ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಯಾವುದೂ ಇಲ್ಲ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಪುಟಾಣಿ ಅವನಿ ತೇಜಸ್ವಿನಿ ಕುಟುಂಬದಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಪಟ್ಟಣದ ಗ್ರಂಥಾಲಯಕ್ಕೆ ವಿವಿಧ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಒಂದು ಗ್ರಂಥಾಲಯ ಸಾವಿರ ವಿಶ್ವವಿದ್ಯಾನಿಲಯಗಳಿಗೆ ಸಮನಾಗಿದ್ದು, ಒಂದು ಪುಸ್ತಕದಿಂದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬಹುದು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾಗಿರುವು ಬೇರೆ ಯಾವುದೂ ಸಹ ಪ್ರಪಂಚದಲ್ಲಿ ಇಲ್ಲ.
ಪುಸ್ತಕಗಳನ್ನು ನಿರಂತರವಾಗಿ ಅಧ್ಯಯನ ಮಾಡಿದರೆ ಜ್ಞಾನದೊಂದಿಗೆ ಮನಃ ಪರಿವರ್ತನೆಯಾಗಲು ಸಾಧ್ಯವಿದೆ. ಬಾಳೆಹೊನ್ನೂರಿನ ಗ್ರಂಥಾಲಯವು ಉತ್ತಮವಾಗಿದ್ದು, ಇಲ್ಲಿಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಹಲವಾರು ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುವುದು ಸಂತಸ ತಂದಿದೆ ಎಂದರು.
ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ ಮಾತನಾಡಿ, ಗಣಪತಿ ಎಂದರೆ ವಿದ್ಯೆಗೆ ಹೆಸರುವಾಸಿಯಾಗಿದ್ದು, ಗಣಪತಿ ಹಬ್ಬದ ಸಂದರ್ಭದಲ್ಲಿ ಪುಟಾಣಿ ಅವನಿ ಕುಟುಂಬದವರು ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ಗ್ರಂಥಾಲಯಕ್ಕೆ ಹಸ್ತಾಂತರಿಸುವುದು ಶ್ಲಾಘನೀಯವಾಗಿದೆ. ಪಟ್ಟಣದಲ್ಲಿ ಈ ಬಾರಿ ಹದಿನೈದು ದಿನಗಳ ಕಾಲ ಗಣೇಶೋತ್ಸವ ಆಚರಣೆ ಮಾಡುತ್ತಿದ್ದು, ಎಲ್ಲ ಭಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಇದರೊಂದಿಗೆ ಸ್ಥಳೀಯ ಗ್ರಂಥಾಲಯಕ್ಕೂ ಭೇಟಿ ನೀಡಿ ಪುಸ್ತಗಳನ್ನು ಓದಬೇಕು ಎಂದರು.
ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಬಾಳೆಹೊನ್ನೂರಿನ ಗ್ರಂಥಾಲಯವು ಇತ್ತೀಚಿನ ದಿನಗಳಲ್ಲಿ ನವೀಕರಣಗೊಂಡು ಓದುಗರಿಗೆ ಉತ್ತಮ ವಾತಾವರಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದಬೇಕು. ಸರ್ಕಾರ ಸಹ ಇದೀಗ ಪುಸ್ತಕಗಳೊಂದಿಗೆ ಇ-ಗ್ರಂಥಾಲಯವನ್ನು ಸಹ ಆರಂಭಿಸಿದ್ದು, ಆ ಸೇವೆಯೂ ಇಲ್ಲಿ ಲಭ್ಯವಿದೆ. ಇದರ ಸದುಪಯೋಗವನ್ನು ಸಹ ಪಡೆಯಬೇಕು.
ಗಣೇಶ ಹಬ್ಬದ ಸಂದರ್ಭದಲ್ಲಿ ಪುಟಾಣಿ ಅವನಿ ಕುಟುಂಬಸ್ಥರು ಪುಸ್ತಕವನ್ನು ನೀಡುತ್ತಿರುವುದು ಮಾದರಿಯಾಗಿದ್ದು, ಪುಟಾಣಿ ವಯಸ್ಸಿನಲ್ಲಿಯೇ ಪುಸ್ತಕಗಳ ಬಗ್ಗೆ ಆಸಕ್ತಿ ಇತರರಿಗೆ ಪುಸ್ತಕ ಓದಲು ಪ್ರೋತ್ಸಾಹ ನೀಡುತ್ತಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಸುಧಾಕರ್, ನಿವೃತ್ತ ಎಂಜಿನಿಯರ್ ಶ್ರೀನಿವಾಸ್, ಗ್ರಂಥಪಾಲಕಿ ಲಕ್ಷ್ಮಿ, ಪುಟಾಣಿ ಅವನಿ ತೇಜಸ್ವಿನಿ, ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜ್ಭಟ್ ಮತ್ತಿತರರು ಹಾಜರಿದ್ದರು.