ನ್ಯೂಸ್ರಾಜ್ಯ

ವಾಡಿಕೆಗಿಂತ ಅತಿ ಕಡಿಮೆ ಮಳೆ ಆಗಿದೆ, ಬರದ ಛಾಯೆ ಈಗಲೇ ಮೋಡಗಟ್ಟಿದೆ.

ವಾಡಿಕೆಗಿಂತ ಅತಿ ಕಡಿಮೆ ಮಳೆ ಆಗಿದೆ, ಬರದ ಛಾಯೆ ಈಗಲೇ ಮೋಡಗಟ್ಟಿದೆ.

ರಾಜ್ಯ ಸರಕಾರ ಬರ ಪೀಡಿತ ಅರೆ ಬರ ಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿದೆ. ಆತಂಕಕಾರಿ ಅಂಶ ಏನೆಂದರೆ ಇವುಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಮಲೆನಾಡಿನ ಎಲ್ಲಾ ತಾಲ್ಲೂಕುಗಳು ಸೇರಿಕೊಂಡಿವೆ. ಸದಾ ಮಳೆಯಲ್ಲಿ ತೊಯ್ದು ಹಸಿರ ಕಂಗೊಳಿಸುತ್ತಿದ್ದ ಮಲೆನಾಡು ಈ ವರ್ಷ ಬರದ ಕಡೆ ಮುಖ ಮಾಡಿದೆ.

ಹಡಿಲು ಬಿಟ್ಟ ಗದ್ದೆಗಳು ಈ ಬಾರಿ ಉಳುಮೆ ಆಗಿದ್ದವು.ಆದರೆ ಅದೇ ಗದ್ದೆಗೆ ಪಂಪ್ ಸೆಟ್ ಮೂಲಕ ನೀರು ಹರಿಸಿ, ಫಸಲು ಕಾಣುವ ತವಕ ರೈತರ ಎದೆಯಲ್ಲಿ ಸಣ್ಣ ನಡುಕ ಹುಟ್ಟಿಸಿದೆ.

ಮೂರು ನಾಲ್ಕು ವರ್ಷಗಳಿಗೊಮ್ಮೆ ಪ್ರಕೃತಿಯ ಈ ಬದಲಾವಣೆ ಸಹಜ ಆದರೂ, ಕಳೆದ ವರ್ಷ ಧಾರಾಕಾರ ಮಳೆ ಸುರಿದರೂ ಬೇಸಿಗೆಯಲ್ಲಿ ಮಲೆನಾಡಿನ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸುವ ದುಸ್ಥಿತಿ ತಲುಪಿತ್ತು. ಮುಂದಿನ ವರ್ಷದ ಬದುಕು ಹೇಗೆ ಎಂಬ ಆತಂಕ ಖಂಡಿತಾ ರೈತರ ಕಣ್ಣ ಮುಂದಿದೆ.

ಜಾಹೀರಾತು


ವಾಡಿಕೆಗಿಂತ ಅತಿ ಕಡಿಮೆ ಮಳೆ ಆಗಿದೆ, ಬರದ ಛಾಯೆ ಈಗಲೇ ಮೋಡಗಟ್ಟಿದೆ.

ನಿಜಕ್ಕೂ ಮಲೆನಾಡಿನ ರೈತರ ಜೀವನ ಸದಾ ದುಸ್ಥರವೆ.ಒಂದೇ ವಿಪರೀತ ಮಳೆ ಸುರಿಯುತ್ತದೆ.ಇಲ್ಲವೇ ಅಕಾಲಿಕ ಮಳೆಗೆ ಫಸಲು ನಾಶವಾಗುತ್ತದೆ. ಭದ್ರೆ ಈಗಲೇ ಬೇಸಿಗೆಯಲ್ಲಿ ಹರಿಯುವ ಗಾತ್ರಕ್ಕೆ ಇಳಿದು ಬಿಟ್ಟಿದ್ದಾಳೆ. ಅಡಿಕೆ ಕಾಫಿ ಕಾಳುಮೆಣಸು, ಏಲಕ್ಕಿ ಬೆಳೆಯುವ ರೈತರ ಪಾಡು ಬೇಸಿಗೆಯಲ್ಲಿ ಹೇಗೆ ?, ಈ ಬಾರಿ ಭದ್ರೆಯ ಒಡಲಿಗೆ ಪಂಪಸೆಟ್ ಇಡಲು ಬಿಡುವುದಿಲ್ಲ,ಸರ್ಕಾರ ಖಂಡಿತಾ ಅದಕ್ಕೊಂದು ಟಾಸ್ಕ್ ಫೋರ್ಸ್ ಸಮಿತಿ ಮಾಡಿ ಬಿಡುತ್ತದೆ.

ಸದಾ ನನಗೆ ಕಾಡುವ ಪ್ರಶ್ನೆ ಒಂದೇ,,,, ? ಸರ್ಕಾರಕ್ಕೆ , ಜನ ಪ್ರತಿನಿಧಿಗಳಿಗೆ ಮಲೆನಾಡಿನ ಬಗ್ಗೆ ಯಾಕೆ ಇಷ್ಟು ನಿರ್ಲಕ್ಷ್ಯ… ಪಶ್ಚಿಮ ಘಟ್ಟದಲ್ಲಿ ಸುಸ್ಥಿರವಿದ್ದರೆ ಮಾತ್ರ ಕರ್ನಾಟಕದ ಅಥವಾ ದೇಶದ ಹವಾಗುಣ ಸುಸ್ಥಿರ ಇರಲು ಸಾಧ್ಯ…..

ಪಶ್ಚಿಮ ಘಟ್ಟದಲ್ಲಿ ಹೆಚ್ಚು ಭೂಮಿ ಒತ್ತುವರಿ ಆಗಿದೆ, ಅರಣ್ಯ ನಾಶ ಆಗಿದೆ, ಅಭಿವೃದ್ದಿಯ ಹೆಸರಲ್ಲಿ ವಿಪರೀತ ಪರಿಸರ ಸಂಪತ್ತು ಅಳಿವಿನ ಅಂಚಿಗೆ ಬಂದು ನಿಂತಿದೆ. ಇದಿಷ್ಟು ನಿರ್ವಿವಾದ. ಹೌದು ಇದಿಷ್ಟು ಆಗುತ್ತಿರುವುದು ಸತ್ಯ. ಆದರೆ ಅದರ ಫಲಾನುಭವಿಗಳು ಯಾರು ಮಲೆನಾಡಿನಲ್ಲಿ ಇಲ್ಲಾ, ಬಹುತೇಕ ಜನ ಮಹಾ ನಗರಗಳಲ್ಲಿ ಅಥವಾ ವಿದೇಶಗಳಲ್ಲಿ ವಿಲಾಸಿ ಬದುಕು ಕಾಣುತ್ತಾ ಇದ್ದಾರೆ..
ಬಲಿ ಪಶುಗಳು ಮಾತ್ರ, ಮಲೆನಾಡಿನ ಸಣ್ಣ ರೈತರು. ಸೂಕ್ತ ಮಾರ್ಗದರ್ಶನದ ಕೊರತೆ, ಈಗಾಗಲೇ ಮಲೆನಾಡಿನ ಮಣ್ಣು ರಾಸಾಯನಿಕಗಳಿಂದ ಕಲುಷಿತ ಆಗಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಬೆಂಕಿ ರೋಗ, ಬೋರರ್, ಕಾಂಡ ಕೊರಕ ಹೀಗೆ ಅನೇಕ ಕಾಯಿಲೆಗಳ ನಡುವೆ ಕೃಷಿ ಉಳಿಸಿಕೊಳ್ಳುವುದೇ ದುಸ್ತರವಾಗಿದೆ .

#ತುಂಗಾ ನದಿಯಿಂದ ಭದ್ರ ನದಿಗೆ ನೀರು ಹರಿಸುವ ತುಂಗಾ ತಿರುವು ಯೋಜನೆ ಶುರುವಾಗಿ ಹದಿನೈದು ವರ್ಷಗಳು ಕಳೆದಿವೆ. ಆದರೆ ಇಲ್ಲಿಯ ತನಕ ಅದು ಮುಕ್ತಾಯ ಕಂಡಿಲ್ಲ. ಭದ್ರಾ ಅಭಯಾರಣ್ಯದ ಸೂಕ್ಷ್ಮ ಪರಿಸರ ವಲಯದಲ್ಲಿ ಸುಮಾರು 11 ಕಿಮೀ ಅರವತ್ತು ಮಿ ಅಗಲದ ಸುರಂಗ ತೋಡಿ ನೀರು ಹರಿಸುವ ಯೋಜನೆಯಿಂದ ಯಾರಿಗೆ ಲಾಭವಾಗಿದೆ ಗೊತ್ತಿಲ್ಲ. ಈಗಾಗಲೇ ಸುಮಾರು 24.650 ಬೃಹತ್ ಮರ ಕಡಿತಲೆಗೆ ಅನುಮೋದನೆ ಸಿಕ್ಕಿ,ಮರಗಳು ಧರೆಗೆ ಉರುಳಿದೆ. ಇದರ ಜೊತೆಗೆ ಅದರ ಪರಿಸರ ಚಕ್ರ ಕೂಡ ತುಂಡಾಗಿದೆ. ಇದರ ಪರಿಣಾಮ ಕಡಹಿನ ಬೈಲು ವ್ಯಾಪ್ತಿಯಲ್ಲಿ ಹಿಂಡು ಹಿಂಡು ಆನೆಗಳು ದಾಂದಲೆ ನಡೆಸುತ್ತಿವೆ. ಆನೆಗಳ ದಾರಿ ಮುಚ್ಚಿ ಹೋಗಿದೆ. ಆನೆ ನಡೆದಿದ್ದೇ ದಾರಿ ಎಂಬಂತೆ ರೈತರ ತೋಟಗಳು ಆನೆದಾಳಿಗೆ ತುತ್ತಾಗುತಿದೆ. ಆನೆಗಳ ವಾಸಸ್ಥಾನ ದ ದಿಕ್ಕನ್ನೇ ನಾವು ಬದಲಾಯಿಸಿ ಬಿಟ್ಟಿದ್ದೇವೆ. ಅದರ ಪರಿಣಾಮ ಕೂಡ ನಾವೇ ಅನುಭವಿಸುತ್ತಾ ಇದ್ದೇವೆ.

ಜಾಹೀರಾತು


ತುಂಗಾ ತಿರುವು ಯೋಜನೆ ಯ ಮರ ಕಡಿತಲೆಗೆ ಈಗಾಗಲೇ 2.5 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಮಲೆನಾಡಿನ ಗ್ರಾಮ ಪಂಚಾಯತಿ ಒಂದಕ್ಕೆ ಇದರ ಅರ್ಧದಷ್ಟು ಅನುದಾನ ಸಿಗುವುದೇ ಇಲ್ಲಾ,ಜನ ಸಾಂದ್ರತೆ ಕಡಿಮೆ ಎನ್ನುವ ಕಾರಣಕ್ಕೆ ಸಿಗುವ ಅನುದಾನದಲ್ಲಿ ಕೂಡ ಕಡಿತವೆ.

ಹೀಗಿದ್ದೂ ಬಯಲು ಭಾಗದ ಜನರಿಗೆ ನೀರು ಹರಿಸುವ ಬಗ್ಗೆ ಯಾವ ಮಲೆನಾಡಿನ ರೈತರು ಚಕಾರ ಎತ್ತಿಲ್ಲ. ಆದರೆ ಬಯಲು ಭಾಗದ ಅನುಕೂಲಕ್ಕೆ ಸಾವಿರಾರು ಮರ ಕಡಿತಲೆ ಮಾಡಲು ಸರ್ಕಾರವೇ ಅನುದಾನ ಕೊಡುವಾಗ, ಮಲೆನಾಡಿನ ರೈತ ಕೊಟ್ಟಿಗೆ ಸೊಪ್ಪಿಗೆ ಒಂದು ಹೊರೆ ಸೊಪ್ಪು ಕಡಿವಾಗ, ಹಿಡಿದು ಬೈಯುವ ಹೊಡೆಯುವ, ಪರಿಸರ ಪಾಠ ಮಾಡುವ ದ್ವಂದ್ವ ನೀತಿಯ ಬಗ್ಗೆ ಮರುಕವಿದೆ. ಸರ್ಕಾರ ಮಾಡಿದರೆ ಅದು ಪರಿಸರ ನಾಶ ಅಲ್ಲಾ ಎನ್ನುವ ಶಾಸನ ಏನಾದರೂ ಉಂಟಾ !! ಗೊತ್ತಿಲ್ಲ.

ಬಯಲು ಭಾಗಕ್ಕೆ ನೀರು ಹರಿಸಿ, ಆದರೆ ಮಲೆನಾಡಿನಲ್ಲಿ ಹರಿವ ನದಿಗೆ, ನದಿಯ ಪಾತ್ರದ ಜನರಿಗೆ ಅನುಕೂಲ ಆಗುವಂತೆ ಹೆಚ್ಚಿನ ಅನುದಾನ ನೀಡಬೇಕಾದ, ನೀಡುವಂತೆ ಆಗ್ರಹಿಸುವ ಯಾವ ಗಟ್ಟಿ ಎದೆಯ ರಾಜಕಾರಣಿ ನಮ್ಮ ನಡುವೆ ಇಲ್ಲದೆ ಇರುವುದು ನಮ್ಮ ದೌರ್ಭಾಗ್ಯ.

ನಾವು ಕೂಡ ಹೋರಾಟದ ವಿಷಯದಲ್ಲಿ ಸಪ್ಪೆ ಮೋಗದವರೆ, ನಮಗ್ಯಾಕೆ ಬೇಕು ಪಕ್ಕದ ಮನೆಯವ ಬೇಕಾದರೆ ಮಾಡಿಕೊಳ್ಳಲ್ಲಿ ಎಂಬ ಉದಾಸೀನ ಪ್ರವೃತ್ತಿ ಮೈಗೆ ಅಂಟಿಸಿಕೊಂಡಿದ್ದೇವೆ. ಇದನ್ನು ಮೀರಿಯೂ ಹೋರಾಟ ಆರಂಭ ಆದರೆ ಅದು ರಾಜಕಾರಣಿಗಳ ಹಿತಕ್ಕೆ ಬಲಿಪಶು ಆಗುತ್ತಾ ಇರುವುದು ಕೂಡ ದುರ್ದೈವವೆ ಸರಿ.

ಮಲೆನಾಡಿನ ಪರಿಸರ ಚಕ್ರ ಸುಸ್ಥಿರವಾಗಿ ಉಳಿಯಬೇಕು. ಇಲ್ಲಿನ ಕೃಷಿಯ ವಿಧಗಳು ಕೂಡ ಪ್ರಕೃತಿಗೆ ಪೂರಕವಾಗಿ ಇರುವಂತೆ ನೋಡಿಕೊಳ್ಳ ಬೇಕಿದೆ. ಇಲ್ಲಿನ ನಿವಾಸಿಗಳಿಗೆ ಪೂರಕ ನೆಮ್ಮದಿಯ ವಾತಾವರಣ ನಿರ್ಮಿಸಿಕೊಡುವ ಯೋಜನೆ ರೂಪಿಸುವಂತೆ ಸರ್ಕಾರಗಳು ಹೆಜ್ಜೆ ಇಡಬೇಕು.ಜನರ ಆಗ್ರಹ ಕೂಡ ಹೀಗೆ ಇರಬೇಕು ಎನ್ನುವ ದೃಢತೆ ಹೊಂದಲು ಸಕಾಲ ಎನ್ನಿಸುತ್ತಿದೆ.

ರತ್ನಾಕರ್ ಗಡಿಗೇಶ್ವರ.

Leave a Reply

Your email address will not be published. Required fields are marked *

Scan the code