ಮನರಂಜನೆ

‘ಸ್ಟೇಜ್ ನಲ್ಲಿ ಬೈಸಿಕೊಂಡಿದ್ದರಿಂದ ಈ ನಾಟಕ ಸದಾ ನೆನಪಲ್ಲಿ ಇದ್ದೇ ಇರತ್ತೆ ಇರತ್ತೆ’

‘ಸ್ಟೇಜ್ ನಲ್ಲಿ ಬೈಸಿಕೊಂಡಿದ್ದರಿಂದ ಈ ನಾಟಕ ಸದಾ ನೆನಪಲ್ಲಿ ಇದ್ದೇ ಇರತ್ತೆ ಇರತ್ತೆ’


ಕ್ಲಾಸ್ ರೂಂ ಡೈರೀಸ್ ನ ೧೫೦ನೆ ಭಾಗವಾಗಿ ಇಂದು ಬರೆಯಬೇಕಿದೆ. ಶಾಲಾ ಶಿಕ್ಷಕನಾಗಿರುವುದರಿಂದ ಅದರ ಬಗೆಗೆ ಒಂದಿಷ್ಟು ಅನುಭವಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ಇಲ್ಲಿಯವರೆಗೆ ಬರಬಹುದು ಎನ್ನುವ ಅಂದಾಜು ಕೂಡ ಇರಲಿಲ್ಲ. ಎಲ್ಲಿಯವರೆಗೆ ಸಾಮರ್ಥ್ಯವಿರುವುದೋ ಅಲ್ಲಿಯವರೆಗೂ ಇದನ್ನು ಮುಂದುವರೆಸುವ ಪ್ರಯತ್ನ ತಪ್ಪದೇ ಮಾಡುತ್ತೇನೆ. ‘ನಾಟಕ’ ನನ್ನ ಆಸಕ್ತಿಯ ವಿಷಯಗಳಲ್ಲಿ ಪ್ರಮುಖವಾಗಿದ್ದು ಹಾಗಾಗಿ ಈ ಬಾರಿ ಪಠ್ಯರಂಗದ ಒಂದು ನಾಟಕದ ಬಗ್ಗೆ ತಿಳಿಸುತ್ತಿದ್ದೇನೆ.
ಮಕ್ಕಳಿಗಾಗಿ ಪಠ್ಯರಂಗ ಅಂತ ಯೋಚನೆ ಮೂಡಿದಾಗ ಒಂದು ಕಡೆಯಲ್ಲಿ ಓದಿದ್ದ ‘ಚೆನ್ನಭೈರಾದೇವಿ’ ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದೆ. ಮತ್ತೊಂದು ನಾಟಕವನ್ನು ತೆಗೆದುಕೊಳ್ಳಬೇಕಲ್ಲ ಎಂದು ಯೋಚಿಸಿದಾಗ ೧೦ನೇ ತರಗತಿಯ ‘ಅಮರಪುತ್ರರು’ ನಾಟಕ ಮಕ್ಕಳ ಮನಸ್ಸಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಒಂದಿಷ್ಟು ಅಭಿಮಾನವನ್ನು ಮೂಡಿಸಬಹುದು ಎಂಬ ಆಲೋಚನೆಯಲ್ಲಿ ಅದನ್ನು ಆಯ್ಕೆ ಮಾಡಿಕೊಂಡೆವು.


ಪ್ರಮುಖವಾಗಿ ಭಗತ್‌ಸಿಂಗ್ ಪಾತ್ರವನ್ನು ಯಾವ ಮಕ್ಕಳು ನಿಭಾಯಿಸಬಹುದು ಎಂದು ಯೋಚಿಸುತ್ತ ಕುಳಿತಾಗ ಎಲ್ಲಾ ವಿದ್ಯಾರ್ಥಿಗಳು ಕಣ್ಣಮುಂದೆ ಬಂದರು. ಅಳೆದು ತೂಗಿ ಈ ಪಾತ್ರಕ್ಕೆ ಹೊಂದುವ ಸದೃಢ ಮೈಕಟ್ಟು ಹೊಂದಿರುವ, ಅದೇ ರೀತಿಯ ಒಂದಿಷ್ಟು ಮುಖ ಲಕ್ಷಣ ಹೊಂದಿರುವ ವಿದ್ಯಾರ್ಥಿ ಎನ್ನುವಾಗ ಲೇಖನ್ ಇದಕ್ಕೆ ಸೂಕ್ತ ಎನಿಸಿತು. ಆದರೆ ಅವನು ನಾಟಕಕ್ಕೆ ಬರುತ್ತೇನೆ ಎಂದು ಎಲ್ಲೂ ಹೇಳಿರಲಿಲ್ಲ. ಹೇಗಾದರೂ ಮಾಡಿ ಒಪ್ಪಿಸಿದರೆ ಆಯಿತು ಎಂದುಕೊಂಡೆ.
ಹಾಗೆಯೇ ಇತರ ಮಕ್ಕಳನ್ನು ನೋಡಿನೋಡಿ ಆಯ್ಕೆ ಮಾಡಿಕೊಂಡದ್ದಾಯಿತು. ೧೦ನೇ ತರಗತಿಯ ಪ್ರಥಮ ಭಾಷೆಯಲ್ಲಿ ಬರುವ ಪಠ್ಯವಾಗಿರುವ, ಸಮಾಜ ವಿಜ್ಞಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾಗದಲ್ಲಿಯೂ ಈ ವಿಷಯ ಚಿಂತೆ ಇರುವ ಕಾರಣ ಭಗತ್‌ಸಿಂಗ್ ಬಗೆಗೆ ಹೇಳಲು ಹೊರಟೆವು.
ನಾಟಕಕ್ಕಿಂತ ಅದರ ಅಭ್ಯಾಸದ ಸಮಯವೇ ಮಕ್ಕಳಿಗೆ ಆನಂದದ ಕ್ಷಣ ಎನ್ನುವಂತಿತ್ತು. ಚೆನ್ನಾಗಿ ಮಾತನಾಡುವ, ಮಾತನಾಡಾಲು ಕಷ್ಟಪಡುವ ಒಂದಿಷ್ಟು ಮಕ್ಕಳನ್ನು ಸೇರಿಸಿಕೊಂಡು ಅಭ್ಯಾಸವನ್ನು ಆರಂಭಮಾಡಿದೆವು. ಬಿಡುವಿದ್ದ ವೇಳೆಯಲ್ಲೆಲ್ಲ ಅಭ್ಯಾಸ ಸಾಗುತ್ತಲೇ ಇತ್ತು. ಮಕ್ಕಳು ಸಂಭಾಷಣೆಯನ್ನು ಕಲಿತರು. ಅದಕ್ಕೆ ಒಂದಿಷ್ಟು ಭಾವಗಳನ್ನು ತುಂಬಿಸುವ ಪ್ರಯತ್ನ ಸಾಗಿತ್ತು. ಗೆಳೆಯ ಪ್ರತೀಕ್ ಆಗಾಗ ಶಾಲೆಗೆ ಬಂದು ಮಕ್ಕಳಿಗೆ ಒಂದಿಷ್ಟು ಅಭ್ಯಾಸ ಮಾಡಿಸತೊಡಗಿದ. ಮಧ್ಯಾಹ್ನ, ಸಂಜೆ ನಿರಂತರವಾಗಿ ಸಾಗುತ್ತಲೇ ಬರುತ್ತಿತ್ತು. ಶನಿವಾರವಚಿತೂ ಪೂರ್ತಿ ದಿನ ಶಾಲೆಯಲ್ಲಿ ಇರುವುದಾಗಿ ತೀರ್ಮಾನ ಮಾಡಿದೆವು. ಬೆಳಗ್ಗೆ ಮಾರ್ನಿಂಗ್‌ಕ್ಲಾಸ್ ಮುಗಿಸಿ ಉಳಿದೆಲ್ಲಾ ವಿದ್ಯಾರ್ಥಿಗಳು ಮನೆಗೆ ತೆರಳಿದರೆ ನಾವುಗಳು ಮಾತ್ರ ಅಭ್ಯಾಸಕ್ಕೆಂದು ಉಳಿದುಕೊಳ್ಳುತ್ತಿದ್ದೆವು. ಮಕ್ಕಳು ಮನೆಯಿಂದ ಮತ್ತೊಂದು ಊಟದ ಡಬ್ಬಿಯನ್ನು ತಂದಿದ್ದರು. ಅಂದು ಊಟವನ್ನೇ ತರಗದ ಮಗುವಿಗೂ ತಮ್ಮ ಡಬ್ಬಿಯ ಊಟವನ್ನು ನೀಡಿ ಸಹಬಾಳ್ವೆಯನ್ನು ಮೆರೆದಿದ್ದರು.

ಅಭಿನಯಿಸಲು ವೇದಿಕೆಗೆ ಬಂದಾಗ ಮಕ್ಕಳು ಹೇಳಿಕೊಟ್ಟದ್ದನ್ನು ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದರು. ಹಿಂದೆ ಕುಳಿತ ಮಕ್ಕಳು ಪಿಸುಪಿಸು ಮಾತುಗಳನ್ನಾಡುತ್ತ ಕುಳಿತಾಗ ಬೈಸಿಕೊಂಡಿದ್ದು ಉಂಟು.
ಭಾನುವಾರ ರಜೆ ಆದರೆ ನಾವು ನಾಟಕದ ಅಭ್ಯಾಸ ಮಾಡಬಹುದೇ? ಅಂದೆ ಎಲ್ಲರೂ ಒಕ್ಕೋರಲಿನಿಂದ ‘ಹೋ… ಆಗಲಿ ಸರ್ ಭಾನುವಾರವೂ ನಾವು ಶಾಲೆಗೆ ಬರ್ತಿವಿ’ ಎಚಿದು ಒಪ್ಪಿದರು. ಅಭ್ಯಾಸಕ್ಕೆ ಬರುವ ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಮಾಡುತ್ತೇವೆ ಎಂದದ್ದೇ ತಡ ಖುಷಿ ಇನ್ನಷ್ಟು ಹೆಚ್ಚಾಗಿತ್ತು. ‘ಭಾನುವಾರವೂ ಶಾಲೆಗೆ ಬರಬೇಕು ಅಂದರೆ ಬೇಸರ ಆಗಲ್ವಾ?’ ಎಂದರೆ ರಿಯಾ ‘ಹಾಗೇನಿಲ್ಲ ಸರ್, ಮನೆಯಲ್ಲಿದ್ದರೆ ಅಮ್ಮ ಅದುಇದು ಅಂತ ಕೆಲಸ ಹೇಳ್ತಾ ಇದ್ದರು, ಹಾಗಾಗಿ ನಾನಂತೂ ಖುಷಿಯಾಗಿ ಶಾಲೆಗೆ ಬರ್ತಿನಿ’ ಅಂದಳು. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊoದು ಕಾರಣವನ್ನು ಹುಡುಕಿಕೊಂಡಿದ್ದoತು ಸುಳ್ಳಲ್ಲ.
ಭಾನುವಾರ ಶಾಲಾ ಸಮವಸ್ತçಕ್ಕೆ ವಿರಾಮ ಹಾಕಿ ನಾಟಕ ಅಭ್ಯಾಸಕ್ಕೆ ಅನುಕೂಲವಾಗುವಂತ ಬಟ್ಟೆ ಧರಿಸಿ ಶಾಲೆಗೆ ಬಂದ ಮಕ್ಕಳು ಇಡೀ ಶಾಲೆಲಿ ನಾವು ನಾಟಕ ಅಭ್ಯಾಸದವರು ಮಾತ್ರ ಇದೀವಿ. ಎಷ್ಟು ಶಾಂತವಾಗಿದೆ ಅಲ್ವಾ? ಅಂದ ನವನೀತ್. ‘ಹೌದು ಇಲ್ಲೀಯ ತನಕವೂ ಶಾಂತವಾಗೇ ಇತ್ತು. ಈಗ ನೀವುಗಳು ಬಂದ ಮೇಲೆ ಏನಾಗತ್ತೋ ಅಂತ ಕಾದುನೋಡಬೇಕು’ ಎಂದೆ. ಎಲ್ಲರೂ ನಕ್ಕರು. ಎರಡು ಹಾಲ್‌ಗಳಲ್ಲಿ ಪ್ರತ್ಯೇಕವಾಗಿ ಎರಡೂ ನಾಟಕಗಳಾ ಅಭ್ಯಾಸ ನಡೆಯುತ್ತಿತ್ತು. ಒಚಿದೆಡೆ ಗೆಳೆಯ ಶ್ರೀಪಾದ್, ಶಿವಕುಮಾರ್ ಅಭ್ಯಾಸ ಮಾಡಿಸುತ್ತಿದ್ದರು. ಮತ್ತೊಂದೆಡೆ ನಾನಿದ್ದೆ. ಉಳಿದ ಗೆಳೆಯರು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡತೊಡಗಿದರು. ಅಲ್ಲಲ್ಲಿ ತಿದ್ದುತ್ತಾ, ತಪ್ಪಾದಾಗ ಮತ್ತೆ ಮೊದಲಿನಿಂದ ಅಭ್ಯಾಸ ಮಾಡಿಸುತ್ತ ಸಾಗಿತ್ತು. ಎಲ್ಲರಿಗೂ ಅದಾಗಲೇ ಸುಸ್ತಾಗ ತೊಡಗಿತ್ತು. ಅಷ್ಟರಲ್ಲಿ ಮೊದಲಿನಿಂದ ಮತ್ತೊಮ್ಮೆ ಅಭ್ಯಾಸ, ಎಲ್ಲಿಯೂ ನಿಲ್ಲಿಸದೇ ಮುಂದುವರಿಸುತ್ತಲೇ ಇರಬೇಕು. ಎಂದದ್ದೇ ತಡ ಎಲ್ಲರೂ ‘ಹೋ…’ ಎಂದು ರಾಗ ತೆಗೆದರು. ಮೊದಲ ಬೆಲ್ ಬಾರಿಸಿದ್ದೇ ತಡ ವಾತಾವರಣ ಸೈಲೆಂಟ್ ಆಗಿತ್ತು. ಅಂತೂ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಲೇ ಸಾಗಿತ್ತು. ಪ್ರಣಮ್ಯ ತನಗೆ ಬೆಳಗ್ಗೆ ಚಿತ್ರಕಲೆಯ ಸ್ಪರ್ಧೆಯ್ ಇರುವ್ಯದರಿಂದ ಮಧ್ಯಾಹ್ನ ಅಭ್ಯಾಸಕ್ಕೆ ಬರುವುದಾಗಿ ತಿಳಿಸಿದ್ದ ಕಾರಣ ಅವಳ ಪಾತ್ರ ಬಂದಾಗ ಮರೆಯಲ್ಲಿ ಇತರ ಮಕ್ಕಳು ಅವಳು ಹೇಳುವ ಮಾತುಗಳನ್ನು ತಾವೇ ಹೇಳುತ್ತಿದ್ದರು. ಕೆಲವರಂತೂ ಆ ಸಂಭಾಷಣೆಯನ್ನೂ ಸಹ ಕಲಿತರು. ಅಭ್ಯಾಸವೆಲ್ಲ ಮುಗಿಸುವ ಹೊತ್ತಿಗೆ ಊಟ ಬಂದಿತ್ತು. ‘ಊಟ ಮುಗಿಸಿ ಮತ್ತೆ ಸಿಗುವ’ ಎಂದದ್ದೇ ತಡ ಎಲ್ಲರೂ ಸಿನಿಮಾ ಥಿಯೇಟರ್‌ಗೆ ಮೊದಲದಿನ ನುಗ್ಗುವ ಹಾಗೇ ಹೊರಗೆ ಓಡಿದ್ದರು. ನಮನ ಮಾತ್ರ, ‘ಸರ್ ಏನು ಅಡುಗೆ ಮಾಡಿಸಿದ್ರಿ? ಶಾಲೆಲಿ ಭಾನುವಾರ ಊಟ ಮಾಡ್ತಾ ಇರೋರು ನಾವು ಮಾತ್ರ ಅಲ್ವಾ!?’ ಎಂದಳು. ಬಾಳೆದೆಲೆ ಊಟ ಏನಲ್ಲ, ಏನು ಅಂತ ನನಗೂ ಗೊತ್ತಿಲ್ಲ ನನಗೂ ಹಸಿವಾಗಿದೆ ಮೊದಲು ಊಟಕ್ಕೆ ಹೋಗೋಣ ಎಂದೆ. ಗೆಳೆಯ ಮಂಜುನಾಥಸ್ವಾಮಿ, ‘ಎಷ್ಟು ಬೇಕಾದರೂ ಹಾಕಿಸಿಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ತಟ್ಟೆಯಲ್ಲಿ ಹಾಗೇ ಬಿಡುವಂತಿಲ್ಲ’ ಎಂಬ ಷರತ್ತನ್ನು ವಿಧಿಸಿದ. ಎಲ್ಲರೂ ಅಭ್ಯಾಸವನ್ನು ಹೆಚ್ಚಾಗಿ ಮಾಡಿದ್ದರಿಂದ ಊಟವನ್ನು ಹೆಚ್ಚಾಗಿಯೇ ಮಾಡಿದರು. ಮೊದಲ ಬಾರಿಗೆ ತಂದಿದ್ದ ಅಷ್ಟೂ ಅಡುಗೆ ಖಾಲಿಯಾಗಿದ್ದು ಸಂತೋಷದ ಸಂಗತಿಯಾಗಿತ್ತು.


‘ಮತ್ತೊಮ್ಮೆ ಭಾನುವಾರವೂ ನಾಟಕದ ಅಭ್ಯಾಸ ಮಾಡೋಣ’ ಎಂದರೆ ಎಲ್ಲರೂ ಒಪ್ಪಿಕೊಂಡರು. ಪೋಷಕರು ಮಕ್ಕಳನ್ನು ಕರೆದುಕೊಂಡು ಬಂದು ಬಿಡುವಾಗ ನಮನಳ ತಾಯಿ, ‘ಮನೆಯಲ್ಲಿ ತಿಂಡಿ ತಿಂದುಕೊAಡು ಹೋಗು ಎಂದರೆ, ಶಾಲೆಲಿ ಊಟ ಕೊಡ್ತಾರೆ ತುಂಬಾ ಚೆನಾಗಿರತ್ತೆ’ ಅಂತ ಕಡಿಮೆ ತಿಂದುಕೊAಡು ಬಂದಿದಾಳೆ. ಅಂದರು ಮನೆಯಲ್ಲಿ ಇವು ತಿನ್ನೋದೇ ಇಲ. ನಾಟಕ ಹೇಗೆ ಕಲ್ತಿದಾರೋ ಏನೋ ಗೊತ್ತಿಲ್ಲ ಆದರೆ ಇಲ್ಲಿ ಚೆನಾಗಿ ತಿನ್ನೋದನ್ನ ಕಲ್ತಿದಾರೆ. ಎಂದು ನಕ್ಕರು.
ಅಂತೂ ಮತ್ತೆಮ್ಮೆ ಎಲ್ಲಾ ಮಕ್ಕಳಿಂದಲು ಚೆಂದದ ಅಭ್ಯಾಸ ಮುಗಿದಿತ್ತು. ಇನ್ನೇನು ನಾಟಕದ ದಿನ ಹತ್ತಿರ ಬರುತ್ತಿದೆ ಎನ್ನುವಾಗ ಒಂದಿಷ್ಟು ಶಿಸ್ತು, ಆತಂಕ ಎಲ್ಲವೂ ಮೂಡತೊಡಗಿತು. ಮಕ್ಕಳಿಗೆ ವೇದಿಕೆಯ ಅಭ್ಯಾಸವಾಗಲಿ ಎಂದು ನಾಟಕದ ಹಿಂದಿನ ದಿನ ಶನಿವಾರ ಮಧ್ಯಾಹ್ನವೂ ರಂಗಮAದಿರದಲ್ಲಿ ಅಭ್ಯಾಸ ಮಾಡಿದೆವು. ನಾಟಕದ ದಿನ ಬೆಳಗ್ಗೆ ಬೇಗ ಬರಲು ತಿಳಿಸಿ ಮತ್ತೊಮ್ಮೆ ಅಭ್ಯಾಸ ಎಂದೆವು. ಆ ಸಮಯದಲ್ಲಿ ಧ್ಯಾನ್, ನವನೀತ್ ಮತ್ತು ಇತರರು ಮಾಡಿದ ಕಿತಾಪತಿಗಾಗಿ ನಾಟಕಕ್ಕೆ ಸಂಗೀತ ನೀಡಲು ಬಂದಿದ್ದ ಶ್ರೀಪಾದ ‘ಮಕ್ಕಳಿಗೆ ಶಿಸ್ತು, ಅಚ್ಚುಕಟ್ಟಿಲ್ಲ ನಾನು ಈ ನಾಟಕಕ್ಕೆ ಸಂಗೀತ ಮಾಡಲ್ಲ ಸರ್’ ಎಂದು ಎದ್ದು ಹೊರಟುಹೋದ. ರಂಗಭೂಮಿಯ ಒಂದಿಷ್ಟು ಗೆಳೆಯರು ‘ನಾಟಕದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ ಅದನ್ನೇ ಅರ್ಥ ಮಾಡಿಕೊಂಡಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೇಳಿಕೊಟ್ಟದನ್ನು ಸರಿಯಾಗಿ ಅಭ್ಯಾಸ ಮಾಡಿದ್ದ ಕೆಲವು ಮಕ್ಕಳು ಕಣ್ಣೀರು ಹಾಕತೊಡಗಿದರು. ಅರ್ಧಗಂಟೆ ಯಾರೂ ಏನೂ ಮಾತಾಡದೇ ನಿಶ್ಯಬ್ಧದಿಂದ ವಾತಾವರಣ ಕೂಡಿತ್ತು. ತದ ನಂತರ ‘ವೇದಿಕೆಯಲ್ಲಿ ಇರುವವರ ಮಾತು ಬಿಟ್ಟು ಬೇರೆ ಯಾವ ಮಾತು ಕೂಡ ಕೇಳಬಾರದು’ ಎಂದು ಹೇಳಿ ಮೊದಲಿನಿಂದ ಅಭ್ಯಾಸ ಆರಂಭಿಸಿದೆವು. ಎಲ್ಲವೂ ಮುಗಿಯಿತು. ಸಂಜೆಗೆ ಮಕ್ಕಳು ನಾಟಕದ ವಸ್ತ್ರವನ್ನು ಧರಿಸಿ, ಮೇಕಪ್ ಹಾಕಿಕೊಂಡು ಚೆಂದದ ಲೋಕವನ್ನೇ ಸೃಷ್ಠಿಸಿದ್ದರು. ವೇದಿಕೆಯಲ್ಲಿ ಜೈಲು ಇಡುವಾಗ ಸಣ್ಣ ತಪ್ಪಾಗಿತ್ತು. ಅದನ್ನು ಹಿಡಿದುಕೊಂಡೇ ಲೇಖನ್ ಪಾತ್ರವನ್ನು ಮಾಡಿದ್ದ, ಕಡೆಯದಾಗಿ ನಾಟಕ ಮುಗಿಯುವಾಗ ಬಹಳಷ್ಟು ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ಅಷ್ಟು ಅಚ್ಚುಕಟ್ಟಾಗಿ ಅಭಿನಯವನ್ನು ಜೀವಂತಿಸಿದ್ದರು. ವಿನಯ್‌ಶಿವಮೊಗ್ಗ ಅವರ ಕಣ್ಣುಗಳು ಒದ್ದೆಯಾಗಿದ್ದವು ಬಂದು ತಬ್ಬಿಕೊಂಡು ‘ಚೆಂದವಾಗಿ ಕಲಿಸಿದ್ದೀಯ, ಮಕ್ಕಳು ಮನಮುಟ್ಟುವ ಹಾಗೇ ಅಭಿನಯಿಸಿದರು’. ಎಂದು ಎಲ್ಲಾ ಮಕ್ಕಳಿಗೂ ಶುಭಾಶಯಗಳನ್ನು ತಿಳಿಸಿದರು.
ಇತರ ಗೆಳೆಯರು ಮಕ್ಕಳ ರಂಗಭೂಮಿಯ ಶಿಸ್ತನ್ನು ಕಂಡು ಶ್ಲಾಘಿಸಿದರು. ನಾಟಕ ಮುಗಿದಾಗ ಮಕ್ಕಳಲ್ಲಿ ಅದೇನೋ ಒಂದು ಸಾರ್ಥಕ ಭಾವ ಮೂಡಿತ್ತು. ನಾಟಕಕ್ಕೆ ಪದ್ಯಗಳನ್ನೇ ಹಾಡಿದ್ದ ಪಾವ್ನಿ ‘ಸರ್ ಮುಂದಿನ ವರ್ಷವೂ ನಾಟಕ ಮಾಡಿಸಿ ನಾನೂ ಅಭಿನಯಿಸುತ್ತೇನೆ’ ಎಂದಳು. ಹಲವು ವಿದ್ಯಾರ್ಥಿಗಳು ‘ಸರ್ ಮುಂದಿನವರ್ಷವೂ ನಾಟಕ ಮಾಡಿಸಲು ಈಗಲೇ ಪ್ಲಾನ್ ಮಾಡ್ಕೊಳ್ಳಿ’ ಎಂದಾಗ ‘ಇಷ್ಟು ದಿನ ನಿಮ್ಮನ್ನು ತಡ್ಕೊಂಡಿದ್ದೇ ಸಾಕಾಗಿದೆ, ಮತ್ತೆ ನಾಟಕನಾ? ಸಾಕುಸಾಕು ಬಿಡಿ’ ಎಂದರೆ ಎಲ್ಲರೂ ‘ಹೋ…’ ಎಂದು ಕೂಗತೊಡಗಿದರು.
ನಾಟಕದ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಒಂದಿಷ್ಟು ಪರಿಚಯ ವಾಗಿತ್ತು. ಮಕ್ಕಳಿಗೆ ಅದು ಪರೀಕ್ಷೆಗೂ ಬರತೊಡಗಿತ್ತು. ತಮ್ಮ ಪಾತ್ರವಲ್ಲದೇ ಇತರ ಪಾತ್ರಗಳ ಸಂಭಾಷಣೆಯನ್ನು ಕಲಿತಿದ್ದರಿಂದ ಮಕ್ಕಳು ಪಾಠವನ್ನು ಕೇಳದೇ ಹೋದರೂ ಉತ್ತರ ಬರೆಯಬಲ್ಲೆವು ಎಂಬ ದೃಢ ನಂಬಿಕೆ ನಾಟಕ ನೀಡಿತ್ತು. ‘ಸ್ಟೇಜ್ ನಲ್ಲಿ ಬೈಸಿಕೊಂಡಿದ್ದರಿಂದ ಈ ನಾಟಕ ಸದಾ ನೆನಪಲ್ಲಿ ಇದ್ದೇ ಇರತ್ತೆ ಇರತ್ತೆ’ ಎಂದು ಮಕ್ಕಳು ಹೇಳಿದಾಗ ಒಂದೊಳ್ಳೆಯ ಪಾಠವನ್ನು ಪಠ್ಯದ ಹೊರತಾಗಿ ಕಲಿತದ್ದು ನೀಡಿದ ಸಂತೋಷ ಅಷ್ಟಿಷ್ಟಲ್ಲ…

ಚೇತನ್ ಸಿ ರಾಯನಹಳ್ಳಿ

Leave a Reply

Your email address will not be published. Required fields are marked *

Scan the code