರಯತ್ನ ಮಾಡಿಲ್ಲ. ಒತ್ತುವರಿ ತೆರವಿನ ವಿಚಾರದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.
ಬಿ.ಎಚ್.ದಿವಾಕರಭಟ್, ಜೆಡಿಎಸ್ ಕ್ಷೇತ್ರಧ್ಯಕ್ಷ

Leave a Reply

Your email address will not be published. Required fields are marked *

Scan the code