ಕೃಷಿ-ತೋಟಗಾರಿಕಾ-ಅಭಿವೃದ್ಧಿ ಪ್ರಸ್ತಾವನೆಯ ಬಗ್ಗೆ ತಾವೂ ಕೃಷಿ-ತೋಟಗಾರಿಕಾ ಸಚಿವರ ಗಮನ ಸೆಳೆಯಬೇಕು,
(SHIVAMOGA): ಸೊರಬ: ಮಲೆನಾಡು ಕೃಷಿ-ತೋಟಗಾರಿಕೆ-ಅರಣ್ಯ ಸುಸ್ಥಿರ ಅಭಿವೃದ್ಧಿ ಮಾಡೆಲ್ ಅನ್ನು ಇರುವಕ್ಕಿ ವಿಶ್ವವಿದ್ಯಾಲಯ ಜಾರಿ ಮಾಡಿ ದೇಶಕ್ಕೆ ಮಾದರಿ ಆಗಬೇಕು ಹಾಗೂ ಇನ್ನೂ ಮುಂತಾದ ಪ್ರಸ್ತಾವನೆಯನ್ನು ಸಾಗರದಲ್ಲಿ ನಡೆದ ಮಲೆನಾಡು ಸುಸ್ಥಿರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಡಾ. ಆರ್.ಸಿ. ಜಗದೀಶ್ ಕುಲಪತಿಗಳು ಶಿವಪ್ಪ ನಾಯಕ ಕೃಷಿ-ತೋಟಗಾರಿಕೆ-ಅರಣ್ಯ ವಿಶ್ವವಿದ್ಯಾಲಯ ಇರುವಕ್ಕಿ ಇವರಿಗೆ ವೃಕ್ಷಲಕ್ಷ ಆಂದೋಲನದ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಯಿತು.
ಕೃಷಿ-ತೋಟಗಾರಿಕಾ-ಅಭಿವೃದ್ಧಿ ಪ್ರಸ್ತಾವನೆಯ ಬಗ್ಗೆ ತಾವೂ ಕೃಷಿ-ತೋಟಗಾರಿಕಾ ಸಚಿವರ ಗಮನ ಸೆಳೆಯಬೇಕು, ಶಿಫಾರಸ್ಸು ಮಾಡಬೇಕು ಎಂದು ಕೋರಲಾಯಿತು.
ಮಲೆನಾಡಿನ ತೋಟಗಾರಿಕೆ, ಕೃಷಿ, ಜಾನುವಾರು, ಅರಣ್ಯ, ಇಂಧನ, ಜೇನು, ಮಲೆನಾಡಿನ ಪರಂಪರೆ. ಕೃಷಿ ಪದ್ಧತಿ, ಜೀವ ವೈವಿಧ್ಯ, ಜಲಮೂಲ, ಜಲ ನಿರ್ವಹಣೆ, ಸಾಂಬಾರು ಗಿಡ ವೈವಿಧ್ಯ ರಕ್ಷಣೆ, ಕೀಟನಾಶಕ ಬಳಕೆಗೆ ತಡೆ, ಸಾವಯವ ಕೃಷಿ, ಜೈವಿಕ ಇಂಧನ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮುಂತಾದ ಮಲೆನಾಡಿನ ಸುಸ್ಥಿರ ಅಭಿವೃದ್ಧಿ ಕುರಿತ ಕಾರ್ಯಯೋಜನೆ, ಮಾದರಿ ಪ್ರಾತ್ಯಕ್ಷಿಕೆ ರೂಪಿಸಲು ಅಧ್ಯಯನ ಪ್ರಯೋಗ ನಡೆಸಲು ಆದ್ಯತೆ ನೀಡಬೇಕು. ವಿಶ್ವ ವಿದ್ಯಾಲಯಕ್ಕೆ ನೀಡಲಾದ ಒಟ್ಟೂ 777 ಎಕರೆ ಕಾನು ಅರಣ್ಯ ಭೂಮಿಯಲ್ಲಿ 200 ಎಕರೆ ಕಾನು ಅರಣ್ಯಕ್ಕೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಅಂದಿನ ಉಪಕುಲಪತಿಗಳು ಭರವಸೆ ನೀಡಿದ್ದರು. 50 ಎಕರೆ ಕಾನು ಪ್ರದೇಶದಲ್ಲಿ ಅರಣ್ಯ ಸಂಶೋಧನೆ ಕಾರ್ಯ ಕೈಗೊಳ್ಳುವ ಬಗ್ಗೆ, ಸೋಲಾರ, ಜೈವಿಕ ಇಂಧನ ಬಿದಿರು ಯೋಜನೆ ಜಾರಿ ಮಾಡುವ ಬಗ್ಗೆ ಈ ಹಿಂದೆ ಆಶ್ವಾಸನೆ ನೀಡಿದ್ದನ್ನು ನೆನಪಿಸಿ ಇರುವಕ್ಕಿ ಕ್ಯಾಂಪಸ್ ಸುತ್ತಲಿನ ಹಳ್ಳಿಗಳಲ್ಲಿ ಕೃಷಿ ವಿಶ್ವವಿದ್ಯಾಲಯವು ಮಾದರಿ ಪ್ರಾತ್ಯಕ್ಷಿಕೆಗಳನ್ನು ರೂಪಿಸಬೇಕು. ಸಾಗರ- ಹೊಸನಗರ ತಾಲೂಕು ಗಡಿಯಲ್ಲಿ ಇರುವ ಇರುವಕ್ಕಿ ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿದೆ. ಇರುವಕ್ಕಿ ಸುತ್ತಲಿನ ಹೊಸನಗರ ಸಾಗರ ತಾಲ್ಲೂಕಿನ ಹಳ್ಳಿಗಳ ಗ್ರಾಮ ಜೀವ ವೈವಿಧ್ಯ ಸಮಿತಿಗಳು ಮಹಿಳಾ ಸ್ವ ಸಹಾಯ ಸಂಘಗಳ ಭಾಗವಹಿಸುವಿಕೆ, ಅವರಿಗೆ ಕೃಷಿ ವಿ.ವಿ.ಯ ಮೂಲಕ ತರಬೇತಿ, ಜಾಗೃತಿ ಮಾಡಿಸಲು ವಿಶೇಷ ಪೈಲಟ್ ಯೋಜನೆ ಜಾರಿ ಮಾಡಬೇಕು. ಔಷಧಿ ಮೂಲಿಕೆಗಳ ಆಗರವಾದ ಇರುವಕ್ಕಿ ಸುತ್ತಲಿನ ಕಾನುಗಳ ಅಭ್ಯಾಸ, ವಿನಾಶದ ಅಂಚಿನ ಸಸ್ಯಗಳ ಅಭಿವೃದ್ಧಿ ವಿಷಯದ ಬಗ್ಗೆ ರೈತರು, ನಾಟಿವೈದ್ಯರ ಸಹಯೋಗದಲ್ಲಿ ಯೋಜನೆ ಮಾಡಬೇಕು. ಉಪ್ಪಿನ ಕಾಯಿ ಮಿಡಿ ಮಾವಿನ ವೃಕ್ಷ ವೈವಿಧ್ಯ, ಕಾಡಿನ ಹಣ್ಣುಗಳ ವೈವಿಧ್ಯ ರಕ್ಷಣೆ, ಹಲಸು ಜಾತಿಯ ವೈವಿಧ್ಯ ರಕ್ಷಣೆಗೆ ವಿಫಲ ಅವಕಾಶ ಇಲ್ಲಿದೆ. ಈ ಬಗ್ಗೆ ದೇಶದ ಗಮನ ಸೆಳೆಯುವ ಮಾದರಿ ಪ್ರಯೋಗ ಇಲ್ಲಿ ನಡೆಯಬೇಕು. ಕಂಚಿ, ಲಿಂಬು, ಮಾದಲ, ಚಕೋತ, ಸೇರಿದಂತೆ ಸಿಟ್ರಸ್ ಜಾತಿಯ ಫಲ ವೃಕ್ಷಗಳ ತವರೂರು ಈ ಮಲೆನಾಡು. ಇವು ವಿನಾಶದ ಅಂಚಿಗೆ ಸರಿಯುತ್ತಿವೆ ಎಂಬ ಬಗ್ಗೆ ಕೃಷಿ ವಿಶ್ವ ವಿದ್ಯಾಲಯ ಗಮನ ನೀಡಿ ಅವುಗಳ ತಳಿ ಉಳಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ವಿನಂತಿಸಲಾಯಿತು.
ಇಲ್ಲಿನ ತೋಟಗಳು ಜೀವವೈವಿಧ್ಯತೆಗೆ ಹೆಸರು. ಅಡಿಕೆ ಎಂಬ ಏಕ ಜಾತಿ ನೆಡು ತೋಪಾಗಿದೆ ಎಂಬ ಪರಿಸ್ಥಿತಿ ತಡೆಯಲು ವಿವಿ ಸಾಂಬಾರು ಸಸ್ಯ ಯೋಜನೆಗೆ ಮುಂದಾಗಬೇಕು. ವಿವಿ ವಿದ್ಯಾರ್ಥಿಗಳು ತಮ್ಮ ವಿಶೇಷ ಕ್ಷೇತ್ರ ಅಧ್ಯಯನದಲ್ಲಿ ಈ
ಮೇಲಿನ ವಿಷಯಗಳ ಬಗ್ಗೆ ಚಿಕ್ಕ ಚಿಕ್ಕ ಅಧ್ಯಯನ ಕೈಗೊಳ್ಳುವಂತಾಗಬೇಕು. ಕೃಷಿ ಹೊಂಡ, ಚಿಕ್ಕ ಕೆರೆ, ಜಲ ಸಂವರ್ಧನಾ ಕಾರ್ಯ, ಇರುವಕ್ಕಿ ಕ್ಯಾಂಪಸ್
ವ್ಯಾಪ್ತಿಯ ಜಲಮೂಲ ಸಂರಕ್ಷಣೆಗೆ ವಿವಿ ಮುಂದಾಗಬೇಕು.
ಇರುವಕ್ಕಿ ಸುತ್ತ ಅಪರೂಪದ ದೇವರ ಕಾಡುಗಳಿವೆ. ಅರಣ್ಯ ಇಲಾಖೆ ಸಹಕಾರದಲ್ಲಿ ಈ ದೇವರ ಕಾಡುಗಳ ದಾಖಲಾತಿ, ಸಮೀಕ್ಷೆ ನಡೆಸುವ ಜವಾಬ್ದಾರಿ ವಿ ವಿ ತೆಗೆದುಕೊಳ್ಳಬೇಕು. ರಾಸಾಯನಿಕ ಕೀಟನಾಶಕಗಳ ಅಪಾರ ಬಳಕೆ ಹಾಗೂ ನಿಷೇಧಿಸಲ್ಪಟ್ಟ ಕ್ರಿಮಿ, ಕೀಟನಾಶಕ ಬಳಕೆ ತಪ್ಪಿಸಲು ತೋಟಗಾರಿಕೆ, ಕೃಷಿ ಇಲಾಖೆಗಳಿಗೆ ಕೃಷಿ ವಿ ವಿ ಮಾರ್ಗದರ್ಶನ, ಶಿಫಾರಸನ್ನು ಆಗಾಗ್ಗೆ ನೀಡಲು ವಿಶೇಷ ಕಾರ್ಯ ಯೋಜನೆ
ರೂಪಿಸಬೇಕು. ಕೀಟನಾಶಕಗಳಿಗೆ ಬದಲಿ ಉಪಾಯಗಳನ್ನು ವಿಶ್ವ ವಿದ್ಯಾಲಯ ಸೂಚಿಸಬೇಕು. ತಾಲೂಕಾ ಪಂಚಾಯತಗಳ
ಸಮನ್ವಯ ಹೆಚ್ಚಿಸುವ ಪ್ರಯತ್ನ ವಾಗಬೇಕು.
ಇಡೀ ಮಲೆನಾಡಿನ ಕೃಷಿ ಸಂಸ್ಕೃತಿ ಸೊಗಡು ಬಿಂಬಿಸುವ ಆಲೆಮನೆ, ಸುಗ್ಗಿ ಕುಣಿತ, ಭೂಮಿ ಪೂಜೆ, ಗಂಗಾ ಪೂಜೆ, ನಾಟಿ ವೈದ್ಯರು, ಜೌಷಧಿ ಮೂಲಿಕೆ, ಬಿದಿರು ಕುಶಲ ಕೃಷಿ ಉಪಕರಣಗಳು ಮುಂತಾದ ಸಂಗತಿಗಳಿಗೆ ಕೃಷಿ ಮೇಳ ವೇದಿಕೆ ಆಗಬೇಕು. ಮಲೆನಾಡಿನ ಕೃಷಿ, ತೋಟಗಾರಿಕೆ, ಜಾನುವಾರು ಅರಣ್ಯ ಜೀವ ವೈವಿಧ್ಯತೆ ಸಂರಕ್ಷಣೆ, ಸುಸ್ಥಿರ ಸಮಗ್ರ ಅಭಿವೃದ್ಧಿ ವಿಶ್ವವಿಧ್ಯಾಲಯದ ಮುಖ್ಯ ಆದ್ಯತೆಗಳಲ್ಲಿ
ಸೇರ್ಪಡೆಯಾಗಬೇಕು. ಅಗತ್ಯ ಅನುದಾನ ಈ ಮೇಲಿನ ಎಲ್ಲ ಯೋಜನೆಗಳಿಗೆ ಸಿಗುವಂತಾಗಬೇಕು ಎಂಬ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಹಾಗೂ ವೃಕ್ಷಲಕ್ಷ ಸಂಚಾಲಕರು, ಕಾರ್ಯಕರ್ತರಿದ್ದರು
ವರದಿ: ಮಧು ರಾಮ್ ಸೊರಬ