‘ಇದೇ ನನಗೆ ಅನ್ನ ಕೊಟ್ಟ ಸಂಸ್ಥೆ, ನನ್ನ ಬದುಕನ್ನು ಕಟ್ಟಿಕೊಟ್ಟ ಶಾಲೆ’
(ARTICLE): ‘ಟ್ರಿಪ್’ ಅಂತ ಏನಾದರೂ ಪ್ಲಾನ್ ಮಾಡಿದರೆ ಆರಂಭದಲ್ಲಿ ಅದರ ಬಗ್ಗೆ ಬಹಳಷ್ಟು ಚರ್ಚೆ ನಡೆದೇ ನಡೆಯತ್ತೆ. ಬರುವವರು, ಬರದೇ ಇರುವವರು ಎಲ್ಲರೂ ಸೇರಿ ಆ ಸ್ಥಳಕ್ಕೆ ಹೋಗಬಹುದು, ಈ ಸ್ಥಳ ಚೆನಾಗಿದೆ, ಮಾರ್ಗ ಮಧ್ಯೆ ಇಲ್ಲಿಗೂ ಹೋಗಬಹುದು… ಹೀಗೆ ಅನೇಕ ಮಾತುಕತೆಗಳು ನಡೆದು. ಒಂದು ಯೋಜನೆ ಸಿದ್ಧವಾಗುತ್ತದೆ. ಅದಾದ ಮೇಲೆ ಯವಾಗ ಹೊರಡೋದು? ಅನ್ನುವ ಚರ್ಚೆ, ಯಾರುಯಾರು ಬರ್ತಾರೆ? ಒಟ್ಟು ಎಷ್ಟು ಜನ? ಯಾವ ಗಾಡಿ? ಹೀಗೆ ಎಲ್ಲಾ ವಿಷಗಳನ್ನು ಚರ್ಚಿಸಿ ಕೊನೆಗೆ ಹೊರಡಲು ತೀರ್ಮಾನ ಆಗುವ ಸಮಯಕ್ಕೆ ಒಬ್ಬೊಬ್ಬರೆ ‘ನಮ್ಮ ಮನೆಯ ಕಾರ್ಯಕ್ರಮ ಇದೆ, ಆ ದಿನಕ್ಕೆ ನಾವು ಫ್ಯಾಮಿಲಿ ಜೊತೆಗೆ ಬೇರೆ ಕಡೆಗೆ ಹೋಗ್ತಾ ಇದೀವಿ… ಹೀಗೆ ಅನೇಕ ಕಾರಣಗಳು ಬಂದು ಪ್ರಯಾಣಕ್ಕೆ ಹೋಗಿ ಬರುವಷ್ಟರಲ್ಲಿ ಸಾಕಾಗುವುದು.
ಮಕ್ಕಳಿಗೆ ಎಲ್ಲಾ ಟೀಚರ್ಗಳು ಒಟ್ಟಿಗೆ ಸೇರಿ ಎಲ್ಲಿಗಾದರೂ ಹೋಗಿ ಬಂದ ಬಗ್ಗೆ ಮಾಹಿತಿ ಸಿಕ್ಕರಂತೂ ಮುಗಿಯಿತು. ಎಲ್ಲಿ ಹೋದರು ಮಕ್ಕಳು ‘ಎಲ್ಲಾ ಟೀಚರ್ಗಳು ಒಟ್ಟಿಗೆ ಟ್ರಿಪ್ ಹೋಗಿದ್ರಿ. ಹೇಗಿತ್ತು ಟ್ರಿಪ್. ಎಂಜಾಯ್ ಮಾಡಿದ್ರಾ? ಎಲ್ಲಾ ಟೀಚರ್ಗಳನ್ನು ಒಟ್ಟಿಗೆ ನೋಡಿದ್ದು ಖುಷಿ ಆಯ್ತು’ ಅಂತ ಹೇಳಿದ್ದಾರೆ. ‘ಬರೀ ನೀವು ಮಾತ್ರ ಟ್ರಿಪ್ ಹೋಗಿ ಬಂದಿದಿರಿ ನಮಗೆ ಯವಾಗ ಕರೆದುಕೊಂಡು ಹೋಗೋದು? ಆದಷ್ಟು ಬೇಗ ನಮಗೂ ಒಂದು ಕಡೆಗೆ ಕರೆದುಕೊಂಡು ಹೋಗಿ’ ಎಂದು ಗೋಗರೆದಿದ್ದಾರೆ.
ಶಿಕ್ಷಕಿಯರ ಸಂಖ್ಯೆಯೇ ಹೆಚ್ಚಾಗಿರುವ ನಮ್ಮ ಶಾಲೆಯಲ್ಲಿ ಏಳು ಜನ ಪುರುಷ ಶಿಕ್ಷಕರು ಎಲ್ಲಿಗಾದರು ಹೋಗಿ ಬರಲು ಯೋಜನೆಗಳನ್ನು ರೂಪಿಸಿದ್ದಾಯಿತು. ಆದರೆ ಅದಾವುದೂ ಕಾರ್ಯರೂಪಕ್ಕೆ ಬರಲೇ ಇಲ್ಲ. ಇದಾಗಿ ಸ್ವಲದಿನಗಳು ಕಳೆಯುವುದರ ಒಳಗಾಗಿ ನಮ್ಮ ‘ಸೀನಿಯರ್’ ಗುರುಗಳಾಗಿದ್ದ ರವೀಂದ್ರಸರ್ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮೂಡಿಗೆರೆ ತಾಲೂಕಿನ ಜಾವಳಿ ಎಂಬ ಗ್ರಾಮದಲ್ಲಿ ಜಾತ್ರೆ ನಡೆಯಲಿದೆ. ಅಲ್ಲಿಗೆ ಹೋಗಿಬರೋಣ ಎಂದರು. ಸ್ಕಂದಸರ್ ಕಾಲೇಜ್ ಕೆಲಸ ಎಂದರು. ಸುಧೀಂದ್ರಸರ್ ಮತ್ತು ಉಮೇಶ್ಸರ್ ಕುಟುಂಬದ ಕೆಲಸ ಎಂದು ದೂರ ಉಳಿದರು. ಪಿ.ಟಿ.ಸರ್ ಬಸವರಾಜ್ ಅವರು ಬರ್ತಿನಿ ಅಂದರು. ಇನ್ನೂ ನಾನು ಮತ್ತು ಚನ್ನೇಶ್ಸರ್ ಕೂಡ ಬರಲು ಒಪ್ಪಿದೆವು. ರವೀಂದ್ರಸರ್ ತಮ್ಮ ಕಾರ್ನಲ್ಲಿ ಹೋಗಿ ಬರೋಣ ಎಂದರು. ಅವರ ಮನೆಯವರ ಸಲಹೆಯ ಮೇರೆಗೆ ‘ಚೇತನ್ ಮತ್ತು ಚನ್ನೇಶ್ ಇನ್ನೂ ಈಗ ಕಾರ್ ಓಡಿಸೋದನ್ನ ಕಲಿತಿದ್ದಾರೆ. ಅವರಿಗೆ ಕಾರ್ ಓಡಿಸಲು ಕೊಡಬೇಡಿ. ಯಾರಾದರೂ ಡ್ರೈವರ್ ಗೆ ಹೇಳಿ, ಮೊದಲೇ ಬೆಟ್ಟಗುಡ್ಡಗಳ ಜಾಗ ಹಾಗಾಗಿ ರಿಸ್ಕ್ ಬೇಡ’ ಎಂದಿದ್ದರoತೆ ಅದನ್ನು ರವೀಂದ್ರಸರ್ ಊಟದ ಸಮಯದಲ್ಲಿ ನಮಗೆ ತಿಳಿಸಿದಾಗ ಎಲ್ಲರೂ ನಕ್ಕರು.
ಅಂತೂಇoತೂ ಪ್ರಯಾಣವನ್ನು ಆರಂಭಿಸುವ ಸಮಯ. ರವೀಂದ್ರಸರ್, ಬಸವರಾಜ್ಸರ್ ಇಬ್ಬರೂ ಒಟ್ಟಿಗೆ ಬಂದರು. ಮಾರ್ಗ ಮಧ್ಯೆ ನಾನು ತದ ನಂತರ ಚನ್ನೇಶ್ಸರ್ ಸೇರಿಕೊಂಡರು. ಮಲೆನಾಡಿನ ಪರಿಸರದಲ್ಲಿ ಪ್ರಯಾಣ ಆರಂಭವಾಯಿತು. ಅದುಇದೂ ಮಾತುಕತೆ, ಹಿನ್ನೆಲೆಯಲ್ಲಿ ಹಾಡನ್ನು ಕೇಳುತ್ತ ಸಾಗಿದೆವು. ಎನ್.ಆರ್.ಪುರದಲ್ಲಿ ತಿಂಡಿಯನ್ನು ಮುಗಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸಿದೆವು. ಬೆಟ್ಟಗುಡ್ಡಗಳ ನಡುವೆ ಪ್ರಯಾಣ ಮಲೆನಾಡಿನಲ್ಲಿ ಚಲಿಸುತ್ತ ಜಾವಳಿಗೆ ಬಂದದ್ದು ತಿಳಿಯಲೇ ಇಲ್ಲ. ಅಷ್ಟರಲ್ಲಿ ರವೀಂದ್ರಸರ್ ಇಲ್ಲಿಂದ ಸ್ವಲ್ಪದೂರದಲ್ಲಿ ‘ಹೇಮಾವತಿ’ ನದಿಯ ಉಗಮಸ್ಥಳವಿದೆ. ಅಲ್ಲಿ ಜಾತ್ರೆ ಏರ್ಪಡಿಸುತ್ತಾರೆ. ಈಗ ಅಲ್ಲಿಗೆ ಹೋಗುತ್ತಿದ್ದೇವೆ’ ಎಂದರು. ಅಲ್ಲಿಯವರೆಗೂ ಜಾತ್ರೆ ಎಂಬುದು ತಿಳಿದಿತ್ತು. ಎಲ್ಲಿ?ಏನು? ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಜಾತ್ರೆಗಾಗಿ ಸಿದ್ಧಪಡಿಸಿದ್ದ ಅನೇಕ ಅಂಗಡಿಗಳ ಸಾಲುಗಳನ್ನು ಡಾಟಿಕೊಂಡು ಹೇಮಾವತಿ ನದಿಯ ಉಗಮಸ್ಥಾನವನ್ನು ನೋಡಿದೆವು. ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ಪೂಜೆ, ಹೋಮ ಎಲ್ಲವೂ ಸಾಗುತ್ತಿತ್ತು. ರವೀಂದ್ರಸರ್ಗೆ ಪರಿಚಿತದವರು ಬಂದು ಮಾತನಾಡಿಸತೊಡಗಿದರು. ಊರಿನ ಪ್ರಮುಖರು, ಅನೇಕ ಪೋಷಕರು, ಈಗ ಪೋಷಕರಾಗಿರುವ ಇವರ ವಿದ್ಯಾರ್ಥಿಗಳು ಅನೇಕರು ಬಂದು ಮಾತನಾಡಿಸುತ್ತಿದ್ದರು. ನಾವುಗಳಂತು ಇದನ್ನು ನೋಡಿ ಅಲ್ಲಿಯೇ ಇದ್ದ ಅನೇಕ ಅಂಗಡಿಗಳನ್ನು ಸುತ್ತಲು ಶುರು ಮಾಡಿದೆವು. ಎಲ್ಲರೂ ಸೇರಿ ಬಿಸಿಲಿಗೆ ಕಲ್ಲಂಗಡಿಹಣ್ಣನ್ನು ತಿಂದೆವು. ಅಲ್ಲಿಇಲ್ಲಿ ಎಂದು ಬಹಳ ಸುತ್ತಾಟ ಮಾಡಿದೆವು. ಮೂಡಿಗೆರೆಯ ಶಾಸಕರಾಗಿದ್ದ ಮೋಟಮ್ಮ ಅವರು ಬಂದು ಪೂಜೆಯಲ್ಲಿ ಭಾಗವಹಿಸಿದರು. ಅವರೊಂದಿಗೂ ಸೌಜನ್ಯದಿಂದ ಊರಿನ ಪ್ರಮುಖರು ರವೀಂದ್ರಸರ್ ಅವರನ್ನು ಪರಿಚಯಿಸಿದರು. ನಮ್ಮಲ್ಲಿ ಹಿರಿಯರೆಂದರೆ ರವೀಂದ್ರಸರ್ ಆಗಿದ್ದರು. ಅವರೇ ಒಂದು ಕುಟುಂಬದವರು ಬಂದಾಗ ಎದ್ದು ಹೋಗಿ ಅದರಲ್ಲಿದ್ದ ಹಿರಿಯರ ಕಾಲಿಗೆ ನಮಸ್ಕರಿಸಿ, ವಿನಯತೆಯಿಂದ ಮಾತನಾಡಿಸಿ ಬಂದರು. ‘ಅವರು ಗುರ್ಜರ್ ಕುಟುಂಬದ ಹಿರಿಯರು.
ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಂತರ ತಿಳಿಸುತ್ತೇನೆ’ ಎಂದರು. ಸರಿ ಎಂದು. ಅಲ್ಲಿಯೇ ಸಮೀಪದಲ್ಲಿ ಸುತ್ತಾಟವನ್ನು ಮುಗಿಸಿಕೊಂಡು ಅಲ್ಲಿಂದ ಹೊರಟೆವು. ಸ್ವಲ್ಪದೂರ ಹೋದೆವು. ಅಲ್ಲಿ ಗಾಡಿ ನಿಲ್ಲಿಸಿ ರಸ್ತೆ ಬದಿಯ ಒಂದು ಮನೆಯನ್ನು ತೋರಿಸಿದರು. ‘ಇದೇ ಮನೆಯಲ್ಲಿಯೇ ನಾನು ಇಲ್ಲಿದ್ದಷ್ಟು ವರ್ಷ ಇದ್ದದ್ದು’ ಎಂದರು. ರಸ್ತೆಬದಿಯಿದ್ದ ಆ ಪುಟ್ಟ ಮನೆಯನ್ನು ನೋಡಿದೆವು. ಇಲ್ಲಿಯೇ ನನ್ನ ಮಕ್ಕಳು ಆಡಿ ಬೆಳೆದದ್ದು ಎಂದು ತಿಳಿಸಿದರು. ಮತ್ತೆ ಸ್ವಲ್ಪ ದೂರ ಸಾಗುವಷ್ಟರಲ್ಲಿ ಸಣ್ಣಬೆಟ್ಟದಂತೆ ಕಂಡ ಒಂದು ಸ್ಥಳಕ್ಕೆ ‘ಎಲ್ಲರೂ ಬನ್ನಿ’ ಎಂದು ಉತ್ಸಾಹದಲ್ಲಿ ಸರ್ ಮುಂದೆ ಹೋದರು. ಆ ಬೆಟ್ಟದ ಮೇಲೊಂದು ಸ್ಕೂಲ್. ‘ಇದೇ ನನಗೆ ಅನ್ನ ಕೊಟ್ಟ ಸಂಸ್ಥೆ, ನನ್ನ ಬದುಕನ್ನು ಕಟ್ಟಿಕೊಟ್ಟ ಶಾಲೆ’ ಎಂದು ತಾವು ಕೆಲಸ ಮಾಡುತ್ತಿದ್ದ ಶಾಲೆಯನ್ನು ತೋರಿಸಿದರು. ‘ಶ್ರೀ ಲಕ್ಷಣರಾವ್ ಗುರ್ಜರ್ ಪ್ರೌಢಶಾಲೆ’ ಎಂಬ ಹೆಸರನ್ನು ಕಂಡೆವು. ಅಲ್ಲಿ ನಿಂತು ನೋಡಿದರೆ ಸುತ್ತಲೂ ಬೆಟ್ಟಗುಡ್ಡಗಳೇ, ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಹಸಿರೇ ಹಸಿರು… ಹಾಗಾಗಿಯೇ ರವೀಂದ್ರಸರ್ ಅವರಲ್ಲಿರುವ ಈ ಎಲ್ಲಾ ಒಳ್ಳೆಯ ಗುಣಗಳಿಗೆ ಈ ಪ್ರಕೃತಿ, ಪರಿಸರವೂ ಕಾರಣ ಎಂಬುದು ನಮ್ಮ ಅರಿವಿಗೆ ಬಂದಿತ್ತು. ‘ರವಿಚಂದ್ರನ್ ಅವರ ಅನೇಕ ಸಿನಿಮಾಗಳ ಶೂಟಿಂಗ್ ಇಲ್ಲಿಯೇ ಸುತ್ತಮುತ್ತ ನಡೆಯುತ್ತಿತ್ತು. ಆಗ ನಮ್ಮ ಬೇಡಿಕೆಯನ್ನು ಮನ್ನಿಸಿ ನಮ್ಮ ಶಾಲಾ ಮಕ್ಕಳಿಗೆ ಸಿಹಿಯಾದ ಊಟವನ್ನು ಮಾಡಿಸಿಕೊಟ್ಟಿದ್ದರು’. ಎಂಬ ಸಂಗತಿಯನ್ನು ತಿಳಿಸಿದರು. ಒಂದಿಷ್ಟು ಸಮಯವನ್ನು ಅಲ್ಲಿಯೇ ಕಳೆದು ನೆನಪಿಗೆ ಒಂದು ಫೋಟೋ ತೆಗೆದುಕೊಂಡು ಪ್ರಯಾಣ ಮುಂದುವರೆಸಿದೆವು. ಬಹಳಷ್ಟು ಸಿನಿಮಾಗಳು ಶೂಟಿಂಗ್ ಆಗುವ ಸ್ಥಳದ ಸಮೀಪ ಇದೀವಿ ಅದೇ ‘ಕೆಳಗೂರು ಟೀ ಎಸ್ಟೇಟ್’ ಅಂದರು. ಅಲ್ಲಿಗೆ ಬಂದೆವು. ಅಲ್ಲಿಯೇ ಕಾಫಿ ಕುಡಿಯಲು ಗಾಡಿ ನಿಲ್ಲಿಸಿದರು. ಟೀ ಎಸ್ಟೇಟ್ನಲ್ಲಿ ಸುತ್ತಾಡಿ ಫೋಟೋ ತಗೊಳೋಣ ಬನ್ನಿ ಅಂದರೆ, ‘ನೀವು ಹುಡುಗರು ತಕ್ಕೊಳಿ ಬೇಕಾಗತ್ತೆ. ನಮ್ಮಂತ ಮುದುಕರಿಗೆ ಯಾಕೆ?’ ಎಂದು ನಕ್ಕರು. ಇನ್ನೇನು ಮಾಡುವಂತಿರಲಿಲ್ಲ ನಾನು ಚನ್ನೇಶ್ ಸರ್ ಟೀ ಎಸ್ಟೇಟ್ನಲ್ಲಿ ಸುತ್ತಾಡಿ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡೆವು. ಅಲ್ಲಿಂದ ಮಧ್ಯಾಹ ಊಟದ ಸಮಯಕ್ಕೆ ಸರಿಯಾಗಿ ಹೊರನಾಡಿಗೆ ಬಂದೆವು. ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಮಾಡಿ, ಮಧ್ಯಾಹ್ನ ದೇವಸ್ಥಾನದಲ್ಲಿಯೇ ಪ್ರಸಾದವನ್ನು ಸ್ವೀಕರಿಸಿದೆವು. ಮತ್ತೆ ಪ್ರಯಾಣ ಮುಂದುವರೆಯಿತು.
ಸoಜೆಯ ಸಮಯಕ್ಕೆ ಸರಿಯಾಗಿ ಶೃಂಗೇರಿಗೆ ಬಂದೆವು. ದೇವರ ದರ್ಶನ, ನದಿಯಲ್ಲಿ ಮೀನುಗಳನ್ನು ನೋಡಿದ್ದು, ಮಂಡಕ್ಕಿ ಹಾಕಿದ್ದು. ಎಲ್ಲವೂ ಚೆಂದವಾಗಿತ್ತು. ಊಟವನ್ನು ಇಲ್ಲಿಯೇ ಮಾಡಿಕೊಂಡು ಹೋಗಬಹುದೇನೋ ಅಂದುಕೊoಡೆವು. ಆದರೆ ಊಟ ಇನ್ನೂ ತಡವಾಗಲಿದೆ ಎಂಬುದನ್ನು ಅರಿತುಕೊಂಡು ‘ಇಲ್ಲಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುವುದಿದೆ. ತಡವಾದರೆ ಕತ್ತಲಲ್ಲಿ ಕಷ್ಟ ಎಂದು’ ಬಸವರಾಜ್ಸರ್ ಹೇಳಿದರು. ಆಗಲಿ ನಮ್ಮದೇನು ಅಭ್ಯಂತರ ಇಲ್ಲ ಎಂದು ಶಿವಮೊಗ್ಗದ ಕಡೆಗೆ ಹೊರಟೆವು.
ಮರುದಿನ ಶಾಲೆಯಲ್ಲಿ ಇತರ ಶಿಕ್ಷಕರೊಂದಿಗೆ ನೆನ್ನೆಯ ಪ್ರಯಾಣದ ಬಗ್ಗೆ ಚರ್ಚೆ. ನಾವುಗಳು ಕಂಡ ರವೀಂದ್ರಸರ್ ಅವರಿದ್ದ ಮನೆ, ಅವರು ಶಿಕ್ಷಕರಾಗಿದ್ದ ಶಾಲೆ, ಆ ಊರು ಎಲ್ಲವನ್ನೂ ವಿವರಿಸುವಾಗ, ‘ನಾವು ಬರಬೇಕಾಗಿತ್ತು’ ಅಂದುಕೊoಡವರು ಹಲವರು.
ನಮ್ಮ ಈ ಪ್ರಯಾಣದ ಫೋಟೋಗಳನ್ನು ಕಂಡ ಮಕ್ಕಳು, ಅವರ ಪೋಷಕರು, ‘ನೀವುಗಳು ಟ್ರಿಪ್ ಹೋಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆವು. ಮಕ್ಕಳಂತೂ ನಮ್ಮ ಶಿಕ್ಷಕರುಗಳು ಇವರು ಎಂದು ಖುಷಿ ಪಟ್ಟರು. ಶಿಕ್ಷಕರುಗಳು ಪ್ರವಾಸ ಪ್ರಿಯರು ಎಂಬುದನ್ನು ಆ ಫೋಟೋಗಳನ್ನು ನೋಡಿ ತಿಳಿದುಕೊಂಡೆವು’ ಎಂದರು.
ರವೀoದ್ರಸರ್ ಅವರು ನಿವೃತ್ತಿಯನ್ನು ಪಡೆದು ಶಿವಮೊಗ್ಗಕ್ಕೆ ಬಂದ ಮೇಲೆ ಮನೆಯಲ್ಲಿ ಸುಮ್ಮನೆ ಕೂರುವುದು ಕಷ್ಟವಾಗಿ ಈ ಶಾಲೆಗೆ ಬಂದು ಸೇರಿದ್ದರಂತೆ. ಹಾಗಾಗಿ ಶಿಕ್ಷಕರ ಬಳಗದಲ್ಲಿ ‘ಸೀನಿಯರ್’ ಎನಿಸಿಕೊಂಡಿದ್ದರು. ಅನೇಕ ಬಾರಿ ಎಲ್ಲಾ ಶಿಕ್ಷಕರಿಗೂ ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಹಲವು ತಪ್ಪುಗಳನ್ನು ತಿದ್ದಿದ್ದಾರೆ. ನಮ್ಮ ಶಾಲಾ ಕುಟುಂಬದ ಹಿರಿಯ ಸದಸ್ಯರಾಗಿ ಮಕ್ಕಳ ಜೊತೆಜೊತೆಗೆ ಶಿಕ್ಷಕರಿಗೂ ಆಗಾಗ ಪಾಠ ಮಾಡಿದ್ದಾರೆ. ಈಗ ನಮ್ಮ ಶಾಲೆಯಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದರು. ಆಗಾಗ ಶಾಲೆಗೆ ಬಂದಾಗ ಎಲ್ಲಾ ಶಿಕ್ಷಕರನ್ನು ಮಾತನಾಡಿಸಿ, ಯಾರಾದರು ಶಿಕ್ಷಕರು ಅಂದು ಶಾಲೆಗೆ ರಜೆ ಹಾಕಿದ್ದರೆ ಅವರ ತರಗತಿಯನ್ನು ತೆಗೆದುಕೊಂಡು ಮಕ್ಕಳೊಂದಿಗೆ ಬೆರೆಯುತ್ತಾರೆ. ಈಗಲೂ ಶಾಲೆಗೆ ಬರುವುದಿದ್ದರೆ ಹಿರಿಯರು ಮಕ್ಕಳನ್ನು ನೋಡಲು ಹೋಗುವಾಗ ಏನಾದರು ಸಿಹಿತಿನಿಸನ್ನು ತರುವಂತೆ ಎಲ್ಲಾ ಶಿಕ್ಷಕರಿಗೂ ಸಿಹಿ ತಿನಿಸನ್ನು ತರುತ್ತಾರೆ. ಒಂದಿಷ್ಟು ಸಮಯ ನಕ್ಕುನಲಿಸಿ, ಆರಾಮವಾಗಿ ಮಾತನಾಡುತ್ತಾರೆ.
ಶಿಕ್ಷಕರೇ ಸೇರಿ ಹೋಗಿಬಂದ ಪುಟ್ಟ ಪ್ರಯಾಣ. ನಮ್ಮ ನಾಲ್ಕು ಜನರಿಗೆ ಮರೆಯದ ಸಮಯವಾಗಿ ‘ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ನೀವು ನಮ್ಮ ಜೊತೆಗೆ ಸೇರಿ ಒಳ್ಳೆಯ ಅನುಭವ ಪಡೆದುಕೊಂಡಿರಿ’ ಎಂದು ಆಗಾಗ ನನಗೂ ಚನ್ನೇಶ್ಸರ್ಗೂ ಹೇಳುತ್ತಿದ್ದರು. ನಿಜಕ್ಕೂ ಒಂದಿಷ್ಟು ಮಲೆನಾಡಿನ ಸುಂದರ ವಾತಾವರಣವನ್ನು ರವೀಂದ್ರಸರ್ ಅವರ ನೆರವಿನಿಂದ ಕಾಣುವಂತಾಯಿತು. ಈ ಹಸಿರು ವಾತಾವರಣದ ನಡುವಿನ ಪಯಣ ನಮ್ಮಲ್ಲಂತೂ ಸದಾ ಹಸಿರಾಗಿರುತ್ತದೆ. ಎಂಬುದರಲ್ಲಿ ಅನುಮಾನವಿಲ್ಲ…