ಸಾವಿರಾರು ರೈತರು ತಮ್ಮ ಭೂಮಿ ಹಕ್ಕು ಕೊಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ.
(SHIVAMOGA): ಉಪವಿಭಾಗಾಧಿಕಾರಿ ಕಚೇರಿ ಎದುರು ಸಾವಿರಾರು ರೈತರು ತಮ್ಮ ಭೂಮಿ ಹಕ್ಕು ಕೊಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾದರು.
ಸಾಗರ ಹೋರಾಟದ ಮೂಲಕ ಭೂಮಿ ಹಕ್ಕು ದಕ್ಕಿಸಿಕೊಳ್ಳುವುದು ಅನಿವಾರ್ಯ ಎಂಬ ಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿರುವುದು ಬೇಸರದ ಸಂಗತಿ. ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಧ್ವನಿ ಎತ್ತುವ ರೈತರಿಗೆ ಯಾವತ್ತಿಗೂ ಬೆಂಬಲ ನೀಡುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ (ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ) ಆಶ್ರಯದಲ್ಲಿ ಸೋಮವಾರದಿಂದ ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮತ್ತು ಜನಾಂದೋನ ಜಾಥಾಕ್ಕೆ ಕಹಳೆ ಊದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹೋರಾಟ, ಜೈಲು, ಅನ್ಯಾಯ ಬಯಲು ಎನ್ನುವ ಘೋಷವಾಕ್ಯ ನಮ್ಮ ಬದುಕಿನ ಧ್ಯೇಯ ವಾಕ್ಯವಾಗಿತ್ತು. ಈ ನೆಲದಲ್ಲಿ ಭೂಮಂಜೂರಾತಿಗಾಗಿ ಅನೇಕ ಹೋರಾಟ ನಡೆದಿದೆ. ಇಂಥ ಹೋರಾಟವು ಆಡಳಿತಗಾರರನ್ನು ಎಚ್ಚೆರಿಸಲು ಇರುವ ವೇದಿಕೆಯಾಗಿದೆ. ಜತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವ ಗಟ್ಟಿತನ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರೈತರ ವಿವಿಧ ಭೂಹಕ್ಕು ಸಮಸ್ಯೆಗೆ ಈವರೆಗಿನ ಎಲ್ಲ ಸರಕಾರಗಳೂ ಕಾರಣ. ತಲತಲಾಂತರದಿoದ ಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುವ ಕ್ರಮ ಸರಿಯಲ್ಲ. ರೈತರ ಭೂಮಿ ಸಮಸ್ಯೆ ಬಗೆಹರಿಸಿಕೊಳ್ಳಲು ಅಂದಿನ ಕಾಗೋಡು ಚಳುವಳಿ ಮಾದರಿಯ ಮತ್ತೊಂದು ಚಳವಳಿ ಅಗತ್ಯವಿದೆ. ಮಲೆನಾಡು ರೈತರ ಭೂಹಕ್ಕಿನ ಹೋರಾಟಕ್ಕೆ ಸರ್ವರೀತಿಯಲ್ಲೂ ಬೆಂಬಲಿಸುತ್ತೇನೆ ಎಂದರು.
ಸಮಸ್ಯೆ ಪರಿಹರಿಸುವಂತೆ ರೈತಸಂಘದ ಜಿಲ್ಲಾಧ್ಯಕ್ಷ ಆಗ್ರಹಸಿದರು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಶರಾವತಿಯೂ ಸೇರಿದಂತೆ ಹಲವು ಯೋಜನೆಯಿಂದ ಜಿಲ್ಲೆಯ ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಭೂಮಿ ಕಳೆದುಕೊಂಡ ರೈತರು ಬಗರ್ಹುಕುಂಗೆ ಅರ್ಜಿ ಸಲ್ಲಿಸಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ಸಂಕಷ್ಟದ ನಡುವೆ ಸಂಘರ್ಷದ ಬದುಕು ನಡೆಸುತ್ತಿರುವ ಮಲೆನಾಡಿನ ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ನೋಟಿಸ್ ನೀಡಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ.
ತಕ್ಷಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಸಿ ರೈತರ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ನ. 1ರಂದು ರಾಜ್ಯೋತ್ಸವದ ದಿನ ಪ್ರತ್ಯೇಕ ರಾಜ್ಯ ಘೋಷಣೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಸೊರಬ ತಾಲೂಕು ಶೀಗೆಹಳ್ಳಿ ಗ್ರಾಮದ 100ಕ್ಕೂ ಹೆಚ್ಚು ಕುಟುಂಬಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಸಾವಿರಾರು ರೈತರು ಬಾರಿಕೋಲು ಬಾರಿಸುತ್ತ ಪಾಲ್ಗೊಂಡರು. ಪ್ರಮುಖರಾದ ತೀ.ನ.ಶ್ರೀನಿವಾಸ್, ಟಿ.ಡಿ.ಮೇಘರಾಜ್, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಡಾ. ರಾಮಚಂದ್ರಪ್ಪ, ಮಲ್ಲಿಕಾರ್ಜುನ ಹಕ್ರೆ, ಡಾ. ರಾಜನಂದಿನಿ ಕಾಗೋಡು, ರವಿ ಕುಗ್ವೆ, ಶ್ರೀಕರ್, ಪರಶುರಾಮ ಸೀಗೆಹಳ್ಳಿ, ಪ್ರಶಾಂತ್ ಶಿವಪ್ಪ, ಭರ್ಮಪ್ಪ ಅಂದಾಸುರ, ಶಿವಾನಂದ ಕುಗ್ವೆ, ಎನ್.ಡಿ.ವಸಂತ ಕುಮಾರ್, ರೇವಪ್ಪ ಕೆ. ಹೊಸಕೊಪ್ಪ ಮೊದಲಾದವರು ಹಾಜರಿದ್ದರು. ಬಳಿಕ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಯಿತು.
ವರದಿ: ರಾಘವೇಂದ್ರ ತಾಳಗುಪ್ಪ