ಧನ್ಯತಾಭಾವನೆ ಸಮರ್ಪಣೆಗೆ “ಏಕಾತ್ಮಕ ಹನುಮಾನ ರಥಯಾತ್ರೆ” ಸಹಕಾರಿ: ಬಿ.ವಿ.ಮಹೇಶ್.
(KOLARA): ಬಂಗಾರಪೇಟೆ: ಜನವರಿ 22 ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ಉದ್ಘಾಟನೆಯಾಗುವುದರ ಮೂಲಕ ಶತಶತಮಾನಗಳ ದಾಸ್ಯದ ಸಂಕೇತವನ್ನು ತೊರೆದು ಕೋಟ್ಯಾಂತರ ಭಾರತೀಯರ ಕನಸು ನನಸಾಗಲಿದೆ, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ತನು,ಮನ, ಧನ, ಪ್ರಾಣ ತ್ಯಾಗ ಮಾಡಿ ಹುತಾತ್ಮರಾದವರನ್ನು ಸ್ಮರಿಸುವುದರ ಮೂಲಕ ಧನ್ಯತಾ ಭಾವನೆ ಸಮರ್ಪಿಸಲು “ಹನುಮನ ಏಕಾತ್ಮಕ ರಥಯಾತ್ರೆ” ಸಹಕಾರಿಯಾಗಿದೆ, ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿವಿ ಮಹೇಶ್ ಅಭಿಪ್ರಾಯ ಪಟ್ಟರು.
ಯುವ ಬ್ರಿಗೇಡ್ ನೇತೃತ್ವದಲ್ಲಿ “ರಾಮನ ಕಾರ್ಯಕ್ಕೆ ಹನುಮ” ಎಂಬ ಶೀರ್ಷಿಕೆಯ ರಥಯಾತ್ರೆಯೂ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಭವ್ಯ ಸ್ವಾಗತ ಕೋರಿ ಮಾತನಾಡಿದ ಅವರು, ಪುರಾತತ್ವ ಇಲಾಖೆ ನೀಡಿರುವ ಸಾಕ್ಷಿ ಆಧಾರಗಳ ಮಾಹಿತಿಯ ಆಧಾರದ ಮೇಲೆ ಅಯೋಧ್ಯೆಯು ಹಿಂದುಗಳ ಆರಾಧ್ಯ ದೈವ ರಾಮನ ಜನ್ಮಸ್ಥಳವಾಗಿದೆ ಎಂಬುದನ್ನು ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಘನ ಸರ್ವೋಚ್ಚ ನ್ಯಾಯಾಲಯವು ರಾಮ ಮಂದಿರ ನಿರ್ಮಾಣಕ್ಕೆ ಅಸ್ತು ಎಂದು ತೀರ್ಪು ನೀಡಿತು, ತೀರ್ಪಿಗೆ ಅನುಗುಣವಾಗಿ ಕೋಟ್ಯಾಂತರ ಹಿಂದುಗಳ ಆರಾಧ್ಯ ದೈವ ಶ್ರೀ ರಾಮನ ಭವ್ಯವಾದ ಮಂದಿರ ನಿರ್ಮಾಣಗೊಳ್ಳುತ್ತಿದೆ,
ಹನುಮನಿಲ್ಲದ ರಾಮಾಯಣವನ್ನು ಊಹಿಸಲು ಸಾಧ್ಯವಿಲ್ಲ ,ಹನುಮನು ರಾಮನಿಗೆ ಭಕ್ತನಾಗಿ ,ಶಿಷ್ಯನಾಗಿ, ಬಂಟನಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಯುಗಯುಗಗಳಲ್ಲೂ ಚಿರಂಜೀವಿಯಾಗಿ ಅಜರಾಮರನಾಗಿದ್ದಾನೆ, ಇಂದು ಹನುಮನ ರಥಯಾತ್ರೆ ರಾಮ ಮಂದಿರ ಉದ್ಘಾಟನೆಯ ಪ್ರತಿಕವಾಗಿ ಪಟ್ಟಣಕ್ಕೆ ಆಗಮಿಸಿರುವುದು ಸಂತಸ ತಂದಿದೆ.
ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಕರ್ನಾಟಕದ ಪಾತ್ರ ಮಹತ್ವಪೂರ್ಣದ್ದಾಗಿದೆ, ಲಕ್ಷಾಂತರ ಯತಿಗಳು, ಧಾರ್ಮಿಕ ಮುಖಂಡರು, ಕರಸೇವಕರು ಮಠಾದಿಮತಿಗಳೂ ಕಾರ್ಯಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ಮಂದಿರ ನಿರ್ಮಾಣಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿಯ ಭೀಷ್ಮ ಎಲ್ ಕೆ ಅಡ್ವಾನಿ ಮತ್ತು ಕರಸೇವಕರ ಹೋರಾಟ ಅನನ್ಯ:
ಶತಮಾನಗಳಿಂದ ಮೊಘಲರ ದಾಳಿಗಳಿಂದ ಕತ್ತರಿಸಿ ಹೋಗಿದ್ದ ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳನ್ನು ರಕ್ಷಿಸಲು ಮುಂದಾಗಿ ಕಾನೂನು ಹೋರಾಟ ನಡೆಸಲಾಯಿತು, 1983 ರಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಇಡೀ ದೇಶವನ್ನು ಏಕಾತ್ಮಕ ರಥಯಾತ್ರೆಯ ಮೂಲಕ ಒಂದುಗೂಡಿಸಿ ಲಕ್ಷಾಂತರ ಕರೆಸೇವಕರ ಸಹಯೋಗದಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದವರು ಬಿಜೆಪಿಯ ಭೀಷ್ಮ ಎಲ್.ಕೆ. ಅದ್ವಾನಿರವರು,
ಹಿಂದೂ ಕರಸೇವಕರ ಮಾರಣಹೋಮ:
1885ರಲ್ಲಿ ಮಹಂತ್ ರಘುಬರ್ ದಾಸ್ ರವರಿಂದ ಪ್ರಾರಂಭವಾದ ಕಾನೂನು ಹೋರಾಟ 1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ರಾಮ ಜನ್ಮಭೂಮಿ ಚಳುವಳಿಯಾಗಿ ಮಾರ್ಪಟ್ಟಿತು, 1990 ರಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಓಲೈಕೆಯ ರಾಜಕಾರಣದ ಅಂಧಕಾರದಲ್ಲಿ ಮುಳುಗಿ ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಿತು, ಇದರಿಂದ ಸಾವಿರಾರು ಕರಸೇವಕರ ಮಾರಣಹೋಮವೇ ನಡೆದುಹೋಯಿತು. ಆದರೆ ಇಂದು ಅವರೆಲ್ಲರ ಹೋರಾಟ ದಿಂದ ರಾಮಮಂದಿರ ನಿರ್ಮಾಣವಾಗಿದ್ದು ಜನವರಿ 22ರಂದು ಉದ್ಘಾಟನೆ ಆಗುತ್ತಿದೆ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದೊರೆತ ಮನ್ನಣೆಯಾಗಿದೆ ಎಂದರು.
ವಿಶೇಷತೆ: ಅನುಮಾನ ರಥಯಾತ್ರೆಯು ಸಂತೆಗೇಟ್ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋದಂಡರಾಮಸ್ವಾಮಿ ದೇವಸ್ಥಾನ ಆವರಣವನ್ನು ತಲುಪಿತು ಅಲ್ಲಿ ನೂರಾರು ಬಜರಂಗದಳ ಹಾಗೂ ಬಿಜೆಪಿಯ ಕಾರ್ಯಕರ್ತರು ಪೂಜಾ ವಿಧಿ ವಿಧಾನಗಳನ್ನು ನಡೆಸಿ ಶುಭ ಹಾರೈಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸರಾಯಪ್ಪ. ಎಸ್ಸಿ ಮೋರ್ಚಾ ಅಧ್ಯಕ್ಷ ಅಮರೇಶ್, ವೆಂಕಟೇಶಮೂರ್ತಿ, ಕುಮಾರಗೌಡ, ಬಾಬು, ಯುವ ಬ್ರಿಗೇಡ್ ಸುಭಾಷ್, ಶಿವು, ಉದಯ್, ಗಂಗಾಧರ್, ಕೋಟ್ಯಾಲ್ ವಿನೋದ್, ಜೋಗಿ ,ಹರೀಶ್ ,ಚಂದ್ರು, ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ